ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಶಿಕ್ಷಕರ ವೃತ್ತಿ ನೈಪುಣ್ಯತೆಯ ಸವಾಲುಗಳು | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Monday, March 09, 2015

ಶಿಕ್ಷಕರ ವೃತ್ತಿ ನೈಪುಣ್ಯತೆಯ ಸವಾಲುಗಳು

  Pundalik       Monday, March 09, 2015
ಪ್ರತಿ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನಾಚರಣೆ. ಜಾಗತಿಕ ಮಟ್ಟದಲ್ಲಿ ಶಿಕ್ಷಕರಿಗೆ ಬೆಂಬಲ ವ್ಯಕ್ತಪಡಿಸಲು ಮತ್ತು ಶಿಕ್ಷಕ ವೃತ್ತಿಯಲ್ಲಿ ನೈಪುಣ್ಯತೆ ಹೆಚ್ಚಿಸುವ ಉದ್ದೇಶದಿಂದ 1994 ರಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ನೂರಕ್ಕೂ ಹೆಚ್ಚು ದೇಶಗಳು ಈ ಆಚರಣೆಯಲ್ಲಿ ಭಾಗಿಯಾಗಿವೆ. 'ಎಜುಕೇಷನ್ ಇಂಟರ್‌ನ್ಯಾಷನಲ್' ಎಂಬ ಜಾಗತಿಕ ಶಿಕ್ಷಕರ ಒಕ್ಕೂಟವು ವಿವಿಧ ದೇಶಗಳ ಸುಮಾರು 401 ಸದಸ್ಯ ಸಂಘಟನೆಗಳನ್ನು ಹೊಂದಿದ್ದು, ವಿಶ್ವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಮ್ಮ ರಾಜ್ಯದಲ್ಲಿ ಕನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮೊನ್ನೆ ಅಂದರೆ, ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಿತ್ತು. ದೇಶದಲ್ಲಿ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ ಪ್ರಥಮ ಸಂಘಟನೆ ಇದಾಗಿದೆ.

ಜಾಗತಿಕ ಮಟ್ಟದಲ್ಲಿ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಈ ಬಾರಿ ಯುನೆಸ್ಕೊ, ಯುನಿಸೆಫ್, ಯುಎನ್‌ಡಿಪಿ, ಐಲ್‌ಒ ಮತ್ತು ಎಜುಕೇಷನ್ ಇಂಟರ್‌ನ್ಯಾಷನಲ್ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮ ಯುನೆಸ್ಕೊ ಕೇಂದ್ರ ಕಚೇರಿ ಪ್ಯಾರಿಸ್‌ನಲ್ಲಿ ಅಕ್ಟೋಬರ್ 4ರಂದು ನಡೆಯಿತು. ಈ ಬಾರಿ ವಿಶ್ವ ಶಿಕ್ಷಕರ ದಿನಾಚರಣೆಯ ಘೋಷ ವಾಕ್ಯ 'ಶಿಕ್ಷಕರಿಗೊಂದು ಕರೆ.' ಶಿಕ್ಷಣದಲ್ಲಿ ಸಮಾನ ಅವಕಾಶ, ಗುಣಮಟ್ಟ ಕಂಡುಕೊಳ್ಳುವಲ್ಲಿ ಶಿಕ್ಷಕ ಸಮುದಾಯ ಅತ್ಯಂತ ಪ್ರಬಲ ಅಸ್ತ್ರ ಎಂದು ಮನಗಂಡಿರುವ ಯುನೆಸ್ಕೊ, 'ಶಿಕ್ಷಕರಿಗೊಂದು ಕರೆ' ಎಂದರೆ, 'ಎಲ್ಲ ಮಕ್ಕಳಿಗೂ ಗುಣಾತ್ಮಕ ಶಿಕ್ಷಣಕ್ಕೆ ಕರೆ' ಎಂದು ಅರ್ಥೈಸಿದೆ.

ಈ ಸಂಬಂಧ ಯುನೆಸ್ಕೊ ಮಹಾ ನಿರ್ದೇಶಕರಾದ ಐರಿನ ಬೊಕೊವಾರವರು, ವಿಶ್ವ ಶಿಕ್ಷಕರ ದಿನಾಚರಣೆಯ ತಮ್ಮ ಸಂದೇಶದಲ್ಲಿ , ''ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗಿರುವ ವೃತ್ತಿ ನೈಪುಣ್ಯತೆಯ ಜ್ಞಾನ ಮತ್ತು ಕೌಶಲ್ಯ ಅತ್ಯಂತ ಮಹತ್ವದ್ದಾಗಿದೆ. ಈ ಬಾರಿಯ ವಿಶ್ವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನೇರ ಬಲಿಷ್ಠ ಮತ್ತು ಅರ್ಥಪೂರ್ಣ ಶಿಕ್ಷಕರ ತರಬೇತಿ ಮತ್ತು ನಿರಂತರ ವೃತ್ತಿ ನೈಪುಣ್ಯತೆಯ ಆಭಿವೃದ್ಧಿ ಮತ್ತು ಬೆಂಬಲ ಪಡೆಯುವಂತೆ ನಾವು ಕರೆ ನೀಡುತ್ತೇವೆ,'' ಎಂದಿದ್ದಾರೆ

ಮೇಲಿನ ಮಾತು ಅಕ್ಷರಶಃ ಸತ್ಯ. ಒಂದು ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಅಲ್ಲಿನ ಶಿಕ್ಷಕರ ಗುಣಮಟ್ಟಕ್ಕಿಂತಲೂ ಹೆಚ್ಚಿರಲಾರದು. ಶಿಕ್ಷಕರ ಸೇವಾಪೂರ್ವ ಹಾಗು ಸೇವಾನಿರತ ಶಿಕ್ಷಣ ತರಬೇತಿ ಮತ್ತು ಕೆಲಸ ನಿರ್ವಹಣೆಯ ಪರಿಸ್ಥಿತಿ ಹಾಗು ವಸ್ತುಸ್ಥಿತಿ ಇತ್ಯಾದಿ ವಿಷಯಗಳು ಶಿಕ್ಷಣದ ಒಟ್ಟು ಗುಣಾತ್ಮಕತೆಯ ಮೇಲೆ ಪ್ರಭಾವ ಬೀರುವ ಮಹತ್ವದ ಅಂಶಗಳಾಗಿರುತ್ತವೆ. ವಿಶ್ವ ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಶಿಕ್ಷಕರ ಶಿಕ್ಷಣ ಮತ್ತು ಕೆಲಸ ನಿರ್ವಹಣೆಯ ಸ್ಥಿತಿಗತಿ ಕುರಿತಂತೆ ಗಂಭೀರವಾಗಿ ಅವಲೋಕಿಸಬೇಕಾಗಿದೆ.

ಶಿಕ್ಷಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಮಗೆ ಸುಧೀರ್ಘ ಇತಿಹಾಸವಿದೆ. ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು ತನ್ನ ಜಾಲಬಂಧದಲ್ಲಿ ಆಗಸ್ಟ್ 2013ರವರೆಗೆ ಆಧುನೀಕರಿಸಿರುವ ಮಾಹಿತಿ ಅನ್ವಯ, ರಾಜ್ಯದಲ್ಲಿ ಮೊದಲನೇ ಶಿಕ್ಷಕರ ತರಬೇತಿ ಕೇಂದ್ರವು ಧಾರವಾಡದಲ್ಲಿ 1857ರಲ್ಲಿ ಪ್ರಾರಂಭವಾಯಿತು. 1890ರಲ್ಲಿದ್ದ ಮೂರು ಶಿಕ್ಷಕರ ತರಬೇತಿ ಕೇಂದ್ರಗಳ ಸಂಖ್ಯೆ 2000ದ ವೇಳೆಗೆ 134ಕ್ಕೆ ಏರಿತು. 2003-04ರಲ್ಲಿ ಸರಕಾರ ಹೊಸ ಶಿಕ್ಷಕರ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು ಇದ್ದ ನಿಬಂಧನೆಯನ್ನು ಸಡಿಲಗೊಳಿಸಿದ ಪರಿಣಾಮ, ಪೆಟ್ಟಿಗೆ ಅಂಗಡಿಯ ರೀತಿಯಲ್ಲಿ ಗಲ್ಲಿಗೊಂದರಂತೆ ಶಿಕ್ಷಕರ ತರಬೇತಿ ಕೇಂದ್ರಗಳು ಪ್ರಾರಂಭವಾದವು. ಜೂನ್ 2007ಕ್ಕೆ ರಾಜ್ಯದಲ್ಲಿ 888 ಅನುದಾನರಹಿತ ಖಾಸಗಿ ಪ್ರಾಥಮಿಕ ಶಿಕ್ಷಕರ ಶಿಕ್ಷಣ ತರಬೇತಿ ಕೇಂದ್ರಗಳು, 46 ಅನುದಾನರಹಿತ ಖಾಸಗಿ ದೈಹಿಕ ಶಿಕ್ಷಕರ ಶಿಕ್ಷಣ ತರಬೇತಿ ಕೇಂದ್ರಗಳು ಮತ್ತು 336 ಅನುದಾನರಹಿತ ಖಾಸಗಿ ಪ್ರೌಢಶಾಲಾ ಶಿಕ್ಷಕರ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಈಗ 2013-14ರ ಮಾಹಿತಿ ಅನ್ವಯ, ರಾಜ್ಯದಲ್ಲಿ 40 ಸರಕಾರಿ, 40 ಸರಕಾರಿ ಅನುದಾನಿತ ಮತ್ತು 746 ಖಾಸಗಿ ಅನುದಾನರಹಿತ ಡಿ.ಇಡಿ ಹಾಗೂ ನಾಲ್ಕು ಸರಕಾರಿ, 43 ಸರಕಾರಿ ಅನುದಾನಿತ ಮತ್ತು 375 ಖಾಸಗಿ ಅನುದಾನರಹಿತ ಬಿ.ಇಡಿ ಕಾಲೇಜುಗಳು ರಾಜ್ಯದಲ್ಲಿ ಸೇವಾಪೂರ್ವ ಶಿಕ್ಷಣ ತರಬೇತಿ ನೀಡುತ್ತಿವೆ. ಶಿಕ್ಷಕರ ತರಬೇತಿ ಕ್ಷೇತ್ರದಲ್ಲಿ ಈ ಪರಿಯ ಖಾಸಗೀಕರಣ ಬೇರೆ ಯಾವುದೇ ರಾಜ್ಯದಲ್ಲಿಯೂ ಆಗಿಲ್ಲ. ಈ ಅತಿರೇಕದ ಖಾಸಗೀಕರಣದ ಪರಿಣಾಮ, ಸೇವಾ ಪೂರ್ವ ಶಿಕ್ಷಣದ ತರಬೇತಿಯ ಗುಣಮಟ್ಟ ಸಂಪೂರ್ಣವಾಗಿ ಕುಸಿದಿದೆ. ಡಿ.ಇಡಿ/ಬಿ.ಇಡಿ ಪದವಿಗಳು ಮಾರಾಟದ ಸರಕಾಗಿವೆ. ಆಂತರಿಕ ಅಂಕಗಳನ್ನೊಳಗೊಂಡತೆ ಸೂಕ್ಷ್ಮ ಬೋಧನೆ, ಪಾಠ ಯೋಜನೆ ತಯಾರಿ, ಪ್ರಾಯೋಗಿಕ ಬೋಧನೆ ಎಲ್ಲವೂ ಕಾಟಾಚಾರದ ಪ್ರಕ್ರಿಯೆಗಳಾಗಿವೆ. ಶಿಕ್ಷಕರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ, ಶಾಲಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಾದ ಈ ಪರ್ವ ಕಾಲದಲ್ಲಿಯೇ ಶಾಲಾ ಶಿಕ್ಷಣದ ಗುಣಮಟ್ಟ ಎಲ್ಲ ಹಂತಗಳಲ್ಲಿ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. ಸರಕಾರಿ ಶಾಲೆಗಳು ತಮ್ಮ ಹಿಂದಿನ ಛಾಪನ್ನು ಕಳೆದುಕೊಳ್ಳಲಾರಂಭಿಸಿದ್ದು, ಸರಕಾರಿ ಶಾಲೆಗಳೆಂದರೆ ಜನ ಮೂಗು ಮುರಿಯುವಂತಾಗಿದೆ.

ಮತ್ತೊಂದೆಡೆ, ಶಿಕ್ಷಕರ ತರಬೇತಿ ಕೇಂದ್ರಗಳು ಸರಾಗವಾಗಿ ಮತ್ತು ಕ್ಷಿಪ್ರವಾಗಿ ಹಣ ಮಾಡುವ ವ್ಯಾಪಾರಿ ಕೇಂದ್ರಗಳಾಗಿವೆ. ರಾಜ್ಯ ಸರಕಾರ ಮತ್ತು ಶಿಕ್ಷಕರ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಲು ರಚನೆಯಾದ ಶಿಕ್ಷಕರ ಶಿಕ್ಷಣದ ರಾಷ್ಟ್ರೀಯ ಪರಿಷತ್ತು (ಎನ್‌ಸಿಟಿಇ) ಈ ವ್ಯಾಪಾರಿ ಸಂಸ್ಥೆಗಳನ್ನು ನಿಯಂತ್ರಿಸಿ, ಶಿಕ್ಷಕರ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಬದಲು, ಈ ತರಬೇತಿ ಕೇಂದ್ರಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉತ್ತೇಜಿಸಿ, ಶಿಕ್ಷಕರ ಶಿಕ್ಷಣದ ಗುಣಮಟ್ಟನ್ನು ಸರಿಪಡಿಸಲಾಗದ ಮಟ್ಟಕ್ಕೆ ತಂದಿಳಿಸಿವೆ. ಫಲಿತಾಂಶ, ರಾಜ್ಯದಲ್ಲಿ ಗುಣಮಟ್ಟವಿಲ್ಲದ ಸೇವಾಪೂರ್ವ ಶಿಕ್ಷಕರ ತರಬೇತಿ ಪಡೆದ ನಿರುದ್ಯೋಗಿ ಶಿಕ್ಷಕರ ಪಡೆ ಕೆಲಸವಿಲ್ಲದೆ ಅಸಹಾಯಕತೆಯಿಂದ ಪರಿತಪಿಸುವಂತಾಗಿದೆ. ಎಂದಿನಂತೆ, ಬಂಡವಾಳಶಾಹಿ ವ್ಯವಸ್ಥೆ ನಿರುದ್ಯೋಗಿ ಶಿಕ್ಷಕರ ಪಡೆಯನ್ನು ಕಾಯಂ ಆಗಿ ಸೇವೆಗೆ ಇಟ್ಟುಕೊಳ್ಳುವ ಮೂಲಕ ಕಡಿಮೆ ಕೂಲಿಗೆ ಶಿಕ್ಷಕರು ಮುಗಿಬೀಳುವಂತೆ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸುವ ಜತೆಗೆ, ಕನಿಷ್ಠ ಅವಧಿಯಲ್ಲಿ ಗರಿಷ್ಟ ಲಾಭ ಸಂಪಾದಿಸುವ ತತ್ತ್ವವನ್ನು ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಗಳಿಗೂ ವಿಸ್ತರಿಸಿದೆ. ಶಿಕ್ಷಣ ನೀಡುವುದು ಕೆಲಸ ಪವಿತ್ರವೆಂದೇ ನಂಬಿರುವ ಈ ಸಮಾಜಕ್ಕೆ ಇದೊಂದು ದೊಡ್ಡ ಅಪವಾದವಾಗಿದೆ.

ಶಿಕ್ಷಕರ ಶಿಕ್ಷಣದ ಮತ್ತೊಂದು ಮುಖವೆಂದರೆ, ಸೇವಾನಿರತ ಶಿಕ್ಷಕರ ತರಬೇತಿ. ರಾಜ್ಯದಲ್ಲಿ ಸೇವಾನಿರತ ಶಿಕ್ಷಕರ ಶಿಕ್ಷಣ ತರಬೇತಿ ಸಂಪೂರ್ಣವಾಗಿ ದಾರಿ ತಪ್ಪಿದೆ. ಕೇಂದ್ರ ಸರಕಾರ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಅಡಿಯಲ್ಲಿ ಸೇವಾನಿರತ ಶಿಕ್ಷಕರ ಶಿಕ್ಷಣಕ್ಕೆ ಕೋಟ್ಯಂತರ ರೂ.ಗಳನ್ನು ನೀಡುತ್ತಿದೆಯೆನ್ನುವ ಒಂದೇ ಕಾರಣಕ್ಕೆ, ಶಿಕ್ಷಕರ ಅಗತ್ಯತೆಗಳನ್ನು ಗುರುತಿಸದೆ ಅಸಂಬದ್ಧ ತರಬೇತಿಗಳನ್ನು ನಿರಂತರವಾಗಿ ಆಯೋಜಿಸಿ, ಶಿಕ್ಷಕರು ಶಾಲೆಯಲ್ಲಿ ಕಲಿಸುವ ಬದಲು ಕೇವಲ ಅನಗತ್ಯ ಮತ್ತು ನಿರುಪಯೋಗ ತರಬೇತಿಗಳಲ್ಲೇ ಕಳೆದು ಹೋಗುವಂತಾಗಿದೆ. ಪರಿಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ, ಶಿಕ್ಷಕರು ಸೇವಾನಿರತ ತರಬೇತಿಯೆಂದೊಡನೆ ತಪ್ಪಿಸಿಕೊಂಡು ಓಡಾಡುವಂತಾಗಿದೆ. ಆದರೆ, ಸೇವಾನಿರತ ಶಿಕ್ಷಕರ ತರಬೇತಿ ಹೆಸರಿನಲ್ಲಿ ಮುದ್ರಣಗೊಳ್ಳುವ ತರಬೇತಿ ಸಂಚಿಕೆಗಳನ್ನು ಮುದ್ರಿಸುವ ಮುದ್ರಕರು ಲಕ್ಷಾಂತರ ರೂ. ಲಾಭ ಗಳಿಸುತ್ತಿದ್ದಾರೆ ಮತ್ತು ಲಾಭದ ಒಂದು ಭಾಗವನ್ನು-ಲಾಭಗೊಳಿಸಲು ಅನುವು ಮಾಡಿಕೊಟ್ಟ ಮಹನೀಯರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದಾರೆ. ಹೀಗಾಗಿ, ಈ ತರಬೇತಿಗಳಿಂದ ಸೇವಾನಿರತ ಶಿಕ್ಷಕರಿಗೆ ಪ್ರಯೋಜನವಾಗದಿದ್ದರೂ, ಮುದ್ರಕರಿಗೆ ಮತ್ತು ಮುದ್ರಣದ ಕೆಲಸ ನೀಡುವ ವ್ಯಕ್ತಿಗಳಿಗೆ ಈ ತರಬೇತಿಗಳಿಂದ ಅಧಿಕ ಲಾಭವಾಗುತ್ತಿದೆ.

ಇನ್ನು, ಹಾಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಕಷ್ಟ-ಕಾರ್ಪಣ್ಯಗಳಂತೂ ಹೇಳತೀರದು. ಬೋಧನೆಗಿಂತ ಬೋಧನೇತರ ಕೆಲಸವೇ ಹೆಚ್ಚು. ಶಾಲಾ ಹಂತದಲ್ಲಿ ಶಿಕ್ಷಕರು ಕನಿಷ್ಠ 40ರಿಂದ 50 ವಹಿಗಳು ಮತ್ತು 18-20 ಕಡತಗಳನ್ನು ನಿರ್ವಹಿಸಬೇಕಾಗಿದೆ. ಅವುಗಳಲ್ಲಿ ಬಹು ಮುಖ್ಯ ವಹಿಗಳೆಂದರೆ, 8ರಿಂದ 10 ಮಕ್ಕಳ ವಿವಿಧ ವಹಿಗಳು; 5-6 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಹಿಗಳು; 4-5 ಬಿಸಿಯೂಟದ ವಹಿಗಳು ;3-4 ನಲಿಕಲಿ ವಹಿಗಳು; ವಿವಿಧ ಪರೀಕ್ಷೆ ವಹಿಗಳು; ಕ್ಷೀರ ಭಾಗ್ಯ ಯೋಜನೆ ವಹಿ; ನಗದು ವಹಿ ಇತ್ಯಾದಿಗಳು. ಇವೆಲ್ಲದರ ಜತೆಗೆ ಈಗ ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆಯ ಕೆಲಸ.

ಶಿಕ್ಷಕರು ದಿನನಿತ್ಯ ಈ ಕೆಲಸಗಳಲ್ಲಿ ತೊಡಗಿದರೆ ಮಕ್ಕಳ ಕಲಿಕೆಯಾದರೂ ಹೇಗೆ ಸಾಧ್ಯ? ಹೀಗಾಗಿ, ಸರಕಾರಿ ಶಾಲೆಗಳಲ್ಲಿ ನಿರಂತರ ಕಲಿಕೆಯ ಬದಲು ನಿರಂತರ 'ವಹಿ'ಗಳ ನಿರ್ವಹಣೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ಶಿಕ್ಷಕ ತನ್ನ ವೃತ್ತಿ ನೈಪುಣ್ಯತೆಯ ಜ್ಞಾನ ಮತ್ತು ಕೌಶಲವನ್ನು ವೃದ್ಧಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಅಣಿಯಾಗುವುದಾದರು ಹೇಗೆ? ಇದು ರಾಜ್ಯದಲ್ಲಿ ನಡೆದ ವಿಶ್ವ ಶಿಕ್ಷಕ ದಿನಾಚರಣೆಯ ಸಮಾರಂಭದಲ್ಲಿ ಮೂಡಿಬಂದ ಮೂಲಭೂತ ಪ್ರಶ್ನೆ. ಇದಕ್ಕೆ ಉತ್ತರವನ್ನು ಹುಡುಕಬೇಕಾಗಿದೆ.
logoblog

Thanks for reading ಶಿಕ್ಷಕರ ವೃತ್ತಿ ನೈಪುಣ್ಯತೆಯ ಸವಾಲುಗಳು

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *