ಬೆಂಗಳೂರು: ಕಾನೂನಿನ ಬಗ್ಗೆ ಅರಿವಿರಲಿಲ್ಲ ಎಂಬ ಕಾರಣಗಳು ಅಪರಾಧಿಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವುದಿಲ್ಲ. ಹೀಗಾಗಿ ಶಾಂತಿಯುತ ಸಮಾಜಕ್ಕಾಗಿ ಪ್ರತಿಯೊಬ್ಬರೂ ಕಾನೂನು ಅರಿವು ಪಡೆದು ಕಾನೂನಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಸ್ಟೂಡೆಂಟ್ ಪೊಲೀಸ್ ಕೆಡೆಟ್'ನ (ಎಸ್ಪಿಸಿ) ಧ್ವಜವನ್ನು ಗೃಹ ಇಲಾಖೆಗೆ ಹಸ್ತಾಂತರಿಸುವ ಮೂಲಕ ಎಸ್ಪಿಸಿ ಯೋಜನೆಗೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬ ನಾಗರೀಕನೂ ಜವಬ್ದಾರಿಯಿಂದ ನಡೆದುಕೊಳ್ಳಬೇಕು. ನೆಲದ ಕಾನೂನು ಅರಿತು ಅದರ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಹೀಗಾಗಿ, ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳಲ್ಲಿ ಕಾನೂನು, ಅಪರಾಧ ವಿರೋಧಿ ಮನೋಭಾವ, ಸಾಮಾಜಿಕ ಜವಾಬ್ದಾರಿ ಬೆಳೆಸಲು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.
ದೇಶದಲ್ಲಿ ಶೇ. 60 ರಷ್ಟು ಯುವಜನತೆ ಇದ್ದಾರೆ. ಹೊಸ ವಿಚಾರಗಳನ್ನು ಯುವಜನತೆಗೆ ಸುಲಭವಾಗಿ ತಲುಪಿಸಬಹುದು. ಹೀಗಾಗಿ ಮಕ್ಕಳಿಗೆ ಇಂತಹ ತರಬೇತಿ ನೀಡಲು ಮುಂದಾಗಿದ್ದೇವೆ. ಅಪರಾಧಗಳನ್ನು ಹೇಗೆ ತಡೆಯಬೇಕು? ಕಾನೂನು ಸುÂವಸ್ಥೆ, ದೇಶಪ್ರೇಮ, ಪರಸ್ಪರ ಗೌರವ, ದ್ವೇಷ ಅಸೂಯೆ ತೊಡೆದು ಹಾಕುವುದು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಗೃಹಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಪೊಲೀಸರಿಂದಲೇ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ಪ್ರತಿ ಬಾರಿ ಯಾವುದೇ ಘಟನೆ ನಡೆದರೂ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡುವುದು ತಪ್ಪು. ಬದಲಿಗೆ ಸಮಾಜ, ಸಂಘ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಈ ಯೋಜನೆ ಮಹತ್ವ ಪಡೆಯಲಿದೆ ಎಂದರು.
ಹಲವು ತರಬೇತಿ: ಪ್ರಾಯೋಗಿಕ ಯೋಜನೆಗೆ 35 ಶಾಲೆಗಳಿಂದ ತಲಾ 22 ಸದಸ್ಯರನ್ನು ಒಳಗೊಂಡ 2 ತುಕಡಿಗಳನ್ನು ರಚಿಸಲಾಗಿದೆ. ಇಬ್ಬರು ಶಿಕ್ಷಕರು, ಇಬ್ಬರು ಪೊಲೀಸ್ ಅಧಿಕಾರಿಗಳು ತರಬೇತಿ ನೀಡುತ್ತಾರೆ. ಗೃಹ ಇಲಾಖೆ ಪಠ್ಯದ ಪ್ರಕಾರ ವಾರ್ಷಿಕ 96 ಹೊರಾಂಗಣ ಮತ್ತು ಒಳಾಂಗಣ ತರಗತಿಗಳನ್ನು ಆಯೋಜಿಸಲಾಗುತ್ತದೆ. ಹೊರಾಂಗಣ ಪಠ್ಯದಲ್ಲಿ ರಾಷ್ಟೀಯ ಭಾವೈಕ್ಯತೆ, ದೈಹಿಕ ಶಿಕ್ಷಣ, ಶಸ್ತ್ರಗಳ ಬಳಕೆ ಕುರಿತು ತರಬೇತಿ ನೀಡಲಾಗುತ್ತದೆ. ವಿ ಲರ್ನ್ ಟು ಸರ್ವ್ (ಸೇವೆಗಾಗಿ ಕಲಿಕೆ) ಘೋಷ ವ್ಯಾಖ್ಯೆಯ ಯೋಜನೆಯಲ್ಲಿ ಒಳಾಂಗಣ ಪಠ್ಯದಲ್ಲಿ ನಾಯಕತ್ವ, ಆರೋಗ್ಯ, ಶುಚಿತ್ವ, ಪರಿಸರ ಸ್ವಯಂ ರಕ್ಷಣೆ, ನಕ್ಷೆ ಗುರುತಿಸುವಿಕೆ, ಪೊಲೀಸ್ ಇತಿಹಾಸ ಹಾಗೂ ಸಾಹಸ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಕಂಪ್ಯೂಟರ್, ಇಂಟರ್ನೆಟ್ ಸೇವೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಿಸಿನ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು, ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಮತ್ತಿತರರು ಹಾಜರಿದ್ದರು.
ಏನಿದು ಎಸ್ಪಿಸಿ?
ವಿದ್ಯಾರ್ಥಿ ಜೀವನದಿಂದಲೇ ಮಕ್ಕಳಲ್ಲಿ ಶಿಸ್ತು, ಸಮಾಜಿಕ ಹೊಣೆಗಾರಿಕೆ ಕಲಿಸುವ ಸಲುವಾಗಿ ರಾಜ್ಯ ಗೃಹ ಇಲಾಖೆ "ಸ್ಟೂಡೆಂಟ್ ಪೊಲೀಸ್ ಕೆಡೆಟ್' ಯೋಜನೆ ಜಾರಿಗೆ ತಂದಿದೆ. ಈಗಾಗಲೇ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿರುವ ಯೋಜನೆಯನ್ನು ಬೆಂಗಳೂರಿನ 25, ಮೈಸೂರಿನ 5, ಮಡಿಕೇರಿಯ 5 ಹಾಗೂ ಶಿವಮೊಗ್ಗದ 5 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.
ಬಾಲಕ, ಬಾಲಕಿಯರು ಸೇರಿ ಒಟ್ಟು 1,760 ಮಕ್ಕಳಿಗೆ ಪ್ರತಿ ಶನಿವಾರ ತರಬೇತಿ ನೀಡಲಾಗುವುದು. ಪ್ರತಿ ವಾರ 2 ಗಂಟೆ ವ್ಯಾಯಾಮ, ಕವಾಯತು, ಕಾನೂನು ಅರಿವು ತರಬೇತಿ ನೀಡಲಾಗುವುದು. ಸರ್ಕಾರ ಬಜೆಟ್ನಲ್ಲಿ ಇದಕ್ಕೆ 1.80 ಕೋಟಿ ರೂ. ಘೋಷಣೆ ಮಾಡಿದ್ದು, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ಅವರು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
No comments:
Post a Comment