ನಿತ್ಯ ಹರಿದ್ವರ್ಣದ ಸಹ್ಯಾದ್ರಿ ಗಿರಿವನಗಳ ನಡುವೆ ಇರುವ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿಯಲ್ಲಿ ಗುರುವಾರ ನಟಿ ರಾಗಿಣಿ ದ್ವಿವೇದಿ ವಿಶ್ವಮಾನವ ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ನೀಡಿದರು.
ವಿಶ್ವವಿದ್ಯಾಲಯದ ಅತಿದೊಡ್ಡ ಸಾಂಸ್ಕೃತಿಕ ಚಟುವಟಿಕೆ ಮೂರು ದಿನಗಳ ಸಹ್ಯಾದ್ರಿ ಉತ್ಸವದ ಪ್ರಮುಖ ಅಂಗವಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಗುರುವಾರದ ಸಹ್ಯಾದ್ರಿ ಉತ್ಸವದ ಮೆರವಣಿಗೆಯಲ್ಲೂ ಎಂದಿನಂತೆ ವಿದ್ಯಾರ್ಥಿಗಳು ಡೊಳ್ಳು, ನಾಸಿಕ್ಡೊಳ್ಳು, ವೀರಗಾಸೆ, ನಂದಿಕೋಲು ಕುಣಿತ, ತೊಗಲುಗೊಂಬೆ, ಜಾನಪದ ನೃತ್ಯ, ಹುಲಿವೇಷ, ಕಂಸಾಳೆ, ಕೋಲಾಟ ಲಂಬಾಣಿ ನೃತ್ಯಗಳನ್ನು ಪ್ರದರ್ಶಿಸಿದರು. ಯುವಕರು ಸಾಂಪ್ರದಾಯಿಕ ಬಿಳಿ ಪಂಚೆ- ಅಂಗಿ, ಕೆಲವರು ಕಚ್ಚೆಪಂಚೆ- ಬಿಳಿ ಅಂಗಿ, ಪೇಟ ತೊಟ್ಟಿದ್ದರೆ, ಯುವತಿಯರು ಸೀರೆ, ಗೊಪ್ಪೆಸೀರೆ, ಒಂದೇ ಬಣ್ಣದ ಸೀರೆಗಳಿಂದ ಕಂಗೊಳಿಸಿದರು. ಡೊಳ್ಳು, ವೀರಗಾಸೆ ಸದ್ದಿಗೆ ಯುವಕ ಯುವತಿಯರು ಲಿಂಗ ಭೇದ ಮರೆತು ಹೆಜ್ಜೆ ಹಾಕಿದರು.
ಯುವಕರ ಡೊಳ್ಳು ಕುಣಿತ ತಂಡಗಳು ಅಧಿಕ ಸಂಖ್ಯೆಯಲ್ಲಿದ್ದವು. ಗಂಡು ಕಲೆಯಾದ ಡೊಳ್ಳು ಕುಣಿತವನ್ನು ಯುವತಿಯರು ಸಹ ಪ್ರದರ್ಶಿಸಿ ಗಮನ ಸೆಳೆದರು. ಅಷ್ಟೇ ಅಲ್ಲ ಕಂಸಾಳೆ, ವೀರಗಾಸೆ ಸಹ ಪ್ರದರ್ಶಿಸಿ ಸೈ ಎನಿಸಿಕೊಂಡರು. ಸಾಂಸ್ಕೃತಿಕ ಉತ್ಸವ ನೋಡಲೆಂದೆ ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು ಮಕ್ಕಳು ನೆರೆದಿದ್ದರು. ಉತ್ಸವದಲ್ಲಿ 45 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಿಂದ ಎಲ್ಲಿ ನೋಡಿದರೂ ಬಣ್ಣ ಬಣ್ಣದ ವೈವಿಧ್ಯಮಯ ಉಡುಪು ತೊಟ್ಟ ಯುವಕ ಯುವತಿಯರೇ ಕಾಣುತ್ತಿದ್ದರು. ಹೀಗಾಗಿ ಜ್ಞಾನ ಸಹ್ಯಾದ್ರಿ ರಂಗೇರಿದಂತಾಗಿತ್ತು.
ಮೆರವಣಿಗೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಉತ್ಸವವನ್ನು ಉದ್ಘಾಟಿಸಿದ ನಟಿ ರಾಗಿಣಿ ದ್ವಿವೇದಿ ಮಾತನಾಡಿ, ಇಂತದೊಂದು ಕಲಾ ಪ್ರದರ್ಶನ ನಡೆಯುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಇಲ್ಲಿನ ಕಲೆ, ನೃತ್ಯ, ಉಡುಗೆ, ತೊಡುಗೆ, ವಿದ್ಯಾರ್ಥಿಗಳಲ್ಲಿನ ಉತ್ಸಾಹವನ್ನು ಬೇರೆಲ್ಲೂ ಕಾಣಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಅಪಾರವಾದ ಪ್ರತಿಭೆ ಇದೆ. ಇದನ್ನು ಸಮರ್ಥವಾಗಿ ಪೋಷಿಸಿಕೊಂಡು ಹೋದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಿದೆ ಎಂದರು.
ಕುಲಪತಿ ಪ್ರೊ. ಜೋಗನ್ ಶಂಕರ್, ಪ್ರೊ. ಡಿ.ಎಸ್.ಪೂರ್ಣಾನಂದ, ಸತ್ಯಪ್ರಕಾಶ್ ಎಂ.ಆರ್., ಡಾ.ವರ್ಗೀಸ್.ಪಿ, ಡಾ.ಸತೀಶ್ ಕುಮಾರ್ ಸೇರಿದಂತೆ ಭೋಧಕ ಮತ್ತು ಭೋಧಕೇತರ ಸಿಬ್ಬಂಧಿ ಹಾಗೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಶೈಕ್ಷಣಿಕ ವರ್ಷದಲ್ಲಿ ಬರಿ ಪಾಠ, ಓದು, ವಿಮರ್ಶೆ, ಪ್ರಯೋಗದಲ್ಲೇ ಮುಳುಗುವ ವಿದ್ಯಾರ್ಥಿಗಳಿಗೆ ಸಹ್ಯಾದ್ರಿ ಉತ್ಸವ ಎನ್ನುವುದು ಸಾಂಸ್ಕೃತಿಕ ಹಬ್ಬ. ಈ ಉತ್ಸವಕ್ಕಾಗಿ ವಿದ್ಯಾರ್ಥಿಗಳು ತಿಂಗಳ ಮೊದಲೆ ಸಿದ್ಧತೆ ನಡೆಸಿ ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಅಂತಹ ದಿನ ಬಂದೇ ಬಿಟ್ಟಾಗ ಎಲ್ಲರೂ ಒಂದಾಗಿ ಬೆರೆತು ಕಲೆಗಳನ್ನು ಪ್ರದರ್ಶಿಸುತ್ತಾರೆ.
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment