ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಸುದ್ದಿ ಹಿನ್ನೆಲೆ...: | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, March 05, 2015

ಸುದ್ದಿ ಹಿನ್ನೆಲೆ...:

  Pundalik       Thursday, March 05, 2015

ಹಣಕಾಸು ಆಯೋಗ...

ವಿಶ್ವದಲ್ಲಿನ ಇತರ ಒಕ್ಕೂಟ ವ್ಯವಸ್ಥೆ­ಗಳಲ್ಲಿ ಇರುವಂತೆ, ಭಾರತ­ದಲ್ಲಿಯೂ  ಕೇಂದ್ರ ಮತ್ತು ರಾಜ್ಯ ಸರ್ಕಾ­ರಗಳ ಮಧ್ಯೆ ಸಂಪನ್ಮೂಲಗಳ ಅಸಮತೋಲನದ ಸಮಸ್ಯೆ ಗಂಭೀರ ವಾಗಿಯೇ ಇದೆ. ರಾಜ್ಯಗಳಿಗೆ ಒಪ್ಪಿಸಿ­ರುವ ಹೊಣೆಗಾ­ರಿ­ಕೆ­ಗಳನ್ನು ಪರಿಣಾಮ­ಕಾರಿ  ಮತ್ತು ಸಮರ್ಪಕವಾಗಿ ನಿಭಾ­ಯಿ­­ಸಲು ಅವು­ಗಳ ವರಮಾನ ಮೂಲ­ದಿಂದ ಸಾಧ್ಯವಾ­ಗುವುದಿಲ್ಲ. ಜನ­ಸಾಮಾ­ನ್ಯರ ಸಮಸ್ಯೆಗ­ಳನ್ನು ಹೆಚ್ಚು ದಕ್ಷ ರೀತಿಯಲ್ಲಿ ನಿಭಾಯಿ­ಸಲು ರಾಜ್ಯ ಸರ್ಕಾರಗಳಿಂದ ಮಾತ್ರ ಸಾಧ್ಯ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ಹಣಕಾಸು ನೆರವು ಒದಗಿಸಲು ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್‌ ಅವರು, ಹಣಕಾಸು ಆಯೋಗ ರಚನೆ ಸಲಹೆ­ಯನ್ನು ಕಾರ್ಯ­ರೂಪಕ್ಕೆ ತಂದಿದ್ದರು.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ  ಕಂಪೆನಿ, ಆದಾಯ, ಸೀಮಾಸುಂಕ, ಅಬಕಾರಿ ಮತ್ತು ಸೇವಾ ತೆರಿಗೆಗಳಲ್ಲಿ ರಾಜ್ಯಗಳಿಗೆ ಅವುಗಳ ನ್ಯಾಯೋಚಿತ ಪಾಲು ನೀಡುವುದು ಸಂವಿಧಾನದ ಆಶಯವಾಗಿದೆ ಕೇಂದ್ರ ಸರ್ಕಾರ ವಿಧಿಸಿ ವಸೂಲು ಮಾಡುವ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಕಾಲ, ಕಾಲಕ್ಕೆ ನಿಗದಿ ಮಾಡಲು  ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸಲು ಸಂವಿ­ಧಾನದಲ್ಲಿಯೇ ಕಡ್ಡಾಯ ಮಾಡ­ಲಾಗಿದೆ.
ಒಕ್ಕೂಟ ವ್ಯವಸ್ಥೆಯ ಅಂಗ:  ಹಣಕಾಸು ಆಯೋಗವು ಭಾರತವೂ ಸೇರಿದಂತೆ ಇನ್ನೂ ಕೆಲವು ಒಕ್ಕೂಟ ವ್ಯವಸ್ಥೆ­ಗಳಲ್ಲಿ ಜಾರಿಯಲ್ಲಿ ಇದೆ. ಆಸ್ಟ್ರೇಲಿಯಾ ಮತ್ತು ಕೆನಡಾ­ದಲ್ಲಿಯೂ ಇಂತಹ ಆಯೋಗಗಳು ಕಾರ್ಯ ನಿರ್ವ­ಹಿಸುತ್ತಿವೆ.
ಆಯೋಗದ ಸ್ಥಾನಮಾನ:  ಹಣಕಾಸು ಆಯೋಗದ ಸದಸ್ಯರು ಮತ್ತು ಅಧ್ಯಕ್ಷರನ್ನು ರಾಷ್ಟ್ರಪತಿಗಳು ಸಂವಿ­ಧಾನದ 280ನೆಕಲಂ ಅನ್ವಯ ನೇಮಿಸುತ್ತಾರೆ. ಅಧ್ಯಕ್ಷರೂ ಸೇರಿದಂತೆ ಐವರು ಸದಸ್ಯರು ಆಯೋಗದಲ್ಲಿ ಇರುತ್ತಾರೆ. ಸಾರ್ವಜನಿಕ ವ್ಯವಹಾರಗಳಲ್ಲಿ ಅಪಾರ ಅನುಭವ ಹೊಂದಿರು­ವ­ವ­ರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸ­­­ಲಾಗುವುದು. ಆರ್ಥಿಕ ತಜ್ಞರು, ಹಣ­ಕಾಸು ವಿಷಯ­ಗಳಲ್ಲಿ ಅಪಾರ ಅನುಭವ ಹೊಂದಿರು­ವವರು, ಸರ್ಕಾರದ ಹಣ­ಕಾಸು ವಹಿವಾಟು ಮತ್ತು ಲೆಕ್ಕ­ಪತ್ರಗಳ ಬಗ್ಗೆ ವಿಶೇಷ ತಿಳಿವಳಿಕೆ ಹೊಂದಿ­ರು­­ವವರು ಅಥವಾ ಹೈಕೋರ್ಟ್‌ ನ್ಯಾಯ­ಮೂರ್ತಿ­ಗಳಾಗಿ ನೇಮಕ­ಗೊಳ್ಳುವ ಅರ್ಹತೆ ಇರುವವ­ರನ್ನು  ಆಯೋಗದ ನಾಲ್ವರು ಸದಸ್ಯರ ನೇಮಕಕ್ಕೆ  ಪರಿಗಣಿಸ­ಲಾ­ಗುವುದು.
ಶಿಫಾರಸುಗಳು:  ಕೇಂದ್ರೀಯ ತೆರಿಗೆಗಳಲ್ಲಿನ ರಾಜ್ಯಗಳ ಪಾಲನ್ನು ಹಂಚಿಕೆ ಮಾಡುವ ಮತ್ತು ಅನುದಾನವನ್ನು ವಿತರಿಸುವ ಕಾರ್ಯ­ವನ್ನು ಈ ಆಯೋಗ ನಿರ್ವಹಿಸುತ್ತದೆ. ಈ ಶಿಫಾರಸುಗಳು ಎರಡು ಬಗೆಯಲ್ಲಿ ಕಾರ್ಯರೂಪಕ್ಕೆ ಬರುತ್ತವೆ. ಕೇಂದ್ರೀಯ ತೆರಿಗೆಗಳಲ್ಲಿನ ರಾಜ್ಯಗಳ ಪಾಲು ಹಂಚಿಕೆ  ಮತ್ತು ಕೇಂದ್ರ ಸರ್ಕಾರದ ಅನುದಾನಗಳು ರಾಷ್ಟ್ರಪತಿ­ಗಳ ಆದೇಶದ ಮೇರೆಗೆ ಜಾರಿಗೆ ಬರುವ ವಿಭಾಗದಲ್ಲಿ ಬರುತ್ತವೆ. ತೈಲೋತ್ಪನ್ನಗಳ ಮಾರಾಟದಿಂದ ಬರುವ ಲಾಭ, ಸಾಲದ ವಿನಾಯ್ತಿ, ಕೇಂದ್ರ ಸರ್ಕಾರದ ಇತರ ಅನುದಾನ­ಗಳು  ಕಾರ್ಯಾದೇಶದ ಮೂಲಕ ಜಾರಿಗೆ ಬರುತ್ತವೆ.
ಹಂಚಿಕೆ ಸೂತ್ರ:  ತೆರಿಗೆ ಮತ್ತಿತರ ಸಂಪನ್ಮೂಲಗಳನ್ನು ರಾಜ್ಯಗಳ ಮಧ್ಯೆ ಹಂಚಿಕೆ ಮಾಡುವ ಮುನ್ನ ಆಯೋಗವು ರಾಜ್ಯಗಳ ಅಗತ್ಯ­ಗಳು ಮತ್ತು ಅವುಗಳ ಹಣಕಾಸು ಸಾಮ­ರ್ಥ್ಯ­ವನ್ನು ಪರಿಗಣನೆಗೆ ತೆಗೆದು­ಕೊ­ಳ್ಳುತ್ತದೆ. ರಾಜ್ಯಗಳ ಜನಸಂಖ್ಯೆ, ಭೂಪ್ರದೇಶ, ತಲಾ ವರಮಾನ, ಅರಣ್ಯ ಪ್ರದೇಶ  ಮತ್ತಿತರ ಮಾಹಿತಿ ಆಧರಿಸಿ ವರಮಾನ ಹಂಚಿಕೆ ಮಾಡಲಾಗುತ್ತದೆ. ರಾಜ್ಯವೊಂದರಲ್ಲಿ ಬಡವರ ಸಂಖ್ಯೆ ಹೆಚ್ಚಿಗೆ ಇದ್ದರೆ, ತೆರಿಗೆಯಲ್ಲಿನ ಅದರ ಪಾಲು ಕೂಡ ಹೆಚ್ಚಿಗೆ ಇರುತ್ತದೆ


ಗರ್ಭಪಾತ ನಿಷೇಧಿಸುವ ಕರಾಳ ಕಾನೂನು...

ದಂತ ವೈದ್ಯೆ ಸವಿತಾ ಹಾಲಪ್ಪನವರ (31) ಅವರು, ಜೀವ ವಿರೋಧಿಯಾದ ಗರ್ಭಪಾತ ನಿಷೇಧ ಕರಾಳ ಕಾನೂನಿನ ಕಾರಣಕ್ಕೆ ಐರ‌್ಲೆಂಡ್‌ನಲ್ಲಿ ಸಾವನ್ನಪ್ಪಿದ ದುರಂತ ಘಟನೆಯು ವಿಶ್ವದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಧಾರ್ಮಿಕ ಮೌಲ್ಯಗಳು ಮತ್ತು ಗರ್ಭಪಾತ ನಿಷೇಧಿಸುವ ಕಾನೂನುಗಳ ಮಧ್ಯೆ ಇರುವ ಸಂಕೀರ್ಣ ಸಂಬಂಧವು ಈಗ  ಮತ್ತೆ ಚರ್ಚೆಗೆ ಬರುವಂತಾಗಿದೆ.

ಕ್ಯಾಥೋಲಿಕ್ ಸಂಪ್ರದಾಯಶೀಲ ದೇಶವಾದ ಐರ‌್ಲೆಂಡ್‌ನಲ್ಲಿ, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಶಕ್ತಿಶಾಲಿಯಾದ ಗುಂಪು ದಶಕಗಳಿಂದಲೂ ಅಲ್ಲಿ ವೈದ್ಯ ವೃತ್ತಿ ಮೇಲೆ ನಿಯಂತ್ರಣ ಹೊಂದಿದೆ. ಐರ‌್ಲೆಂಡ್‌ನಲ್ಲಿ ಇರುವಂತಹ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಇರುವ ಇತರ ಕೆಲ ದೇಶಗಳೂ ನೈತಿಕ, ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಗರ್ಭಪಾತ ನಿಷೇಧಿಸಿವೆ.
`ಭವಿಷ್ಯದ ತಾಯಿ~ಯ ಜೀವ ಉಳಿಸಲು ಕಾನೂನುಬದ್ಧ ಗರ್ಭಪಾತವನ್ನು 1951ರಲ್ಲಿಯೇ 16ನೇ ಪೋಪ್ ಪಿಯಸ್ ಅವರು ಬೆಂಬಲಿಸಿದ್ದರೂ, `ವ್ಯಾಟಿಕನ್ ಸಿಟಿ~ ಕೂಡ ಗರ್ಭಪಾತ  ನಿಷೇಧಿಸಿದೆ.
ನಿಷೇಧ ಜಾರಿಯಲ್ಲಿ ಇರುವ ದೇಶಗಳು
ಗರ್ಭಪಾತ ನಿಷೇಧ ವಿಷಯದಲ್ಲಿ ಐರ‌್ಲೆಂಡ್ ದೇಶವೊಂದೇ `ಖಳನಾಯಕ~ನ ಸ್ಥಾನದಲ್ಲಿ ಇಲ್ಲ.  ಡೊಮಿನಿಯನ್ ಗಣರಾಜ್ಯ, ಎಲ್‌ಸಾಲ್ವಡಾರ್, ನಿಕರಗುವಾ, ಪೋಲಂಡ್, ಚಿಲಿ ಮತ್ತು ಯೂರೋಪ್‌ನ ಮಾಲ್ಟಾದಲ್ಲಿ ಧಾರ್ಮಿಕ ಕಾರಣಗಳಿಗೆ ಗರ್ಭಪಾತ ನಿಷೇಧಿಸಲಾಗಿದೆ.
ಮಹಿಳೆಯ ಜೀವ ಅಪಾಯದಲ್ಲಿದ್ದರೂ ಗರ್ಭಪಾತ ಮಾಡಿಸಬಾರದು ಎನ್ನುವ ಅಮಾನವೀಯ ಕರಾಳ ಕಾನೂನು ಈ ದೇಶಗಳಲ್ಲಿ ಜಾರಿಯಲ್ಲಿ ಇದೆ.ಐರ‌್ಲೆಂಡ್‌ನಲ್ಲಿಯೂ ಸಂವಿಧಾನವು ಅಧಿಕೃತವಾಗಿಯೇ ಗರ್ಭಪಾತ ನಿಷೇಧಿಸಿದೆ. ಮಹಿಳೆಯ ಜೀವ ಅಪಾಯದಲ್ಲಿ ಇದ್ದಾಗ ಗರ್ಭಪಾತಕ್ಕೆ ಅವಕಾಶ ಮಾಡಿಕೊಡುವ ಕುರಿತು ಅಲ್ಲಿನ ಸುಪ್ರೀಂ ಕೋರ್ಟ್ 1992ರಲ್ಲಿ ತೀರ್ಪು ನೀಡಿದೆ. ಕೋರ್ಟ್‌ನ ಈ ನಿರ್ದೇಶನಕ್ಕೆ ಸಂಬಂಧಿಸಿದಂತೆ ಸೂಕ್ತ ವರದಿ ನೀಡಲು ಐರ‌್ಲೆಂಡ್ ಸರ್ಕಾರ ಸಮಿತಿಯೊಂದನ್ನು ಇತ್ತೀಚೆಗೆ ರಚಿಸಿದೆ.
ದಕ್ಷಿಣ ಆಫ್ರಿಕಾ ಹೊರತುಪಡಿಸಿ ಆಫ್ರಿಕಾ ಖಂಡದ ಬಹುತೇಕ ದೇಶಗಳಲ್ಲಿಯೂ ಗರ್ಭಿಣಿಯ ಜೀವ, ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಧಕ್ಕೆ ಒದಗುವ ಸಂದರ್ಭ ಹೊರತುಪಡಿಸಿದ ಗರ್ಭಪಾತವು ಕಾನೂನುಬಾಹಿರ ಕೃತ್ಯವಾಗಿದೆ.
ಭಾರತದಲ್ಲಿ...
ನಮ್ಮಲ್ಲಿಯೂ 1971ರಲ್ಲಿಯೇ ಗರ್ಭಪಾತ ಕಾನೂನುಬದ್ಧಗೊಳಿಸಲಾಗಿದೆ. ಆದರೆ, ಭ್ರೂಣವು 20 ವಾರಗಳಿಗಿಂತ ಹೆಚ್ಚಿನ ಅವಧಿಯದ್ದು ಆಗಿದ್ದರೆ  ಗರ್ಭಪಾತಕ್ಕೆ ಕಾನೂನಿನಲ್ಲಿಯೂ ಅವಕಾಶ ಇಲ್ಲ.ಗರ್ಭದಲ್ಲಿನ ಶಿಶುವಿನ ಹೃದಯದಲ್ಲಿ ದೋಷ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ಗರ್ಭಪಾತಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ದಂಪತಿಯ ಮನವಿಯನ್ನು ಬಾಂಬೆ ಹೈಕೋರ್ಟ್ 2008ರಲ್ಲಿ  ತಳ್ಳಿ ಹಾಕಿತ್ತು. ಇದು ಕೂಡ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.
ನಮ್ಮಲ್ಲಿ ಗರ್ಭಪಾತವು ಕಾನೂನುಬದ್ಧವಾಗಿದ್ದರೂ, ಅರ್ಧದಷ್ಟು ಗರ್ಭಪಾತಗಳು ಸಮಾಜಕ್ಕೆ ಹೆದರಿ ಅನಧಿಕೃತ ಆಸ್ಪತ್ರೆಗಳಲ್ಲಿಯೇ ನಡೆಯುತ್ತವೆ. ವಿವಾಹಪೂರ್ವ ಲೈಂಗಿಕತೆ, ಒಲ್ಲದ ತಾಯ್ತನ, ಸಿಗದ ಗಂಡನ ಒಪ್ಪಿಗೆ ಮತ್ತಿತರ ಕಾರಣಗಳಿಗೆ ಬಹುತೇಕ ಗರ್ಭಪಾತಗಳು ಅಕ್ರಮವಾಗಿಯೇ ನಡೆಯುತ್ತವೆ.
ಜಾಗತಿಕ ದೃಷ್ಟಿಕೋನ
ವಿಶ್ವಸಂಸ್ಥೆ ನಡೆಸಿದ `ವಿಶ್ವ ಗರ್ಭಪಾತ ನೀತಿ-2011~ರ ಅಧ್ಯಯನದ ಪ್ರಕಾರ, ಬಹುತೇಕ ದೇಶಗಳು ಮಹಿಳೆಯ ದೈಹಿಕ ಆರೋಗ್ಯ ರಕ್ಷಿಸಲು ಗರ್ಭಪಾತಕ್ಕೆ ಸಮ್ಮತಿ ವ್ಯಕ್ತಪಡಿಸಿವೆ. ಅತ್ಯಾಚಾರ ಮತ್ತು ರಕ್ತ ಸಂಬಂಧಿಗಳ ಜತೆಗಿನ ಲೈಂಗಿಕ ಸಂಬಂಧ ಪ್ರಕರಣಗಳಲ್ಲಿಯೂ ಗರ್ಭಪಾತ  ಕಾನೂನುಬದ್ಧಗೊಳಿಸಲಾಗಿದೆ.
ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿಯೂ `ಗರ್ಭಪಾತ~ವು ಪ್ರಮುಖ ವಿಷಯವಾಗಿತ್ತು.
ಕೆಲ ಸಂಪ್ರದಾಯವಾದಿ ಗುಂಪುಗಳು `ಗರ್ಭಪಾತ ವಿರುದ್ಧ~ದ ಪ್ರಚಾರಕ್ಕೆ ಭಾರಿ ಮೊತ್ತವನ್ನೇ ಖರ್ಚು ಮಾಡಿದ್ದವು.
ಗರ್ಭಪಾತದ ಕಾರಣಗಳು
ವಿಶ್ವದಾದ್ಯಂತ ಬೇರೆ, ಬೇರೆ ಕಾರಣಗಳಿಗೆ ಅಸಂಖ್ಯ ಗರ್ಭಪಾತಗಳು ನಡೆಯುತ್ತಲೇ ಇರುತ್ತವೆ.  ಯುವತಿ / ಮಹಿಳೆಯರ ಅಪ್ರಬುದ್ಧತೆ, ಗರ್ಭಿಣಿಯ ಸೂಕ್ಷ್ಮ ಆರೋಗ್ಯ, ಅತ್ಯಾಚಾರ, ಶಿಕ್ಷಣ ಮತ್ತು ವೃತ್ತಿಗೆ ಅಡಚಣೆ, ಮಾನಸಿಕ - ದೈಹಿಕ ಆರೋಗ್ಯ, ಮಗುವಿನ ಪಾಲನೆಗೆ ಸೂಕ್ತ ಹಣಕಾಸು ಸೌಲಭ್ಯ ಇಲ್ಲದಿರುವುದು, ಮಾನವ ಸಂಬಂಧಗಳು ಮುಂತಾದವುಗಳನ್ನು ಗುರುತಿಸಲಾಗಿದೆ.
ನಿಷೇಧ ಪ್ರತಿಪಾದನೆ
ಅನಪೇಕ್ಷಿತ ಗರ್ಭ ತೆಗೆಯುವುದನ್ನು ನಿಷೇಧಿಸಲು ಹಲವಾರು ಕಾರಣಗಳನ್ನು ನೀಡಲಾಗುತ್ತದೆ. ಜೀವ ಪವಿತ್ರವಾದದ್ದು. ಮಗು- ದೇವರ ಬಹು ಅಮೂಲ್ಯವಾದ ಆಶೀರ್ವಾದ. ಅದನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ ಎನ್ನುವುದು ಗರ್ಭಪಾತ ವಿರೋಧಿಗಳ ವಾದ. ಗರ್ಭಪಾತವು ಪಾಪ ಕೃತ್ಯ ಎಂದು ಬೈಬಲ್‌ನಲ್ಲಿ ಪ್ರತಿಪಾದಿಸಲಾಗಿದೆ.
ಬೆಂಬಲಿಗರ ವಾದ
ಅನಿರೀಕ್ಷಿತವಾದ ಗರ್ಭ ತೆಗೆಸುವುದು ಮಹಿಳೆಯ ಹಕ್ಕು. ಇದು ಜೀವ ರಕ್ಷಿಸುವುದಕ್ಕಿಂತಲೂ ಹೆಚ್ಚು ಮಹತ್ವದ್ದು ಎಂದೂ ಕೆಲವರು ವಾದಿಸುತ್ತಾರೆ. ಗರ್ಭಾಂಕುರದ ಹಂತದಲ್ಲಿಯೇ `ಜೀವ~ ಅಥವಾ ಬದುಕು ಆರಂಭಗೊಳ್ಳುವುದರಿಂದ, ವ್ಯಕ್ತಿಯ  ಬದುಕುವ ಹಕ್ಕಿನಂತೆಯೇ ಗರ್ಭಕ್ಕೂ (ಶಿಶುವಿಗೂ) ಅದರದ್ದೇ ಆದ ಬದುಕುವ ಹಕ್ಕು ಇದೆ. ಬದುಕಿನ / ಜೀವದ ಪಾವಿತ್ರ್ಯವನ್ನು ಗರ್ಭದಿಂದಲೇ ಗೌರವಿಸಬೇಕು ಎಂದೂ ಅನೇಕರು ವಾದಿಸುತ್ತಾರೆ.

ಇಸ್ರೊ ಹೆಗ್ಗಳಿಕೆ... 





ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organi­sation -ISRO)   100ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿ ಹೊಸ ಮೈಲಿಗಲ್ಲು ದಾಖಲಿಸಿದೆ.
ವಿಶ್ವದಲ್ಲಿ ಸರ್ಕಾರದ  ನಿಯಂತ್ರಣದಲ್ಲಿ ಇರುವ ಬಾಹ್ಯಾಕಾಶ ಸಂಸ್ಥೆಗಳಲ್ಲಿ `ಇಸ್ರೊ~ 6ನೆ ಅತಿದೊಡ್ಡ ಸಂಸ್ಥೆಯಾಗಿದೆ.
ಅಮೆರಿಕದ `ನಾಸಾ~ -ರಾಷ್ಟ್ರೀಯ ವೈಮಾನಿಕ ವಿಜ್ಞಾನ ಮತ್ತು ಬಾಹ್ಯಾಕಾಶ ಆಡಳಿತ (National Aeronautics and Space Administration -NASA), ರಷ್ಯಾದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ `ಆರ್‌ಕೆಎ~ (RKA), ಯೂರೋಪ್ ಬಾಹ್ಯಾಕಾಶ ಸಂಸ್ಥೆ European Space Agency-ESA), ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ - ಸಿಎನ್‌ಎಸ್‌ಎ (China National Space Administr­ation - CNSA) ಮತ್ತು ಜಪಾನಿನ ಅಂತರಿಕ್ಷ ವಿಜ್ಞಾನ ಸಂಶೋಧನಾ ಸಂಸ್ಥೆಯ (Japan Aerospace Exploration Agency-JAXA) ನಂತರದ ಸ್ಥಾನದಲ್ಲಿ ಇದೆ.
`ಇಸ್ರೊ~ದ ಮೂಲ ಉದ್ದೇಶವು ಬಾಹ್ಯಾಕಾಶ ವಿಜ್ಞಾನ - ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸುವುದು ಮತ್ತು ಅದರ ಪ್ರಯೋಜನಗಳನ್ನು ದೇಶದ ಹಿತಕ್ಕೆ ಬಳಸುವುದು.
`ಇಸ್ರೊ~ ಇದುವರೆಗೆ ಸವೆಸಿದ ಹಾದಿಯಲ್ಲಿ ಏಳು ಬೀಳು ಕಂಡಿದ್ದರೂ ಉದ್ದೇಶ ಸಾಧನೆ ನಿಟ್ಟಿನತ್ತ ದಾಪುಗಾಲು ಹಾಕುತ್ತಲೇ ಇದೆ.
ಉಡಾವಣಾ ವಾಹಕಎರಡು ಬಗೆಯ ರಾಕೆಟ್‌ಗಳಾದ (ಉಡಾವಣಾ ವಾಹಕ) - ಧ್ರುವಗಾಮಿ ಉಪಗ್ರಹ ಉಡಾವಣಾ ವಾಹಕ (ಪಿಎಸ್‌ಎಲ್‌ವಿ) Polar Satellite Launch Vehicle -PSLV) ಮತ್ತು ಭೂಸ್ಥಿರ ಕಕ್ಷೆ ಉಪಗ್ರಹ ಉಡಾವಣಾ ವಾಹಕದ (Geosynchronous Satellite Launch Vehicle - GSLV)  ನೆರವಿನಿಂದ `ಇಸ್ರೊ~, ವಿವಿಧ ಬಗೆಯ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನೆಲೆ ನಿಲ್ಲಿಸಿದೆ.
`ಪಿಎಸ್‌ಎಲ್‌ವಿ~ಯು ದೂರ ಸಂವೇದಿ ಉಪಗ್ರಹಗಳನ್ನು  ಧ್ರುವ ಕಕ್ಷೆಗೆ ಸೇರಿಸುತ್ತದೆ. ಈ ಧ್ರುವ ಕಕ್ಷೆಯಲ್ಲಿ ಇರುವ ಉಪಗ್ರಹಗಳು `ಸೂರ್ಯ ಸ್ಥಿರ ಕಕ್ಷೆ~ಯಲ್ಲಿ ಭೂಮಿಗೆ ಸುತ್ತು ಹಾಕುತ್ತವೆ. ಈ ಉಪಗ್ರಹಗಳು ಸ್ಥಳೀಯ ಕಾಲಮಾನಕ್ಕೆ ಸರಿಯಾಗಿ ಅಂದರೆ ಪ್ರತಿ ದಿನ ಒಂದೇ ಸಮಯದಲ್ಲಿ ಒಂದೇ ಸ್ಥಳದ ಮೂಲಕ ಹಾದು ಹೋಗುತ್ತವೆ.  ಇದರಿಂದ ನಿರ್ದಿಷ್ಟ ಪ್ರದೇಶದ ವಾತಾವರಣ, ಉಷ್ಣಾಂಶ ಮತ್ತಿತರ ವಿವರಗಳನ್ನು ಕರಾರುವಾಕ್ಕಾಗಿ  ದಾಖಲಿಸಿಕೊಳ್ಳಲು ನೆರವಾಗುತ್ತದೆ.
ದೂರ ಸಂವೇದಿ ಉಪಗ್ರಹಭಾರತದ ದೂರ ಸಂವೇದಿ (Indian Remote Sensing -IRS) ಉಪಗ್ರಹಗಳು ಒದಗಿಸುವ ಮಾಹಿತಿಯನ್ನು ವಿವಿಧ ಯೋಜನೆಗಳ ಜಾರಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.  ಕೃಷಿ, ನಗರ ಯೋಜನೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಈ ಮಾಹಿತಿ ಪ್ರಯೋಜನಕ್ಕೆ ಬರುತ್ತದೆ.
`ಭೂಸ್ಥಿರ ಕಕ್ಷೆ~ಯಲ್ಲಿ ಇರುವ `ಇನ್‌ಸ್ಯಾಟ್~ನಂತಹ ಹೆಚ್ಚುತೂಕದ ಉಪಗ್ರಹಗಳು ದೂರಸಂಪರ್ಕ ಸೇವೆಗೆ ನೆರವಾಗುತ್ತಿವೆ.
ಭೂಮಿಯಿಂದ 36 ಸಾವಿರ ಕಿ.ಮೀ ಎತ್ತರದಲ್ಲಿ ನೆಲೆ ನಿಲ್ಲುವ (ಭೂ ಸ್ಥಿರ ಕಕ್ಷೆ ) ಉಪಗ್ರಹಗಳ  ಕಕ್ಷಾಪಥವು ಭೂಮಿಯ ಒಂದು ಪ್ರದಕ್ಷಿಣೆಗೆ ಹೆಚ್ಚೂಕಡಿಮೆ ಸಮನಾಗಿರುತ್ತದೆ. ಹೀಗಾಗಿ ಭೂಸ್ಥಿರ ಕಕ್ಷೆಗೆ ಉಡಾಯಿಸುವ ಉಪಗ್ರಹಗಳು ಭೂಮಿಯಲ್ಲಿ ಇರುವವರಿಗೆ ಸ್ಥಿರವಾಗಿ ನಿಂತಿರುವಂತೆ ಭಾಸವಾಗುತ್ತವೆ.  ದೂರಸಂಪರ್ಕ ಸೇವೆಗೆ ನೆರವಾಗುತ್ತವೆ.
ವಹಿವಾಟು ಹೆಚ್ಚಳಕ್ಕೆ ನೆರವು
ಈ ಯಶಸ್ಸು, `ಇಸ್ರೊ~ದ ವಾಣಿಜ್ಯ ಉದ್ದೇಶದ, ಅದರಲ್ಲೂ ವಿಶೇಷವಾಗಿ ಧ್ರುವಗಾಮಿ ಮತ್ತು ಸಣ್ಣ ಗಾತ್ರದ ಉಪಗ್ರಹಗಳ ಉಪಗ್ರಹ ಉಡಾವಣಾ ವಹಿವಾಟು ಹೆಚ್ಚಲು ನೆರವಾಗಲಿದೆ.
`ಜಿಎಸ್‌ಎಲ್‌ವಿ~ ಉಡಾವಣೆಯಲ್ಲಿ ಹೆಚ್ಚೆಚ್ಚು ಪರಿಣತಿ ಸಾಧಿಸುವುದರಿಂದ ವಹಿವಾಟಿನ ಅವಕಾಶಗಳೂ ಹೆಚ್ಚಲಿವೆ.  ಇದು `ಇಸ್ರೊ~ದ ಚಂದ್ರಯಾನ ಮತ್ತು ಮಂಗಳ ಯಾನ ಯೋಜನೆಗಳಿಗೂ ನೆರವಾಗಲಿದೆ. `ಇಸ್ರೊ~ ಈಗಾಗಲೇ `ಜಿಎಸ್‌ಎಲ್‌ವಿ~ಯ 1 ಮತ್ತು 2ನೆ ಹಂತದ ಯೋಜನೆಯಲ್ಲಿ ಯಶಸ್ವಿಯಾಗಿದ್ದು, ಮೂರನೆ  ಹಂತದ ಯೋಜನೆ ಇನ್ನೂ ಅಭಿವೃದ್ಧಿ ಹಂತದಲ್ಲಿ ಇದೆ.
ಸದ್ಯಕ್ಕೆ `ಇಸ್ರೊ~ ವರ್ಷದಲ್ಲಿ 3ರಿಂದ ನಾಲ್ಕು ಉಡಾವಣೆಗಳನ್ನು ನಡೆಸುತ್ತಿದೆ. ವರ್ಷಕ್ಕೆ 12 ಉಡಾವಣೆಗಳು ಅಥವಾ 5 ವರ್ಷದಲ್ಲಿ 60 ಉಡಾವಣೆಗಳನ್ನು ನಡೆಸುವ ಮಹತ್ವಾಕಾಂಕ್ಷೆ ಯೋಜನೆಯನ್ನು `ಇಸ್ರೊ~ ಹೊಂದಿದೆ.

ಪ್ಯಾಲೆಸ್ಟೀನ್‌, ಇಸ್ರೇಲ್‌ ಹಗೆತನ

ಯಹೂದಿಗಳ ದೇಶ ಇಸ್ರೇಲ್‌ ಮತ್ತು ಅರಬ್‌ ಮುಸ್ಲಿಮರ ಪ್ಯಾಲೆಸ್ಟೀನ್‌ ನಡುವೆ ಮತ್ತೆ ಭುಗಿಲೆದ್ದಿರುವ ಕಲಹ ಇಡೀ  ವಿಶ್ವದ ಗಮನ ಸೆಳೆದಿದೆ. ಪ್ಯಾಲೆಸ್ಟೀನ್‌ ಜನರು ನೆಲೆಸಿರುವ ಗಾಜಾ­ಪಟ್ಟಿ ಮೇಲೆ ಇಸ್ರೇಲ್‌ ನಡೆಸುತ್ತಿರುವ ಸೇನಾ ಕಾರ್ಯಾ­ಚರಣೆಗೆ ನೂರಾರು ಮುಗ್ಧ ನಾಗರಿಕರೂ ಬಲಿಯಾಗಿದ್ದಾರೆ.
ಇತಿಹಾಸ
ಪ್ಯಾಲೆಸ್ಟೀನ್‌ ಎನ್ನುವ ದೇಶ ಈ ಹಿಂದೆ ಯಾವತ್ತೂ ಅಸ್ತಿತ್ವದಲ್ಲಿ ಇರಲಿಲ್ಲ. ರೋಮನ್ನರ ಆಡಳಿತ ಅವಧಿಯಲ್ಲಿ ‘ಪವಿತ್ರ ಭೂಮಿ’ಗೆ ಈ ಹೆಸರು ಬಳಕೆಗೆ ಬಂದಿತ್ತು. ಈಗ ಪ್ಯಾಲೆಸ್ಟೀನಿಯರು ಎಂದು ಕರೆಯಿಸಿಕೊಳ್ಳುವವರು ಮೂಲತಃ ಅರಬ್ಬರು. ಇವರಿಗೆ ಪ್ಯಾಲೆಸ್ಟೀನಿಯರು ಎಂದು ಹೆಸರು ಕೊಟ್ಟವರು ಪ್ಯಾಲೆಸ್ಟೀನ್‌ ವಿಮೋಚನಾ ಸಂಘಟನೆಯ (ಪಿಎಲ್‌ಒ) ಸ್ಥಾಪಕ ಯಾಸೀರ್‌ ಅರಾಫತ್‌.
ಈ ‘ಪವಿತ್ರ ಭೂಮಿ’ ಮೇಲೆ ಅಧಿಕಾರ ಚಲಾ ಯಿಸಲು ಕ್ಯಾಥೋಲಿಕ್‌ ಚರ್ಚ್‌ ಮತ್ತು ಮುಸ್ಲಿಮರು  ಸಮರ ನಡೆಸುತ್ತಲೇ ಬಂದಿದ್ದಾರೆ. ಮೊದಲ ಮಹಾಯುದ್ಧ ಮುಗಿದ ನಂತರ ಮಧ್ಯ ಪ್ರಾಚ್ಯವು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ವಿಶ್ವದ ಬೇರೆ ಬೇರೆ ಭಾಗದಲ್ಲಿ ನೆಲೆಸಿದ್ದ ಯಹೂದಿಗಳಿಗೆ ಒಂದು ಶಾಶ್ವತ ನೆಲೆ ಕಲ್ಪಿಸಲು ಬ್ರಿಟನ್‌ ಮುಂದಾ ಯಿತು. ಇದು ‘ಬಾಲ್ಫೋರ್‌ ಘೋಷಣೆ’ ಎಂದೇ  ಹೆಸರಾಗಿದೆ.
ಬಾಲ್ಫೋರ್‌ ಘೋಷಣೆ
1917ರ ನವೆಂಬರ್‌ನಲ್ಲಿ ಈ ಘೋಷಣೆ ಮಾಡಲಾಯಿತು. ಮಧ್ಯ­ಪ್ರಾಚ್ಯ­ದಲ್ಲಿನ ಪ್ಯಾಲೆ ಸ್ಟೀನ್‌ನಲ್ಲಿ  ಯಹೂದಿ­ಗಳಿಗೆ ಪ್ರತ್ಯೇಕ ದೇಶ ಅಸ್ತಿತ್ವಕ್ಕೆ ಬರಲು ಇದು ನೆರವಾಯಿತು. ಪ್ಯಾಲೆ­ಸ್ಟೀನ್‌ ಪ್ರದೇಶದಲ್ಲಿನ ಯಹೂದಿ­ಯೇತರ ಜನಾಂಗದವರ ರಕ್ಷಣೆಯ ಭರವಸೆಯ ನ್ನೂ ನೀಡಲಾಗಿತ್ತು. ಮೊದಲ ಮಹಾ ಯುದ್ಧದಲ್ಲಿ ಮೈತ್ರಿ­ಕೂಟದ ಪರವಾಗಿ ನಿಂತಿದ್ದಕ್ಕೆ ಈ ನೆಲ ತಮಗೆ ದೊರೆಯಲಿದೆ ಎಂದು ಪ್ಯಾಲೆಸ್ಟೀನ್‌ ಅರಬ್ಬರು ನಂಬಿ ದ್ದರು.
ಪ್ರತ್ಯೇಕ ದೇಶ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಯಹೂದಿ ಗಳು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬಂದರು. ಇದು ತಮ್ಮ ಅಸ್ತಿತ್ವಕ್ಕೆ ಧಕ್ಕೆ ತರಲಿದೆ ಎಂದು ಅರಬ್ಬರು ಭಾವಿಸಿದರು. ಇದು ಕ್ರಮೇಣ ದೊಡ್ಡ ಕಗ್ಗಂಟಾಗಿ ಪರಿಣಮಿಸಿತು.ತಾಯ್ನಾಡಿಗೆ ಮರಳಲು ಯಹೂದಿ­ಗಳಿಗೆ ಆಹ್ವಾನ ನೀಡಿದ್ದ ಬ್ರಿಟನ್‌, ಪ್ಯಾಲೆಸ್ಟೀನ್‌ನ ಶೇ 75ರಷ್ಟು ಭೂಮಿ­ಯನ್ನು ಅರಬ್‌ರಿಗೆ ಮಾರಾಟ ಮಾಡಿ,  ಯಹೂದಿ ಯರಿಗೆ ದ್ರೋಹ ಬಗೆಯಿತು. ಇದರ ಫಲವಾಗಿ ಜೋರ್ಡಾನ್‌ ದೇಶ ಅಸ್ತಿತ್ವಕ್ಕೆ ಬಂದಿತು.  ಬೇರೆ ಆಯ್ಕೆ ಇಲ್ಲದೇ ಯಹೂದಿಗಳು ಇದನ್ನು ಒಪ್ಪಿಕೊಳ್ಳ ಬೇಕಾಯಿತು.
ಉಳಿದ ಶೇ 25ರಷ್ಟು ಭೂಮಿಯನ್ನು ಯಹೂದಿ ಗಳು ಮತ್ತು ಅರಬ್ಬರ ಮಧ್ಯೆ ಹಂಚಿಕೆ ಮಾಡಲು ವಿಶ್ವಸಂಸ್ಥೆ ನಿರ್ಧರಿ­ಸಿತು. ಈ ವಿಭಜನೆಯನ್ನು ಯಹೂದಿ­ಗಳು ಒಪ್ಪಿಕೊಂಡರೂ, ಅರಬ್ಬರು ವಿರೋಧಿಸಿದರು. ಕೊನೆಗೂ 1948ರ ಮೇ 14ರಂದು ಯಹೂದಿಗಳ ದೇಶ ಇಸ್ರೇಲ್‌ ಸ್ವತಂತ್ರ­ವಾಗಿ ಅಸ್ತಿತ್ವಕ್ಕೆ ಬಂದಿತು.
ಇಸ್ರೇಲ್‌ ಅಸ್ತಿತ್ವಕ್ಕೆ ವಿರೋಧ
ಇಸ್ರೇಲ್‌ನ ಅಸ್ತಿತ್ವವನ್ನು ಈಜಿಪ್ಟ್‌, ಜೋರ್ಡಾನ್‌, ಸಿರಿಯಾ, ಲೆಬನಾನ್‌ ಮತ್ತು ಇರಾಕ್‌ ವಿರೋಧಿ ಸಿದ್ದವು. 5 ದೇಶಗಳ ವಿರುದ್ಧದ ಸಮರದಲ್ಲಿ ಇಸ್ರೇಲ್‌ ಕೊನೆಗೂ ಗೆಲುವು ಸಾಧಿಸಿತ್ತು. ಈ ಮಧ್ಯೆ, ಅರಬ್‌ ದೇಶಗಳಿಂದ ಯಹೂದಿಗಳನ್ನು ಮತ್ತು ಇಸ್ರೇಲ್‌ನಿಂದ ಅರಬ್ಬರನ್ನು ಹೊರ ಹಾಕಲಾಯಿತು. ಇವರೆಲ್ಲ ಸೂಕ್ತ ನೆಲೆ ಇಲ್ಲದೇ ನಿರಾಶ್ರಿತರಾದರು.1967ರಲ್ಲಿಯೂ ನಡೆದ ಯುದ್ಧ­ದಲ್ಲಿ ಅರಬ್‌ ದೇಶಗಳನ್ನು ಇಸ್ರೇಲ್‌ ಮಣಿಸಿ, ತನ್ನ ಗಡಿ ರೇಖೆ ವಿಸ್ತರಿಸಿತ್ತು. ಕೊನೆಗೆ ಒಪ್ಪಂದ ಏರ್ಪಟ್ಟು ಪ್ಯಾಲೆಸ್ಟೀನಿ­ಯರಿಗೆ  ಕೆಲ ಭಾಗ ಬಿಟ್ಟುಕೊಟ್ಟಿತು. 
ಕೊನೆಯಾಗದ ಹಗೆತನ
ಇಸ್ರೇಲ್‌ ವಿರುದ್ಧದ ಅರಬ್‌ ದೇಶಗಳ ಹಗೆತನವು ನಿರಂತರವಾಗಿ ಮುಂದುವರೆ­ದಿದೆ. ಅಲ್‌ ಖೈದಾ, ಹಿಜ್ಬುಲ್ಲಾ, ಹಮಾಸ್‌, ಮುಸ್ಲಿಂ ಬ್ರದರ್‌ಹುಡ್‌, ಪ್ಯಾಲೆಸ್ಟೀನ್‌ ಮುಂತಾದವು ಇಸ್ರೇಲ್‌ ಮುಗಿಸಲು  ಪ್ರಯತ್ನಿ­ಸುತ್ತಲೇ ಇವೆ.
ಚುನಾಯಿತ ಸರ್ಕಾರ
ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯ ಆಡಳಿತದ ನಿರ್ವಹಣೆಗೆ 1993ರಲ್ಲಿ  ಪ್ಯಾಲೆಸ್ಟೀನ್‌ ರಾಷ್ಟ್ರೀಯ ಪ್ರಾಧಿಕಾರ ರಚಿಸಲಾಗಿತ್ತು. 2006ರಲ್ಲಿ ಪ್ಯಾಲೆ ಸ್ಟೀನ್‌ನ ಮೊದಲ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದಿತು. ಫತಾಹ್‌ ಗುಂಪು ಪಶ್ಚಿಮ ದಂಡೆಯಲ್ಲಿ ಮತ್ತು ಸಾಂಪ್ರದಾಯಿಕ ಹಮಾಸ್‌, ಗಾಜಾ ಪಟ್ಟಿ ಯಲ್ಲಿ ಅಧಿಕಾರಕ್ಕೆ ಏರಿತು. 
ಹಮಾಸ್‌ ಹಗೆತನ
ಮುಸ್ಲಿಂ ಬ್ರದರ್‌ಹುಡ್‌ನಲ್ಲಿ ಹಮಾಸ್‌ ಬೇರು ಗಳಿವೆ. ಇದು ತನ್ನ ಅಸ್ತಿತ್ವ ಸಾಬೀತುಪಡಿಸಲು ಇಸ್ರೇಲ್‌ ವಿರುದ್ಧ ಸಂಘರ್ಷ ನಡೆಸುತ್ತಲೇ ಬಂದಿದೆ. ಹಮಾಸ್‌ ವಿರುದ್ಧವೂ ಇಸ್ರೇಲ್‌ ಇದೇ ಬಗೆಯ ಹಗೆತನ ಪಾಲಿಸಿಕೊಂಡು ಬರುತ್ತಿದೆ, ಹಮಾಸ್‌ನ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಇಸ್ರೇಲ್‌ 2007ರಲ್ಲಿ ಗಾಜಾ ಪಟ್ಟಿ ಮೇಲೆ ದಿಗ್ಬಂಧನ ವಿಧಿಸಿತು.
ಇದರ ಫಲವಾಗಿ ಗಾಜಾ ಪಟ್ಟಿಗೆ ಅವಶ್ಯಕ ಸರಕುಗಳ ಸರಬರಾಜು ಮತ್ತು ವಿಶ್ವ ಸಂಸ್ಥೆ ನೇತೃತ್ವದಲ್ಲಿನ ವಿಶ್ವ ಸಮುದಾಯದ ನೆರವು ಸ್ಥಗಿತಗೊಂಡಿತು. ತನ್ನ ಅಸ್ತಿತ್ವವನ್ನೇ  ನಾಶ ಮಾಡಲು ಪಣ ತೊಟ್ಟಿರುವ ಇಸ್ರೇಲ್‌ ವಿರುದ್ಧ ಹಮಾಸ್‌ ನಿಯಮಿತವಾಗಿ ರಾಕೆಟ್‌ ಉಡಾಯಿಸುತ್ತ ಸಂಘರ್ಷ ನಡೆಸುತ್ತಿದೆ.
ಕದನ ವಿರಾಮ
2012ರ ದಾಳಿ ನಂತರ ಉಭಯ ಬಣಗಳು ಕದನ ವಿರಾಮಕ್ಕೆ ಸಮ್ಮತಿಸಿದ್ದವು. ಅಮೆರಿಕ ನಡೆಸಿದ ಶಾಂತಿ ಮಾತುಕತೆ ಈ ವರ್ಷದ ಏಪ್ರಿಲ್‌ನಲ್ಲಿ ಮುರಿದು ಬಿದ್ದಿತ್ತು.  ವಿರುದ್ಧ ಮಾರ್ಗ ತುಳಿದಿದ್ದ ಫತಾಹ್‌ ಮತ್ತು ಹಮಾಸ್‌ ಬಣಗಳು ಒಂದಾಗಿವೆ. ಪ್ಯಾಲೆಸ್ಟೀನ್‌ನ ಎರಡು ಬಣಗಳು ಒಂದಾಗಿರುವುದು ತನಗೆ ಒದಗಿದ ಹೊಸ ಬೆದರಿಕೆ ಎಂದು  ಇಸ್ರೇಲ್‌ ನಿರ್ಧಾರಕ್ಕೆ ಬಂದಿದೆ.
ಇಸ್ರೇಲ್‌ನ ಮೂವರು ಯುವಕರನ್ನು ಪ್ಯಾಲೆಸ್ಟೀ ನಿಯರು ಅಪಹರಿಸಿ ಕೊಂದು ಹಾಕಿರುವುದು ಇತ್ತೀಚಿನ ಸಂಘರ್ಷಕ್ಕೆ ಮೂಲ ಕಾರಣವಾಗಿದೆ.

ಸುದ್ದಿ ಹಿನ್ನೆಲೆ : ಅಡುಗೆ ಅನಿಲ ಸಂಪರ್ಕ ನಿಬಂಧನೆ ಸಡಿಲು



ಎಲ್‌ಪಿಜಿ ಸಬ್ಸಿಡಿ ಹೊರೆ ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ  ಈಗ `ಒಂದು ಮನೆ; ಒಂದು ಸಂಪರ್ಕ~ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವುದು ಮತ್ತು  ಸಬ್ಸಿಡಿ ಸೌಲಭ್ಯದ ಸಿಲಿಂಡರ್‌ಗಳ ಸಂಖ್ಯೆಯನ್ನು ವರ್ಷಕ್ಕೆ 6ಕ್ಕೆ ಸೀಮಿತಗೊಳಿಸಲು ನಿರ್ಧರಿಸಿರುವುದು  ಅನೇಕ ಕುಟುಂಬಗಳ ಪಾಲಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. 
ಸದ್ಯಕ್ಕೆ ದೇಶದಲ್ಲಿ 1*.5 ಕೋಟಿ `ಎಲ್‌ಪಿಜಿ~ ಸಂಪರ್ಕಗಳಿವೆ. ಇವುಗಳ ಪೈಕಿ 2.6 ಕೋಟಿ ಸಂಪರ್ಕಗಳು ಒಂದಕ್ಕಿಂತ ಹೆಚ್ಚು ಸಂಪರ್ಕಗಳಾಗಿವೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ - ಹೆಚ್ಚುವರಿ ಸಂಪರ್ಕ ಕಡಿತಗೊಳಿಸಲು ಮುಂದಾಗಿವೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ಸಂಪರ್ಕಗಳ ಮೇಲಿನ ಹಲವಾರು ನಿಬಂಧನೆಗಳನ್ನು ಸಡಿಲಿಸಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಗ್ರಾಹಕರು ಒಂದು ವೇಳೆ ಒಂದಕ್ಕಿಂತ ಹೆಚ್ಚು ಎಲ್‌ಪಿಜಿ ಸಂಪರ್ಕ ಹೊಂದಿದ್ದರೆ ಅವುಗಳನ್ನು ಮರಳಿಸುವ ಅಗತ್ಯ ಇ್ಲ್ಲಲ.
ಆದರೆ, ಬಳಕೆದಾರರು ಹೆಚ್ಚುವರಿ ಸಂಪರ್ಕಕ್ಕೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಪೂರೈಸಲು ಕೇಳುವುದಿಲ್ಲ ಎಂದು ಘೋಷಣೆ ಮಾಡಿಕೊಳ್ಳಬೇಕು ಎಂದು ಹೇಳಿದೆ.  ಹೆಚ್ಚುವರಿ ಸಂಪರ್ಕಗಳಿಗೆ, ಸಬ್ಸಿಡಿಗೆ ದೊರೆಯುವ ಸಿಲಿಂಡರ್ ಬೆಲೆಗಿಂತ ಮೂರು ಪಟ್ಟು ಹೆಚ್ಚು ಹಣ ಪಾವತಿಸಬೇಕು ಎನ್ನುವ ನಿಬಂಧನೆಯನ್ನೂ ವಿಧಿಸಿದೆ.
ಹೆಚ್ಚುವರಿ ಸಂಪರ್ಕಗಳನ್ನು `ಸಬ್ಸಿಡಿ ರಹಿತ, ಗೃಹ ಬಳಕೆಯೇತರ ವಿನಾಯ್ತಿ~ ವಿಭಾಗದಲ್ಲಿ ಪರಿಗಣಿಸಲು ನಿರ್ಧರಿಸಲಾಗಿದೆ.ಅಡುಗೆ ಅನಿಲ ಸಂಪರ್ಕಕ್ಕೆ   ಸಂಬಂಧಿಸಿದಂತೆ ಬಳಕೆದಾರರಲ್ಲಿ ಮೂಡುವ  ಹಲವು ಸಂದೇಹಗಳಿಗೆ ಇಲ್ಲಿದೆ ಉತ್ತರ.
*ಸಬ್ಸಿಡಿಸಹಿತ ಎಲ್‌ಪಿಜಿ ವಿತರಣೆ
ಈ ಮೊದಲು ಕುಟುಂಬವೊಂದು ಸಿಲಿಂಡರ್ ಬಳಸುವ ಸಂಖ್ಯೆಗೆ ಯಾವುದೇ ನಿರ್ಬಂಧ ಇದ್ದಿರಲಿಲ್ಲ.  ಇನ್ನು ಮುಂದೆ ಹಣಕಾಸು ವರ್ಷವೊಂದರಲ್ಲಿ ಪ್ರತಿ ಒಂದು ಸಂಪರ್ಕಕ್ಕೆ 6 ಸಿಲಿಂಡರ್‌ಗಳನ್ನು ಮಾತ್ರ ವಿತರಿಸಲಾಗುವುದು.
2013ರ ಮಾರ್ಚ್ 31ರವರೆಗೆ ಉಳಿದ 3 ಸಬ್ಸಿಡಿ ಸಹಿತ ಸಿಲಿಂಡರ್‌ಗಳನ್ನು ವಿತರಿಸಲಾಗುವುದು. 2013-1*ನೇ ಹಣಕಾಸು ವರ್ಷದಲ್ಲಿ ಈ  ಸಬ್ಸಿಡಿ ಸೌಲಭ್ಯ 6 ಸಿಲಿಂಡರುಗಳಿಗೆ ಸೀಮಿತವಾಗಿರುತ್ತದೆ. ಕೆಲ ರಾಜ್ಯ ಸರ್ಕಾರಗಳು ಹೆಚ್ಚುವರಿಯಾಗಿ 3 ಸಿಲಿಂಡರುಗಳನ್ನು ಸಮಾಜದ ನಿರ್ದಿಷ್ಟ ವರ್ಗಕ್ಕೆ ಸಬ್ಸಿಡಿ ದರದಲ್ಲಿ ವಿತರಿಸಿ ಆ ಹೊರೆಯನ್ನು ತಾವೇ ಭರಿಸುವುದಾಗಿ ಹೇಳಿಕೊಂಡಿವೆ. ರಾಜ್ಯದಲ್ಲಿ ಅಂತಹ ಪ್ರಸ್ತಾವ ಇಲ್ಲ.
ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಅಂತರರಾಷ್ಟ್ರೀಯ ಬೆಲೆ ಆಧರಿಸಿ  ಪ್ರತಿ ತಿಂಗಳು ಪ್ರಕಟಿಸುತ್ತವೆ.
*ಹೊಸ ಎಲ್‌ಪಿಜಿ ಸಂಪರ್ಕ ಪಡೆಯಬಹುದೇ?
ಇದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಕೆಲ  ಷರತ್ತುಗಳಿವೆ. ಈಗಾಗಲೇ ಎಲ್‌ಪಿಜಿ ಸಂಪರ್ಕ ಹೊಂದಿರಬಾರದು. ವಿಳಾಸ ಮತ್ತು ವಾಸಸ್ಥಳದ ದಾಖಲೆ ಸಲ್ಲಿಸುವುದು ಕಡ್ಡಾಯ. ಒಂದೇ ಮನೆಯಲ್ಲಿ ಸರ್ಕಾರಿ ಸ್ವಾಮ್ಯದ ಎರಡು ತೈಲ ಮಾರಾಟ ಸಂಸ್ಥೆಗಳ ಸಂಪರ್ಕ ಇರಬಾರದು.
*`ಸಬ್ಸಿಡಿ ರಹಿತ ಎಲ್‌ಪಿಜಿ~ ಪಡೆಯಬಹುದೇ?
ಇದಕ್ಕೂ ಮೊದಲು ಇಂತಹ  ಸಂಪರ್ಕ ತಕ್ಷಣಕ್ಕೆ ಸಿಗುತ್ತಿರಲಿಲ್ಲ. ಇನ್ನು ಮುಂದೆ ಅಂತಹ ನಿರ್ಬಂಧ ಇಲ್ಲ. ಗ್ರಾಹಕರ ಬೇಡಿಕೆ ಮೇರೆಗೆ ಸಬ್ಸಿಡಿ ರಹಿತ ಎಲ್‌ಪಿಜಿ ಸಂಪರ್ಕವು ತಕ್ಷಣಕ್ಕೆ  ದೊರೆಯಲಿದೆ. ಆದರೆ,  ಯಾವುದೇ ಎಲ್‌ಪಿಜಿ ಸಂಪರ್ಕ ಹೊಂದಿರಬಾರದು.
*ಕುಟುಂಬದ ಸದಸ್ಯರ ಹೆಸರಿಗೆ `ಎಲ್‌ಪಿಜಿ~ ಸಂಪರ್ಕ ವರ್ಗಾಯಿಸಬಹುದೇ?- ಗ್ರಾಹಕ ಮೃತ ಪಟ್ಟ ಸಂದರ್ಭದಲ್ಲಿ ವಾರಸುದಾರರಿಗೆ ಸುಲಭವಾಗಿ ವರ್ಗಾಯಿಸಬಹುದು. ವರ್ಗಾವಣೆ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸಲಾಗಿದೆ. ಮರಣ ಪ್ರಮಾಣ ಪತ್ರ ಸಲ್ಲಿಸಿ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು.
ಸಂಪರ್ಕವನ್ನು ಇತರರ ಹೆಸರಿಗೆ ವರ್ಗಾವಣೆ ಮಾಡಲೂ ಈಗ ಅನುಮತಿ ನೀಡಲಾಗಿದೆ.
ಸಂಪರ್ಕವನ್ನು ವರ್ಗಾಯಿಸಿಕೊಳ್ಳುವ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಸಂಪರ್ಕ ಇರಬಾರದು. ಮೂಲ ಗ್ರಾಹಕ ಸಮ್ಮತಿ ಪತ್ರ ನೀಡಿದರೆ ವರ್ಗಾವಣೆ ಮಾಡಿಕೊಳ್ಳಬಹುದು.
ಸಂಪರ್ಕ ಸಕ್ರಮ
ಮೂಲ ದಾಖಲೆಗಳಿಲ್ಲದ ಸಂಪರ್ಕವನ್ನು ಸಕ್ರಮಗೊಳಿಸುವುದಕ್ಕೂ ಈಗ ಅವಕಾಶ ಮಾಡಿಕೊಡಲಾಗಿದೆ. ಹೊಸ ಸಂಪರ್ಕದ ನಿಬಂಧನೆಗಳೆಲ್ಲ ಇದಕ್ಕೆ ಅನ್ವಯಿಸಲಿವೆ.>>

ಸುನಾಮಿ ದುರಂತಕ್ಕೆ 10 ವರ್ಷ

2004ರ ಡಿಸೆಂಬರ್‌ 26ರಂದು ಇಂಡೊನೇಷ್ಯಾ ವ್ಯಾಪ್ತಿಯ ಸಾಗರ­ದಾಳದಲ್ಲಿ ಸಂಭವಿಸಿದ ತೀವ್ರ ಸ್ವರೂಪದ ಭೂಕಂಪದ ಫಲವಾಗಿ ಉಂಟಾದ ಸುನಾಮಿಗೆ  14 ದೇಶಗಳಲ್ಲಿನ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾದ ದುರಂತಕ್ಕೆ ಈಗ ಹತ್ತು ವರ್ಷ ಪೂರ್ಣಗೊಂಡಿವೆ.
ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಭೂಕಂಪ ಇದಾಗಿದ್ದು, ಘೋರ ಸುನಾಮಿಗಳಲ್ಲಿ ಒಂದೆಂದು ಕುಖ್ಯಾತಿ ಗಳಿಸಿದೆ. ಈ ದುರಂತದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಮನೆ ಮಠ ಕಳೆದು­-ಕೊಂಡಿದ್ದರು. ಅಂದು, ಇಂಡೊನೇಷ್ಯಾದ ಸುಮಾ­ತ್ರಾದ ಪಶ್ಚಿಮ ಕರಾವಳಿಯ ಸಮುದ್ರದ ಆಳದಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿತ್ತು.
ರಿಕ್ಟರ್‌ ಮಾಪಕದಲ್ಲಿ 9.3ರಷ್ಟು ತೀವ್ರತೆಯ ಭೂಕಂಪ ಅದಾಗಿತ್ತು. ಇದರ ಪರಿಣಾಮವಾಗಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು  ಸಾವಿರಾರು ಕಿ. ಮೀ ದೂರ ಕ್ರಮಿಸಿ 9 ದೇಶಗಳ ಕರಾವಳಿಗೆ ಅಪ್ಪಳಿಸಿದ್ದವು.
ಇಂಡೊನೇಷ್ಯಾ, ಥಾಯ್ಲೆಂಡ್, ಮಲೇಷ್ಯಾ, ಮ್ಯಾನ್ಮಾರ್, ಶ್ರೀಲಂಕಾ, ಮಾಲ್ಡೀವ್ಸ್‌, ಸೋಮಾಲಿಯಾ, ಸೆಷೆಲ್ಸ್‌ ಮತ್ತು ಭಾರತದಲ್ಲಿ ಅನಾ­ಹುತದ ತೀವ್ರತೆ ಹೆಚ್ಚಿತ್ತು. ತಮಿಳುನಾಡು ಕರಾವಳಿಯ­ಲ್ಲಿಯೂ ಭಾರಿ ಅನಾಹುತ ಉಂಟಾಗಿತ್ತು. ಕಡ­ಲೂರು, ನಾಗಪಟ್ಟಣಂ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಸುನಾಮಿ ಅಲೆಗಳು ತೀವ್ರ ಅನಾಹುತ  ಉಂಟು ಮಾಡಿದ್ದವು.
ಸುನಾಮಿಯಿಂದ ಬಿಡುಗಡೆಯಾಗಿದ್ದ ಶಕ್ತಿಯ ತೀವ್ರತೆಯು  ಜಪಾನಿನ ಹಿರೋಷಿಮಾ ನಗರದ ಮೇಲೆ ಹಾಕಿದ್ದ ಅಣು ಬಾಂಬ್‌ನ 40 ಸಾವಿರ ಪಟ್ಟು ಹೆಚ್ಚಿಗೆ ಇತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ರಿಕ್ಟರ್‌ ಮಾಪಕದಲ್ಲಿ  9.1ರಷ್ಟು ತೀವ್ರತೆ ಇದ್ದ ಭೂಕಂಪದ ಫಲವಾಗಿ ಸಾಗರದ ಆಳದಲ್ಲಿ 300 ಕಿ. ಮೀ ಅಗಲ ಮತ್ತು 1,500 ಕಿ. ಮೀ ಉದ್ದದ  ಬಿರುಕು ಉಂಟಾಗಿತ್ತು.
ಅಪರೂಪದ ವಿದ್ಯಮಾನ
ಇದೊಂದು ಅತ್ಯಂತ ವಿರಳವಾದ ಘಟನೆ. ಶತಮಾನದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಘಟಿಸುತ್ತದೆ.  ಸಾಗರದ ಆಳದಲ್ಲಿ ಪ್ರತಿ ಬಾರಿ ಭೂಕಂಪ ಸಂಭವಿಸಿದಾಗ ಸುನಾಮಿ ಘಟಿಸುವುದಿಲ್ಲ ಎಂದು ಖ್ಯಾತ ಭೂ ವಿಜ್ಞಾನಿ ಹರ್ಷ ಗುಪ್ತ ಅಭಿಪ್ರಾಯ­ಪಟ್ಟಿದ್ದಾರೆ.
ಸಾಗರದ ಆಳದಲ್ಲಿ ಭೂಕಂಪ ಸಂಭವಿಸಿ­ದಾಗ ಸಮುದ್ರದ ತಳವು ಲಂಬಾಕಾರದಲ್ಲಿ ಸ್ಥಾನಪಲ್ಲಟ­ಗೊಳ್ಳು­ವುದರಿಂದ ಸಾಗರದ ನೀರು ಕೂಡ ಪಲ್ಲಟಗೊಂಡು ಲೋಲಕದಂತೆ ಓಲಾ­ಡುತ್ತ ಸಾಗರದ ಮೇಲ್ಭಾಗಕ್ಕೆ ಬರುವು­ದರಿಂದ ‘ಸುನಾಮಿ’ ಸಂಭವಿಸುತ್ತದೆ.
ಮುನ್ಸೂಚನಾ ವ್ಯವಸ್ಥೆ
ಈ ದುರಂತದಿಂದ ಪಾಠ ಕಲಿತ ನಂತರ ಈಗ ಸುನಾಮಿ ಮುನ್ಸೂಚನೆ  ನೀಡುವ ವ್ಯವಸ್ಥೆ ಅಭಿವೃದ್ಧಿಪಡಿ­ಸಲಾಗಿದೆ. ಆದರೆ, ಈ ವ್ಯವಸ್ಥೆ ದಕ್ಷತೆಯಿಂದ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಮಾನಗಳಿವೆ.
ಪ್ರಮುಖ ದುರಂತಗಳು
ಇದುವರೆಗೆ ವಿಶ್ವವು  1755, 2004 ಮತ್ತು 2011ರಲ್ಲಿ ಮೂರು ಪ್ರಮುಖ ಸುನಾಮಿ ದುರಂತಗಳನ್ನು ಕಂಡಿದೆ. 1755ರಲ್ಲಿ ಅಟ್ಲಾಂಟಿಕ್‌ ಸಾಗರದಲ್ಲಿ ಲಿಸ್ಬನ್‌ ಭೂಕಂಪದ ಫಲವಾಗಿ ಘಟಿಸಿದ ಸುನಾಮಿಯಿಂದಾಗಿ  90 ಸಾವಿರ ಜನರು ಮೃತಪಟ್ಟಿದ್ದರು. 2004ರಲ್ಲಿ ನಡೆದ ದುರಂತದವರೆಗೆ ‘ಸುನಾಮಿ’ ಬಗ್ಗೆ ಹೆಚ್ಚಿನ ಅರಿವು ಇದ್ದಿರಲಿಲ್ಲ.
2011ರಲ್ಲಿ ಜಪಾನ್‌ನಲ್ಲಿ ನಡೆದ ಭೂಕಂಪ ಕೂಡ ‘ಸುನಾಮಿ’ಗೆ ಕಾರಣ­ವಾಗಿತ್ತು. ಈ ದುರಂತದಲ್ಲಿ 20 ಸಾವಿರ ಜನರು ಮೃತಪಟ್ಟಿದ್ದರಲ್ಲದೇ, ಪರ­-ಮಾಣು ವಿದ್ಯುತ್‌ ಸ್ಥಾವರದ ದುರಂತಕ್ಕೂ ಕಾರಣವಾಗಿತ್ತು. ಈ ದುರಂತವು ವಿಶ್ವದಾದ್ಯಂತ ಭೂಕಂಪ ತಜ್ಞರನ್ನು ಅಚ್ಚರಿಗೊಳಿಸಿತ್ತು. ಸುನಾಮಿ ಅಲೆಗಳಿಗೆ ತತ್ತರಿಸಿದ್ದ ಜನರು ಈಗಲೂ ಆ ಭಯಾನಕ ದಿನಗಳನ್ನು ನೆನಪಿಸಿಕೊಂಡರೆ  ದಿಗಿಲು­ಗೊಳ್ಳುತ್ತಾರೆ. ದುರಂತದಲ್ಲಿ ಬದುಕಿ ಉಳಿದವರ ಅನುಭವಗಳು  ರೋಚಕವಾಗಿವೆ.
ಸುನಾಮಿ ಟ್ರಸ್ಟ್‌ ನಿಧಿ
ಸಂಭವನೀಯ ಸುನಾಮಿ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡುವ ವ್ಯವಸ್ಥೆ ಅಭಿವೃದ್ಧಿಪಡಿಸುವ ಅಂತರ­ರಾಷ್ಟ್ರೀಯ ಪ್ರಯತ್ನಗಳಿಗೆ ಭಾರತವೂ ಕೈಜೋಡಿಸಿದೆ. ಹಿಂದೂ ಮಹಾಸಾಗರ ಮತ್ತು ಏಷ್ಯಾದ ಈಶಾನ್ಯ  ದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡುವ ವ್ಯವಸ್ಥೆ ಅಭಿವೃದ್ಧಿಪಡಿಸುವ ವಿಶ್ವಸಂಸ್ಥೆಯ ನಿಧಿಗೆ ಭಾರತ ಇತ್ತೀಚೆಗೆ 10 ಲಕ್ಷ ಡಾಲರ್‌ (₨ 62 ಲಕ್ಷ ) ದೇಣಿಗೆ ನೀಡಿದೆ.

ಗಣರಾಜ್ಯೋತ್ಸವ ಜಾಹೀರಾತು ವಿವಾದ...




ಗಣರಾಜ್ಯೋತ್ಸವ ದಿನ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ದಿನಪತ್ರಿಕೆ­ಗಳಿಗೆ ಬಿಡುಗಡೆ ಮಾಡಿದ್ದ ಜಾಹೀರಾತು ವಿವಾದ ಸೃಷ್ಟಿಸಿದೆ. ಜಾಹೀರಾತಿನಲ್ಲಿ ಸಂವಿಧಾನದ ಪೀಠಿಕೆಯಲ್ಲಿ ತಿದ್ದುಪಡಿ ಮೂಲಕ ಉಲ್ಲೇಖಿಸಿರುವ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಶಬ್ದಗಳನ್ನು ಕೈಬಿಟ್ಟಿರುವುದು ವಿವಾದದ ಮೂಲ­ವಾಗಿದೆ.
ಸಂವಿಧಾನ ಪೀಠಿಕೆಯ ಮೂಲ ಚಿತ್ರ­ವನ್ನೇ ಜಾಹೀರಾತಿನಲ್ಲಿ ಬಳಸ­ಲಾಗಿದೆ. ಅದರಲ್ಲಿ ವಿವಾದವೇನು ಬಂತು ಎನ್ನುವುದು ಕೇಂದ್ರ ವಾರ್ತಾ  ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್‌ ಸಿಂಗ್‌ ರಾಠೋಡ್‌ ಅವರ ವಾದವಾಗಿದೆ.
ಸಂವಿಧಾನದ 42ನೆಯ ತಿದ್ದುಪಡಿ
ಮೂಲ ಸಂವಿಧಾನ ಪೀಠಿಕೆಯಲ್ಲಿ ಈ ಎರಡೂ ಶಬ್ದಗಳು ಇರಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭ­ದಲ್ಲಿ (1976ರಲ್ಲಿ) ಈ ಶಬ್ದಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿತ್ತು.
ಇಂದಿರಾ ಗಾಂಧಿ ಅವರು ಪ್ರಧಾನಿ­ಯಾಗಿ­ದ್ದಾಗ ನಡೆದ ಸಂವಿಧಾನದ 42ನೆಯ ತಿದ್ದುಪಡಿಯು ದೇಶದ ಇತಿಹಾ­ಸದಲ್ಲಿಯೇ ಅತ್ಯಂತ ವಿವಾದಾ­ಸ್ಪದ ಸಂವಿಧಾನ ತಿದ್ದುಪಡಿಯಾಗಿತ್ತು. ಕಾಯ್ದೆ­ಗಳ ಸಂವಿ­ಧಾನಾತ್ಮಕ ಸಿಂಧುತ್ವದ ಬಗ್ಗೆ ತೀರ್ಪು ನೀಡುವ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳ ಅಧಿಕಾರವನ್ನೇ ಮೊಟ­ಕು­ಗೊಳಿಸುವ ಉದ್ದೇಶವನ್ನು ಈ ತಿದ್ದು­ಪಡಿ ಒಳಗೊಂಡಿತ್ತು. ಜತೆಗೆ ಸಂವಿ­ಧಾ­ನದ ಪೀಠಿಕೆಯಲ್ಲಿನ ಅಂಶಗಳನ್ನೂ ಬದಲಿಸಲು ಉದ್ದೇಶಿಸಲಾಗಿತ್ತು.
ಸಾರ್ವಭೌಮ ಪ್ರಜಾಸತ್ತಾತ್ಮಕ ಗಣ­ರಾಜ್ಯ ಎನ್ನುವ ವಿವರಣೆಯನ್ನೂ ಸಾರ್ವ­ಭೌಮ, ಸಮಾಜವಾದಿ, ಧರ್ಮ­ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಬದಲಿಸುವುದರ ಜತೆಗೆ, ‘ದೇಶದ ಏಕತೆ’ ಯನ್ನು ‘ದೇಶದ ಏಕತೆ ಮತ್ತು ಸಮಗ್ರತೆ’ ಎಂದೂ ಬದಲಾಯಿ­ಸ­ಲಾಗಿತ್ತು.
ಸಾರ್ವಭೌಮ, ಸಮಾಜವಾದ, ಧರ್ಮ­ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ನಿರ್ಮಾಣಕ್ಕೆ ಮತ್ತು ದೇಶದ ಎಲ್ಲ ಪ್ರಜೆಗಳಿಗೆ ಭದ್ರತೆ ಒದಗಿಸಲು ಭಾರತೀಯರಾದ ನಾವುಗಳು ಸತ್ಯ­ನಿಷ್ಠೆಯ ಸ್ಥಿರ ಸಂಕಲ್ಪ ಮಾಡಿದ್ದೇವೆ – ಎಂದು ಸದ್ಯದ ಸಂವಿಧಾನದ ಪೀಠಿಕೆ­ಯಲ್ಲಿ  ಉಲ್ಲೇಖಿಸಲಾಗಿದೆ.
ಜನತಾ ಪಕ್ಷದ ನಿಲುವು
ಅಧಿಕಾರಕ್ಕೆ ಬಂದರೆ, ‘ತುರ್ತು­ಪರಿಸ್ಥಿತಿ ಸಂದರ್ಭದಲ್ಲಿನ ಸಂವಿ­ಧಾನ ತಿದ್ದುಪಡಿ’ಗಳನ್ನು ರದ್ದುಪಡಿಸು­ವುದಾಗಿ ಜನತಾ ಪಾರ್ಟಿಯು ಚುನಾ­ವಣೆ­ಯಲ್ಲಿ ಭರವಸೆ ನೀಡಿತ್ತು. ನಿರೀಕ್ಷೆಯಂತೆ ಅಧಿಕಾರಕ್ಕೆ ಬಂದ ಪಕ್ಷವು   ತಿದ್ದುಪಡಿಯಲ್ಲಿನ ಹಲವು ಆಕ್ಷೇಪಾರ್ಹ ಸಂಗತಿಗಳನ್ನು ರದ್ದುಪಡಿಸಿತು. ಆದರೆ,  ಸಂವಿಧಾನ ಪೀಠಿಕೆಗೆ ಸೇರಿಸಿದ್ದ ಎರಡು ಶಬ್ದಗಳನ್ನು ಕೈಬಿಡಲು ಸರ್ಕಾರ ಮುಂದಾಗಲಿಲ್ಲ. ಮೊರಾರ್ಜಿ ದೇಸಾಯಿ ಅವರ ಸರ್ಕಾರ­ದಲ್ಲಿ ಸಚಿವರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌. ಕೆ. ಅಡ್ವಾಣಿ ಅವರು ಕೂಡ ಈ ಎರಡೂ ಶಬ್ದಗಳನ್ನು ಕೈಬಿಡಲು ಒತ್ತಾಯಿಸಿರಲಿಲ್ಲ.
ಅಟಲ್‌ಗೆ ಅವಮಾನ
ಈ ಎರಡೂ ಶಬ್ದಗಳನ್ನು ಜಾಹೀರಾ­ತಿನಿಂದ ಕೈಬಿಟ್ಟಿರುವುದು  ಬಿಜೆಪಿ ಮುಖಂಡ ಅಟಲ್‌ ಬಿಹಾರಿ ಅವರ ವಿಚಾರಧಾರೆಯನ್ನೇ  ಅವಮಾನಿಸಿದಂತೆ ಎಂದು  ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಅವರಿಗೆ ಸಲಹೆಗಾರರಾಗಿದ್ದ  ಸುಧೀಂದ್ರ ಕುಲ­ಕರ್ಣಿ ಟೀಕಿಸಿದ್ದಾರೆ. ಬಿಜೆಪಿಯ ಸಂವಿ­ಧಾನದಲ್ಲಿಯೂ ಧರ್ಮನಿರ­ಪೇಕ್ಷತೆ ಮತ್ತು ಸಮಾಜವಾದ ಶಬ್ದಗಳನ್ನು ಸೇರಿಸಲು ವಾಜಪೇಯಿ ಬಯಸಿದ್ದರು. ಬಿಜೆಪಿಯ ಸಂವಿಧಾನಕ್ಕೆ 2012ರ ಸೆಪ್ಟೆಂಬರ್‌ನಲ್ಲಿ ಮಾಡಿದ ತಿದ್ದುಪಡಿ­ಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ತತ್ವಾದರ್ಶಕ್ಕೆ ಬದ್ಧವಾ­ಗಿರುವುದನ್ನು ಸ್ಪಷ್ಟಪಡಿಸಲಾಗಿದೆ ಎಂದೂ ಕುಲಕರ್ಣಿ ಅವರು ಟ್ವೀಟ್‌ ಮಾಡಿದ್ದಾರೆ.
ಶಿವಸೇನಾ ನಿಲುವು
ಜಾಹೀರಾತಿನಿಂದ ಈ ಎರಡೂ ಶಬ್ದ­ಗಳನ್ನು ಕೈಬಿಟ್ಟಿರುವುದನ್ನು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಸ್ವಾಗತಿಸಿದ್ದಾರೆ. ಒಂದು ವೇಳೆ ಈ ಬಾರಿ ಕಣ್ತಪ್ಪಿನಿಂದ ಈ ಶಬ್ದಗಳನ್ನು ಕೈಬಿಟ್ಟಿ­ದ್ದರೂ, ಇವುಗಳನ್ನು ಶಾಶ್ವತವಾಗಿಯೇ ಸಂವಿಧಾನದಿಂದ ಕೈಬಿಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಬಿಜೆಪಿಯು ಶಿವಸೇನೆಯ ಈ ನಿಲುವಿನಿಂದ ಅಂತರ ಕಾಯ್ದುಕೊಂಡಿದೆ. ‘ಇದು ಶಿವಸೇನಾದ ನಿಲುವು. ನಮಗೂ ಅದಕ್ಕೂ ಸಂಬಂಧ ಇಲ್ಲ’ ಎಂದು ಪಕ್ಷದ ವಕ್ತಾರ ಜಿ. ವಿ. ಎಲ್‌. ನರಸಿಂಹರಾವ್‌ ಪ್ರತಿಕ್ರಿಯಿಸಿ­ದ್ದಾರೆ.
ವ್ಯಾಖ್ಯಾನ
ಸಂವಿಧಾನದಲ್ಲಿ ‘ಜಾತ್ಯತೀತ’ ಶಬ್ದ ಕೈಬಿಡಲು ಒತ್ತಾಯಿಸುವವರ ಧೋರಣೆ­ಯು ಅಲ್ಪಸಂಖ್ಯಾತರ ರಕ್ಷಣೆ ಪರಿಕಲ್ಪ­ನೆಗೆ ವಿರುದ್ಧವಾಗಿದೆ ಎಂದೂ ವ್ಯಾಖ್ಯಾನಿ­ಸಲಾಗುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಅವ­ಮಾನಿಸಿದ ಈ ಕೃತ್ಯಕ್ಕೆ ಮೋದಿ ಸರ್ಕಾರ ಕ್ಷಮೆಯಾಚಿಸಬೇಕು ಎನ್ನುವುದು ಕಾಂಗ್ರೆಸ್‌ನ ಹಕ್ಕೊತ್ತಾಯವಾಗಿದೆ.
ಸಚಿವ ರಾಠೋಡ್‌ ವಾದ
ಸಂವಿಧಾನ ರಚನೆ ಮತ್ತು ಅಂಗೀಕಾರ ಸಂದರ್ಭದಲ್ಲಿ ರಾಷ್ಟ್ರ ನಾಯಕರು ಅಂಗೀಕರಿಸಿದ್ದ ಮೂಲ ಪೀಠಿಕೆಯನ್ನೇ ಜಾಹೀರಾತಿ­ನಲ್ಲಿ ಬಳಸಲಾಗಿದೆ. ದೇಶವು 66ನೆ ಗಣರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಸಂವಿಧಾನದ ಮೂಲ ಪೀಠಿಕೆಯ ವರ್ಷಾಚರಣೆ  ಕೂಡ ಆಗಿರು­ವುದರಿಂದ ಅದರ ಗೌರವಾರ್ಥ ಮೂಲ ಸ್ವರೂಪವನ್ನೇ ಜಾಹೀರಾತಿನಲ್ಲಿ ಬಳಸಿ­ಕೊ­ಳ್ಳಲಾಗಿದೆ ಎನ್ನುವುದು ಸಚಿವರ ಅಭಿಪ್ರಾಯವಾಗಿದೆ.
* * *
‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರೆಸ್ಸೆಸ್‌), ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡಲು ಹೊರಟಿರು­ವಾಗ, ಕೇಂದ್ರ ಸರ್ಕಾರವು ಧರ್ಮನಿರ­ಪೇಕ್ಷತೆಗೆ ಬದ್ಧವಾಗಿರು­ವುದರ ಬಗ್ಗೆ ಪ್ರಧಾನಿ ಮೋದಿ ಅವರು ದೇಶಕ್ಕೆ ಭರವಸೆ ನೀಡಬೇಕು’ ಎಂದೂ  ಸುಧೀಂದ್ರ  ಕುಲಕರ್ಣಿ ಒತ್ತಾಯಿಸಿ­ದ್ದಾರೆ.


ದೆಹಲಿಗೆ ರಾಜ್ಯ ಸ್ಥಾನಮಾನ ಬೇಡಿಕೆ



ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡುವ ಬೇಡಿಕೆ ಈಗ ಮತ್ತೆ ಮುಂಚೂಣಿಗೆ ಬಂದಿದೆ. ಅಭೂತಪೂರ್ವ ಬಹುಮತ­ದಿಂದ ಅಧಿ­ಕಾರಕ್ಕೆ ಬಂದಿರುವ ಆಮ್‌ ಆದ್ಮಿ ಪಕ್ಷವು, ಕೇಂದ್ರ ಸರ್ಕಾರವು ಈ ಹಿಂದೆ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಹಕ್ಕೊತ್ತಾಯ ಮುಂದಿಟ್ಟಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿರುವ ದೆಹಲಿ, ಅತ್ತ ಕೇಂದ್ರಾಡಳಿತ ಪ್ರದೇಶವೂ ಅಲ್ಲ, ಇತ್ತ ಪೂರ್ಣ ಪ್ರಮಾಣದ ರಾಜ್ಯವೂ ಆಗಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಆಡಳಿತದ ಹೊಣೆಯು ಕೇಂದ್ರ ಸರ್ಕಾರಕ್ಕೆ ಸೇರಿ­ದ್ದರೆ, ರಾಜ್ಯಗಳ ಆಡಳಿತವು ಚುನಾಯಿತ ಪ್ರತಿನಿಧಿಗಳ (ಶಾಸಕರ) ಸರ್ಕಾರದ ನಿಯಂತ್ರಣ­ದಲ್ಲಿ ಇರುತ್ತದೆ. ದೆಹಲಿ­ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಇದೆ. ಇದೇ ಕಾರಣಕ್ಕೆ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನ­ಮಾನ ಸಿಗಬೇಕು ಎನ್ನುವ ಕೂಗು ಕೇಳಿ ಬರುತ್ತದೆ. 
ಅಟಲ್ ಬಿಹಾರಿ ವಾಜಪೇಯಿ  ನೇತೃತ್ವದ ಎನ್‌ಡಿಎ ಸರ್ಕಾರವು 2003ರಲ್ಲಿಯೇ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಲು ಉದ್ದೇಶಿಸಿತ್ತು. ಈ ಸಂಬಂಧ ಲೋಕಸಭೆಯಲ್ಲಿ ಮಸೂದೆಯನ್ನೂ ಮಂಡಿಸ­ಲಾಗಿತ್ತು. ಸಂಸತ್ತಿನ ಸ್ಥಾಯಿ ಸಮಿತಿ ಪರಾಮರ್ಶೆಗೆ ಒಪ್ಪಿಸಿರುವ ಈ ಮಸೂದೆ ಇದುವರೆಗೂ ನನೆಗುದಿಗೆ ಬಿದ್ದಿದೆ.
 ಬ್ರಿಟಿಷರು ಕೋಲ್ಕತ್ತಾ ಬದಲಿಗೆ ದೆಹಲಿಯನ್ನು ದೇಶದ ರಾಜಧಾನಿ­ಯನ್ನಾಗಿ 1911ರಲ್ಲಿ ಘೋಷಿಸಿದ್ದರು. 2011ರಲ್ಲಿ ರಾಜಧಾನಿ ಘೋಷಣೆಗೆ 100 ವರ್ಷ ತುಂಬಿದ ಸಂದರ್ಭದಲ್ಲಿ  ಲೋಕಸಭೆಯಲ್ಲಿ ಸಂಸ­ದರು  ಪಕ್ಷಭೇದ ಮರೆತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದರು.
ಕೇಂದ್ರಾಡಳಿತ ಪ್ರದೇಶ
1991ರ ಮುಂಚೆ ದೆಹಲಿ ಕೇಂದ್ರಾ­ಡಳಿತ ಪ್ರದೇಶವಾಗಿತ್ತು. ಮೆಟ್ರೊ­ಪಾಲಿಟನ್ ಮಂಡಳಿಯು ಇದರ ಆಡಳಿತದ ಹೊಣೆಗಾರಿಕೆ ಹೊಂದಿತ್ತು.  ಈ ಮಂಡಳಿಗೆ ಸೀಮಿತ ಅಧಿಕಾರ ಇತ್ತು. ಆನಂತರ ಸಂವಿಧಾನದ  69ನೆ ತಿದ್ದು­ಪಡಿ ಅನ್ವಯ ಈ ವ್ಯವಸ್ಥೆ  ಕೈಬಿಟ್ಟು ದೆಹಲಿಯ ಹೆಸರನ್ನೂ ಬದಲಾ­ಯಿಸಿ, ದೆಹಲಿಯ ರಾಷ್ಟ್ರೀಯ ರಾಜ­ಧಾನಿ ಪ್ರದೇಶ ಎಂದು ಕರೆಯ­ಲಾಯಿತು.
ಈ ಪ್ರದೇಶದ ಆಡಳಿತ ಉಸ್ತುವಾರಿ ಹೊಣೆ­  ವಿಧಾನ ಸಭೆಗೆ ಒಪ್ಪಿಸ­ಲಾಯಿತು. ಮಂತ್ರಿ­ಮಂಡಳ, ಅದ­ಕ್ಕೊಬ್ಬ ಮುಖ್ಯಮಂತ್ರಿ ಇರಬೇಕು ಎಂದು ನಿಗದಿಪಡಿಸ­ಲಾಯಿತು. ವಿಧಾನ­ಸಭೆಗೆ ಇರುವ ವಿಶೇಷ ಅಧಿಕಾರವನ್ನು ದೆಹಲಿಗೆ ಅನ್ವಯಿಸಲಿಲ್ಲ. ಹೀಗಾಗಿ ದೆಹಲಿ ವಿಶೇಷ ದರ್ಜೆಯ ಕೇಂದ್ರಾಡಳಿತ ಪ್ರದೇಶ­ವಾಯಿತು. ದೆಹಲಿಯಂತೆಯೇ ಪುದುಚೆರಿ ಕೂಡ ಕೇಂದ್ರಾಡಳಿತ ಮತ್ತು ರಾಜ್ಯದ ಸ್ಥಾನಮಾನ ಹೊಂದಿದೆ.
ವಿಧಾನಸಭೆ ಚುನಾವಣೆ
1993ರಲ್ಲಿ ಮೊದಲ ಬಾರಿಗೆ ದೆಹಲಿ ರಾಜ್ಯ ವಿಧಾನಸಭೆಗೆ ಚುನಾ-­ವಣೆ ನಡೆಯಿತು. ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತು. ನಂತರ ನಡೆದ ಮೂರು ಚುನಾವಣೆ­ಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದ ರುಚಿ ಅನುಭವಿ­ಸಿತು. 2013ರಲ್ಲಿ ನಡೆದ ಚುನಾವಣೆ­ಯಲ್ಲಿ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ  ಸ್ಪರ್ಧಿಸಿ ಎರಡನೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. 49 ದಿನಗಳವರೆಗೆ ಅಧಿಕಾರ ನಡೆಸಿತು. ದೆಹಲಿಯು ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ಪಡೆಯಲು ಹಲವು ಅಡಚಣೆಗಳಿವೆ.
ಡಿಡಿಎ ನಿಯಂತ್ರಣದಲ್ಲಿ ಭೂಮಿ
ದೆಹಲಿ ವ್ಯಾಪ್ತಿಯ ಭೂಮಿಯು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ನಿಯಂತ್ರಣದಲ್ಲಿ ಇದೆ. ಈ ಪ್ರಾಧಿಕಾರವು ಭೂಮಿ ವಶಪಡಿಸಿ­ಕೊಳ್ಳುವ ಸಂಪೂರ್ಣ ಅಧಿಕಾರ ಹೊಂದಿದೆ. ಕೇಂದ್ರ ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ನಿಯಂತ್ರ­ಣ­­ದಡಿ ‘ಡಿಡಿಎ’ ಕಾರ್ಯನಿರ್ವ­ಹಿಸುತ್ತದೆ.
ಕಾಯ್ದೆ–ಸುವ್ಯವಸ್ಥೆ ಹೊಣೆಗಾರಿಕೆ
ದೆಹಲಿಯಲ್ಲಿ ಕಾಯ್ದೆ ಸುವ್ಯವಸ್ಥೆ ನೋಡಿಕೊಳ್ಳುವ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಇಲ್ಲ.  ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸ್ ವ್ಯವಸ್ಥೆಯ ಉಸ್ತುವಾರಿ ನೋಡಿಕೊ­ಳ್ಳುತ್ತದೆ. ಇಲ್ಲಿಯ ಮೆಟ್ರೊ­ಪಾಲಿಟನ್ ಪೊಲೀಸ್ ಪಡೆಯು ವಿಶ್ವದಲ್ಲಿಯೇ ಅತಿದೊಡ್ಡ ಮೆಟ್ರೊ­ಪಾಲಿಟನ್ ಪಡೆ­ಯಾಗಿದೆ.
ದೆಹಲಿಯ ಆಡಳಿತದ ನಿರ್ವಹ­ಣೆಯು ಸಾಕಷ್ಟು ಸಂಕೀರ್ಣ­ವಾಗಿದೆ. ನಾಗರಿಕ ಸೇವೆಗಳಾದ ಸ್ವಚ್ಛತೆ, ರಸ್ತೆಗಳ ನಿರ್ವಹಣೆ, ಕೆಲವು ತೆರಿಗೆ, ಮೂಲ­ಸೌಕರ್ಯ, ಮುಂತಾದವುಗಳ ಹೊಣೆ­ಗಾ­ರಿಕೆ­ಯನ್ನು  ಮುನ್ಸಿಪಲ್ ಕಾರ್ಪೊ­ರೇಷನ್  ನಿರ್ವಹಿಸುತ್ತದೆ.  1992­ರಲ್ಲಿ ಸಂವಿಧಾನದ  74ನೆ ತಿದ್ದುಪಡಿ ಅನ್ವಯ, ದೆಹಲಿ ಮುನ್ಸಿಪಲ್ ಕಾರ್ಪೊ­ರೇಷನ್ ಪುನರ್ ರಚನೆಗೊಂಡಿತು.
272 ಸದಸ್ಯರ ಈ ಮಹಾನಗರ ಪಾಲಿಕೆಯಲ್ಲಿ  1997­ರಲ್ಲಿ ಬಿಜೆಪಿ ಅಧಿಕಾರ ನಡೆಸಿತು.  2002ರಲ್ಲಿ ಕಾಂಗ್ರೆಸ್ ಅಧಿಕಾರದ ರುಚಿ ನೋಡಿ­ದರೆ, 2007ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತು.
2012ರಲ್ಲಿ ಇದನ್ನು ಮೂರು ಪಾಲಿಕೆಗಳಾಗಿ (ಉತ್ತರ, ದಕ್ಷಿಣ ಮತ್ತು ಪೂರ್ವ) ವಿಭಜಿಸಲಾಯಿತು.  ಈ ಮೂರೂ ಪಾಲಿಕೆಗಳು ಈಗಲೂ ಬಿಜೆಪಿಯ ನಿಯಂತ್ರಣದಲ್ಲಿ ಇವೆ. ಪಾಲಿಕೆಯ ವೆಚ್ಚದ ಬಹುಭಾಗವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ.
ಪೌರ ಸಂಸ್ಥೆಗಳು ದೆಹಲಿಯ ಲ್ಯೂಟಿಯೆನ್ಸ್ ದೆಹಲಿ ಪ್ರದೇಶದ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ.  ಈ ಪ್ರದೇಶದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜತಾಂತ್ರಿಕರು ನೆಲೆಸಿ­ದ್ದಾರೆ. ಈ ಪ್ರದೇಶದ ನಿರ್ವಹಣೆ­ಯನ್ನು ಚುನಾಯಿತರಲ್ಲದ ಸದಸ್ಯರು ಇರುವ ನವದೆಹಲಿ ಮುನ್ಸಿಪಲ್ ಮಂಡಳಿ ನಿಭಾಯಿಸುತ್ತದೆ.
ಸೇನಾ ಪಡೆಗಳ ಕಚೇರಿಗಳು ಮತ್ತು ಸಿಬ್ಬಂದಿಯ ವಸತಿ ಪ್ರದೇಶವನ್ನು ಚುನಾಯಿತ ಕಂಟೋನ್‌ಮೆಂಟ್  ಮಂಡಳಿಯು ನಿಭಾಯಿಸುತ್ತದೆ.

ಭಾರತ - ಚೀನಾ ಯುದ್ಧಕ್ಕೆ 50 ವರ್ಷ ಸುದ್ದಿ ಹಿನ್ನೆಲೆ





ಅಕ್ಟೋಬರ್ 20, 1962, ಈ ದಿನ, ದೇಶದ ಇತಿಹಾಸದಲ್ಲಿ ಅಚ್ಚಳಿಯದ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಅಂದು ನೆರೆಯ ಚೀನಾ, ದೇಶದ ಮೇಲೆ ಅತಿಕ್ರಮಣ ಮಾಡಿತ್ತು.  ಆ ಯುದ್ಧಕ್ಕೆ ಈಗ 50 ವರ್ಷ ತುಂಬಿದೆ. 4 ವಾರಗಳ ಕಾಲ ಈ ಯುದ್ಧ ನಡೆದಿತ್ತು.
ಯುದ್ಧದ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಸಾಂಸ್ಥಿಕ ವ್ಯವಸ್ಥೆ ಅಸ್ತಿತ್ವದಲ್ಲಿ ಇದ್ದಿರಲಿಲ್ಲ. ರಣರಂಗದಲ್ಲಿ ಸಾವಿರಾರು  ಸೈನಿಕರು ವಿರೋಚಿತವಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದರು. ಅಸಮರ್ಥ ದಂಡ ನಾಯಕರು, ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾದ ರಾಜಕೀಯ ಮುಖಂಡರಿಂದ ಸೋಲು ಕಾಣಬೇಕಾಯಿತು. ಈ ಯುದ್ಧ ಅಕ್ಟೋಬರ್ 20ಕ್ಕೆ ಆರಂಭಗೊಂಡು ನವೆಂಬರ್ 21ಕ್ಕೆ ಕೊನೆಗೊಂಡಿತು. ಅಂದು ಚೀನಾ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿತು.
ಎಚ್ಚರಿಕೆ ನಿರ್ಲಕ್ಷ್ಯ?
ದೂರದೃಷ್ಟಿ ಇಲ್ಲದ ಮತ್ತು ಭಾವನಾತ್ಮಕ ಕಾರಣಗಳಿಗಾಗಿ ಚೀನಾದ ಬೆದರಿಕೆ ಹಗುರವಾಗಿ ತೆಗೆದುಕೊಂಡ ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ  ಪ್ರಧಾನಿ ಜವಾಹರಲಾಲ್ ನೆಹರು ಅವರೇ ಈ ಯುದ್ಧ ಮತ್ತು ಸೋಲಿಗೆ ಮೂಲ ಕಾರಣ ಎನ್ನುವ ಟೀಕೆಗಳಿವೆ.
 ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಅವರು,  `ಚೀನದಿಂದ ಬೆದರಿಕೆ ಇದೆ, ನಿರ್ಲಕ್ಷಿಸಬೇಡಿ~ ಎಂದು 1950ರಲ್ಲಿಯೇ   ಎಚ್ಚರಿಸಿದ್ದರು. ಇದನ್ನು ನೆಹರು ನಿರ್ಲಕ್ಷಿಸಿ ಅದಕ್ಕೆ ಭಾರಿ ಬೆಲೆ ತೆತ್ತರು. 
1962ರ ಭಾರತ - ಚೀನಾ ಯುದ್ಧವು ಸ್ವತಂತ್ರ ಭಾರತದ ಪಾಲಿಗೆ ಅತ್ಯಂತ ಆಘಾತಕಾರಿಯಾಗಿತ್ತು. ಅದೊಂದು ಭದ್ರತಾ ವೈಫಲ್ಯಕ್ಕೆ ಉತ್ತಮ ನಿದರ್ಶನವೂ ಆಗಿತ್ತು. ಈ ಗಡಿ ಯುದ್ಧದಲ್ಲಿ ಭಾರತ ತುಂಬ ಅವಮಾನಕರ ರೀತಿಯಲ್ಲಿ ಸೋಲು ಕಂಡಿತ್ತು.
ಅರುಣಾಚಲ ಪ್ರದೇಶದಲ್ಲಿ ವಿವಾದಾತ್ಮಕ ಮ್ಯಾಕ್‌ಮೋಹನ್ ರೇಖೆಗುಂಟ ಕಮೆಂಗ್ ಮುಂಚೂಣಿ ವಿಭಾಗದಲ್ಲಿ ಚೀನಾ ಅತಿಕ್ರಮಣ ಸಾಧ್ಯತೆ ಹೊರತಾಗಿಯೂ ಭಾರತ ಸಾಕಷ್ಟು ಪ್ರಮಾಣದಲ್ಲಿ ಸೇನೆ ನಿಯೋಜನೆ ಮಾಡಿರಲಿಲ್ಲ. ಹೀಗಾಗಿ ಮುಂಚಿನಿಂದಲೂ ಸನ್ನದ್ಧ ಸ್ಥಿತಿಯಲ್ಲಿದ್ದ ಚೀನಾದ ಪಡೆಗಳು ಭಾರತದ ರಕ್ಷಣಾ ಕೋಟೆಯನ್ನು ಸುಲಭವಾಗಿ ಭೇದಿಸಿದ್ದವು.
ಭಾರತದ ಸಾವಿರಾರು ಸೈನಿಕರು ಹತರಾದರು. ಅನೇಕರು ಸೆರೆಸಿಕ್ಕರು, ನೂರಾರು ಜನರು ಗಾಯಗೊಂಡರು. ಅನೇಕರನ್ನು ಭೂತಾನ್‌ನಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು. ಭಾರತದ ನೆರವಿಗೆ ಬರಬೇಕು ಎಂದು ನೆಹರು, ಅಮೆರಿಕಕ್ಕೆ ಮನವಿ ಮಾಡಿಕೊಂಡರೂ ಅದಕ್ಕೆ ಮನ್ನಣೆ ದೊರೆತಿರಲಿಲ್ಲ.
ಸೋಲಿಗೆ ಕಾರಣಗಳು...ಆಕ್ರಮಣದ ಬೆದರಿಕೆ / ಯುದ್ಧ ಸಾಧ್ಯತೆ ಅಂದಾಜು ಮಾಡುವಲ್ಲಿನ ವೈಫಲ್ಯ, ಅಸಮರ್ಪಕ ಬೇಹುಗಾರಿಕೆ, ಸೂಕ್ತ ಶಸ್ತ್ರಾಸ್ತ್ರಗಳಿಲ್ಲದ ಸೇನೆ, ರಾಜತಾಂತ್ರಿಕ ಕೌಶಲ್ಯ ಕೊರತೆ ಮತ್ತಿತರ ಕಾರಣಗಳಿವೆ.1950ರಲ್ಲಿಯೇ ಚೀನಾ ಈ ಯುದ್ಧಕ್ಕೆ ಸಿದ್ಧತೆ ನಡೆಸಿತ್ತು. ಟಿಬೆಟ್ ಬಗ್ಗೆ ಭಾರತ ಸರ್ಕಾರದ ಧೋರಣೆಯೇ ಚೀನಾ ಸರ್ಕಾರದ ಕಣ್ಣು ಕೆಂಪಗಾಗಿಸಿತ್ತು. ಚೀನಾದ `ಪೀಪಲ್ಸ್ ಲಿಬರೇಷನ್ ಆರ್ಮಿ~ 1950ರಲ್ಲಿ ಟಿಬೆಟ್ ಆಕ್ರಮಿಸಿಕೊಂಡಿತ್ತು.
ಟಿಬೆಟ್ ವಿಮೋಚನೆಗೆ ಸಂಬಂಧಿಸಿದಂತೆ ಭಾರತ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎನ್ನುವ ನಿರ್ಧಾರಕ್ಕೆ ಚೀನಾ ಸರ್ಕಾರ ಬಂದಾಗಿತ್ತು.ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶದ ಬಗ್ಗೆ 1954ರಲ್ಲಿ ಪ್ರಧಾನಿ ನೆಹರೂ ಹೊಸ ನಕ್ಷೆ ಪ್ರಕಟಿಸಿ, ಈ ಬಗ್ಗೆ ಯಾರ ಜತೆಗೂ ಸಂಧಾನ ನಡೆಸುವುದಿಲ್ಲ ಎಂದು ಘೋಷಿಸಿದ್ದರು. ಇದು ಗಡಿ ವಿವಾದಕ್ಕೆ ಬೀಜ ಬಿತ್ತಿತ್ತು.
ಟಿಬೆಟ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿದ್ದಂತೆ ಟಿಬೆಟಿಯನ್ನರ ಧಾರ್ಮಿಕ ಗುರು ದಲೈ ಲಾಮಾ 1959ರಲ್ಲಿ ಭಾರತಕ್ಕೆ ಪಲಾಯನ  ಮಾಡಿ ರಾಜಕೀಯ ಆಶ್ರಯ ಪಡೆದಿದ್ದರು.  ಇಲ್ಲಿಂದ ಚೀನಾದ ಭಾರತ ವಿರೋಧಿ ತೀಕ್ಷ್ಣ ಸ್ವರೂಪ ಪಡೆದುಕೊಂಡಿತ್ತು. ಕೊನೆಗೂ ಗಡಿ ಅತಿಕ್ರಮಿಸಿ ಕಾಲು ಕೆದರಿ ಯುದ್ಧಕ್ಕೆ ಇಳಿದಿತ್ತು.
ಸೇನಾ ಸಾಮರ್ಥ್ಯ ಹೋಲಿಕೆ
ಇಂದಿಗೂ ಸೇನಾ ಸಮತೋಲನ ಚೀನಾದ ಕಡೆಯೇ ವಾಲುತ್ತದೆ. ಒಂದು ವೇಳೆ ಇನ್ನೊಂದು ಯುದ್ಧ ನಡೆದರೆ, ಚೀನಾಕ್ಕೆ ಭಾರತ ಸುಲಭದ ತುತ್ತು ಆಗಲಾರದು ಎನ್ನುವುದೂ ನಿಜ. 50 ವರ್ಷಗಳ ಹಿಂದೆ ಭಾರತದ ಸೇನೆಗೆ ಅನುಭವ ಕೊರತೆ ಇತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಇದ್ದಿರಲಿಲ್ಲ.  ಈಗಲೂ ಸೇನಾ ಸಾಮರ್ಥ್ಯದಲ್ಲಿ ಚೀನಾ ಮುಂದಿದ್ದರೂ, ಭಾರತವನ್ನು ಸುಮ್ಮನೆ ಕೆಣಕುವ ಹುಚ್ಚು ಸಾಹಸ ಮಾಡಲಿಕ್ಕಿಲ್ಲ. ಇದಕ್ಕೆ ನಮ್ಮ ಸೇನಾ ಸಾಮರ್ಥ್ಯ ಸಾಕಷ್ಟು ಬಲಗೊಂಡಿರುವುದೇ ಕಾರಣ.


ಮಂಗಳನತ್ತ ಒಮ್ಮುಖ ಪ್ರಯಾಣ




ಮಂಗಳ ಗ್ರಹದಲ್ಲಿ ಮನು­ಕುಲದ ವಸಾ-ಹತು ಸ್ಥಾಪಿ­ಸುವ ಕನಸಿನ ಯೋಜನೆಗೆ, ಭಾರತದ ಮೂವರು ಸೇರಿ­ದಂತೆ ಈಗ 100 ಮಂದಿಯನ್ನು  ಮುಂದಿನ ಹಂತಕ್ಕೆ ಆಯ್ಕೆ ಮಾಡಲಾ­ಗಿದೆ. ಇವರಲ್ಲಿ ಅಂತಿಮ­ವಾಗಿ 24 ಜನರನ್ನು ಆಯ್ಕೆ ಮಾಡಿ ಗಗನಯಾತ್ರೆಗೆ ಅವರನ್ನು ಸಜ್ಜುಗೊಳಿಸಲು  ಏಳು ವರ್ಷಗಳ ಕಾಲ ತರಬೇತಿ ನೀಡುವ ಉದ್ದೇಶ ಇದೆ. 
ವಿಶ್ವದಾದ್ಯಂತ ಆಯ್ಕೆಯಾಗಿರುವ ಈ 100 ಮಂದಿಯಲ್ಲಿ 19ರಿಂದ 60 ವಯ­­­­­ಸ್ಸಿನವರೆಗಿನ ಸ್ತ್ರೀ  – ಪುರುಷರು ಇದ್ದಾರೆ. ಭಾರತದಿಂದ ಆಯ್ಕೆಯಾದ ಮೂವರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ.  ಕೇರಳದ ಪಾಲಕ್ಕಾಡಿನ ಮೆಕ್ಯಾ­­ನಿಕಲ್ ಎಂಜಿನಿಯರಿಂಗ್ ವಿದ್ಯಾ­ರ್ಥಿನಿ ಶಾರದಾ ಪ್ರಸಾದ್ (19) ಕೂಡ ಅವರಲ್ಲಿ ಒಬ್ಬರು. 2024ರಲ್ಲಿ ಮೊದಲ ಬಾರಿಗೆ ನಾಲ್ಕು ಮಂದಿಯನ್ನು ಈ ಗ್ರಹಕ್ಕೆ ಕಳಿಸುವ ಆಲೋಚನೆ ಇದೆ.
ಡೆನ್ಮಾರ್ಕ್‌ನ ಲಾಭ­ರಹಿತ ಸಂಘಟನೆ­ಯೊಂದು ಈ ಮಹತ್ವಾ­ಕಾಂಕ್ಷೆಯ ಯೋಜನೆ­ಯನ್ನು ಕಾರ್ಯ­ಗತ­ಗೊಳಿ­ಸಲು ಹೊರಟಿದೆ. ಇಡೀ ವಿಶ್ವವೇ ಈ ವಿಶಿಷ್ಟ ಪ್ರಯೋಗದ ಬಗ್ಗೆ ಕುತೂಹಲ ತಳೆದಿದೆ.
ಮಂಗಳಗ್ರಹಕ್ಕೆ ತೆರಳಲು ಇಚ್ಛೆಪಟ್ಟಿ­ರುವ ಮತ್ತು ಅಂತಿಮವಾಗಿ ಆಯ್ಕೆಯಾ­ಗ­­ಲಿ­ರುವ 24 ಮಂದಿಯೂ ತಮ್ಮ ಉಳಿದ ಜೀವಿತಾವಧಿಯನ್ನು ಮಂಗಳ­ಗ್ರಹ­ದಲ್ಲಿಯೇ ಕಳೆಯಲಿದ್ದಾರೆ. ಅವರು ಮತ್ತೆ ಭೂಮಿಯತ್ತ ಮರಳಿ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳೇ ಇಲ್ಲ.
ದುಬಾರಿ ವೆಚ್ಚ
ಮಂಗಳನತ್ತ ಕೈಗೊಳ್ಳುವ ‘ಮಾರ್ಸ್‌ ಒನ್‌’ ಹೆಸರಿನ ಈ ಯೋಜನೆಗೆ 6 ಶತಕೋಟಿ ಡಾಲರ್‌ (ಅಂದಾಜು ₨ 36,000 ಕೋಟಿ) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ದೋಷಪೂರಿತ ಯೋಜನೆ?
‘ಮಾರ್ಸ್‌ ಒನ್‌’ ಯೋಜನೆಯು ಸಂಪೂರ್ಣ ದೋಷಪೂರಿತವಾಗಿದೆ ಎಂದು ಮೆಸಾಚುಸೆಟ್ಸ್‌ನ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಅಂದಾಜಿ­ಸಿದ್ದಾರೆ. ಮಂಗಳ ಗ್ರಹದಲ್ಲಿ ನೆಲೆಸಲಿರು­ವವರು ಸ್ಥಳೀಯವಾಗಿಯೇ ಬೆಳೆದ ತರಕಾರಿಗಳನ್ನೆ ಆಹಾರಕ್ಕಾಗಿ ನೆಚ್ಚಿ­ಕೊಂಡರೆ  ಅದರಿಂದ ಅನೇಕ ಪ್ರತಿಕೂಲ ಪರಿಣಾಮಗಳು ಉಂಟಾಗಲಿವೆ. ಅಲ್ಲಿ ಬೆಳೆಯುವ ತರಕಾರಿಗಳು ಮಾನವನ ಸೇವನೆಗೆ ಅದೆಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಮಂಗಳನ ಅಂಗಳದಲ್ಲಿ ಹಿಮದಿಂದ  ಕುಡಿಯುವ ನೀರು ಪಡೆಯುವ ತಂತ್ರ­ಜ್ಞಾನವು ಇನ್ನೂ ಅಭಿವೃದ್ಧಿಯಾ­ಗದಿರು­ವುದೂ ಇನ್ನೊಂದು ಅಡಚಣೆಯಾಗಿ ಪರಿ­ಣಮಿ­ಸ­ಲಿದೆ. ಮಂಗಳ ಗ್ರಹದಲ್ಲಿ  ಮಾನವನ ವಸಾಹತು ಆರಂಭಿಸು­ವುದಕ್ಕೆ ಪೂರಕ­ವಾಗಿ ಸಾಗಿಸುವ ಸರಕುಗಳ ಸಾಗಾಣಿಕೆಗೆ ಎಷ್ಟು ರಾಕೆಟ್‌­ಗಳನ್ನು ಉಡಾಯಿಸಲಾ­ಗುವುದು ಎನ್ನು­ವು­ದರ ಬಗ್ಗೆ ಮೂಲ ಯೋಜನೆ­ಯಲ್ಲಿಯೇ ಅಸ್ಪಷ್ಟತೆ ಇದೆ.  ಕಾರ್ಯ­ಸಾಧುವಲ್ಲದ ಯೋಜನೆ  ಇದಾ­ಗಿದೆ ಎಂದೂ ಸಂಸ್ಥೆಯು ಎಚ್ಚರಿಸಿದೆ.
ಸದ್ಯಕ್ಕೆ ಬಳಕೆಯಲ್ಲಿ ಇರುವ ತಂತ್ರಜ್ಞಾನ ಆಧರಿಸಿ ಈ ಯೋಜನೆ ಸಿದ್ಧಪ­ಡಿಸಲಾಗಿದೆ.  ಮುಂಬರುವ ವರ್ಷಗಳಲ್ಲಿ  ಸಂಪರ್ಕ ಉಪಗ್ರಹ, ಎರಡು ರೋವರ್ಸ್‌ ಮತ್ತು ಸರಕು­ಗಳನ್ನು ಒಂದೊಂದಾಗಿ ಮಂಗಳ ಗ್ರಹಕ್ಕೆ ಸಾಗಿಸಲಾಗುವುದು. ಗಗನಯಾ­ನಿ­ಗಳು ಭೂಮಿಯಿಂದ ಮಂಗಳಗ್ರಹ­ದತ್ತ ಹೊರ­-ಡುವ ಹೊತ್ತಿಗೆ ಅವರ ವಾಸಕ್ಕೆ ಯೋಗ್ಯ ವಾತಾವರಣವನ್ನು ಅಲ್ಲಿ ಕಲ್ಪಿಸಲು ಉದ್ದೇಶಿಸಲಾಗಿದೆ.
ಸ್ವಾವಲಂಬನೆಯ ವಸಾಹತು
ಮಂಗಳ ಗ್ರಹದಲ್ಲಿ ಸಂಪೂರ್ಣ ಸ್ವಾವ­ಲಂಬನೆಯ ಮಾನವನ ವಸಾ­ಹತು ಸ್ಥಾಪಿಸುವುದು ‘ಮಾರ್ಸ್‌ ಒನ್‌’ ಯೋಜನೆಯ ಮುಖ್ಯ ಉದ್ದೇಶವಾಗಿದೆ. 2024ರಲ್ಲಿ ನಾಲ್ವರನ್ನು ಕಳಿಸಿದ ನಂತರ, ಪ್ರತಿ ಎರಡು ವರ್ಷಕ್ಕೊಮ್ಮೆ ನಾಲ್ಕು ಜನರಂತೆ ಒಟ್ಟು 40 ಜನರನ್ನು ಮಂಗಳ ಗ್ರಹಕ್ಕೆ ಕಳಿಸುವ ವಿಶಿಷ್ಟ ಯೋಜನೆ ಇದಾಗಿದೆ.
ಮನುಕುಲದ ಭವಿಷ್ಯ ಬಾಹ್ಯಾಕಾಶ­ದಲ್ಲಿಯೇ ಇರುವುದರಿಂದ ಈ ಮಂಗ­ಳನ ಒಮ್ಮುಖ ಪ್ರಯಾಣಕ್ಕೆ ತೆರಳಲು ತಾವೆಲ್ಲ ತುಂಬ ಉತ್ಸುಕರಾ­ಗಿರುವುದಾಗಿ ಅನೇಕರು ಹೇಳಿ­ಕೊಂಡಿದ್ದಾರೆ.
ಹುಟ್ಟಿ ಬೆಳೆದ ಭೂಮಿಯನ್ನು ಕೊನೆಯದಾಗಿ ತೊರೆ­ಯುವುದು ಮತ್ತು ಬದುಕಿನ ಉಳಿದ ಅವಧಿಯನ್ನು ಮಂಗಳನ ಅಂಗಳದಲ್ಲಿಯೇ ಕಳೆದು ಅಲ್ಲಿಯೇ ಮಣ್ಣಾಗುವುದು ನಿಜಕ್ಕೂ ರೋಮಾಂಚಕಾರಿ ಅನುಭವ. ಅದನ್ನು ಕುತೂಹಲದಿಂದ ಎದುರು ನೋಡು­ತ್ತಿರುವೆ ಎಂದು  23 ವರ್ಷದ ಬ್ರಿಟನ್ನಿನ ಪಿಎಚ್‌.ಡಿ  ವಿದ್ಯಾರ್ಥಿನಿ ಹನ್ನಾಹ ಅರ್ನ್‌ಶಾ ಅಭಿಪ್ರಾಯಪ­ಟ್ಟಿದ್ದಾಳೆ.
ಏಳು ತಿಂಗಳ ಪ್ರಯಾಣ
ನಾಲ್ಕು ಜನರ ಅಂತಿಮ ತಂಡವು 2024ರಲ್ಲಿ ಪ್ರಯಾಣ ಆರಂಭಿಸಿ 7 ತಿಂಗಳ ಸುದೀರ್ಘ ಪಯಣದ ನಂತರ  ಮಂಗಳ ಗ್ರಹ ತಲುಪಲಿದೆ ಎಂದು ‘ಮಾರ್ಸ್‌ ಒನ್‌’ ಯೋಜನೆಯ ಸಂಘಟಕರು ತಿಳಿಸಿದ್ದಾರೆ.
ಸವಾಲುಗಳು
ಮನುಕುಲದ ಬಾಹ್ಯಾಕಾಶ ಯೋಜ­ನೆ­­ಗಳ  ಎಲ್ಲ ಹಂತಗಳಲ್ಲೂ  ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ. ಬಾಹ್ಯಾ­ಕಾಶಕ್ಕೆ ಮೊದಲ ಬಾರಿಗೆ ಮಾನವ ಪ್ರಯಾಣ ಆರಂಭಿಸಿದ 55 ವರ್ಷಗಳ ನಂತರವೂ  ಪ್ರತಿಕೂಲತೆ­ಗಳೇನೂ ಕಡಿ­ಮೆ­ಯಾಗಿಲ್ಲ. ಮಂಗಳನ ಅಂಗಳ­ದಲ್ಲಿ ನಡೆಯುವ ಒಂದು ಸಣ್ಣ ತಪ್ಪು ಕೂಡ ಭಾರಿ ಅನಾಹುತಕ್ಕೆ ಎಡೆಮಾಡಿ­ಕೊಡಲಿದೆ.  ಪ್ರತಿಯೊಂದು ವ್ಯವಸ್ಥೆ ಇಲ್ಲಿ ಪರಿಪೂರ್ಣವಾಗಿ­ರಬೇಕಾ­ಗುತ್ತದೆ.

ಭೂಮಿಯ ಕಾಡುವ ಸೌರ ಕಲೆಗಳು




ಅ ಕ್ಟೋಬರ್ ಕೊನೆಯ ವಾರದಲ್ಲಿ ಪ್ರಪಂಚದ ಕೆಲವು ಭಾಗಗಳಲ್ಲಿ ಎತ್ತರ ಆವರ್ತನದ ರೇಡಿಯೊ ಸಂವಹನ ಜಾಲಗಳು ತೊಂದರೆಗೆ ಒಳಗಾದವು. ವಿಜ್ಞಾನಿಗಳ ಪ್ರಕಾರ, ೨೦೧೪ರ ಅಕ್ಟೋಬರ್ ೨೬ ರಂದು ಸೂರ್ಯನ ಮೇಲೆ ನಡೆದ ಕೆಲವು ಸ್ಫೋಟಗಳು ಈ ಘಟನೆಗೆ ಕಾರಣ.
ಸೂರ್ಯನ ಹೊರಮೈ ಮೇಲೆ ಕಾಣಿಸಿಕೊಳ್ಳುವ ಕೆಲವು ಮಚ್ಚೆಗಳಿಂದ (ಸೌರ ಕಲೆಗಳು) ಇಂತಹ ಸ್ಫೋಟಗಳು ಘಟಿಸುತ್ತವೆ. ಸೂರ್ಯ ಮಚ್ಚೆಗಳೆಂದರೆ ಅವು ವಿಶಾಲ ಕೇಂದ್ರಿಕೃತ ಆಯಸ್ಕಾಂತೀಯ ಕ್ಷೇತ್ರಗಳು. ಇವುಗಳ ಉಷ್ಣಾಂಶ ಸೂರ್ಯನ ಮೇಲ್ಮೈ ಉಷ್ಣಾಂಶಕ್ಕಿಂತ ಕಡಿಮೆ­ಯಿರುತ್ತದೆ. ಕೆಲವೊಮ್ಮೆ ಸೂರ್ಯ ಮಚ್ಚೆಗಳು ರೂಪಗೊಂಡ ಹಿಂದೆಯೇ ತೀವ್ರವಾದ ಸ್ಫೋಟಗಳು ಕಾಣಿಸಿಕೊ­ಳ್ಳುತ್ತವೆ. ಇವಕ್ಕೆ ‘ಸೌರ ಸ್ಫೋಟ’ ಎಂದು ಹೆಸರು. ಈ ಸ್ಫೋಟಗಳು ಭೂಮಿಯ ಸಂಪರ್ಕ ವ್ಯವಸ್ಥೆಗಳಿಗೆ ಹಾನಿ ಮಾಡುವಷ್ಟು ಸಮರ್ಥ ಇರುತ್ತವೆ.
‘ಒಂದು ಶಕ್ತಿಯುತವಾದ ‘ಸೌರ ಸ್ಫೋಟ’ವು ತಂತ್ರಜ್ಞಾನದ ಪ್ರಭಾವದ­ಲ್ಲಿರುವ ನಮ್ಮ ಜಗತ್ತಿನಲ್ಲಿ ವ್ಯಾಪಕ ಹಾನಿಗೆ ಕಾರಣವಾಗಬಹುದು. ಇದು ಸಂವಹನ ಜಾಲಗಳನ್ನು ಛಿದ್ರಗೊಳಿ­ಸಬಹುದು ಹಾಗೂ ದೊಡ್ಡ ವಿದ್ಯುತ್ ಪ್ರಸರಣ ಕೇಂದ್ರಗಳನ್ನು ಸ್ಥಗಿತಗೊಳಿ­ಸಬಹುದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕ ಪ್ರೊ.ಅರ್ನಬ್ ಚೌಧರಿ ಹೇಳುತ್ತಾರೆ.
ಷಿಕಾಗೊ ವಿಶ್ವವಿದ್ಯಾನಿಲಯಲ್ಲಿ ಪಿಎಚ್.ಡಿ ಮಾಡುತ್ತಿದ್ದ ದಿನಗಳಿಂದಲೂ ಪ್ರೊ. ಚೌಧರಿ ಸೂರ್ಯ ಮಚ್ಚೆಗಳ ವಿಷಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಪ್ರೆಸ್‌­ನಿಂದ ಪ್ರಕಟಿತವಾದ ಅವರ ಪುಸ್ತಕ ‘ನೇಚರ್ಸ್ ಥರ್ಡ್ ಸೈಕಲ್’ ಜನಸಾಮಾನ್ಯರಿಗೆ ಸೂರ್ಯ ಮಚ್ಚೆಗಳ ಕಥೆಗಳನ್ನು ತಿಳಿಸುವ ಗುರಿಹೊಂದಿದೆ. ಆ ಪುಸ್ತಕವು ಮಾರ್ಚ್‌ ಮೊದಲ ವಾರ­ದಲ್ಲಿ ಐಐಎಸ್‌ಸಿಯಲ್ಲಿ ಬಿಡುಗಡೆ­ಗೊಳ್ಳಲಿದೆ.
ಭೂಮಿಯು ಸೂರ್ಯನ ಸುತ್ತ ಸುತ್ತುವ ಒಂದು ದೊಡ್ಡ ಚೆಂಡಷ್ಟೇ ಅಲ್ಲ, ಅದು ಒಂದು ಬೃಹದಾಕಾರವಾದ ಆಯಸ್ಕಾಂತ. ನಮ್ಮ ಗ್ರಹದ ಸುತ್ತ ಭೂಮಿಯಿಂದ ಪ್ರಭಾವಕ್ಕೊಳಪಟ್ಟಿರುವ ಅಯಸ್ಕಾಂತ ಕ್ಷೇತ್ರದ ಪ್ರದೇಶವೇ ‘ಕಾಂತ ವಲಯ’ ಅಥವಾ ‘ಕಾಂತ ಗೋಳ’. ಇದು ನಮ್ಮನ್ನು ಸೌರ ಸ್ಫೋಟದ ಪ್ರಭಾವದಿಂದ ಕಾಪಾಡುತ್ತದೆ. ಆದಾಗ್ಯೂ, ಶಕ್ತಿಯುತ ಸೌರ ಸ್ಫೋಟಗಳು ಈ ರಕ್ಷಾಕವಚವನ್ನು ಭೇದಿಸಬಲ್ಲವು.
ಇತ್ತೀಚೆಗೆ ‘ಎ.ಆರ್. ೧೨೧೯೨’ ಹೆಸರಿನ ಸೂರ್ಯ ಮಚ್ಚೆಯಿಂದ ಸೌರ ಸ್ಫೋಟವು ಹೊರ­ಸೂಸಿದೆ. ಈ ಬೃಹದಾಕಾರವಾದ ಸೂರ್ಯ ಮಚ್ಚೆಯು, ೧,೨೯,೦೦೦ ಕಿ.ಮೀ ಅಗಲವಾಗಿದೆ. ಇದು ಭೂಮಿಯ ವ್ಯಾಸಕ್ಕಿಂತ ೧೦ ಪಟ್ಟು ದೊಡ್ಡ­ದಾಗಿದೆ. ೨೫ ವರ್ಷದಿಂದೀಚೆಗೆ ವೀಕ್ಷಿಸಿರುವ ಸೂರ್ಯ ಮಚ್ಚೆಗಳಲ್ಲಿ ಇದು ಅತ್ಯಂತ ವಿಶಾಲ­ವಾದದ್ದು.
ಹಲವು ಸೂರ್ಯ ಸ್ಫೋಟಗಳು ಅಧಿಕ ತಾಪ­ಮಾನವಿರುವ ಅನಿಲದ ದೊಡ್ಡ ಗುಳ್ಳೆಗಳನ್ನು ಉಗುಳುತ್ತವೆ. ಈ ಪ್ರಕ್ರಿಯೆಗೆ ಪರಿವೇಷಕ ಸಮೂಹ ನಿಷ್ಕಾಸ ಎಂದು ಹೆಸರು. ಇವು ಭೂಮಿಯನ್ನು ತಲುಪಲು ಎರಡರಿಂದ ಮೂರು ದಿನಗಳನ್ನು ತೆಗೆದುಕೊಳ್ಳುತ್ತವೆ. ಅಲ್ಲದೆ ಭೂಮಿಯ ಸಂವಹನ ಜಾಲಗಳಿಗೆ ಅಡ್ಡಿ ಉಂಟುಮಾಡುತ್ತವೆ.
‘ಪರಿವೇಷಕ ಸಮೂಹ ನಿಷ್ಕಾಸ ಪ್ರಕ್ರಿಯೆ­ಯಿಂದ ಬಿಡುಗಡೆಯಾದ ಅನಿಲದ ದೊಡ್ಡ ಗುಳ್ಳೆಗಳು ಭೂಮಿಗೆ ಡಿಕ್ಕಿ ಹೊಡೆದಾಗ, ಭೂಮಿಯ ಕಾಂತ ಕ್ಷೇತ್ರದ ರೇಖೆಗಳು ವಿರೂಪಗೊಳ್ಳುತ್ತವೆ. ಇದರಿಂದ ಅತಿ ಹೆಚ್ಚಿನ ಪ್ರಮಾಣದ ವಿದ್ಯುತ್‌ ಬಲ ಉತ್ಪಾದನೆಯಾಗುತ್ತದೆ’ ಎಂದು ಮೂರು ದಶಕಗಳಿಂದ ಸೂರ್ಯ ಕಲೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಪ್ರೊ.ಚೌಧರಿ ಹೇಳುತ್ತಾರೆ. ‘೧೯೮೯ರ ಮಾರ್ಚ್ 9ರಂದು ಸೂರ್ಯ­ನಲ್ಲಿಒಂದು ಮಹಾ ವಿಸ್ಫೋಟ ಸಂಭವಿ­ಸಿತ್ತು. ಸ್ವಲ್ಪ ದಿನಗಳ ನಂತರ ಕೆನಡಾದ ಕೆಲವು ಪ್ರದೇಶಗಳಲ್ಲಿ ಕತ್ತಲೆ ಆವರಿಸಿತ್ತು. ಇದೇ ರೀತಿಯ ಘಟನೆ ಇಂದಿನ ಹೆಚ್ಚಿನ ಸಂಪರ್ಕವುಳ್ಳ ಜಗತ್ತಿನಲ್ಲಿ ನಡೆದರೆ, ಸಂಪೂರ್ಣವಾಗಿ ಭಿನ್ನವಾದ ಪರಿಣಾಮ ಬೀರಬಹುದು’ ಅವರು ವಿವರಿಸುತ್ತಾರೆ.
‘ಈಗ ಜಗತ್ತಿನಲ್ಲಿರುವ ಬಹುತೇಕ ವಿದ್ಯುತ್ ಪ್ರಸರಣ ಕೇಂದ್ರಗಳು ಪರಸ್ಪರ ಸಂಪರ್ಕದಲ್ಲಿವೆ ಮತ್ತು ಸೂರ್ಯನ ಚಟುವಟಿಕೆಯಿಂದ ಉತ್ಪತ್ತಿ­ಯಾಗುವ ಈ ಹಠಾತ್ ವಿದ್ಯುತ್‌ ಬಲವು ವಿಕೋಪ­ಗಳಿಗೆ ಕಾರಣವಾಗುತ್ತದೆ’ ಎಂದೂ ಅವರು ಹೇಳುತ್ತಾರೆ. ನಾವು ಸೌರ ಸ್ಫೋಟವನ್ನು ಊಹಿ­ಸಲು ಸಾಧ್ಯವಿಲ್ಲ. ಆದಾಗ್ಯೂ, ಸೌರ ಸ್ಫೋಟವು ಸಂಭವಿಸಿದ ಕೆಲವು ನಿಮಿಷ­ಗಳ ನಂತರ ಅದನ್ನು ಗುರುತಿಸ-­ಬಹುದು. ಇಂದಿನ ದೂರದರ್ಶಕಗಳು ಎಷ್ಟು ಅತ್ಯಾಧುನಿಕ ಆಗಿವೆಯೆಂದರೆ, ಅವು ತಾವಾ ಗಿಯೇ ಇಂತಹ ಘಟನೆಗಳನ್ನು ದಾಖಲಿಸಿಕೊಳ್ಳುತ್ತವೆ. ನಮಗೆ ತಿಳಿದಿ­ರುವ ಹಾಗೆ ಸೂರ್ಯನ ಕೆಲವೇ ಪ್ರದೇಶಗಳಲ್ಲಿ ಹೊರಸೂಸುವ ಸೌರ ಸ್ಫೋಟಗಳು ಮಾತ್ರ ಭೂಮಿಯ ಮೇಲೆ ಗರಿಷ್ಠ ಪರಿಣಾಮ ಬೀರುತ್ತವೆ.


logoblog

Thanks for reading ಸುದ್ದಿ ಹಿನ್ನೆಲೆ...:

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *