ನದಿನೀರಿನ ವಿಷಯದಲ್ಲಿ ಚೀನಾ ಎರಡು ಬಗೆಯ ಮಾರ್ಗಗಳನ್ನು ಅನುಸರಿಸುತ್ತದೆ :
1. ನದಿನೀರನ್ನೇ ಹಿಡಿದಿಟ್ಟುಕೊಳ್ಳುವುದು – ಕೃತಕ ಸರೋವರಗಳನ್ನು ನಿರ್ಮಿಸುವುದರ ಮೂಲಕ, ಡ್ಯಾಂಗಳನ್ನು ಕಟ್ಟಿ ನೀರಿನ ವೇಗವನ್ನು ನಿಯಂತ್ರಿಸುವುದರ ಮೂಲಕ.
2. ನೀರಿನ ಚಲಿಸುವ ಪಥವನ್ನೇ ಬದಲಿಸುವುದು. ಹಿಂದೊಮ್ಮೆ, ಸೆಟ್ಲೆಜ್ ಮತ್ತು ಯಾರ್ಲುಂಗ್ ನದಿಗೆ ಕೃತಕ ಸರೋವರಗಳನ್ನು ಕಟ್ಟಿ ಒಡೆದಿದ್ದರಿಂದ 2000ರಲ್ಲಿ ಹಿಮಾಚಲ, ಅರುಣಾಚಲ ಪ್ರದೇಶಗಳಲ್ಲಿ ಜಲಸ್ಫೋಟ ಉಂಟಾಗಿ, ಜನಜೀವನವೇ ನಿಂತುಹೋಗಿ ಹಲವಾರು ಜನ, ಪ್ರಾಣಿ-ಪಕ್ಷಿಗಳು ಜಲಸಮಾಧಿಯಾಗಿ, ಸುಮಾರು 300 ಕೋಟಿ ರು.ಅಷ್ಟು ನಷ್ಟ ಭಾರತಕ್ಕಾಗಿತ್ತು.
ಬ್ರಹ್ಮಪುತ್ರ ವಿಶ್ವದ ದೊಡ್ಡ ನದಿಗಳಲ್ಲಿ 10ನೆಯ ಸ್ಥಾನದಲ್ಲಿದೆ. ’ಯಾರ್ಲುಂಗ್ ತ್ಸಾಂಗ್ ಬೊ’ ಎಂದೇ ಪ್ರಸಿದ್ಧವಾದ ಇದು ಟಿಬೆಟ್ನಲ್ಲಿ ಹುಟ್ಟಿ ಈಶಾನ್ಯ ಭಾರತದಲ್ಲಿ ಪ್ರವಹಿಸುವಾಗ ಗಂಗೆಯನ್ನು ಕೂಡಿಕೊಂಡು ಬಾಂಗ್ಲಾಕ್ಕೂ ಮೈಚಾಚಿ ಮೇಘನಾ ನದಿಯನ್ನು ತುಂಬಿಕೊಳ್ಳುತ್ತ ಯಮುನೆಯಾಗಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಅರುಣಾಚಲ ಪ್ರದೇಶದ ಜನಜೀವನ, ಈ ನದಿಯನ್ನು ಆಧರಿಸಿದೆ. ಅಲ್ಲಿ ಈ ನದಿಯನ್ನು ‘ಸಿಯಾಂಗ್’ ಎಂದು ಕರೆಯಲಾಗುತ್ತದೆ. ಆಸ್ಸಾಮಿನಲ್ಲೂ ಇದು ಹರಿಯುತ್ತದೆ. ಈಶಾನ್ಯ ಭಾರತದ ಕೃಷಿಗೆ ಬ್ರಹ್ಮಪುತ್ರವೇ ಮೂಲಾಧಾರ. ಬಾಂಗ್ಲಾಕ್ಕೂ ಈ ನದಿಯೇ ಮಹತ್ವದ್ದಾಗಿದೆ. 3 ಭಾಗಗಳಲ್ಲಿ ಹರಿಯುವ ಈ ನದಿಯ ಸುಮಾರು 22,000 ಟಿಎಂಸಿ ನೀರು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಭಾರತ ಹಾಗೂ ಚೀನಾದಲ್ಲಿ ತನ್ನ ಮೈಯನ್ನು ಚಾಚಿಕೊಂಡಿರುವ ಬ್ರಹ್ಮಪುತ್ರ (ಸಿಯಾಂಗ್) ನದಿಯು ಈಗ ಭಾರತದಲ್ಲಿ ವಿಷಪೂರಿತವಾಗಿದೆ. ಹಾಗಂತ ಚೀನಾದ ಭೂಪ್ರದೇಶದಲ್ಲಿ ವಿಷಯುಕ್ತವಾಗಿಲ್ಲ. ಇದೇ ಸೋಜಿಗ ಮತ್ತು ಸಂಶಯವನ್ನು ಹುಟ್ಟಿಸಿದೆ.
ಬ್ರಹ್ಮಪುತ್ರ ಭಾರತದ ಪಾಲಿಗೆ ಜೀವನದಿಯಾಗಿದೆ. ಚೀನಾದ ಕಂಪನಿಗಳು ಹೊರಬಿಡುವ ವಿಷಯುಕ್ತ ರಾಸಾಯನಿಕಗಳು ಈ ನದಿಯನ್ನು ಸೇರಿರುವುದರಿಂದ ಚೀನಾದ ಗಡಿಯನ್ನು ದಾಟಿ ಭಾರತದಲ್ಲಿ ಹರಿಯುವ ನದಿನೀರಲ್ಲಿ ಮಾತ್ರ ವಿಷ ಕಾಣಿಸಿಕೊಂಡಿದೆ. ಭಾರತದಲ್ಲಿ ಹರಿಯುವ ಈ ನದಿನೀರು ವಿಷಯುಕ್ತವಾಗಿರಲು ಬೇರೆ ಯಾವ ಕಾರಣವೂ ಭೌಗೋಳಿಕವಾದ ಹಿನ್ನೆಲೆಯಲ್ಲಿ ಇಲ್ಲವಾದ್ದರಿಂದ ಇದು ಚೀನಾದ ಪಿತೂರಿಯೆಂಬುದು ನಿಶ್ಚಯವಾಗಿದೆ.
ಚೀನಾದಲ್ಲಿರುವ ಸುಮಾರು 87,000 ಸಾವಿರ ಡ್ಯಾಂಗಳಲ್ಲಿ ಹೆಚ್ಚಿನವು ಟಿಬೆಟ್ನಲ್ಲಿವೆ. ಟಿಬೆಟ್ನಲ್ಲಿರುವ ನದಿಗಳು, ಯಾವತ್ತೂ ಭಾರತಕ್ಕೆ ಭಾರೀ ಅಪಾಯವನ್ನು ತರುತ್ತವೆ. ಪ್ರಾಕೃತಿಕವಾಗಿ ಕೂಡ ಇಷ್ಟು ಡ್ಯಾಂಗಳು ಟಿಬೆಟ್ಗೆ ಪ್ರತಿಕೂಲ. ನೀರಿನ ವಿಷಯದಲ್ಲಿ ಸಂಪೂರ್ಣ ಏಷ್ಯಾವನ್ನೇ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಚೀನಾ ನಡೆಸುತ್ತಿರುವ ಹುನ್ನಾರಗಳಿಗೆ ಕೊನೆಯೇ ಇಲ್ಲ. ಬಹುಜನಸಂಖೆಯನ್ನು ಹೊಂದಿರುವ ಭಾರತಕ್ಕೆ ನೀರಿನ ಅಸ್ತ್ರವನ್ನು ಪ್ರಯೋಗಿಸಲು ಚೀನಾ ಮುಂದಾಗಿದೆ. ನದಿನೀರಿನ ವಿಷಯವನ್ನು ಭಾರತದೊಂದಿಗೆ ಹಂಚಿಕೊಳ್ಳಬೇಕೆಂಬ ಒಪ್ಪಂದಕ್ಕೆ ಚೀನಾ ಸಹಿ ಹಾಕಿದೆ. ಆದರೆ ಭಾರತಕ್ಕೆ ಮಾತ್ರ ಚೀನಾದಿಂದ ಯಾವ ವಿಚಾರವೂ ಈ ಕುರಿತಾಗಿ ಲಭ್ಯವಾಗುತ್ತಿಲ್ಲ. ನದಿ ಒಪ್ಪಂದಗಳನ್ನು ಒಪ್ಪಿದೆಯೇ ಹೊರತು ಅದರಂತೆ ನಡೆದುಕೊಳ್ಳುತ್ತಿಲ್ಲ. ತಂತ್ರಜ್ಞಾನವನ್ನು ಬಳಸಿ ಡ್ಯಾಂಗಳನ್ನು ನಿರ್ಮಿಸುತ್ತಾ ಭಾರತಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಲೇ ಇದೆ.
ತನ್ನಿಂದ ಹೊರಹೋಗುವ ಎಲ್ಲಾ ನದಿಗಳಿಗೂ ಡ್ಯಾಂಗಳನ್ನು ಕಟ್ಟಿರುವ ಚೀನಾ, ಈಶಾನ್ಯ ಏಷ್ಯಾದಲ್ಲಿ ನೀರಿನ ‘ಬರ’ವನ್ನು ಉಂಟುಮಾಡುತ್ತಿದೆ. ಇದು ಆರೋಗ್ಯಯುತ ಬೆಳವಣಿಗೆಯಲ್ಲ. ಕುಡಿಯುವ ನೀರಿಗಾಗಿಯೇ 3ನೇ ಮಹಾಯುದ್ಧ ಸಂಭವಿಸಿದರೂ ಅಚ್ಚರಿಪಡಬೇಕಿಲ್ಲ ಎಂಬುದಾಗಿ ಜಾಗತಿಕ ಪರಿಸರ ಹಾಗೂ ಜಲತಜ್ಞರು ವಿಶ್ಲೇಷಿಸಿದ್ದಾರೆ. ವಿಶ್ವಮಟ್ಟದಲ್ಲಿ ಚೀನಾದ ಭಯೋತ್ಪಾದನೆಯಿದು. ಹಾಗಾದರೆ ಚೀನಾ ಹೀಗೆ ವರ್ತಿಸಲು ಕಾರಣವೇನು? ಸುಲಭದಲ್ಲಿ ಹೇಳುವುದಾದರೆ, ಏಷ್ಯಾಕ್ಕೆ ಹೀರೋ ಎನ್ನಿಸಿಕೊಳ್ಳುವ, ವಿಶ್ವವನ್ನು ನಿಯಂತ್ರಿಸುವ ಅದರ ಮಹತ್ವಾಕಾಂಕ್ಷೆ. ಒಂದು ಉದಾಹರಣೆಯೆಂದರೆ, ಮಹತ್ವಾಕಾಂಕ್ಷೆಯ ಒಬಿಓಆರ್ ಯೋಜನೆಯ ನೀಲನಕ್ಷೆ.
ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಕೊರತೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಇಡೀ ಜಗತ್ತಿಗೆ ಅನ್ವಯವಾಗುವಂಥ ಬಲಿಷ್ಠವಾದ ಜಲನೀತಿ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಚನೆಯಾಗಿಲ್ಲ. ಅಂಥದ್ದರಲ್ಲಿ ಜೀವಕ್ಕೆ ಮಾರಕವಾಗುವಂಥ ವಿಷ ಸಿಯಾನ್ ನದಿಗೆ ಸೇರುತ್ತದೆಂದಾದರೆ ಚೀನಾದ ದುರುಳುತನಕ್ಕೆ ಎಲ್ಲೆಯುಂಟೇ? ಮಾಲ್ಡೀವ್ಸ್ ಗೆ 100 ದಶಲಕ್ಷ ಡಾಲರ್ ಸಾಲ ನೀಡಿದ ಚೀನಾ ಅಲ್ಲಿಯ ಹುಲ್ ದ್ವೀಪವನ್ನು ಕಬಳಿಸುವ ಹುನ್ನಾರ ನಡೆಸಿದೆ. ಶೇಕಡಾ 5 ರ ಬಡ್ಡಿದರದಲ್ಲಿ ಸಿಪಿಇಸಿ (ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್) ಯೋಜನೆಗೆ 6 ಶತಕೋಟಿ ಡಾಲರ್ ಸಾಲವನ್ನು ಚೀನಾ, ಪಾಕಿಸ್ತಾನಕ್ಕೆ ನೀಡಿದೆ. ಸರಕಾರ ನಡೆಸಲು ಹಣವಿಲ್ಲದೆ ಎಮ್ಮೆಗಳನ್ನು ಹರಾಜು ಹಾಕಲು ಮುಂದಾಗಿರುವ ಪಾಕ್ ಸರಕಾರ ಸಾಲ ತೀರಿಸುವುದು ಬಹುದೂರದ ಮಾತು. ಸೇನಾಬಲವರ್ಧನೆಯಿಂದ ದಕ್ಷಿಣ ಚೀನಾದ ಸಮುದ್ರದಲ್ಲಿ ಪ್ರಭುತ್ವವನ್ನು ಸಾಧಿಸಿ ತನ್ನ ಸಾರ್ವಭೌಮತ್ವವನ್ನು ಮೆರೆಯುವ ಚೀನಾ ಭಾರತದ ಪಾಲಿಗೆ ಯಾವತ್ತೂ ಮಗ್ಗುಲ ಮುಳ್ಳಾಗಿದೆ. ಯುರೋಪ್ ಮತ್ತು ಆಫ್ರಿಕಾ ಖಂಡಗಳನ್ನು ಬೆಸೆಯುವ, ವ್ಯಾಪಾರ ಮತ್ತು ಮೂಲಸೌಕರ್ಯ ಸಂಬಂಧಿತ ವ್ಯಾಪಕ ಜಾಲ ಹುಟ್ಟುಹಾಕುವ ಒಬಿಒಆರ್ ಉಪಕ್ರಮದ ಮೂಲಕವೂ ಚೀನಾ ತನ್ನ ಕಬಂಧ ಬಾಹುವನ್ನು ವಿಸ್ತರಿಸಿಕೊಂಡಿದೆ.
ಒಬಿಒಆರ್ ಎಂಬುದು ಇತರ ರಾಷ್ಟ್ರಗಳಿಗೆ ಪ್ರಲೋಭನೆಯೊಡ್ಡಿ ಸಾಲದ ಬಲೆಯೊಳಗೆ ಬೀಳಿಸಿ, ಆ ರಾಷ್ಟ್ರಗಳನ್ನು ತನ್ನ ಸ್ವಾಮ್ಯಕ್ಕೆ ತಂದುಕೊಳ್ಳುವ ಹುನ್ನಾರ. ಇದಕ್ಕೆ ನಿದರ್ಶನವೆಂದರೆ , ಸುಮಾರು 9,940 ಕೋಟಿ ರು.ಗಳ ಚೀನಾದ ಸಾಲದ ಸುಳಿಗೆ ಸಿಲುಕಿದ ಶ್ರೀಲಂಕಾ ತನ್ನ ಬಹುಮುಖ್ಯ ಬಂದರೊಂದನ್ನು ವರ್ಷಗಳವರೆಗೆ ಗುತ್ತಿಗೆಗೆ ನೀಡಿದೆ. ಒಬಿಒಆರ್ ಅನ್ನು ಹಲವು ರಾಷ್ಟ್ರಗಳು ಇತ್ತೀಚೆಗೆ ವಿರೋಧಿಸಲು ಆರಂಭಿಸಿವೆ. ಪಾಕಿಸ್ತಾನ, ಮಾಲ್ಡೀವ್ಸ್ ದ್ವೀಪ ರಾಷ್ಟ್ರಗಳು, ಮಲೇಷ್ಯಾಗಳಿಗೆ ಜ್ಞಾನೋದಯವಾಗಿ ಚೀನಾದ ಸೆರೆಯಿಂದ ಹೊರಬಂದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಅಗಾಧ ವಿದೇಶೀ ವಿನಿಮಯವನ್ನು ಕುಗ್ಗಿಸಲು ಅಮೆರಿಕ ಮುಂದಾಗಿದೆ. ಇದು ಚೀನಾ ಪಾಲಿಗೆ ದೊಡ್ಡ ಹೊಡೆತವಾಗಿ ಭವಿಷ್ಯದಲ್ಲಿ ಕಾಡಬಹುದು.
ಚೀನಾದ ಅಧ್ಯಕ್ಷ ಪಟ್ಟಕ್ಕಿದ್ದ ‘ಎರಡು ಅವಧಿಯ ಮಿತಿ’ಯನ್ನು ತೆಗೆದುಕೊಳ್ಳುವ ಮೂಲಕ ಜಿನ್ಪಿಂಗ್ ತಾನು ಜೀವಾವಧಿ ಅಧ್ಯಕ್ಷರಾಗುವ ಮೂಲಕ ಪ್ರಬಲ ನಾಯಕನಾಗಿ ತನ್ನನ್ನು ಬಿಂಬಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಸಮರದೊಂದಿಗೂ ಚೀನಾ ಸೆಣಸಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಚೀನಾಕ್ಕೆ ಒಡ್ಡಿರುವ ಸವಾಲು ಸಾಮಾನ್ಯವೇನಲ್ಲ. ಭಾರತದ ವಿಶ್ವಮಟ್ಟದ ರಾಜತಾಂತ್ರಿಕ ವ್ಯವಹಾರ ಮತ್ತು ನಿಲುವುಗಳನ್ನು ಚೀನಾ ಅರಿತುಕೊಳ್ಳಲು ಹೆಣಗುತ್ತಿದೆ. ಇದರಿಂದಾಗಿ ಚೀನಾ ತನ್ನ ವಿಶ್ವರಾಜತಾಂತ್ರಿಕ ನೀತಿಗಳನ್ನು ಬದಲಿಸಿಕೊಂಡಿದೆ. ವಿಶ್ವದ ಇತರ ನಾಯಕರಿಂದ ಸಾಧ್ಯವಾಗದ ಈ ಕಾರ್ಯವನ್ನು ಭಾರತ ಮಾಡಿದೆ.
ವಿಯೆಟ್ನಾಂ ತೈಲ ಗುತ್ತಿಗೆ, ಭೂತಾನ್ ಒಪ್ಪಂದ, ನೇಪಾಳದೊಂದಿಗಿನ ವಿದ್ಯುತ್ ಉತ್ಪಾದನಾ ಒಡಂಬಡಿಕೆ, ಅರೇಬಿಯಾದಿಂದಾಗುವ ಇಂಧನ ರಫ್ತಿನಲ್ಲಿ ಸಂಪೂರ್ಣ ತೆರಿಗೆರಹಿತ ಸಂಬಂಧ ವೃದ್ಧಿ, ರುಪಾಯಿಯಲ್ಲೇ ಭಾರತಕ್ಕೆ ತೈಲವನ್ನು ನೀಡುತ್ತೇನೆಂದ ಇರಾನಿನ ನಿಲುವು, ಅಬುಧಾಬಿ ತೈಲೋತ್ಪಾದನೆಯಲ್ಲಿ ಷೇರು ಪಡೆದದ್ದು, ಚೀನಾಕ್ಕೆ ಅನಾನುಕೂಲವಾಗುವಂತೆ ಶ್ರೀಲಂಕಾದ ಅಧ್ಯಕ್ಷ ಬದಲಾವಣೆ, ಯೆಮನ್ ನಲ್ಲಿ ಸೆರೆಯಾಗಿದ್ದ ನಾಲ್ಕು ಸಾವಿರ ಭಾರತೀಯರನ್ನು ಬಂಧಮುಕ್ತಗೊಳಿಸಿದ್ದು, ಸೌದಿಯ ಭೌಗೋಳಿಕ ಕಕ್ಷೆಯ ಮೇಲೆ ಭಾರತದ ವಿಮಾನಗಳು ಹಾದುಹೋಗಲು ಅಲ್ಲಿಯ ರಾಜನಿಂದ ಅನುಮತಿ ಪಡೆದದ್ದು, ಫ್ರಾನ್ಸಿನಿಂದ ರಿಯಾಕ್ಟರ್ ತಂತ್ರಜ್ಞಾನ ಪೂರೈಕೆಯ ಒಪ್ಪಂದ, ಫಿಜಿ ದ್ವೀಪದ ಮನೆಗಳಿಗೆ ಸೌರವಿದ್ಯುತ್ ನೀಡಿದ ಭರವಸೆ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ದಲ್ವಿಂದರ್ ಭಂಡಾರಿ ಗೆಲ್ಲುವಂತಾದುದು, ಅಗಾಧ ಪ್ರಮಾಣದಲ್ಲಿ ವಿದೇಶೀ ಹೂಡಿಕೆಯಲ್ಲಿ ಏರಿಕೆ, ಚೀನಾದ ಯುದ್ಧ ವಿಮಾನಗಳ ಮೇಲೆ ನಿಗಾ ಇಡುವಂತೆ ಸೀಶೆಲ್ಸ್ ದ್ವೀಪಗಳ ನಡುವೆ ಒಪ್ಪಂದ, ಕೆನಡಾದೊಂದಿಗೆ ನ್ಯೂಕ್ಲಿಯರ್ ರಿಯಾಕ್ಟರ್ ಗಳಿಗೆ ಬೇಕಾದ ಯುರೇನಿಯಂ ಒದಗಿಸುವ ಒಪ್ಪಂದ, ಕೆನಡಾದ ಭಾರತೀಯರಿಗಿರುವ ವೀಸಾ ಸಮಸ್ಯೆಯನ್ನು ಪರಿಹರಿಸಿದ್ದು, ಚೀನಾವನ್ನು ಕುಗ್ಗಿಸಲು ಮಂಗೋಲಿಯಾದ ಬೆಂಬಲ ಪಡೆದದ್ದು – ಇವೆಲ್ಲ ಭಾರತದ ವಿರುದ್ಧ ಯಾವತ್ತೂ ಅಪರೋಕ್ಷವಾಗಿ ಕತ್ತಿಮಸೆಯುವ ಚೀನಾಕ್ಕೆ ಬೆಳವಣಿಗೆಗಳಾಗಿ ಮಾರ್ಪಟ್ಟಿದೆ.
ವಿಶ್ವದ ಪ್ರಭುತ್ವವನ್ನು ಅಲ್ಲಗಳೆದು ಮೋದಿ ಸರಕಾರ ತನ್ನ ವಿದೇಶಿ ನೀತಿಯನ್ನು ಬಲಗೊಳಿಸಲಿಲ್ಲ. ನೇಪಾಳದಿಂದ ರಷಿಯಾದ ತನಕ ಅಂತಾರಾಷ್ಟ್ರೀಯ ಸೌಹಾರ್ದವನ್ನು ಭಾರತ ವಿಸ್ತರಿಸಿಕೊಂಡಿದೆ. ಬಹುರಾಷ್ಟ್ರಗಳ ಪ್ರೀತಿ, ವಿಶ್ವಾಸವನ್ನು ಗಳಿಸಿದೆ. ಹೀಗೆ ಪ್ರತಿಷ್ಠೆ ಮತ್ತು ಘನತೆಯನ್ನು ಜಗದಗಲಕ್ಕೂ ವಿಸ್ತರಿಸಿಕೊಂಡ ಭಾರತವನ್ನು ಅಷ್ಟು ಸುಲಭವಾಗಿ ಬಗ್ಗುಬಡಿಯಲು ಸಾಧ್ಯವಿಲ್ಲವೆಂಬುದನ್ನರಿತ ಚೀನಾ ವಾಮಮಾರ್ಗದ ಮೂಲಕ ಭಾರತೀಯರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಸುವ ದುಷ್ಟ, ಅಮಾನುಷ, ಕೀಳು ಅಭಿರುಚಿಯ ಕಾರ್ಯ ಮಾಡುತ್ತಿದೆ.
ಭಾರತ ಈಗ ಬಗ್ಗಬೇಕಿಲ್ಲ, ಬಾಗಬೇಕಿಲ್ಲ. ಸಲಾಮು ಹೊಡೆಯಬೇಕಿಲ್ಲ. ಕೈಕಟ್ಟಿ ನಿಲ್ಲಬೇಕಿಲ್ಲ. ಭಾರತದ್ದು ಈಗ ಬೇಡುವ ಕೈ ಅಲ್ಲ. ಮಾರಿಷಸ್, ಸೆಶೆಲ್ಸ್, ಜಾಂಬಿಯಾ, ಗಿನಿ, ಗ್ರೀಸ್, ಕ್ಯೂಬಾ, ಈಕ್ವಟೋರಿಯಲ್, ಸ್ವಿಟ್ಜರ್ಲ್ಯಾಂಡ್, ಜಿಬೂತಿ, ಇಥಿಯೋಪಿಯಾ, ಕೀನ್ಯಾದಂಥ ಕೆಲದೇಶಗಳಿಗೆ ಸಹಾಯಹಸ್ತ ನೀಡುವುದರ ಮುಖೇನ ಭಾರತ ಅಪಾರ ವಿಶ್ವಾಸವನ್ನು ಗಳಿಸಿದೆ. ಭಾರತದೆದುರು ಜಗತ್ತಿನ ಹಲವು ರಾಷ್ಟ್ರಗಳು ಸ್ನೇಹ-ಸೌಹಾರ್ದ ಬಯಸಿ ನಿಂತಿವೆ. ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್, ಜಪಾನಿನಂಥ ಬಹುರಾಷ್ಟ್ರಗಳು ಭಾರತದ ವಿದೇಶಿನೀತಿಯನ್ನು ಮೆಚ್ಚಿವೆ. ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹಕ್ಕೆ ಹೆಗಲುಕೊಟ್ಟಿವೆ. ಈ ಬೆಳವಣಿಗೆ ಚೀನಾ, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ತನ್ನ ಎದುರಾಳಿಯನ್ನು ಮಣಿಸಲು ಸಾಧ್ಯವಾಗದ ಸಂದರ್ಭದಲ್ಲಿ ಅಡ್ಡದಾರಿಯನ್ನು ಹಿಡಿಯುವ ತನ್ನ ಹುಟ್ಟು ಸ್ವಭಾವವಾದ ಕುತ್ಸಿತ ಬುದ್ಧಿಯನ್ನು ಚೀನಾ ತೋರುತ್ತಿದೆ. ಇದಕ್ಕಾಗಿ ಅದು ವಿಶ್ವಮಟ್ಟದಲ್ಲಿ ದೊಡ್ಡಮಟ್ಟದ ಪ್ರತಿರೋಧವನ್ನು ಎದುರಿಸುವ ದಿನಗಳು ದೂರವಿಲ್ಲ.
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment