ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ವ್ಯಕ್ತಿ ಸ್ಮರಣೆ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, March 08, 2015

ವ್ಯಕ್ತಿ ಸ್ಮರಣೆ

  Pundalik       Sunday, March 08, 2015




ವ್ಯಕ್ತಿ ಸ್ಮರಣೆ: ಕಾಮಿಕ್ಸ್ ಜಗತ್ತಿನ ‘ಚಾಚಾ’

ಪ್ರಾಣ್ ಕುಮಾರ್ ಶರ್ಮ




ವ್ಯಕ್ತಿ ಸ್ಮರಣೆ: ಕಾಮಿಕ್ಸ್ ಜಗತ್ತಿನ ‘ಚಾಚಾ’

ಪ್ರಾಣ್ ಕುಮಾರ್ ಶರ್ಮ


ಭಾರತೀಯ ಕಲಾಪ್ರಪಂಚದಲ್ಲಿ ಇಬ್ಬರು ಪ್ರಾಣ್‌ಗಳು. ಒಬ್ಬರು ಹಿಂದಿ ಚಿತ್ರರಂಗದ ಮಹಾನ್‌ ಕಲಾವಿದರಲ್ಲಿ ಒಬ್ಬರಾದ ಪ್ರಾಣ್‌. ಮತ್ತೊಬ್ಬರು ಕಾರ್ಟೂನಿಗ ಪ್ರಾಣ್‌. 2013ರ ಜುಲೈನಲ್ಲಿ ನಟ ಪ್ರಾಣ್‌ ಅವರು ಕೊನೆಯುಸಿರೆಳೆದಾಗ, ಆ ಸುದ್ದಿಯನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತ ಕಾರ್ಟೂನಿಸ್ಟ್‌ ಪ್ರಾಣ್‌ ಪತ್ರಿಕೆಯಲ್ಲಿ ಓದಿದ್ದರು. ಮತ್ತೊಬ್ಬ ಪ್ರಾಣ್‌ ಕೂಡ ಸರದಿಯಲ್ಲಿದ್ದಾನೆ ಎಂದು ಅವರಿಗನ್ನಿಸಿತ್ತು. ‘ನಿಮ್ಮ ಕಾರ್ಟೂನ್‌ಗಳನ್ನು ನೋಡಿ ಬೆಳೆದವನು ನಾನು. ನೀವು ನನ್ನ ಹೀರೊ. ನಿಮ್ಮನ್ನು ಬಿಟ್ಟುಕೊಡುವುದಿಲ್ಲ’ ಎಂದು ವೈದ್ಯರು ಭರವಸೆಯ ಮಾತುಗಳನ್ನಾಡಿದ್ದರು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡ ಪ್ರಾಣ್‌ ಮನೆಗೆ ಮರಳಿದ್ದರು. ಅದಾಗಿ, ಒಂದು ವರ್ಷವಾಗಿದೆ. ವರ್ಷದ ಅಂತರದಲ್ಲಿ ಭಾರತೀಯ ಕಲಾಪ್ರಪಂಚ ಮತ್ತೊಬ್ಬ ಪ್ರಾಣ್‌ರನ್ನೂ ಕಳೆದುಕೊಂಡಿದೆ.
ಪ್ರಾಣ್ ಕುಮಾರ್ ಶರ್ಮ (ಆಗಸ್ಟ್ 15, 1938 – ಆಗಸ್ಟ್ 5, 2014) ಅವರ ಬಗ್ಗೆ ಮಾತನಾಡುವಾಗ ಮೊದಲಿಗೆ ನೆನಪಿಸಿಕೊಳ್ಳಬೇಕಾದುದು ಚಾಚಾ ಚೌಧರಿಯನ್ನು. ಭಾರತೀಯ ಕಾಮಿಕ್ಸ್ ವಲಯದಲ್ಲಿ ಫ್ಯಾಂಟಮ್‌ ಮತ್ತು ಸೂಪರ್‌ಮ್ಯಾನ್‌ಗಳ ಪ್ರಭಾವಳಿ ತುಂಬಿಕೊಂಡಿದ್ದಾಗ, ಚಾಚಾ ಚೌಧರಿ ಎನ್ನುವ ಅಪ್ಪಟ ದೇಸಿ ಕಾಮಿಕ್ಸ್‌ ಪಾತ್ರವನ್ನು ಪ್ರಾಣ್‌ ಸೃಷ್ಟಿಸಿದ್ದರು. ಈ ದೇಸಿ ಹೀರೊ ತನ್ನ ಸೃಷ್ಟಿಕರ್ತನ ನಿರೀಕ್ಷೆಯನ್ನೂ ಮೀರಿ ಜನಪ್ರಿಯಗೊಂಡಿದ್ದು ಈಗ ಇತಿಹಾಸ. ಅನೇಕರು ವಿಶ್ಲೇಷಿಸುವಂತೆ, ಚಾಚಾನ ಸೃಷ್ಟಿ ಫ್ಯಾಂಟಮ್‌ ಅಥವಾ ಜೇಮ್ಸ್ ಬಾಂಡ್‌ 007ಗೆ ಭಾರತದ ಉತ್ತರ. ಈ ಹಿನ್ನೆಲೆಯಲ್ಲಿ ‘ದೇಸಿ ಕಾಮಿಕ್ಸ್‌ನ ಜನಕ’ ಎಂದು ಪ್ರಾಣ್‌ರನ್ನು ಅಭಿಮಾನದಿಂದ ಕರೆಯಬಹುದು. ಒಂದರ್ಥದಲ್ಲಿ ಈ ಚಾಚಾನ ವ್ಯಕ್ತಿತ್ವ ಪ್ರಾಣ್‌ ಅವರಿಗೆ ಹೊಂದುವಂತಹದ್ದು. ಭಾರತೀಯ ಕಾಮಿಕ್ಸ್‌ ವಲಯದಲ್ಲಿ ಪ್ರಾಣ್‌ ಅವರಿಗೆ ‘ಚಾಚಾ’ನ ಸ್ಥಾನ.
‘ಜನರನ್ನು ಅಳಿಸಿದಷ್ಟು ಸುಲಭವಾಗಿ ನಗಿಸಲು ಸಾಧ್ಯವಿಲ್ಲ. ಅದರಲ್ಲೂ ಪ್ರತಿದಿನವೂ ನಗಿಸುವುದು ಮತ್ತೂ ಸವಾಲಿನ ಸಂಗತಿ. ವರ್ಷದಿಂದ ವರ್ಷಕ್ಕೆ ನಗುವನ್ನು ಹಂಚಿಕೊಂಡು ಬರುವುದು ಮತ್ತೂ ಕಷ್ಟದ ಕೆಲಸ’ ಎಂದು ನಂಬಿದ್ದ ಪ್ರಾಣ್‌, ನಗೆ ಹಂಚುವ ಕೆಲಸವನ್ನು ದಶಕಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ್ದು ಅವರ ಬಹುದೊಡ್ಡ ಸಾಧನೆ. ಅಂದಹಾಗೆ, ಪ್ರಾಣ್‌ ಅವರ ತವರು ಈಗ ಪಾಕಿಸ್ತಾನದಲ್ಲಿರುವ ಕಸೂರ್‌ ಎನ್ನುವ ಪುಟ್ಟ ಪಟ್ಟಣ. ಭಾರತ–ಪಾಕಿಸ್ತಾನ ವಿಭಜನೆ ನಂತರ ಪ್ರಾಣ್‌ ಅವರ ಕುಟುಂಬ ಭಾರತದ ಗ್ವಾಲಿಯರ್‌ಗೆ ಬಂದು ನೆಲೆಸಿತು. ಪ್ರಾಣ್‌ ಅವರು ಮೊದಲಿಗೆ ಸ್ನಾತಕೋತ್ತರ ಪದವಿ ಪಡೆದುದು ರಾಜ್ಯಶಾಸ್ತ್ರ ವಿಷಯದಲ್ಲಿ. ಆನಂತರ ಮುಂಬಯಿಯ ‘ಜೆ.ಜೆ. ಸ್ಕೂಲ್‌ ಆಫ್‌ ಆರ್ಟ್ಸ್‌’ನಿಂದ ಪದವಿ ಪಡೆದರು.
ಕಾರ್ಟೂನ್‌ಗಳ ಬಗ್ಗೆ ಶಾಲಾ ದಿನಗಳಿಂದಲೇ ಪ್ರಾಣ್‌ ಅವರಿಗೆ ಒಲವಿತ್ತು. ಕಾಲೇಜ್‌ ಮ್ಯಾಗಜಿನ್‌ಗಳಲ್ಲಿ ಅವರ ಕೆಲವು ಕಾರ್ಟೂನ್‌ಗಳು ಪ್ರಕಟಗೊಂಡಿದ್ದವು. ಆದರೆ, ತಾನೊಬ್ಬ ವೃತ್ತಿಪರ ಕಾರ್ಟೂನಿಸ್ಟ್‌ ಆಗಬೇಕು ಎಂದವರು ಕನಸು ಕಂಡವರಲ್ಲ. ತನ್ನ ಓರಗೆಯ ಯುವಕರಂತೆ ಸುಭದ್ರವಾದ ಭವಿಷ್ಯವನ್ನು ಬಯಸಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಹುಶಃ, ಪ್ರಾಣ್‌ ಅವರಿಗೇ ತಿಳಿಯದಂತೆ ಅವರೊಳಗೊಬ್ಬ ಬಂಡುಕೋರ ಇರಬೇಕು. ಆ ಬಂಡುಕೋರ ಮನಸ್ಥಿತಿಯೇ ಕಾರ್ಟೂನ್‌ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಅವರಿಗನ್ನಿಸಲು ಕಾರಣವಾಗಿರಬೇಕು. ಆದರೆ, ಡೊಂಕು ರೇಖೆಗಳೊಂದಿಗಿನ ಸಖ್ಯದ ದಾರಿ ಸಲೀಸಾಗಿರಲಿಲ್ಲ. ‘ಕಾರ್ಟೂನ್‌ ರಚಿಸುವುದನ್ನೇ ನನ್ನ ವೃತ್ತಿಯಾಗಿಸಿಕೊಳ್ಳುತ್ತೇನೆ’ ಎಂದು ಪ್ರಾಣ್‌ ಹೇಳಿದಾಗ, ಮನೆ ಮಂದಿ ಬೆಚ್ಚಿಬಿದ್ದಿದ್ದರು. ಮಗ ಸರ್ಕಾರಿ ನೌಕರಿ ಹುಡುಕಿಕೊಂಡು ನೆಮ್ಮದಿಯಾಗಿರಲಿ ಎನ್ನುವುದು ಪೋಷಕರ ಹಂಬಲವಾಗಿತ್ತು.
ಕಾರ್ಟೂನಿಸ್ಟ್‌ ಆಗುವ ದಾರಿಯಲ್ಲಿ ಪ್ರಾಣ್‌ ಸಾಕಷ್ಟು ಸೈಕಲ್‌ ತುಳಿದರು. ಕಂಪ್ಯೂಟರ್‌ ಇಲ್ಲದ ದಿನಗಳಲ್ಲಿ, ಕಾಗದದ ಮೇಲೆ ಕಾಮಿಕ್ಸ್ ಸ್ಟ್ರಿಪ್‌ಗಳನ್ನು ರೂಪಿಸುವುದು ಹೆಚ್ಚು ಸಮಯ ಬೇಡುವ ಶ್ರಮದಾಯಕ ಕೆಲಸವಾಗಿತ್ತು. ಆದರೆ, ಈ ಕೆಲಸಕ್ಕೆ ದೊರೆಯುತ್ತಿದ್ದ ಸಂಭಾವನೆ ತೀರಾ ಕಡಿಮೆಯಿತ್ತು. ತಾವು ರಚಿಸಿದ ಕಾರ್ಟೂನ್‌ – ಕಾಮಿಕ್ಸ್‌ಗಳನ್ನು ಪತ್ರಿಕೆಗಳಿಗೆ ತಲುಪಿಸುವ ಕೆಲಸವನ್ನು ಆರಂಭದಲ್ಲಿ ಸ್ವತಃ ಪ್ರಾಣ್‌ ಅವರೇ ಮಾಡುತ್ತಿದ್ದರು. ಸೈಕಲ್‌ ತುಳಿದುಕೊಂಡು ಪತ್ರಿಕೆಯಿಂದ ಪತ್ರಿಕೆಗೆ ಅಲೆಯುತ್ತಿದ್ದ ಅವರ ಅನುಭವ ಚಿತ್ರಗಳನ್ನು ಕಾಮಿಕ್ಸ್‌ ಕಥನಗಳಲ್ಲೂ ಕಾಣಬಹುದು.
ಪ್ರಾಣ್‌ ಅವರ ವೃತ್ತಿಬದುಕು ಆರಂಭವಾದುದು 1960ರಲ್ಲಿ; ‘ಮಿಲಾಪ್‌’ ಎನ್ನುವ ಪತ್ರಿಕೆಯ ಮೂಲಕ. 1969ರಲ್ಲಿ ಅವರು ಚಾಚಾ ಚೌಧರಿ ಸೃಷ್ಟಿಸಿದರು. ಆರಂಭದಲ್ಲಿ ಅದು ಪ್ರಕಟಗೊಂಡಿದ್ದು ‘ಲಟಪಟ್‌’ ಎನ್ನುವ ಹಿಂದಿ ನಿಯತಕಾಲಿಕದಲ್ಲಿ. ಕಾರ್ಟೂನಿಸ್ಟ್‌ ಆಗಲು ಹೊರಟ ಪ್ರಾಣ್‌ ಅವರಿಗೆ ಎರಡು ಸಂಗತಿಗಳು ಸ್ಪಷ್ಟವಾಗಿದ್ದವು. ಆ ವೇಳೆಗಾಗಲೇ ಜನಪ್ರಿಯರಾಗಿದ್ದ ಕಾರ್ಟೂನಿಗರಂತೆ ತಾನು ಕೂಡ ರಾಜಕಾರಣ ಅಥವಾ ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿ ಚಿತ್ರ ರಚಿಸಬಾರದು ಎನ್ನುವುದು ಮೊದಲ ಸಂಗತಿ. ಈ ನಿಟ್ಟಿನಲ್ಲಿ ಅವರು ಆರಿಸಿಕೊಂಡಿದ್ದು ನಗಿಸುವ ದಾರಿಯನ್ನು. ಎರಡನೆಯ ನಿರ್ಧಾರ, ಅಪ್ಪಟ ಭಾರತೀಯ ಸಂವೇದನೆಯನ್ನೇ ತನ್ನ ಚಿತ್ರಗಳು ಹೊಂದಿರಬೇಕು ಎನ್ನುವುದು.
ಭಾರತೀಯ ಸಂವೇದನೆಯನ್ನು ಕಾಮಿಕ್ಸ್‌ಗಳಲ್ಲಿ ಅಭಿವ್ಯಕ್ತಿಸುವ ನಿಟ್ಟಿನಲ್ಲಿ ಪ್ರಾಣ್‌ ಆರಿಸಿಕೊಂಡ ದಾರಿ ಕುತೂಹಲಕರವಾದುದು. ಅವರ ಮುಂದೆ ಸುಲಭಕ್ಕೆ ದೊರೆಯುವ ಪುರಾಣದ ಪಾತ್ರಗಳು ಸಾಕಷ್ಟಿದ್ದವು. ಆದರೆ, ಪ್ರಾಣ್‌ ಜನಸಾಮಾನ್ಯರ ಬದುಕುಗಳಿಂದಲೇ ತಮ್ಮ ಪಾತ್ರಗಳನ್ನು ಹೆಕ್ಕಿಕೊಂಡರು. ಕಂಪ್ಯೂಟರ್‌ಗಿಂತಲೂ ವೇಗವಾಗಿ ಯೋಚಿಸಬಲ್ಲ, ಕಾರ್ಯ ನಿರ್ವಹಿಸಬಲ್ಲ ಚಾಚಾ ಚೌಧರಿಯನ್ನೇ ನೋಡಿ; ಈ ಅಂಕಲ್‌ ಇತರ ಸೂಪರ್‌ ಹೀರೊಗಳಂತೆ ಚೆಲುವ ಚೆನ್ನಿಗನಲ್ಲ; ಮನೆಯ ಹಿರೀಕನನ್ನು ಹೋಲುವ ಚಾಚಾನಿಗೆ ಬುದ್ಧಿಶಕ್ತಿ ಮತ್ತು ಸಮಯಸ್ಫೂರ್ತಿಯೇ ಪ್ರಮುಖ ಶಕ್ತಿ. ಚೌಧರಿಗಿಂತಲೂ ಮೊದಲು ರೂಪುಗೊಂಡ ಶ್ರೀಮತಿ ಕೂಡ ನಮ್ಮ ನಡುವಿನ ಗೃಹಿಣಿಯರನ್ನು ಹೋಲುವಂತಹ ಹೆಣ್ಣುಮಗಳೇ. ಪಿಂಕಿ, ಬಿಲ್ಲೂ, ರಾಮನ್‌, ಪುಟ್ಟಿ– ಇವರೆಲ್ಲ ನಮ್ಮ ಬಾಲ್ಯದ ಗೆಳೆಯರು ಎನ್ನುವಂತಾಗಿರುವುದು ಪ್ರಾಣ್‌ ಅವರ ಕಾಮಿಕ್ಸ್‌ಗಳ ಜೀವಂತಿಕೆಗೆ ಉದಾಹರಣೆ.
ಅಂದಹಾಗೆ, ಅಷ್ಟೊಂದು ಐಡಿಯಾಗಳು ಪ್ರಾಣ್ ಅವರಿಗೆ ಬರುತ್ತಿದ್ದುದಾದರೂ ಹೇಗೆ? ಬೆಳಿಗ್ಗೆ 5.30ರ ವೇಳೆಗೆ ಅವರ ವಾಯುವಿಹಾರ ಶುರುವಾಗುತ್ತಿತ್ತು, ಈ ನಡಿಗೆಯ ಸಮಯದಲ್ಲೇ ಹೊಸ ಹೊಸ ಐಡಿಯಾಗಳು ಹೊಳೆಯುತ್ತಿದ್ದವಂತೆ. ಮನೆಗೆ ಮರಳಿದವರು ಕಿರು ಉಪಹಾರ ಮುಗಿಸಿದರೆಂದರೆ, ಕಾಗದದ ಮೇಲೆ ಐಡಿಯಾಗಳು ಜೀವತಾಳುತ್ತಿದ್ದವು. ಹೊಸ ಜಗತ್ತಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವುದು ಅವರ ಕಾಮಿಕ್ಸ್‌ಗಳ ಜನಪ್ರಿಯತೆಗೆ ಕಾರಣವೊಂದಾಗಿತ್ತು. ಆ ಕಾರಣದಿಂದಲೇ ಕಂಪ್ಯೂಟರ್‌, ಮೊಬೈಲ್‌ ಫೋನ್‌, ಫೇಸ್‌ಬುಕ್‌ಗಳು ಕೂಡ ಅವರ ಕಾಮಿಕ್ಸ್‌ ಕಥನಗಳ ಭಾಗವಾದುದು ಹಾಗೂ ಅವರು ಇಂದಿನ ಮಕ್ಕಳಿಗೂ ಪರಿಚಿತರಾಗಿರುವುದು ಸಾಧ್ಯವಾಗಿದೆ.
‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಟೂನಿಸ್ಟ್ಸ್‌’ ಬಳಗದಿಂದ ಜೀವಮಾನದ ಸಾಧನೆಗೆ ಪ್ರಶಸ್ತಿ, ಲಿಮ್ಕಾ ದಾಖಲೆ ಪುಸ್ತಕದ ಗೌರವ ಸೇರಿದಂತೆ ಅನೇಕ ಗೌರವಗಳು ಪ್ರಾಣ್‌ ಅವರಿಗೆ ಸಂದಿವೆ. ಆದರೆ, ಅವರಿಗೆ ಸಂದ ಬಹುದೊಡ್ಡ ಗೌರವ– ಬಹುತೇಕ ಪ್ರಮುಖ ಭಾರತೀಯ ಪತ್ರಿಕೆಗಳು ಪ್ರಾಣ್‌ ಅವರ ಕಾಮಿಕ್ಸ್‌ಗಳನ್ನು ಬಳಸಿಕೊಂಡಿರುವುದು. 600ಕ್ಕೂ ಹೆಚ್ಚು ಕಾಮಿಕ್ಸ್‌ ಪುಸ್ತಕಗಳು ಅವರ ಹೆಸರಿನಲ್ಲಿವೆ. ಆಹ್ವಾನಿತರಾಗಿ ಅನೇಕ ದೇಶಗಳನ್ನು ಸುತ್ತಿ, ಉಪನ್ಯಾಸಗಳನ್ನು ನೀಡಿದ್ದರು.
ವಯೋ ಸಹಜ ದಣಿವಿನಿಂದಾಗಿ ಈಚಿನ ವರ್ಷಗಳಲ್ಲಿ ಪ್ರಾಣ್‌ ಅವರು ಸಹಾಯಕರ ನೆರವಿನಿಂದ ಕಾಮಿಕ್ಸ್‌ಗಳನ್ನು ರಚಿಸುತ್ತಿದ್ದರು. ಅವರು ಕರಡು ರಚಿಸಿ ಕೊಟ್ಟರೆ, ಸಹಾಯಕರು ಬಣ್ಣ ತುಂಬುತ್ತಿದ್ದರು. ಕಾರ್ಟೂನಿಸ್ಟ್‌ ಆಗುತ್ತೇನೆ ಎಂದು ಹೇಳಿಕೊಂಡಾಗ ಅಣಕವಾಡಿದ ಬಂಧುಮಿತ್ರರು, ನಂತರದ ದಿನಗಳಲ್ಲಿ ತಮ್ಮೊಂದಿಗೆ ಹೆಮ್ಮೆಯಿಂದ ಗುರ್ತಿಸಿಕೊಂಡಿದ್ದು ಕೂಡ ಅವರಿಗೆ ಖುಷಿಕೊಟ್ಟಿತ್ತು. ‘ಕಾರ್ಟೂನ್‌ಗಳನ್ನು, ಕಾರ್ಟೂನಿಸ್ಟ್‌ರನ್ನು ಮುಂದಿನ ತಲೆಮಾರಿಗೂ ಉಳಿಸುವ ಮ್ಯೂಸಿಯಂ ದೇಶದಲ್ಲಿ ಆರಂಭಗೊಳ್ಳ ಬೇಕು’ ಎನ್ನುವುದು ಅವರ ಕನಸುಗಳಲ್ಲೊಂದಾಗಿತ್ತು.
ಜನಸಾಮಾನ್ಯರ ಮುಖದಲ್ಲಿ ಕಿರುನಗೆಯನ್ನು ಮೂಡಿಸುವುದು ತಮ್ಮ ಬದುಕಿನ ಸಾರ್ಥಕತೆಯೆಂದು ನಂಬಿದ್ದ ಪ್ರಾಣ್‌, ಕಾಮಿಕ್ಸ್‌ ರಚಿಸುವುದು ಯಾವಾಗ ಸಾಧ್ಯವಾಗುವುದಿಲ್ಲವೋ ಅದು ತಮ್ಮ ಪಾಲಿಗೆ ಸಾವು ಎಂದು ಹೇಳಿದ್ದರು. ಕಾಮಿಕ್ಸ್‌ಗಳ ಮೂಲಕ ಜೀವಂತವಾಗಿ ಉಳಿಯುವ ಅವರ ಮಾತಿನ ಧ್ವನಿಯನ್ನು ಹಿಡಿಯುವುದಾದರೆ, ‘ಚಾಚಾ ಚೌಧರಿ’, ‘ಶ್ರೀಮತಿ’, ‘ರಾಮನ್‌’ ಪಾತ್ರಗಳಂತೆ ಪ್ರಾಣ್‌ ಅವರು ಕೂಡ ಚಿರಾಯು.

ದಮನಿತರ ದನಿ ನಾದಿನ್‌ ಗಾರ್ಡಿಮರ್‌                        



‘ಅಧಿಕಾರದ ವಿಷಯ ಬಂದಾಗ ತಾಯಿಯ ಗರ್ಭದ ಹೊರಗಿರುವ ಯಾರೊಬ್ಬರೂ ಮುಗ್ಧರಲ್ಲ ಎಂಬುದು ನನಗೆ ಅರ್ಥವಾಗಿದೆ’
ಅಧಿಕಾರದ ಮದ ಹಾಗೂ ಅದು ಹುಟ್ಟುಹಾಕುವ ಭ್ರಷ್ಟಾಚಾರದ ಕುರಿತು ದಕ್ಷಿಣ ಆಫ್ರಿಕಾದ ಸಾಹಿತಿ, ವರ್ಣಭೇದ ನೀತಿಯ ಕಡು ವಿರೋಧಿ, ನೊಬೆಲ್‌ ಪುರಸ್ಕೃತೆ ನಾದಿನ್‌ ಗಾರ್ಡಿಮರ್ ಹೇಳಿರುವ ಮಾತು ಇದು.
ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ನಡೆದ ಹೋರಾಟದ ಭಾಗವೇ ಆಗಿರುವ ನಾದಿನ್‌ ಗಾರ್ಡಿಮರ್, ತುಂಬು ಜೀವನ ನಡೆಸಿ 90ರ ಇಳಿವಯಸ್ಸಿನಲ್ಲಿ ನಿಧನರಾದಾಗ (ಜುಲೈ 13) ಜನಾಂಗೀಯ ತಾರತಮ್ಯದ ವಿರುದ್ಧ ಕೂಗೆತ್ತಿದ್ದ ದೊಡ್ಡ ದೀಪವೊಂದು ನಂದಿಹೋದಂತೆ ಭಾಸವಾಯಿತು.
15 ಕಾದಂಬರಿಗಳು, 21ಕ್ಕೂ ಹೆಚ್ಚು ಕಥಾ ಸಂಕಲನಗಳು, ಹಲವು ಪ್ರಬಂಧಗಳು, ಕೃತಿಗಳನ್ನು ಸಂಪಾದಿಸಿರುವ ನಾದಿನ್‌ ಅವರನ್ನು ಸಾಹಿತಿಗಿಂತ ಹೆಚ್ಚಾಗಿ ಹೋರಾಟಗಾರ್ತಿಯಾಗಿಯೇ ಜಗತ್ತು ಗುರುತಿಸುತ್ತದೆ.
ತಮ್ಮ ಸಮಕಾಲೀನರಾಗಿದ್ದ ದಕ್ಷಿಣ ಆಫ್ರಿಕಾ ಗಾಂಧಿ ನೆಲ್ಸನ್‌ ಮಂಡೇಲಾ ಅವರನ್ನು ನಾದಿನ್‌ ಬಹುವಾಗಿಯೇ  ಪ್ರಭಾವಿಸಿದ್ದರು.
ವರ್ಣಭೇದ ನೀತಿಯಿಂದ ಶೋಷಣೆಗೆ ಒಳಗಾಗಿದ್ದ ಕಪ್ಪುಜನರ ಬಗ್ಗೆ ನಾದಿನ್‌ ಬರೆದಿದ್ದ ಹಲವು ಪುಸ್ತಕಗಳನ್ನು ಬಿಳಿಯರ ಸರ್ಕಾರ ನಿಷೇಧಕ್ಕೆ ಒಳಪಡಿಸಿತ್ತು.
ಮಂಡೇಲಾ ಜೈಲಿನಲ್ಲಿದ್ದಾಗ ಇದೇ ಪುಸ್ತಕಗಳು ಅವರಿಗೆ ಸ್ಫೂರ್ತಿಯಾಗಿದ್ದವು. ಜೈಲಿನಲ್ಲಿದ್ದಾಗ ಮಂಡೇಲಾ ಬರೆದಿದ್ದ ಲೇಖನಗಳನ್ನು ಲಂಡನ್‌ನಲ್ಲಿ ಗುಟ್ಟಾಗಿ ಪ್ರಕಟಿಸುವಲ್ಲಿ ಸಹ ನಾದಿನ್‌ ಪಾತ್ರವಿತ್ತು.1990ರಲ್ಲಿ ನೆಲ್ಸನ್‌ ಮಂಡೇಲಾ ಜೈಲಿನಿಂದ ಹೊರಬಂದಾಗ ಮೊದಲು ಭೇಟಿಯಾಗಬಯಸಿದ ವ್ಯಕ್ತಿಗಳಲ್ಲಿ ನಾದಿನ್‌ ಸಹ ಒಬ್ಬರಾಗಿದ್ದರು.
ಖಾಸಗಿ ಬದುಕು
ನಾದಿನ್‌ ಮೂಲತಃ ಯುರೋಪ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಬಂದ ಯಹೂದಿ ಕುಟುಂಬಕ್ಕೆ ಸೇರಿದವರು. ಆಕೆಯ ತಂದೆ ಇಸಿಡೊರ್‌ ಗಾರ್ಡಿಮರ್‌ ವೃತ್ತಿಯಲ್ಲಿ ಕೈಗಡಿಯಾರ ತಯಾರಕರು. ರಷ್ಯಾದ ಝಾರ್‌ ದೊರೆಗಳ ಹಿಡಿತದಲ್ಲಿದ್ದ ಈಗಿನ ಲಿಥುವೇನಿಯಾಕ್ಕೆ ಸೇರಿದವರು. ತಾಯಿ ಹನ್ನಾ ಲಂಡನ್‌ನವರು.
ನಾದಿನ್‌ ಹುಟ್ಟಿದ್ದು ಟ್ರಾನ್ಸ್‌ವಾಲ್‌ ಸಮೀಪದ ಗಣಿಗಳ ಪಟ್ಟಣ ಸ್ಪ್ರಿಂಗ್ಸ್‌ನಲ್ಲಿ. ಸ್ವತಃ ನಿರಾಶ್ರಿತರಾದರೂ ಆಕೆಯ ತಂದೆಗೆ ಕಪ್ಪುಜನರ ಸಂಕಷ್ಟಗಳ ಬಗ್ಗೆ ಸಹಾನುಭೂತಿ ಇರಲಿಲ್ಲ. ಆದರೆ, ಕಪ್ಪುಜನರ ಬಡತನ ಹಾಗೂ ಅವರ ಶೋಷಿತ ಜೀವನವನ್ನು ಹತ್ತಿರದಿಂದ ಕಂಡ ಅಮ್ಮ ಹನ್ನಾ,  ಕಪ್ಪುಜನರ ಮಕ್ಕಳಿಗಾಗಿ ಬಾಲವಾಡಿಯೊಂದನ್ನು ತೆರೆದಿದ್ದರು.
ಒಮ್ಮೆ ಇವರ ಮನೆಕೆಲಸದವರ (ಕರಿಯರು) ಕೊಠಡಿಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು, ಅವರ ಪತ್ರಗಳು, ದಿನಚರಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಎದ್ದುಕಾಣುತ್ತಿದ್ದ ಜನಾಂಗೀಯ ತಾರತಮ್ಯ ಹಾಗೂ ಆರ್ಥಿಕ ಅಸಮಾನತೆಯ ಬಗ್ಗೆ ಪುಟ್ಟ ನಾದಿನ್‌ಗೆ ನಿಧಾನಕ್ಕೆ ಅರಿವಾಗತೊಡಗಿತ್ತು. ನಾದಿನ್‌ ಅಮ್ಮ ಹನ್ನಾಗೆ ತನ್ನ ಮಗಳು ದೈಹಿಕವಾಗಿ ದುರ್ಬಲಳು ಎಂಬ ಭಾವನೆಯಿತ್ತು. ಜ್ವರ ಬಂದ ಕಾರಣಕ್ಕೆ ಶಾಲೆಯಿಂದ ಬಿಡಿಸಿಬಿಟ್ಟರು. ಮನೆಪಾಠದ ಮೂಲಕ ಓದು ಮುಂದುವರಿಸಬೇಕಾಯಿತು.
ಬಾಲ್ಯಸಹಜ ಚಟುವಟಿಕೆಯಿಂದ ದೂರವಿದ್ದ ಏಕಾಂಗಿ ನಾದಿನ್‌, ಪುಸ್ತಕಗಳ ನಂಟು ಬೆಳೆಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಭಾವನೆಗಳನ್ನು ಬರಹದಲ್ಲಿ ಇಳಿಸತೊಡಗಿದರು. 1937ರಲ್ಲಿ ಇನ್ನೂ 14 ವರ್ಷದವರಿದ್ದಾಗ ಅವರ ಮೊದಲ ಕಥೆ  (ಮಕ್ಕಳ ಕಥೆ) ಪ್ರಕಟವಾಯಿತು.
ಪದವಿ ಪೂರೈಸದೇ ವಿಶ್ವವಿದ್ಯಾಲಯದಿಂದ ಹೊರಬಿದ್ದ ನಾದಿನ್‌ 1948ರಲ್ಲಿ ಸ್ಪ್ರಿಂಗ್ಸ್‌ನಿಂದ ಜೋಹಾನ್ಸ್‌ಬರ್ಗ್‌ಗೆ ಸ್ಥಳಾಂತರಗೊಂಡರು. ಬೋಧನಾ ಕಾರ್ಯದಲ್ಲಿ ತೊಡಗಿಕೊಂಡು ಬರಹ ಕೃಷಿ ಮುಂದುವರಿಸಿದರು. ಅಲ್ಲಿಂದ ಮುಂದೆ ಜೋಹಾನ್ಸ್‌ಬರ್ಗ್‌ ಅವರ ಕರ್ಮಭೂಮಿಯಾಯಿತು.
1949ರಲ್ಲಿ ಸ್ಥಳೀಯ ದಂತವೈದ್ಯ ಗೆರಾಲ್ಡ್‌ ಗಾವ್ರನ್‌ ಅವರನ್ನು ನಾದಿನ್‌ ವರಿಸಿದರು. 1950ರಲ್ಲಿ ಈ ದಂಪತಿಗೆ ಒರಿಯನ್‌ ಎಂಬ ಪುತ್ರಿಯೂ ಜನಿಸಿದಳು. ಆದರೆ, ಬಹುಕಾಲ ಬಾಳದ ಈ ದಾಂಪತ್ಯ ಮೂರು ವರ್ಷದೊಳಗೆ ವಿಚ್ಛೇದನದಲ್ಲಿ ಅಂತ್ಯವಾಯಿತು.
1954ರಲ್ಲಿ ಕಲಾಕೃತಿಗಳ ಡೀಲರ್‌ ಆಗಿದ್ದ ರೇನ್‌ಹೋಲ್ಡ್‌ ಕ್ಯಾಸಿರರ್‌ ಎಂಬ ಗಣ್ಯ ವ್ಯಕ್ತಿಯನ್ನು ನಾದಿನ್‌ ಮದುವೆಯಾದರು. 2001ರಲ್ಲಿ ವೃದ್ಧಾಪ್ಯ ಸಂಬಂಧಿ ಕಾಯಿಲೆಯಿಂದ ಕ್ಯಾಸಿರರ್‌ ನಿಧನರಾಗುವವರೆಗೆ ಪ್ರೀತಿ ತುಂಬಿದ ತುಂಬು ದಾಂಪತ್ಯವನ್ನು ನಾದಿನ್‌ ಅನುಭವಿಸಿದರು. 1955ರಲ್ಲಿ ಈ ದಂಪತಿಗೆ ಜನಿಸಿದ್ದ ಹ್ಯೂಗೊ ನ್ಯೂಯಾರ್ಕ್‌ನಲ್ಲಿ ಚಿತ್ರ ನಿರ್ಮಾಪಕರಾಗಿದ್ದಾರೆ.
ಹೋರಾಟದ ಹಾದಿ
1960ರಲ್ಲಿ ಟ್ರಾನ್ಸ್‌ವಾಲ್‌ ಸಮೀಪದ ಶಾರ್ಪ್‌ವಿಲ್ಲೆಯಲ್ಲಿ ಸರ್ಕಾರದ ಕರಾಳ ಕಾನೂನಿನ ವಿರುದ್ಧದ ಪ್ರತಿಭಟಿಸುತ್ತಿದ್ದ 5000ಕ್ಕೂ ಹೆಚ್ಚು ಕರಿಯರ ಮೇಲೆ ಪೊಲೀಸರು ಗೋಲಿಬಾರ್‌ ನಡೆಸಿದರು. ಈ ಹತ್ಯಾಕಾಂಡದಲ್ಲಿ 69 ಜನ ಮುಗ್ಧರು ಪ್ರಾಣ ಕಳೆದುಕೊಂಡರು. ಲೇಖಕಿ ನಾದಿನ್‌ ಹೋರಾಟಗಾರ್ತಿ ಯಾಗಿ ರೂಪಾಂತರಗೊಳ್ಳಲು ಈ ಘಟನೆ ಪ್ರೇರಣೆಯಾಯಿತು.
ಸ್ಥಳೀಯ ಕಪ್ಪುಜನರ ನೋವು ಅವರ ಬರಹಗಳಲ್ಲಿ ಕಾಣತೊಡಗಿತು. ಪರಿಣಾಮ, ಅವರ ‘ದಿ ಲೇಟ್‌ ಬೂರ್ಜ್ವಾಸ್‌ ವರ್ಲ್ಡ್‌’, ‘ಅ ವರ್ಲ್ಡ್‌ ಆಫ್‌ ಸ್ಟ್ರೆಂಜರ್ಸ್‌’, ‘ಬರ್ಗರ್ಸ್‌ ಡಾಟರ್‌’ ಮತ್ತು ‘ಜುಲೈಸ್‌ ಪೀಪಲ್‌’ ಕೃತಿಗಳ ಮೇಲೆ ದಕ್ಷಿಣ ಆಫ್ರಿಕಾ ಸರ್ಕಾರ ನಿಷೇಧ ಹೇರಿತ್ತು.
ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಅಕ್ರಮ ಸಂಘಟನೆ ಎಂದು ಸರ್ಕಾರ ಘೋಷಿಸಿದ್ದರೂ ಅದರ ಸಕ್ರಿಯ ಸದಸ್ಯೆಯಾಗಿ ಅದು ಏರ್ಪಡಿಸುವ ಪ್ರತಿಭಟನೆಗಳಲ್ಲಿ ನಾದಿನ್‌ ಸದಾ ಭಾಗಿಯಾಗುತ್ತಿದ್ದರು. 
ವರ್ಣಭೇದ ನೀತಿಯ ವಿರುದ್ಧ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾ ಸರ್ಕಾರ ಮಾಧ್ಯಮಗಳ ಮೇಲೆ, ಕಲಾ ಪ್ರದರ್ಶನಗಳ ಮೇಲೆ, ಸಾಹಿತ್ಯ ಚಟುವಟಿಕೆಗಳ ಮೇಲೆ ಹೇರಿದ್ದ ನಿರ್ಬಂಧಗಳನ್ನು ಪ್ರಶ್ನಿಸತೊಡಗಿದರು. ಜಾಗತಿಕ ವೇದಿಕೆಗಳಲ್ಲಿ ದಕ್ಷಿಣ ಆಫ್ರಿಕಾದ ಕರಾಳ ರಾಜಕೀಯ ಸನ್ನಿವೇಶದ ಚಿತ್ರಣ ನೀಡತೊಡಗಿದರು.
ಇತ್ತೀಚಿನ ವರ್ಷಗಳಲ್ಲಿ ಪ್ರಜಾಸತ್ತಾತ್ಮಕ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದರು. ಎಚ್‌ಐವಿ/ಏಡ್ಸ್‌ ಅಭಿಯಾನದಲ್ಲೂ ತೊಡಗಿಕೊಂಡಿದ್ದರು.
1974ರಲ್ಲಿ ಅವರ ‘ದಿ ಕನ್ಸರ್ವೇಷನಿಸ್ಟ್‌’ ಕೃತಿಗೆ ಬೂಕರ್‌ ಪ್ರಶಸ್ತಿ ಬಂತು. 1991ರಲ್ಲಿ ನೊಬೆಲ್‌ ಪ್ರಶಸ್ತಿ ಅರಸಿಕೊಂಡು ಬಂತು. ನೊಬೆಲ್‌ ಪ್ರಶಸ್ತಿ ನೀಡುವಾಗ ತಮ್ಮ ಉತ್ಕೃಷ್ಟ ಸಾಹಿತ್ಯದಿಂದ ಮಾನವ ಕುಲಕ್ಕೆ ಬಹುದೊಡ್ಡ ಉಪಕಾರ ಮಾಡಿದ ಮಹಿಳೆ ಎಂದು ಅವರನ್ನು ಬಣ್ಣಿಸಲಾಗಿತ್ತು. ನಾದಿನ್ ಗಾರ್ಡಿಮರ್‌ ವಿಚಾರದಲ್ಲಿ ಈ ಹೇಳಿಕೆ  ಉತ್ಪ್ರೇಕ್ಷೆಯೇನೂ ಅಲ್ಲ.
ವ್ಯಕ್ತಿ

ಮಲೆನಾಡ ಬೇರಿನ ವಿಜ್ಞಾನದ ಬನಿ ಬಿ.ಎನ್‌.­ಸುರೇಶ್‌





ಮಲೆನಾಡಿನ ಹಳ್ಳಿಯೊಂದರ ಜಡಿ ಮಳೆ­ಯಲ್ಲಿ ತೋಯುತ್ತ, ಕನ್ನಡ ಶಾಲೆಗೆ ಹೋಗುತ್ತಿದ್ದ ಹುಡುಗ ಚಾಪೆಯ ಮೇಲೆ ಕುಳಿತು ಪಾಠ ಕೇಳು­ತ್ತಿದ್ದ. ಭವಿಷ್ಯದಲ್ಲಿ ತಾನೊಬ್ಬ ಉನ್ನತ ವ್ಯಕ್ತಿಯಾಗುವ ಬಗ್ಗೆಯಾಗಲೀ, ತನ್ನ ಹಳ್ಳಿಯ ಮನೆಗೆ ಮಾಜಿ ರಾಷ್ಟ್ರಪತಿ­ಯೊ­ಬ್ಬರು ಭೇಟಿ ನೀಡುತ್ತಾರೆ ಎಂದಾಗಲೀ ಆಗ ಊಹಿಸಿಯೇ ಇರಲಿಲ್ಲ.
ಕಾಫಿ, ಅಡಿಕೆ, ಬಾಳೆ ತೋಟಗಳಲ್ಲಿ ಅಪ್ಪ, ದೊಡ್ಡಪ್ಪನೊಂದಿಗೆ ಓಡಾಡಿ­ಕೊಂಡಿದ್ದ ಲವಲವಿಕೆಯ ಹುಡುಗ ಇಂದು ಅಂತರಿಕ್ಷಯಾನ ವಿಜ್ಞಾನದಲ್ಲಿ (ಏರೊಸ್ಪೇಸ್‌ ಸೈನ್ಸ್‌) ದೊಡ್ಡ ಹೆಸರು ಮಾಡಿದ್ದು ರೋಚಕ ತಿರುವುಗಳಿರುವ ಕಥೆಯಂತಿದೆ. ಬೆಂಗಳೂರಿನ ಇಸ್ರೊ ಪ್ರಧಾನ ಕಚೇರಿಯಲ್ಲಿ ‘ವಿಕ್ರಮ್‌ ಸಾರಾಭಾಯ್‌ ಪೀಠ’ದ ಪ್ರಾಧ್ಯಾಪಕರಾಗಿರುವ ಡಾ. ಬೈರಣ್ಣ ನಾಗಪ್ಪ ಸುರೇಶ್‌ (ಬಿ.ಎನ್‌.­ಸುರೇಶ್‌) ಅವರ ಬಗ್ಗೆ ಹೇಳುತ್ತಾ ಹೋದರೆ ಬಗೆ ತೆರೆದ ಬಾನಿನಂತೆ ಅನೇಕ ಆಸಕ್ತಿಕರ ಸಂಗತಿಗಳು ಅನಾವರಣ­ಗೊಳ್ಳುತ್ತಾ ಹೋಗುತ್ತವೆ.
‘2009ರ ಫೆಬ್ರುವರಿಯಲ್ಲಿ ನಡೆದ ಘಟನೆ ಅದು. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹಳ್ಳೀಲಿರೋ ನನ್ನ  ಮನೆಗೆ ಬರಬೇಕೆಂದು ತುದಿಗಾಲ ಮೇಲೆ ನಿಂತಿದ್ದರು. ಭದ್ರತೆ ಒದಗಿಸು­ವುದು ಹೇಗಪ್ಪಾ ಎನ್ನುವ ಚಿಂತೆ ಪೊಲೀಸರಿಗೆ. ಎಷ್ಟು ಹೇಳಿದರೂ ಕಲಾಂ ಪಟ್ಟು ಬಿಡ­ಲಿಲ್ಲ. ನಾನು ನಿಮ್ಮ ಮನೆ ನೋಡ­ಲೇಬೇಕು ಎಂದು ಮಗುವಿನಂತೆ ಹಟ ಹಿಡಿದರು. ಆಗ ನೋಡಬೇಕಿತ್ತು ನಮ್ಮೂರ ಬೀದಿಯನ್ನು.  ಪ್ರತಿ ನೂರು ಮೀಟರ್‌ಗೆ ಒಬ್ಬೊಬ್ಬರು ಪೊಲೀಸರು.
ಮನೆಯ ಸುತ್ತಲೂ ಪೊಲೀಸರೇ ಪೊಲೀ­ಸರು. ಅಂತೂ ಕಲಾಂ ನಮ್ಮ ಮನೆಗೆ ಬಂದರು. ಒಂದು ತಾಸು ಇದ್ದರು. ಮನೆ­ಮಂದಿಯ ಜತೆಗೆ ಫೋಟೊ ತೆಗೆಸಿ­ಕೊಂಡರು. ಟೀ ಕುಡಿದು ಹೋದರು’– ಹೀಗೆ ಹಳೆಯ ನೆನಪುಗಳ ಬುತ್ತಿ ಬಿಚ್ಚುತ್ತ ಹೋದರು ಸುರೇಶ್‌. ಇತ್ತೀಚೆಗೆ ಇಸ್ರೊ, ಐದು ವಿದೇಶಿ ಉಪ­ಗ್ರಹ­ಗಳನ್ನು ಉಡಾವಣೆ ಮಾಡಿ ಮತ್ತೊಂದು ದಾಖಲೆ ಬರೆಯಿತು.  ಈ ಉಪ­ಗ್ರಹಗಳ ಉಡಾವಣಾ ವಾಹಕ­ವನ್ನು ಅಭಿವೃದ್ಧಿಪಡಿಸಿದ್ದು (ಪಿಎಸ್‌­ಎಲ್‌ವಿ–ಸಿ 23) ಇದೇ ಸುರೇಶ್‌ ಅವರ ನೇತೃತ್ವದಲ್ಲಿ. 
ಸಾಮಾನ್ಯವಾಗಿ ಉಪಗ್ರಹ ಉಡಾ­ವಣೆ ವೇಳೆ ಒಳಗಡೆ ಇದ್ದುಕೊಂಡು ನಿಗಾ ಇಡುತ್ತಿದ್ದ ಅವರು ಅಂದು ಮಾತ್ರ ಪ್ರಧಾನಿ ನರೇಂದ್ರ ಮೋದಿ ಜತೆ ಹೊರಗೆ ಬಂದು ರಾಕೆಟ್‌ ನಭಕ್ಕೆ ನೆಗೆದ ಭವ್ಯ ದೃಶ್ಯವನ್ನು ಕಣ್ತುಂಬಿಕೊಂಡರು. ‘ಇದು ನನ್ನ ಮಟ್ಟಿಗೆ ವಿಶೇಷ ಅನುಭವ.  ಪ್ರತಿ ಉಡಾವಣೆಯಲ್ಲೂ ಆತಂಕ ಇದ್ದದ್ದೇ. ಒಂದೊಂದು ನಿಮಿಷವೂ ವರ್ಷವಿದ್ದಂತೆ. ಎಲ್ಲಿ ಏನು ಬೇಕಾದರೂ ಆಗಬಹುದಲ್ಲ-’ ಎನ್ನುತ್ತ ರಾಕೆಟ್‌ ಸೈನ್ಸ್‌ನ ಸಂಕೀರ್ಣತೆಯನ್ನು ಮನವರಿಕೆ ಮಾಡಿಕೊಡುತ್ತಾರೆ.
ಬಾಲ್ಯ, ಶಿಕ್ಷಣ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೊಸಕೆರೆ –ಅಂದಗಾರು ಗ್ರಾಮದ ಕೃಷಿಕ ಕುಟುಂಬದಲ್ಲಿ 1943ರ ನವೆಂಬರ್‌ 12ರಂದು ಸುರೇಶ್ ಹುಟ್ಟಿದ್ದು.  ಬಿ.ನಾಗಪ್ಪ, ಶಾರದಮ್ಮ ದಂಪತಿಗೆ ಇವರೇ ಹಿರಿಯ ಮಗ. ಮೂವರು ಸಹೋದರರು ಮತ್ತು ಮೂವರು ಸಹೋದರಿಯರು. ಒಟ್ಟು ಏಳು ಜನ ಮಕ್ಕಳು. ಎಲ್ಲರೂ ಸಾಕಷ್ಟು ಓದಿಕೊಂಡವರು. ನಾಗಪ್ಪನ­ವರಿಗೆ ತಮ್ಮ ಪುತ್ರ ಸುರೇಶ್ ಎಂಜಿನಿಯರ್‌್ ಆಗಬೇಕೆನ್ನುವ ಹಟ ಇತ್ತು.
ನಾಲ್ಕನೇ ತರಗತಿವರೆಗೆ ಕಲಿತದ್ದು ಅಂದಗಾರಿನ ಕನ್ನಡ ಶಾಲೆಯಲ್ಲಿ. ಅಲ್ಲಿಂದ ಮುಂದೆ ಎಸ್ಸೆಸ್ಸೆಲ್ಸಿವರೆಗೆ ಕೊಪ್ಪದಲ್ಲಿ ಓದು ಸಾಗಿತು. ಪಿಯುಸಿ ಮುಗಿಸಿದ್ದು ಶಿವಮೊಗ್ಗದಲ್ಲಿ (ಈಗಿನ ಸಹ್ಯಾದ್ರಿ ಕಾಲೇಜು). ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಹಾಗೂ ಬಿ.ಇ ಪದವಿ ಗಳಿಸಿದ ಅವರು 1969ರಲ್ಲಿ ಮದ್ರಾಸ್‌ನ ಐಐಟಿಯಲ್ಲಿ ಎಂ.ಟೆಕ್‌ ಮಾಡಿದರು. ಬಳಿಕ ತಿರುವನಂತ­ಪುರದ ವಿಕ್ರಮ್‌ ಸಾರಾ­ಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್‌ಎಸ್‌ಸಿ) ವೃತ್ತಿ ಬದುಕು ಆರಂಭವಾಯಿತು.
2003ರಿಂದ 2007ರ ನವೆಂಬರ್‌­ವರೆಗೆ  ವಿಎಸ್‌ಎಸ್‌ಸಿ ನಿರ್ದೇಶಕ­ರಾಗಿ­ದ್ದಾಗ ಹಲವಾರು ಪ್ರಮುಖ ಪ್ರಾಜೆಕ್ಟ್‌­ಗಳ ಹೊಣೆಗಾರಿಕೆಯನ್ನು ನಿಭಾಯಿ­ಸಿದ್ದರು. ಬ್ರಿಟನ್‌ನ ಸಾಲ್ಫೋರ್ಡ್‌ ವಿವಿಯಿಂದ ಪಿಎಚ್‌.ಡಿ. ಪಡೆದಿರುವ ಸುರೇಶ್‌, ಉಪಗ್ರಹ ಉಡಾವಣಾ ವಾಹಕ ವಿನ್ಯಾಸದಲ್ಲಿ ಪರಿಣತರು. ರಾಕೆಟ್‌ ಯಾನ ನಿರ್ವಹಣೆ ಹಾಗೂ ನಿಯಂತ್ರಣ ವ್ಯವಸ್ಥೆಯಂಥ (ಸ್ಪೇಸ್‌ ನ್ಯಾವಿಗೇಷನ್‌ ಗೈಡನ್ಸ್‌ ಅಂಡ್‌ ಕಂಟ್ರೋಲ್‌ ಸಿಸ್ಟಮ್‌–ಎನ್‌ಜಿಸಿ) ಸಂಕೀರ್ಣ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಮಹತ್ವದ್ದು.
ಸಾಧನೆ, ಕನಸು...
ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ (ಉಪಗ್ರಹ ಉಡಾವಣಾ ವಾಹಕಗಳು)ಯಶಸ್ವಿ ಉಡಾವಣೆಗಳಲ್ಲಿ ಕೂಡ ಸುರೇಶ್‌ ಪಾತ್ರ ಹಿರಿದಾದುದು. ಎಎಸ್‌ಎಲ್‌ವಿ ಎರಡು ಸಲ ವಿಫಲ­ವಾದಾಗ ದೇಶದಾದ್ಯಂತ ಟೀಕೆಗಳು ಕೇಳಿ ಬಂದಿದ್ದವು. ಬಡವರು ತಿನ್ನಲು ಅನ್ನಕ್ಕಾಗಿ ಪರದಾಡುತ್ತಿರುವಾಗ ಇಂಥದ್ದಕ್ಕೆಲ್ಲ ಯಾಕೆ ದುಡ್ಡು ಹಾಳು ಮಾಡಬೇಕು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿತ್ತು. ಆದರೆ ಸುರೇಶ್‌  ಮತ್ತವರ ತಂಡದ­ವರು ಈ ಟೀಕೆ, ಆರೋಪಗಳನ್ನೆಲ್ಲ ಸವಾಲಾಗಿ ತೆಗೆದುಕೊಂಡರು. ‘ಮೂರನೇ ಸಲ ಎಎಸ್‌ಎಲ್‌ವಿ ಯಶಸ್ಸು ಕಂಡಿತು. ನಿಜಕ್ಕೂ ಇದೊಂದು ಮಹತ್ವದ ತಿರುವು’ ಎಂದು ಅವರು ನೆಮ್ಮದಿಯ ನಿಟ್ಟುಸಿರಿಡುತ್ತಾರೆ.
ಈ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಕಾಲ ದುಡಿದಿರುವ ಸುರೇಶ್‌ ಮುಡಿಗೇರಿದ ಪ್ರಶಸ್ತಿಗಳಿಗೆ  ಲೆಕ್ಕವೇ ಇಲ್ಲ. ವಿಜ್ಞಾನ ಹಾಗೂ ತಂತ್ರಜ್ಞಾನ­ದಲ್ಲಿನ ಅನನ್ಯ ಕೊಡುಗೆಗಾಗಿ 2013­ರಲ್ಲಿ ಪದ್ಮಭೂಷಣ ಗೌರವಕ್ಕೆ ಪಾತ್ರರಾದರು. ಯುವಶಕ್ತಿಯ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡಿರುವ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರು ಕೂಡ ಹೌದು. ದೇಶ ವಿದೇಶಗಳಲ್ಲಿ ಹಲವಾರು ಉಪನ್ಯಾಸಗಳನ್ನು ಕೊಟ್ಟಿ­ದ್ದಾರೆ. ಈಗ ‘ರಾಕೆಟ್‌ ಡಿಸೈನ್‌’ ಬಗ್ಗೆ ಇಂಗ್ಲಿಷ್‌ನಲ್ಲಿ ಪುಸ್ತಕ ಬರೆಯುತ್ತಿದ್ದಾರೆ. ಇದು ಅವರ ಚೊಚ್ಚಲ ಕೃತಿ.
ಮಕ್ಕಳಾದ ಸುನೀಲ್‌, ಸುಮಾ ಇಬ್ಬರೂ ಎಂಜಿನಿಯರಿಂಗ್‌ ಓದಿದ್ದಾರೆ. ಸುನೀಲ್‌ ದುಬೈನಲ್ಲಿ ದೊಡ್ಡ ಕಂಪೆನಿ­ಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಿರುವನಂತಪುರದಲ್ಲಿದ್ದಾಗ ಪತ್ನಿ ಶೋಭಾ ಜತೆಗೂಡಿ ಹಲವಾರು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ ಮಧುರ ನೆನಪು ಈಗಲೂ ಅವರ ಸ್ಮೃತಿಪಟಲದಲ್ಲಿ ಇದೆ. ಬೆಳಗಿನ ಹೊತ್ತು ಸಂಗೀತ ಕೇಳುವುದು ಅವರಿಗಿಷ್ಟ.   
ಮೊದಲೆಲ್ಲ ಷಟಲ್‌ ಬ್ಯಾಡ್ಮಿಂಟನ್‌ ಆಡುತ್ತಿದ್ದರಂತೆ. ಓದುವ ಹವ್ಯಾಸವೇ ಬಿಡುವಿನ ಸಮಯದ ಸಂಗಾತಿ. ಆತ್ಮಕಥೆಗಳೆಂದರೆ ಅವರಿಗೆ ಅಚ್ಚುಮೆಚ್ಚು. ಏರೊಸ್ಪೇಸ್‌ ಸೈನ್ಸ್‌ ಭವಿಷ್ಯದ ಬಗ್ಗೆ ಅದಮ್ಯ ಕನಸು ಇಟ್ಟುಕೊಂಡಿರುವ ಅವರ ಪಾಲಿಗೆ ಇದೊಂದು ಸೀಮಾತೀತ ಕ್ಷೇತ್ರ. ಉನ್ನತ ತಂತ್ರಜ್ಞಾನವು ಸಮಾ­ಜಕ್ಕೆ, ಜನರಿಗೆ ಉಪಯೋಗ­ವಾಗಬೇಕು ಎನ್ನುವ ಕಾಳಜಿಯಲ್ಲೇ ಅವರು ತಮ್ಮ ಇನ್ನಷ್ಟು ಕನವರಿಕೆಗಳನ್ನು ನೇವರಿಸುತ್ತಾ ಇದ್ದಾರೆ.

ಕುಶಾಲು ಮುಗಿಸಿದ ಹಾಸ್ಯರತ್ನ ಕುಂಜಾಲು ರಾಮಕೃಷ್ಣ




ಅದೊಂದು ಯಕ್ಷಗಾನ ಪ್ರಸಂಗ. ಹಾಸ್ಯ ಕಲಾವಿದ ರಂಗಕ್ಕೆ ಬರುತ್ತಾನೆ. ಭಾಗವತ ‘ನಮಸ್ಕಾರ’ ಎನ್ನುತ್ತಾನೆ. ಹಾಸ್ಯ ಕಲಾವಿದನಿಂದ ಯಾವುದೇ ಉತ್ತರವಿಲ್ಲ. ಭಾಗವತ ಮತ್ತೆ ನಮಸ್ಕಾರ ಎನ್ನುತ್ತಾನೆ. ಆಗಲೂ ಉತ್ತರವಿಲ್ಲ. ಬೇಸತ್ತ ಭಾಗವತ ‘ಏನು ನಿಮಗೆ ಪ್ರತಿ ನಮಸ್ಕಾರ ಮಾಡಿ ಅಭ್ಯಾಸವಿಲ್ಲವಾ?’ ಎಂದು ಪ್ರಶ್ನಿಸುತ್ತಾನೆ. ಆಗ ಹಾಸ್ಯ ಕಲಾವಿದ ‘ನೀವು ನಮಸ್ಕಾರ ಹೇಳಿದ್ದಕ್ಕೆ ನಾನೂ ನಮಸ್ಕಾರ ಹೇಳಿದರೆ ನನಗೆ ಉಳಿಯುವುದು ಏನು ಸ್ವಾಮಿ?’ ಎಂದು ಪ್ರಶ್ನಿಸುತ್ತಾನೆ. ಪ್ರೇಕ್ಷಕ ಸಮುದಾಯದಲ್ಲಿ ಥಟ್ಟನೆ ನಗೆಯ ಬುಗ್ಗೆ.
ಅಂದು ಕಂಸ ವಧೆ ಯಕ್ಷಗಾನ. ಕೆರೆಮನೆ ಶಂಭು ಹೆಗಡೆ ಅವರ ಕಂಸ. ಕುಂಜಾಲು ರಾಮಕೃಷ್ಣ ನಾಯಕ ಅವರ ಬಾಗಿಲ ಭಟ. ರಾಜನಾದ ಕಂಸ ಭಟನ ಕೆಲಸವನ್ನು ಮೆಚ್ಚಿ ‘ಶಬ್ಬಾಸ್‌’ ಎಂದರು. ಸಿಕ್ಕಿದ್ದೇ ಛಾನ್ಸ್ ಎಂದು ಕುಂಜಾಲು ಅವರು ತಕ್ಷಣವೇ ‘ಹಾಗಾದರೆ ಈ ತಿಂಗಳಿನಿಂದ ಸಂಬಳ ಸ್ವಲ್ಪ ಜಾಸ್ತಿ ಮಾಡಿ’ ಎಂದರು. ಪ್ರೇಕ್ಷಕರ ಸಾಲಿನಲ್ಲಿ ನಗೆಯ ಹೊನಲು.
ಕುಂಜಾಲು ಅವರ ಆ ದಿನದ ಮಾತು ಯಕ್ಷಗಾನಕ್ಕೂ ಸರಿ. ಮೇಳದ ಜೀವನಕ್ಕೂ ಸರಿ. ಯಾಕೆಂದರೆ ಶಂಭು ಹೆಗಡೆ ಮೇಳದ ಯಜಮಾನರು. ಕುಂಜಾಲು ಮೇಳದಲ್ಲಿ ಒಬ್ಬ ಕಲಾವಿದ. ಕುಂಜಾಲು ರಾಮಕೃಷ್ಣ ನಾಯಕರ ಹಾಸ್ಯ ಎಂದರೆ ಹಾಗೆ. ಅಲ್ಲಿ ಕಚಗುಳಿ ಇತ್ತು. ಸಡಗರ ಇತ್ತು. ಮಾತಿನ ವರಸೆ ಇತ್ತು. ಆದರೆ ಅಶ್ಲೀಲಕ್ಕೆ ಅವಕಾಶವೇ ಇರಲಿಲ್ಲ. ಘನತೆ, ಗೌರವ, ಪೌರಾಣಿಕ ಚೌಕಟ್ಟು, ಕತೆಯ ಹರಿವನ್ನು ಮೀರಿ ಅವರು ಎಂದೂ ಹಾಸ್ಯ ಮಾಡುತ್ತಿರಲಿಲ್ಲ. ಏನಕೇನ ಪ್ರಕಾರೇಣ ಜನರನ್ನು ನಗಿಸಲೇಬೇಕು ಎಂದು ಹಟಕ್ಕೆ ಬಿದ್ದು ಅವರು ಹಾಸ್ಯ ಮಾಡಿದವರಲ್ಲ. ನಗಿಸಲು ಬರುತ್ತದೆ ಎಂದು ದ್ವಾರಪಾಲಕನೊಬ್ಬ ರಾಜನನ್ನು ಸೋಲಿಸಬಾರದು ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು.
ಅವರು ಕೆರೆಮನೆ ಮೇಳದಲ್ಲಿ ಇರುವಷ್ಟು ಕಾಲ ಒಂದು ಅಲಿಖಿತ ನಿಯಮ ಇತ್ತು. ಸಾಮಾನ್ಯವಾಗಿ ಮೊದಲ ಪ್ರಸಂಗ ಬೆಳಗಿನ ಜಾವ 4 ಗಂಟೆಗೆ ಮುಗಿಯುತ್ತಿತ್ತು. ಆದರೆ ಕುಂಜಾಲು ರಾಮಕೃಷ್ಣ ಅವರ ಉತ್ತರ ಅಥವಾ ವಿಡೂರಥನ ಪಾತ್ರವಿದ್ದರೆ ಅಂದು ಮೊದಲ ಪ್ರಸಂಗ 3 ಗಂಟೆಗೇ ಮುಗಿಯುತ್ತಿತ್ತು.
ಕುಂಜಾಲು ಅವರ ವಿಕಟ ವಿಡೂರಥ ಅಥವಾ ಉತ್ತರನ ಪಾತ್ರವಾದರೆ ಅಂದು ಹಾಸ್ಯದ ಹೊಳೆ ಹರಿಯುತ್ತಿತ್ತು. ಸುಹಾಸಿನಿ ಪರಿಣಯದಲ್ಲಿ ವಿಡೂರಥನಾಗಿ ರಂಗ ಪ್ರವೇಶ ಮಾಡುವ ರಾಮಕೃಷ್ಣ ನಾಯಕರು ಸುಮಾರು ಒಂದು ಗಂಟೆ ಕಾಲ ಸುಹಾಸಿನಿಯನ್ನು ವರ್ಣಿಸುತ್ತಿದ್ದರು. ‘ಎಲ್ಲಿ ಹೋಯಿತು ಅರಗಿಣಿ. ಕೆಂಪು ಮೆಣಸನ್ನು ಹುಡುಕಿ’ ಎಂಬ ಪದ್ಯದಿಂದ ಆರಂಭಿಸಿ ಸುಹಾಸಿನಿಯನ್ನು ಮುಖದಿಂದ ಕಾಲ ಉಗುರಿನ ತನಕ ವರ್ಣನೆ ಮಾಡುತ್ತಿದ್ದರೂ ಎಲ್ಲಿಯೂ ಅಶ್ಲೀಲ ಸೋಂಕಿರುತ್ತಿರಲಿಲ್ಲ. ಬೆಳಗಿನ ಜಾವದಲ್ಲಿ ನಿಜವಾದ ಅರ್ಥದಲ್ಲಿ ಹಾಸ್ಯ ಜಾಗರಣೆ.
ಅದೇ ರೀತಿ ಉತ್ತರನ ಪಾತ್ರ. ಭೀಷ್ಮ, ಅರ್ಜುನ, ಭೀಮ, ಕೌರವ, ಧರ್ಮರಾಯ, ಕರ್ಣ ಹೀಗೆ ಎಲ್ಲ ಮಹಾರಥಿಗಳಿಗಿಂತ ಉತ್ತರ ಹೇಗೆ ಶ್ರೇಷ್ಠ ಎನ್ನುವುದನ್ನು ತಮ್ಮದೇ ವಾದ ಸರಣಿಯಲ್ಲಿ ಹೆಣೆಯುತ್ತಿದ್ದ ಪರಿ ವರ್ಣನಾತೀತ. ಅದನ್ನು ನೋಡಿ, ಕೇಳಿ ಅನುಭವಿಸಬೇಕು ಅಷ್ಟೆ. ಕೇವಲ 7ನೇ ತರಗತಿಯವರೆಗೆ ಓದಿದ್ದರೂ ಬಡಗುತಿಟ್ಟಿನ ಎಲ್ಲ ಶ್ರೇಷ್ಠ ಕಲಾವಿದರಿಗೆ ಸರಿಸಾಟಿಯಾಗಿ ಮಾತಿನ ಚಾಟಿ ಬೀಸುತ್ತಿದ್ದ ಅವರು ಬಡಗುತಿಟ್ಟಿನ ಹಾಸ್ಯ ಸಾಮ್ರಾಟ. ಈಗಲೂ ಬಹುತೇಕ ಯಕ್ಷಗಾನ ಹಾಸ್ಯ ಕಲಾವಿದರು ಅವರ ದಾರಿಯನ್ನೇ ಅನುಸರಿಸುತ್ತಾರೆ. ನಿಸ್ಸಂಶಯವಾಗಿ ಅವರೊಬ್ಬ ಟ್ರೆಂಡ್‌ ಸೆಟರ್‌.
ಬೇಡರ ಕಣ್ಣಪ್ಪ ಪ್ರಸಂಗದ ಕಾಶಿ ಮಾಣಿ ಮತ್ತು ಕಾರ್ತವೀರ್ಯಾರ್ಜುನ ಪ್ರಸಂಗದ ದ್ವಾರಪಾಲಕನ ಪಾತ್ರಗಳು ಈಗಲೂ ಕುಂಜಾಲು ಶೈಲಿಯಿಂದ ದೂರ ಸಾಗಿಯೇ ಇಲ್ಲ. ಎಲ್ಲ ಕಲಾವಿದರೂ ಅವರನ್ನೇ ಅನುಸರಿಸುತ್ತಾರೆ. ಅದನ್ನು ಎಷ್ಟು ಬಾರಿ ನೋಡಿದರೂ ಜನ ಈಗಲೂ ನಗುವುದನ್ನು ನಿಲ್ಲಿಸಿಲ್ಲ.
ಬ್ರಹ್ಮಾವರ ಸಮೀಪದ ಕುಂಜಾಲು ಗ್ರಾಮದ ಪದ್ಮನಾಭ ನಾಯಕ್ ಮತ್ತು ಶಾರದಾ ಬಾಯಿ ದಂಪತಿಯ ಪುತ್ರರಾದ ರಾಮಕೃಷ್ಣ ನಾಯಕ ನವರಾತ್ರಿ ಹೂವಿನ ಕೋಲಿನ ಕಲಾವಿದರಾಗಿ ಪ್ರಸಿದ್ಧ ಭಾಗವತ ಗೋರ್ಪಾಡಿ ವಿಠಲರ ತಂಡದಲ್ಲಿ ತಿರುಗಾಟ ಮಾಡಿದರು. ಪ್ರಸಿದ್ಧ ಹಾಸ್ಯಗಾರ ಕೊರಗಪ್ಪ ದಾಸರನ್ನೇ ಗುರುವಾಗಿ ಸ್ವೀಕರಿಸಿದ ಅವರು ಗುರು ಕೊರಗಪ್ಪ ಇಲ್ಲದಾಗ ಕಾಶೀ ಮಾಣಿಯನ್ನು ಮಾಡಿ ಕುಂಜಾಲು ಶೈಲಿಯನ್ನೇ ಸೃಷ್ಟಿಸಿದರು.
ತಮ್ಮ ವಿಶಿಷ್ಟ ಧ್ವನಿ, ವೈವಿಧ್ಯಮಯ ಅಂಗಚಲನೆ, ಹಾಸ್ಯಭಂಗಿಯಿಂದ ಸುಮಾರು ನಾಲ್ಕು ದಶಕಗಳ ಕಾಲ ಇಡಗುಂಜಿ, ಸಾಲಿಗ್ರಾಮ, ಶಿರಸಿ, ಕೊಲ್ಲೂರು ಮೇಳಗಳಲ್ಲಿ ಹಾಸ್ಯ ಚಕ್ರವರ್ತಿಯಾಗಿದ್ದರು.
ಸಮಗ್ರ ಭೀಷ್ಮ ಪ್ರಸಂಗದ ಕಂದರ, ಗದಾಯುದ್ಧದ ಬೇವಿನಚರ, ಹರಿಶ್ಚಂದ್ರದ ನಕ್ಷತ್ರಿಕ, ಪಟ್ಟಾಭಿಷೇಕದ ಮಂಥರೆ, ದಕ್ಷಯಜ್ಞದ ವೃದ್ಧ ಬ್ರಾಹ್ಮಣ ಹೀಗೆ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು ಹಲವಾರು. ಬಡಗುತಿಟ್ಟು ಯಕ್ಷಗಾನದಲ್ಲಿ ಚಿಟ್ಟಾಣಿ ಶೈಲಿ, ಕೆರೆಮನೆ ಶೈಲಿ ಎಂದು ಇದ್ದ ಹಾಗೆ ಕುಂಜಾಲು ಶೈಲಿಯೂ ಪ್ರಸಿದ್ಧ. ತಮ್ಮ ವೃತ್ತಿ ಜೀವನದ ಬಹುಪಾಲನ್ನು ಕೆರೆಮನೆ ಮೇಳದಲ್ಲಿಯೇ ಕಳೆದ ಕುಂಜಾಲು ರಾಮಕೃಷ್ಣ ಅವರು ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ, ದೇವರು ಹೆಗಡೆ, ಗೋಡೆ ನಾರಾಯಣ ಮುಂತಾದವರ ಗರಡಿಯಲ್ಲಿ ಪಳಗಿದವರು.
ಹೊಸ ಪ್ರಸಂಗಗಳಲ್ಲೂ ಸೈ ಎನಿಸಿಕೊಂಡ ಅವರು ಶಿರಸಿ ಮೇಳದ ಭಾಗ್ಯ ಭಾರತಿ ಪ್ರಸಂಗದಲ್ಲಿ ತೆಕ್ಕಟ್ಟೆ ಆನಂದ ಮಾಸ್ತರೊಂದಿಗೆ ನಿರ್ವಹಿಸಿದ ಮರ್ತಪ್ಪ- ಚರ್ಡಪ್ಪರ ಜೋಡಿ ಅಪಾರ ಜನ ಮನ್ನಣೆ ಪಡೆದಿತ್ತು. ಸತ್ಯ ಹರಿಶ್ಚಂದ್ರ ಯಕ್ಷಗಾನದಲ್ಲಿ ಅವರು ಕಪ್ಪೆ ಹೊಡೆಯುವ ಪ್ರಸಂಗವನ್ನು ನಿರ್ವಹಿಸುವ ರೀತಿ ಈಗಲೂ ಹಲವರ ಕಣ್ಣ ಮುಂದೆ ಇದೆ.
  ಕಡು ಬಡತನದಲ್ಲಿಯೇ ಬೆಳೆದು ಬಂದ ಅವರಿಗೆ ಆರಂಭದಲ್ಲಿ ಅಂತಹ ವೇತನವೂ ಸಿಗುತ್ತಿರಲಿಲ್ಲ. ಒಬ್ಬ ಮಗನನ್ನು ಬಹಳ ಹಿಂದೆಯೇ ಕಳೆದುಕೊಂಡಿದ್ದ ಅವರ ಬದುಕಿನಲ್ಲಿ ಕಹಿಯೇ ಜಾಸ್ತಿ ಇತ್ತು. ಆದರೂ ರಂಗಕ್ಕೆ ಅವರು ಬಂದರೆ ನಗು ತನ್ನಿಂದ ತಾನೇ ಉಕ್ಕುತ್ತಿತ್ತು. ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಅವರು ಇದೇ ತಿಂಗಳ 12ರಂದು ನೋವು ನಲಿವಿನ ಬದುಕಿಗೆ ಮಂಗಳ ಹಾಡಿದರು. ಅಲ್ಲಿಗೆ ಕುಂಜಾಲು ಕುಶಾಲು ಸಂಪೂರ್ಣವಾಗಿ ನಿಂತಿತು.


logoblog

Thanks for reading ವ್ಯಕ್ತಿ ಸ್ಮರಣೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *