ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ವ್ಯಕ್ತಿ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, March 08, 2015

ವ್ಯಕ್ತಿ

  Pundalik       Sunday, March 08, 2015


ವ್ಯಕ್ತಿ

ಮರೆಯಾದ ಅಟಾರ್ನಿ ಜನರಲ್ ಗುಲಾಂ ಹುಸೇನ್ ವಾಹನ್ವತಿ



ಅದೊಂದು ಫೆಬ್ರುವರಿ ತಿಂಗಳ ಚಳಿ ಮುಂಜಾವು. ನವದೆಹಲಿಯ ಪಟಿಯಾಲ ಹೌಸ್ ಆವರಣದ ಸಿಬಿಐ ವಿಶೇಷ ಕೋರ್ಟ್ ಮುಂದೆ ಹಾಜರಾಗಿದ್ದರು ಭಾರತದ ೧೩ನೇ ಅಟಾರ್ನಿ ಜನರಲ್ ಗುಲಾಂ ಹುಸೇನ್ ಏಸಾಜಿ ವಾಹನ್ವತಿ. ಸುಪ್ರೀಂ ಕೋರ್ಟ್‌ನ ಎರಡನೇ ಮಹಡಿಯಲ್ಲಿ ತಮ್ಮ ಕಚೇರಿಯನ್ನು ಹೊಂದಿರುವ ಹಾಗೂ ಕೇಂದ್ರ ಸರ್ಕಾರದ ಅಗ್ರಮಾನ್ಯ ಕಾನೂನು ಅಧಿಕಾರಿ ಎನಿಸಿರುವ ಅಟಾರ್ನಿ ಜನರಲ್ ಅವರಿಗೆ ದೇಶದ ಯಾವುದೇ ಕೋರ್ಟ್‌ಗೆ ಹೋಗುವ, ಕಲಾಪವನ್ನು ವೀಕ್ಷಿಸುವ ವಿಶೇಷ ಅಧಿಕಾರ ಇದೆ. ಆದರೆ, ವಹನ್ವತಿ ಪಟಿಯಾಲ ಹೌಸ್‌ಗೆ ಹೋಗಿದ್ದು ಸಾಕ್ಷಿಯಾಗಿ ಕಟಕಟೆಯಲ್ಲಿ ನಿಲ್ಲಲು!
ಅಟಾರ್ನಿ ಜನರಲ್ ಒಬ್ಬರು ಸಾಕ್ಷಿಯಾಗಿ ಕಟಕಟೆಯಲ್ಲಿ ನಿಂತ ಮೊದಲ ಪ್ರಕರಣ ಅದಾಗಿತ್ತು. ೨ಜಿ ತರಂಗಾಂತರ ಲೈಸನ್ಸ್ ಹಂಚಿಕೆಗೆ ವಾಹನ್ವತಿ ಅವರ ಸಲಹೆ ಪಡೆದುಕೊಂಡೇ ನೀತಿ ರೂಪಿಸಲಾಗಿದೆ ಎಂಬುದು ಮಾಜಿ ಸಚಿವ ಎ.ರಾಜಾ ಅವರ ವಾದವಾಗಿತ್ತು. ವಹನ್ವತಿ ಎರಡು ದಿನ ಕಟಕಟೆಯಲ್ಲಿ ನಿಂತು ವಕೀಲರ ಪಾಟೀಸವಾಲುಗಳಿಗೆ ಉತ್ತರಿಸಬೇಕಾಯಿತು.
ಇತ್ತೀಚೆಗಷ್ಟೇ ಕಣ್ಮರೆಯಾದ ವಾಹನ್ವತಿ (ನಿಧನ: ೨೦೧೪ರ ಸೆಪ್ಟೆಂಬರ್ ೨), ಅಟಾರ್ನಿ ಜನರಲ್ ಹುದ್ದೆಗೇರಿದ ಮುಸ್ಲಿಂ ಸಮುದಾಯದ ಮೊದಲ ವ್ಯಕ್ತಿ. ಅಧಿಕಾರದಲ್ಲಿ ಇದ್ದಷ್ಟು ದಿನವೂ ಅವರಿಗೆ ಮೆತ್ತಿಕೊಂಡ ವಿವಾದಗಳಿಗೆ ಲೆಕ್ಕವೇ ಇಲ್ಲ. ಪ್ರಾಯಶಃ ಅವರು ಅಧಿಕಾರದಲ್ಲಿದ್ದಾಗ ಒಂದರ ಬೆನ್ನಹಿಂದೆ ಮತ್ತೊಂದರಂತೆ ಬೆಳಕಿಗೆ ಬಂದ ಯುಪಿಎ ಸರ್ಕಾರದ ಹಗರಣಗಳೂ ಅದಕ್ಕೆ ಕಾರಣ ಆಗಿರಬಹುದು.
ಅಟಾರ್ನಿ ಜನರಲ್ ಹುದ್ದೆಗೆ ಏರುವ ಮುನ್ನ ಅವರು ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಮುಂಬೈ ಹೈಕೋರ್ಟ್‌ನಲ್ಲಿ ಪ್ರಭಾವಿ ವಕೀಲರಾಗಿ ಹೆಸರು ಮಾಡಿದ್ದ ಅವರನ್ನು ಮಹಾರಾಷ್ಟ್ರ ಸರ್ಕಾರ ಅಡ್ವೋಕೇಟ್ ಜನರಲ್ ಆಗಿ ನೇಮಿಸಿಕೊಂಡಿತ್ತು. ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಅವರು ಸಾಲಿಟರ್ ಜನರಲ್ ಹುದ್ದೆಗೇರಿದ್ದರು.
‘ಕಾನೂನಿನ ಅಪೇಕ್ಷೆಗಿಂತ ಸರ್ಕಾರದ ಅಗತ್ಯಕ್ಕೆ ತಕ್ಕಂತೆ ಅವರು ನಡೆದುಕೊಂಡರು’ ಎನ್ನುವುದು ವಹನ್ವತಿ ವಿರೋಧಿಗಳ ವಾದ. ಆದರೆ, ೨ಜಿ ತರಂಗಾಂತರ ಹಂಚಿಕೆ ಹಗರಣದ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದ ಪ್ರಶಾಂತ್ ಭೂಷಣ್, ‘ವಾಹನ್ವತಿ ಒಬ್ಬ ಜಾಣ ವಕೀಲ. ಸಚಿವರಿಗೆ ಅನುಕೂಲಕರ ಸಲಹೆಗಳನ್ನು ಅವರು ನೀಡುತ್ತಿದ್ದರು. ಅವರು ಕೊಟ್ಟ ಸಲಹೆಗಳನ್ನು ಎ.ರಾಜಾ ಅವರಂತಹ ಸಚಿವರು ದುರುಪಯೋಗ ಮಾಡಿಕೊಂಡರು’ ಎನ್ನುತ್ತಾರೆ.
ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರಿಗೆ ವಾಹನ್ವತಿ ತುಂಬಾ ಆಪ್ತರಾಗಿದ್ದರು. ಪಟೇಲ್ ಅವರ ಈ ಗೆಳೆತನದ ಭಾಗ್ಯ ಇಲ್ಲದಿದ್ದರೆ ಅವರಿಗೆ ಅಟಾರ್ನಿ ಜನರಲ್ ಹುದ್ದೆ ಕೈತಪ್ಪುವ ಅಪಾಯವಿತ್ತು ಎಂಬ ವರದಿಗಳು ಆಗಿನ ದಿನಗಳಲ್ಲಿ ಹರಿದಾಡಿದವು. ಅನಿಲ್ ಅಂಬಾನಿ ಅವರ ಆಪ್ತರಾಗಿದ್ದ ವಹನ್ವತಿ, ಆಗಿನ ಹಣಕಾಸು ಸಚಿವ ಪಿ.ಚಿದಂಬರಂ ಅವರ ಕಚೇರಿಗೆ ಆಗಾಗ ಮಧ್ಯಾಹ್ನ ಭೇಟಿಗೆ ಬರುತ್ತಿದ್ದರು.
ಮೂವರೂ ಊಟ ಮಾಡುತ್ತಾ ಹರಟೆ ಹೊಡೆಯುತ್ತಿದ್ದರು ಎಂಬ ಗುಲ್ಲೂ ಹರಡಿತ್ತು. ಮುಂಬೈ ಕಾರ್ಪೊರೇಟ್ ಜಗತ್ತಿನ ಲಾಬಿಯಿಂದಾಗಿಯೇ ವಾಹನ್ವತಿ ಉನ್ನತ ಹುದ್ದೆಗೆ ಏರಲು ಸಾಧ್ಯವಾಯಿತು ಎಂಬ ಮಾತು ರೆಕ್ಕೆ-ಪುಕ್ಕ ಕಟ್ಟಿಕೊಂಡು ಕಾನೂನು ವಲಯದಲ್ಲಿ ಹಾರಾಡಿತು. ಹೆಚ್ಚುವರಿ ಸಾಲಿಟರ್ ಜನರಲ್ ಆಗಿದ್ದ ಹರೀನ್ ಪಿ. ರಾವಲ್ ಅವರು ವಹನ್ವತಿ ಅವರೊಂದಿಗಿನ ಹೆಚ್ಚಿದ ಭಿನ್ನಾಭಿಪ್ರಾಯಗಳ ಪರಿಣಾಮವಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಅದು ಕೂಡ ವಿವಾದವಾಗಿ ಮಾರ್ಪಟ್ಟಿತು.
ಸಿಂಗಪುರದಲ್ಲಿ ವಾಹನ್ವತಿ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಘೋಷಿಸಿದ ಆಸ್ತಿ ದಾಖಲೆಯಲ್ಲಿ ಅದರ ವಿವರವಿಲ್ಲ ಎಂದು ಸಂಸದ ಗುರುದಾಸ್ ದಾಸ್‌ಗುಪ್ತಾ ದೂರಿದರು. ಕಲ್ಲಿದ್ದಲು ಹಗರಣ, ವೇದಾಂತ ಪ್ರಕರಣಗಳಲ್ಲೂ ವಹನ್ವತಿ ಅವರಿಗೆ ಮಸಿ ಬಳಿಯುವ ಯತ್ನಗಳು ನಡೆದವು. ವೇದಾಂತ ವ್ಯವಹಾರದಲ್ಲಿ ಅವರ ಮಗನ ಪಾತ್ರವೂ ಇದೆ ಎಂಬ ಆರೋಪಗಳು ಬಲವಾಗಿ ಕೇಳಿಬಂದವು. ಆದರೆ, ಕಾನೂನಿನ ಅಗ್ನಿಪರೀಕ್ಷೆಯಲ್ಲಿ ವಹನ್ವತಿ ನಿರ್ದೋಷಿಯಾಗಿ ಹೊರಬಂದರು.
ವಹನ್ವತಿ ಅವರ ವೈಯಕ್ತಿಕ ಜೀವನವೂ ವಿವಾದಗಳಿಂದ ಹೊರತಾಗಿರಲಿಲ್ಲ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಅವರು, ಮತ್ತೊಂದು ಮದುವೆಯಾಗಿದ್ದರು. ಮೊದಲ ಪತ್ನಿಗೆ ಜನಿಸಿದ ಮಗ ಏಸಾಜಿ (ಮಗನಿಗೆ ತಂದೆಯ ಹೆಸರನ್ನೇ ಇಟ್ಟಿದ್ದಾರೆ) ವಹನ್ವತಿ ಜತೆಯಲ್ಲೇ ಇದ್ದರು.
ವಾಹನ್ವತಿ ಅವರದು ಮೂಲತಃ ಗುಜರಾತಿ ಕುಟುಂಬ. ಗುಜರಾತಿ ಭಾಷೆಯಲ್ಲಿ ವಹನ್ ಎಂದರೆ ಹಡಗು ಎಂದರ್ಥ. ಅವರ ಮುತ್ತಜ್ಜ ಹಡಗು ವ್ಯಾಪಾರಿಯಾಗಿದ್ದರು. ಆದರೆ, ವಾಹನ್ವತಿ ಅವರ ತಂದೆ ಏಸಾಜಿ ಆಯ್ದುಕೊಂಡಿದ್ದು ವಕೀಲಿ ವೃತ್ತಿಯನ್ನು. ಕಪ್ಪುಬಣ್ಣದ ಕೋಟು ಹಾಕಿಕೊಂಡು ಗತ್ತಿನಿಂದ ಹೋಗುತ್ತಿದ್ದ ತಂದೆಯನ್ನು ಕಂಡ ವಾಹನ್ವತಿ, ತಾನೂ ವಕೀಲನಾಗಬೇಕು ಎಂಬ ಕನಸನ್ನು ಬಾಲ್ಯದಲ್ಲೇ ಕಂಡವರು. ಅಂತೆಯೇ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಅವರು ಕಾನೂನು ಪದವಿ ಪಡೆದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೨ ವರ್ಷಗಳ ಬಳಿಕ ಜನಿಸಿದ ವಾಹನ್ವತಿ (ಜನನ: ೧೯೪೯ರ ಮೇ ೭), ೭೦ರ ದಶಕದಲ್ಲಿ ಅದಾಗಲೇ ಒಳ್ಳೆಯ ವಕೀಲನಾಗಿ ಹೆಸರು ಮಾಡಿದ್ದರು. ೫೦ ವರ್ಷಗಳ ಸುದೀರ್ಘ ಕಾನೂನು ಯಾತ್ರೆಯಲ್ಲಿ ಅವರು ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಕ್ರಿಕೆಟ್ ಅಂಗಳದಲ್ಲಿ ಜನಾಂಗೀಯ ನಿಂದನೆ ಪ್ರಕರಣಗಳು ವರದಿಯಾದಾಗ ಅವುಗಳ ವಿಚಾರಣೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹುಡುಕಿಕೊಂಡು ಬಂದಿದ್ದು ವಹನ್ವತಿ ಅವರನ್ನೇ.
ಉನ್ನತ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಯಶಸ್ವಿಯಾಗಿ ಸಮರ್ಥಿಸಿಕೊಂಡ ಹಿರಿಮೆಯೂ ಅವರದಾಗಿದೆ. ಆದರೆ, ವಿವಾದಗಳ ಮಸಿಯಲ್ಲಿ ಅವರ ಸಾಧನೆಗಳು ಮಸುಕಾಗಿ ಹೋಗಿವೆ.
ವ್ಯಕ್ತಿ

‘ಗಾಂಧಿ’ ಹಾದಿಯ ಪಥಿಕ: ಸುರೇಂದ್ರ ಕೌಲಗಿ




ಪ್ರಶಸ್ತಿ ಬಂದರೆ ಸಂಭ್ರಮ ಆಗಬೇಕಾದ್ದು ಸಹಜ. ಆದರೆ ‘ಆ ಮಟ್ಟ ತಲುಪಲು ನಾನೇನೂ ಮಾಡಿಲ್ಲವಲ್ಲ’ ಎಂದು ಕೊರಗುವವರು ನಮ್ಮ ಮಧ್ಯೆಯೇ ಇರುವುದು ಸೋಜಿಗ. ಅವರು ಸುರೇಂದ್ರ ಕೌಲಗಿ. ಗಾಂಧೀವಾದ, ಗಾಂಧಿ ಸಿದ್ಧಾಂತ, ಮೌಲ್ಯ, ಆದರ್ಶ ಎಂಬಿತ್ಯಾದಿ ಪದಪುಂಜಗಳೆಲ್ಲ ಬರೀ ತೋರಿಕೆಗೆ ಸೀಮಿತವಾದ ಇಂದಿನ ಸಮಯದಲ್ಲಿ, ಗಾಂಧಿ ಹೇಗೆ ಪ್ರಸ್ತುತ ಎಂಬುದನ್ನು ಕೌಲಗಿ ತೋರಿಸಿಕೊಡುತ್ತಿದ್ದಾರೆ. ಪ್ರಸ್ತುತ ಸಾಲಿನ ರಾಷ್ಟ್ರೀಯ ಮಟ್ಟದ ‘ಜಮ್ನಲಾಲ್‌ ಬಜಾಜ್‌’ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಾಗ ಪತ್ನಿ ಗಿರಿಜಮ್ಮ ಅವರಿಗೆ ಸುರೇಂದ್ರ ಅವರು ನೀಡಿದ ಪ್ರತಿಕ್ರಿಯೆ: ‘ನಂಗೆ ಖುಷಿಯಾಗಲಿಲ್ಲ. ಆ ಪ್ರಶಸ್ತಿಯ ಮಟ್ಟಕ್ಕೆ ಅಥವಾ ಈಗಾಗಲೇ ಪಡೆದಿರೋ ದೊಡ್ಡವರ ಮಟ್ಟಕ್ಕೆ ನಾನೇನು ಮಾಡಿಲ್ಲ ಅನಿಸ್ತಿದೆ’.
ಉತ್ತರ ಕರ್ನಾಟಕದ ಸಾಮಾನ್ಯ ಕುಟುಂಬದ ಹುಡುಗನೊಬ್ಬ, ಆದರ್ಶಗಳ ಬೆನ್ನುಬಿದ್ದು ತನ್ನ ಜೀವಮಾನದುದ್ದಕ್ಕೂ ಅದೇ ದಾರಿಯಲ್ಲಿ ನಡೆಯುತ್ತ ಬಂದಿರುವುದು ವಿಸ್ಮಯಗೊಳಿಸುವಂಥದು. ಹಾಗೆಂದು ಅವರು ಹಳೆಯ ಕಾಲಮಾನಕ್ಕೆ ಜೋತು ಬಿದ್ದಿಲ್ಲ. ಹೊಸ ತಲೆಮಾರಿನ ಜತೆ ಸಂವಾದ ನಡೆಸುತ್ತ, ಪ್ರಸ್ತುತ ಕಾಲಕ್ಕೂ ಹೊಂದಿಕೊಂಡು ಬದುಕುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದ ವೆಂಕಟೇಶ ಕೌಲಗಿ ಹಾಗೂ ಪದ್ಮಾಬಾಯಿ ಅವರ ಪುತ್ರನಾಗಿ ಸುರೇಂದ್ರ ಜನಿಸಿದರು. ಬಾಲ್ಯದಿಂದಲೇ ಪತ್ರಿಕೆಗಳಲ್ಲಿನ ಲೇಖನಗಳನ್ನು ಓದುವುದು ರೂಢಿಸಿಕೊಂಡ ಸುರೇಂದ್ರ, ರಾಷ್ಟ್ರೀಯತೆ ಪ್ರತಿಪಾದಿಸುವ ಲೇಖನಗಳಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಅವರು ಕರ್ನಾಟಕ ಏಕೀಕರಣ ವಿಚಾರದಿಂದ ಪ್ರೇರಿತರಾಗಿ, ‘ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ’ ಎಂದು ಪ್ರತಿಪಾದಿಸಿ ಬರೆದ ಕೆಲವು ಪತ್ರಗಳು ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಮೆಟ್ರಿಕ್ ಬಳಿಕ ಕಾಲೇಜು ಸೇರಿದರೂ, ಬಡತನದಿಂದಾಗಿ ಕಾಲೇಜು ಶಿಕ್ಷಣ ಅರ್ಧಕ್ಕೇ ನಿಂತಿತು. ಅಲ್ಲಿಂದ ಅವರು ಔಪಚಾರಿಕ ಶಿಕ್ಷಣಕ್ಕಿಂತ ಜೀವನ ಶಾಲೆ ಮತ್ತು ಸಾಮಾಜಿಕ ವರ್ತಮಾನದ ಗರಡಿಯಲ್ಲೇ ‘ಶಿಕ್ಷಣ’ ಪಡೆಯುವಂತಾಯಿತು.
ಗಾಂಧೀವಾದದ ಜಾಡಿನಲ್ಲಿ ಹೆಜ್ಜೆ ಹಾಕುತ್ತಿರುವ ಸುರೇಂದ್ರ ಕೌಲಗಿ ಅವರ ಬದುಕು ಹಲವು ವಿಶಿಷ್ಟ ಅನುಭವಗಳ ಗುಚ್ಛ. ತಾರುಣ್ಯದಲ್ಲೇ ಅವರಿಗೆ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಅನುಭವ ಸಿಕ್ಕಿತು. ‘ಆಗಿನ್ನೂ ನಾನು ಬೌದ್ಧಿಕವಾಗಿ ಅಷ್ಟೊಂದು ಪ್ರಬುದ್ಧ ಆಗಿರಲಿಲ್ಲ. ಅವರ ಮೂಲಕ ನಾನು ಬೆಳೆದೆನೇ ಹೊರತೂ ಬೆಳೆದ ಬಳಿಕ ಅವರ ಬಳಿಗೆ ಹೋಗಲಿಲ್ಲ ಎಂಬುದೇ ನನ್ನ ದೊಡ್ಡ ಕೊರಗು’ ಎಂದು ಆ ದಿನಗಳನ್ನು ನೆನೆಯುತ್ತಾರೆ.
ಐದು ವರ್ಷಗಳ ಆ ಅವಧಿಯಲ್ಲಿ ಜೆಪಿ ಹಾಗೂ ಅವರ ಪತ್ನಿ ಪ್ರಭಾವತಿ ವ್ಯಕ್ತಿತ್ವ ಸುರೇಂದ್ರ ಅವರನ್ನು ಸಾಕಷ್ಟು ಪ್ರಭಾವಿಸಿದೆ. ಅದರಲ್ಲೂ ಅವರಿಬ್ಬರು ಅಳವಡಿಸಿಕೊಂಡಿದ್ದ ಶಿಸ್ತು ಬೆರಗು ಮೂಡಿಸಿದೆ. ‘ಬಟ್ಟೆ ತೊಳೆಯುವುದೆಂದರೆ ಬರೀ ಒಂದು ಕೆಲಸ ಎಂದುಕೊಂಡಿದ್ದ ನಮಗೆ, ಅದನ್ನು ಶಿಸ್ತಿನಿಂದ ಹೇಗೆ ಮಾಡಬೇಕು ಅಂತ ಹೇಳಿಕೊಟ್ಟಿದ್ದೇ ಪ್ರಭಾವತಿಯವರು’ ಎನ್ನುತ್ತಾರೆ ಸುರೇಂದ್ರ. ಒಮ್ಮೆ ಅವರು ಕಸಗುಡಿಸುತ್ತಿರುವಾಗ ಕಿಟಕಿ ಮೂಲಕ ನೋಡಿದ ಜೆಪಿ, ಹೊರಗೆ ಬಂದು ಪೊರಕೆ ತೆಗೆದುಕೊಂಡು ‘...ಹಾಗಲ್ಲ.
ಹೀಗೆ’ ಎಂದು ಕಸಗುಡಿಸುವ ಬಗೆಯನ್ನು ತೋರಿಸಿದರಂತೆ! ತಾವು ಜೈಲಿನಲ್ಲಿ ಇದ್ದಾಗ ಇದನ್ನು ಕಲಿತಿದ್ದಾಗಿ ಜೆಪಿ ಹೇಳಿದ್ದರಂತೆ. ವಿನೋಬಾ ಭಾವೆ ಅವರ ಜತೆ ಭೂದಾನ ಚಳವಳಿಯಲ್ಲೂ ಸುರೇಂದ್ರ ಭಾಗಿಯಾಗಿದ್ದಾರೆ.
ಸಮುದಾಯ, ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ ಸ್ಪಷ್ಟ ರೂಪು ಕೊಡುವ ಉದ್ದೇಶದಿಂದ ಸುರೇಂದ್ರ ಕೌಲಗಿ ಅವರು 1960ರಲ್ಲಿ ಮೇಲುಕೋಟೆಯಲ್ಲಿ ‘ಜನಪದ ಸೇವಾ ಟ್ರಸ್ಟ್‌’ ಸ್ಥಾಪಿಸಿದರು. ದುರ್ಬಲರಿಗೆ ಚೈತನ್ಯ ನೀಡುವ ಹಲವು ಕಾರ್ಯಕ್ರಮಗಳನ್ನು ನಡೆಸುವುದು ಅವರ ಉದ್ದೇಶವಾಗಿತ್ತು. ಟ್ರಸ್ಟ್‌ನ ನೆರಳಲ್ಲೇ ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ನೀಡುವ ‘ಕರುಣಾಗೃಹ’ (1963) ಆರಂಭವಾಯಿತು.
ಅಹಿಂಸಾತ್ಮಕ ಜೀವನ ವಿಧಾನಗಳ ಹುಡುಕಾಟಕ್ಕೆ ಪ್ರೇರೇಪಣೆ ನೀಡುವ ‘ಹೊಸ ಜೀವನ ದಾರಿ’ಗೆ ಚಾಲನೆ ನೀಡಿದರು. ಗಾಂಧೀಜಿ ಅಂದಮೇಲೆ ಖಾದಿ ಇರಲೇಬೇಕಲ್ಲ? ಚರಕ ಹಾಗೂ ಕೈಮಗ್ಗದ ಚಟುವಟಿಕೆಗಳನ್ನು ಅಪಾರವಾಗಿ ಪ್ರೀತಿಸುವ ಕೌಲಗಿಯವರು, 1980ರಲ್ಲಿ ಖಾದಿ ಗ್ರಾಮೋದ್ಯೋಗದ ತರಬೇತಿ ಹಾಗೂ ಉತ್ಪಾದನಾ ಕೇಂದ್ರ ಸ್ಥಾಪಿಸಿದರು. ನಶಿಸುತ್ತಿರುವ ಖಾದಿ ಕೌಶಲಕ್ಕೆ ಮತ್ತೆ ಜೀವ ಕೊಡುವ ಉದ್ದೇಶದಿಂದ ಆರಂಭವಾದ ಈ ಕೇಂದ್ರದಲ್ಲಿ ಬ್ಯಾಗ್‌, ಕುರ್ತಾ, ರಜಾಯಿ ಇತರ ಉತ್ಪನ್ನಗಳು ಸಿದ್ಧಗೊಳ್ಳುತ್ತಿವೆ.
ಕತ್ತಲೆಯಲ್ಲಿ ಮುಳುಗಿದ ಜಗತ್ತಿಗೆ ಗಾಂಧಿ ತತ್ವಗಳು ಖಂಡಿತ ಬೆಳಕು ನೀಡಬಲ್ಲವು ಎಂಬುದು ಸುರೇಂದ್ರ ಕೌಲಗಿಯವರ ಅಚಲ ವಿಶ್ವಾಸ. ‘ಈಗೇನೋ ಜಗತ್ತು ಗಾಂಧಿ ತತ್ವದಿಂದ ದೂರ ಸರಿದಂತೆ ಕಾಣುತ್ತಿದೆ. ಆದರೆ ಇದು ತಿರುಗುವ ಚಕ್ರದಂತೆ. ಮೇಲೆ ಹೋಗಿರುವುದು ಕೆಳಕ್ಕೆ ಬರಲೇಬೇಕಲ್ಲ?’ ಎನ್ನುತ್ತಾರೆ. ಯಾವುದೇ ವಿಷಯ ಕುರಿತು ಆಳ ಹಾಗೂ ಗಂಭೀರವಾಗಿ ಯೋಚಿಸುತ್ತ ಹೋದರೆ ಅದು ಗಾಂಧಿಯನ್ನು ತಲುಪುತ್ತದೆ ಎಂಬುದು ಕೌಲಗಿಯವರ ಪ್ರತಿಪಾದನೆ.
ಈಗ ನಾವು ನೋಡುತ್ತಿರುವಂತೆ, ಭೋಗದಲ್ಲಿ ಮುಳುಗಿದ ಜಗತ್ತು ಅದರಿಂದ ಹೊರಬರಲು ಯತ್ನಿಸುತ್ತದೆ. ಸತತ ಪ್ರಯತ್ನಗಳ ಬಳಿಕ ಕಾಣಿಸುವ ವಿಚಾರ ಗಾಂಧಿ ಮಾರ್ಗ ಬಿಟ್ಟು ಬೇರೊಂದಾಗಿರುವುದಿಲ್ಲ ಎಂದು ಅವರು ಪ್ರತಿಪಾದಿಸುತ್ತಾರೆ. ಟಿಮ್ ಜಾಕ್ಸನ್‌ ಅವರ ‘ಪ್ರಾಸ್ಪೆರಿಟಿ ವಿತೌಟ್ ಗ್ರೋಥ್’ ಪುಸ್ತಕವನ್ನು ಓದಿದ ಬಳಿಕ ‘ಅರೆ!
ಜಾಕ್ಸನ್‌ ಕೂಡ ಗಾಂಧಿ ಹೇಳಿದ್ದನ್ನೇ ಹೇಳಿದ್ದಾನಲ್ಲ?’ ಅನಿಸಿದೆ. ಜಗತ್ತನ್ನು ಕಾಡುವ ಎಲ್ಲ ಸಮಸ್ಯೆಗಳಿಗೆ ಚರಕದಲ್ಲಿ ಉತ್ತರವಿದೆ. ಹೀಗಾಗಿ ಅದು ಬರೀ ನೂಲುವ ಯಂತ್ರವಲ್ಲ; ಅದೊಂದು ಮೌಲ್ಯ ಎಂಬ ನಂಬಿಕೆ ಅವರದು.
ಸುರೇಂದ್ರ ಅವರು ಆರಂಭಿಸಿದ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಪುತ್ರ ಸಂತೋಷ ಕೌಲಗಿ ಅಷ್ಟೇ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗೆ ನೋಡಿದರೆ, ಸಂತೋಷ ಅವರು ಗಾಂಧಿಯಿಂದ ದೂರ ಹೋಗುವ ಪ್ರಯತ್ನ ನಡೆಸಿದವರೇ!
‘ನಾನು ಸುಸ್ಥಿರ ಕೃಷಿ ಅಧ್ಯಯನ ಮಾಡುತ್ತಿದ್ದಾಗ ಅಚ್ಚರಿಗಳ ಕಂತೆಯಂತೆ ಕಂಡಿದ್ದು ಜಪಾನಿನ ಸಹಜ ಕೃಷಿ ಋಷಿ ಮಸನೊಬು ಫುಕುವೊಕ. ಆತನಿಗೆ ಖ್ಯಾತಿ ತಂದು ಕೊಟ್ಟಿದ್ದು ‘ಒಂದು ಹುಲ್ಲಿನ ಕ್ರಾಂತಿ’ ಪುಸ್ತಕ. ತನ್ನ ಕೃಷಿ ವಿಧಾನ ಗಾಂಧಿ ವಿಚಾರಕ್ಕೆ ಸಮಾನವಾದುದು ಎಂದು ಫುಕುವೊಕ ಹೇಳಿದ್ದು ಗೊತ್ತಾಗಿ ನಾನು ಮತ್ತೆ ಗಾಂಧಿಯತ್ತ ಹೊರಳಿದೆ’ ಎಂದು ಸಂತೋಷ ನೆನಪಿಸಿಕೊಳ್ಳುತ್ತಾರೆ.
ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಈಗ ಚೇತರಿಸಿಕೊಂಡಿರುವ ಕೌಲಗಿಯವರು, ಟ್ರಸ್ಟ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಸತತವಾಗಿ ಪ್ರಕಟಿಸುತ್ತಾ ಬಂದಿರುವ ‘ಜನಪದ ವಿಚಾರ’ವನ್ನೂ ತಾವೇ ಸಂಪಾದಿಸಿ ಪ್ರಕಟಿಸುತ್ತಿದ್ದಾರೆ. ಬೆಳಿಗ್ಗೆ ಪತ್ರಿಕೆಗಳನ್ನು ಓದುತ್ತ ಅದರಲ್ಲಿರುವ ಕೆಲ ವರದಿಗಳನ್ನು ಕಂಡು ಕೋಪಗೊಂಡು ‘ಥತ್ತೇರಿ...’ ಎಂದು ಬೈದು ಎದ್ದು ಹೊರಡುತ್ತಾರೆ.
ಹಾಗೆಂದು ಅವರಲ್ಲಿ ನಿರಾಶೆ ಖಂಡಿತ ಇಲ್ಲ. ಪಕ್ಕದಲ್ಲಿರುವ ಚರಕ ಅವರ ಕಣ್ಣಿಗೆ ಗಾಂಧಿ ಮೌಲ್ಯಗಳ ಉದಾತ್ತ ಪ್ರತಿಮೆಯಂತೆ ಕಾಣಿಸುತ್ತದೆ. 80ರ ವಯಸ್ಸಿನಲ್ಲಿ ಈಗಲೂ ತಮ್ಮ ಜತೆ ಇನ್ನೊಬ್ಬ ಕೈಜೋಡಿಸಿದರೆ ಸಾಕು; ಪ್ರಪಂಚವನ್ನೇ ಬದಲಾಯಿಸಿಬಿಡುವೆ ಎಂಬ ಅವರ ಅದಮ್ಯ ಉತ್ಸಾಹದ ಹಿಂದಿನ ಪ್ರೇರಕ ಶಕ್ತಿ ಗಾಂಧೀಜಿ ಅಲ್ಲದೇ ಇನ್ನಾರು?


ವ್ಯಕ್ತಿ ಸ್ಮರಣೆ

ಯೋಗದ ಮಹಾ ಗುರು ಬಿಕೆಎಸ್‌ ಅಯ್ಯಂಗಾರ್          



‘ಹಿ ರೋರ್ಸ್‌ ಲೈಕ್‌ ಎ ಲಯನ್‌’ (ಅವರು ಸಿಂಹದಂತೆ ಗರ್ಜಿಸುತ್ತಾರೆ) ಇದು ಅವರ ಶಿಷ್ಯರೆಲ್ಲರ ಮಾತು, ಅನುಭವ. ಅವರು ಯೋಗ ತರಗತಿ ಆರಂಭಿಸಿದಾಗ ಯೋಗಕ್ಕೆ ಭಾರತದ ಒಳಗೇ ಅಂಥ ಗೌರವವಿರಲಿಲ್ಲ. ಇನ್ನು ವಿದೇಶಗಳ ಮಾತೇನು?. ಯೋಗಕ್ಕೆ ಬೆಲೆ, ಮೌಲ್ಯ ಎರಡೂ ತಂದು ಕೊಟ್ಟ ಪದ್ಮಭೂಷಣ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಇತ್ತೀಚೆಗೆ ವಿಧಿವಶರಾದರು (ಆ. 20).
ಯೋಗವೆಂದರೆ ಕೇವಲ ಆಸನಗಳ ತರಗತಿ, ಅಭ್ಯಾಸಗಳಲ್ಲ. ಅದೊಂದು ಜೀವನ ವಿಧಾನ ಎಂಬುದನ್ನು ವಿಶ್ವಕ್ಕೆ  ತೋರಿಸಿದ ಮಹಾನ್‌ ಯೋಗ ಗುರು ಬಿಕೆಎಸ್‌.
ಯಾರು ಬೇಕಾದರೂ ಯೋಗ ಕಲಿಯಬಹುದು, ಅದಕ್ಕೆ ಜಾತಿ, ಧರ್ಮ, ಲಿಂಗ, ವಯಸ್ಸು, ರಾಷ್ಟ್ರೀಯತೆಗಳ ಸರಹದ್ದುಗಳಿಲ್ಲ ಎಂಬುದು ಅವರ ದೃಢ ವಿಶ್ವಾಸ. ‘ಯೋಗ ಎಲ್ಲರಿಗೆ’ ಇದು ಅಯ್ಯಂಗಾರ್ ಸೂತ್ರ. ಯೋಗಾಚಾರ್ಯ ಪತಂಜಲಿಯ ‘ಪಾತಂಜಲ ಯೋಗಸೂತ್ರಗಳು’ ಅವರಿಗೆ ದಾರಿದೀಪ. ಅವನು ಬೋಧಿಸಿದ ಅಷ್ಟಾಂಗ ಯೋಗವನ್ನೇ ಇವರೂ ಸಾವಿರಾರು ಯೋಗ ಶಿಕ್ಷಕರಿಗೆ ಕಲಿಸಿಕೊಟ್ಟರು. ಅವರ ಮೂಲಕ ಹಬ್ಬಿದ ಈ ಯೋಗ ‘ಅಯ್ಯಂಗಾರ್ ಯೋಗ’ ಎಂದು ಪ್ರಸಿದ್ಧವಾಗಿದೆ. ಹೀಗೆ ಇಪ್ಪತ್ತು, ಇಪ್ಪತ್ತೊಂದನೇ ಶತಮಾನದಲ್ಲಿ ಯೋಗ ಕಲಿಕೆಯ ಮೇಲೆ ವಿಶಿಷ್ಟ ಮುದ್ರೆ ಒತ್ತಿದವರು ಬಿಕೆಎಸ್‌.
ಬಿಕೆಎಸ್‌ ಜನಿಸಿದ್ದು ಕೋಲಾರದ ಬೆಳ್ಳೂರಿನಲ್ಲಿ. ತಂದೆ ಕೃಷ್ಣಮಾಚಾರ್‌ ಶಾಲಾ ಶಿಕ್ಷಕರು. ಹಾಗಾಗಿ ಕಲಿಸುವ ಕಲೆಯನ್ನು ತಂದೆಯಿಂದ ಇವರು ಹೀರಿಕೊಂಡಿದ್ದರು. ಬಾಲ್ಯದಲ್ಲಿ ಬಿಕೆಎಸ್‌ ಅವರ ದೇಹ ರೋಗಗಳ ಗೂಡು. ಮಲೇರಿಯಾ, ಟೈಫಾಯ್ಡ್, ಟಿ.ಬಿ (ಕ್ಷಯ) ಮೂರೂ ಇದ್ದವು! ಆಗ ಇನ್ನೂ ಅವರು ಯೋಗವನ್ನು ಕಲಿತಿರಲಿಲ್ಲ.
‘ನನ್ನ ತೋಳು ಕೃಶವಾಗಿತ್ತು, ಕಾಲುಗಳು ಸುರುಟಿಕೊಂಡಿದ್ದವು, ಹೊಟ್ಟೆ ಉಬ್ಬರಿಸಿಕೊಂಡಿತ್ತು. ತಲೆ ಕೆಳಗೆ ಜೋತು ಬೀಳುತ್ತಿತ್ತು, ಕಷ್ಟಪಟ್ಟು ಪ್ರಯತ್ನಪೂರ್ವಕವಾಗಿ ತಲೆ ಎತ್ತಬೇಕಿತ್ತು’ ಎಂದು ಅವರೇ ಮುಂದೆ ನೆನಪಿಸಿಕೊಂಡಿದ್ದಾರೆ.
ಮುಂದೆ ಅವರ ಪಾಲಿಗೆ ದೇಹವೇ ದೇವಾಲಯವಾಯಿತು, ಯೋಗವೇ ಅವರ ನಿತ್ಯ ಪ್ರಾರ್ಥನೆಯಾಯಿತು.
ಬಿಕೆಎಸ್‌ ಅವರ ಬದುಕು ಬದಲಾದದ್ದು ಅವರ 16ನೇ ವಯಸ್ಸಿನಲ್ಲಿ. ಗುರು ಟಿ.ಕೃಷ್ಣಮಾಚಾರ್‌ ಅವರಿಂದ ಯೋಗ ಕಲಿಯತೊಡಗಿದ ಮೇಲೆ. ಎರಡು ವರ್ಷ ಯೋಗ ಕಲಿಯುವಷ್ಟರಲ್ಲಿ ಗುರು ಇವರನ್ನು ಬೇರೆಯವರಿಗೆ ಯೋಗ ಕಲಿಸು ಎಂದು ಪುಣೆಗೆ ಕಳುಹಿಸಿದರು. ಇವರಿಗೆ ಇಂಗ್ಲಿಷ್‌ ಮಾತನಾಡಲು  ಬರುತ್ತಿತ್ತು ಎಂಬುದೂ ಒಂದು ಕಾರಣ.
ಇಲ್ಲಿಂದ ಬಿಕೆಎಸ್‌ ವಿಕಾಸ ಮೊದಲುಗೊಂಡಿತು. ಅವರು ಹಂತ ಹಂತವಾಗಿ ಯೋಗವನ್ನು ಸಾಧನೆ ಮಾಡುವುದರ ಜತೆ ಒಂದೇ ಸಮನೆ ಯೋಗದ ಸೂಕ್ಷ್ಮಗಳನ್ನು ತಮ್ಮೊಳಗೆ ತುಂಬಿಕೊಂಡರು.
ಅವರ ಮನೆ ಪೂರ್ತಿ ಯೋಗಮಯ. ಇವರನ್ನು ಮದುವೆಯಾದಾಗ ಪತ್ನಿ ರಮಾಮಣಿ ಅವರಿಗೆ 16 ವಯಸ್ಸು, ಈ ದಂಪತಿಗೆ ಐವರು ಹೆಣ್ಣು ಮಕ್ಕಳು, ಒಬ್ಬ ಮಗ. ಮಕ್ಕಳ ಪೈಕಿ ಗೀತಾ, ಪ್ರಶಾಂತ್್ ಯೋಗಕ್ಕೆ ತಮ್ಮನ್ನು ಮೀಸಲಿರಿಸಿಕೊಂಡರು.
ಒಮ್ಮೆ ಯೆಹೂಡಿ ಮೆನುಹಿನ್ ಎಂಬ ಪ್ರಸಿದ್ಧ ವಯಲಿನ್‌ ವಾದಕರನ್ನು ಭೇಟಿ ಮಾಡಿ ಅವರಿಗೆ ಯೋಗದ ಮಹತ್ವ ತಿಳಿಸಬೇಕೆಂದು ಬಿಕೆಎಸ್‌ ಬಯಸಿದರು. ಬಹಳ ದಣಿದಿದ್ದ ವಾದಕ ಇವರಿಗೆ ಕೇವಲ ಐದು ನಿಮಿಷ ಸಮಯ ಕೊಟ್ಟರು. ಅಂದಿನ ಆ ಭೇಟಿ ಮೂರು ಗಂಟೆಗಳಿಗೆ ಹಿಗ್ಗಿತು! ಬಿಕೆಎಸ್‌ ಯೆಹೂಡಿಯವರಿಗೆ ಆರಾಮವಾಗಲು ಆಸನ ಹೇಳಿಕೊಟ್ಟರು. ಅದರಂತೆ ಮಾಡಿದ ಆತ ಒಂದು ಗಂಟೆ ಇವರೆದುರಿಗೇ ಸುಖವಾಗಿ ಮಲಗಿಬಿಟ್ಟರು. ಉಲ್ಲಾಸದಿಂದ ಎದ್ದವರೇ ಯೋಗದ ಕುರಿತು ಎರಡು ತಾಸು ಅಯ್ಯಂಗಾರ್ ಹೇಳುವುದನ್ನು ಕೇಳಿಸಿಕೊಂಡರು.
ಮುಂದೆ ಮೆನುನ್‌ ಸಂಪರ್ಕದಿಂದ ಇವರ ಕೀರ್ತಿ ಯುರೋಪ್‌ ಮತ್ತು ಅಮೆರಿಕದ ಸಾವಿರಾರು ಜನರಿಗೆ ಹಬ್ಬಿ, ಅವರೆಲ್ಲಾ ಬಿಕೆಎಸ್‌ ಶಿಷ್ಯರಾದರು. ಯೆಹೂಡಿ ಮೆನುಹಿನ್್‌ ಇವರನ್ನು ಗುರು ಎಂದೇ ಸ್ವೀಕರಿಸಿದ್ದರು. 1954ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ಗೆ ಅವರನ್ನು ಯೆಹೂಡಿ ಆಹ್ವಾನಿಸಿದ್ದರು. ಅಲ್ಲಿಂದ ಬಿಕೆಎಸ್‌ ಹೊರಡುವಾಗ ಒಂದು ವಾಚ್‌ ಕಾಣಿಕೆ ನೀಡಿದ. ‘ನನ್ನ ಅತ್ಯುತ್ತಮ ವಯಲಿನ್‌ ಗುರು, ಬಿಕೆಎಸ್‌ ಅಯ್ಯಂಗಾರ್ ಅವರಿಗೆ’ ಎಂದು ವಾಚಿನ ಹಿಂಬದಿ ಕೆತ್ತಿಸಿದ್ದ! ಸಂಗೀತ ಕಛೇರಿಗಳ ಗುಣಮಟ್ಟ ಯೋಗಾಭ್ಯಾಸದಿಂದ ಹೆಚ್ಚುತ್ತದೆ ಎಂಬ ನಂಬಿಕೆ ಅವನಲ್ಲಿ ಮೊಳೆಯಿತು.
ಬಿಕೆಎಸ್‌ ಅವರ ದಿನಚರಿ ಬಹಳ ಕಟ್ಟುನಿಟ್ಟಿನದು.ಮುಂಜಾನೆ 4ಕ್ಕೆ ಏಳುತ್ತಿದ್ದರು, ಒಂದೂವರೆ ಗಂಟೆ ಪ್ರಾಣಾಯಾಮ ಮಾಡುತ್ತಿದ್ದರು. ಬಳಿಕ ಯೋಗ ತರಗತಿಗಳು. ಅದು ಇಲ್ಲದಿದ್ದರೆ ಒಂಬತ್ತೂವರೆ ತನಕ ಸ್ವತಃ ಅಭ್ಯಾಸ ಮಾಡುತ್ತಿದ್ದರು. ಸರಳ ಆಹಾರ ಸೇವನೆ ಬಳಿಕ ಮಧ್ಯಾಹ್ನ ಅವರ ಕಚೇರಿಯ ಗ್ರಂಥಾಲಯಕ್ಕೆ ಬಂದು ಕೂರುತ್ತಿದ್ದರು. ಲೇಖನ, ಬರವಣಿಗೆ ಎಲ್ಲಾ ಇಲ್ಲೆ.
ಕರ್ನಾಟಕದಿಂದ ಕಲಿಯಲು ಪುಣೆಗೆ ಬಂದ ಶಿಷ್ಯರು ಎಂದರೆ ಅವರಿಗೆ ಅಪಾರ ಅಭಿಮಾನ. ತಾನೂ ಗ್ರಂಥಾಲಯದಲ್ಲಿ ಕುಳಿತು ಈ ಸಮಯದಲ್ಲಿ ಓದುತ್ತಿರುವಾಗ ತಾವು ಕಾಫಿ ಕುಡಿಯುವ ಸಮಯದಲ್ಲಿ ಗುರುಗಳು ನನಗೂ ಒಂದು ಲೋಟ ಕಾಫಿ ತರಿಸಿಕೊಡುತ್ತಿದ್ದರು ಎಂದು ಅಭಿಮಾನದಿಂದ ಅವರ ಬೆಂಗಳೂರು ಮೂಲದ ಶಿಷ್ಯರೊಬ್ಬರು ಭಾವುಕವಾಗಿ ನೆನಪಿಸಿಕೊಳ್ಳುತ್ತಾರೆ.
ಯಾರೇ ಕಾಗದ ಬರೆದಿರಲಿ, ಅದಕ್ಕೆ ಕೂಡಲೇ ಮರು ಉತ್ತರವನ್ನು ಅವರು ಕೈಯಿಂದಲೇ ಬರೆಯುತ್ತಿದ್ದರು. ಉತ್ತರ ಬಯಸಿದವನಿಗೆ ಮೂರು ದಿನಗಳ ಒಳಗೆ ಒಂದು ಕಾರ್ಡ್‌ ಖಂಡಿತ ಬರುತ್ತಿತ್ತು.
ಸಂಜೆ ಮನೆಯ ಹೊರಗೆ ಕುರ್ಚಿ ಹಾಕಿಕೊಂಡು ಬರುತ್ತಿದ್ದ ಸಂದರ್ಶಕರನ್ನು ಮಾತನಾಡಿಸುತ್ತಿದ್ದರು.
ನಂತರ ಟಿ.ವಿ. ನೋಡುತ್ತಿದ್ದ ಅಯ್ಯಂಗಾರ್ ಅವರಿಗೆ ಧಾರಾವಾಹಿ, ಕ್ರಿಕೆಟ್‌ನಲ್ಲೂ ಆಸಕ್ತಿ ಇತ್ತೆಂದು ಅವರ ಆತ್ಮೀಯರು ನೆನಪಿಸಿಕೊಳ್ಳುತ್ತಾರೆ.
ಕೇವಲ ಜಿಡ್ಡು ಕೃಷ್ಣಮೂರ್ತಿ, ತೆಂಡುಲ್ಕರ್‌ ಮುಂತಾದ ಲೋಕ ಪ್ರಸಿದ್ಧರಿಗಲ್ಲದೇ ಅಕ್ಷರಶಃ ಸಾವಿರಾರು ಮಂದಿ ದೈಹಿಕ ಮಾನಸಿಕ ತೊಂದರೆ ಅನುಭವಿಸುತ್ತಿದ್ದ ಅನಾಮಿಕರಿಗೆ ಅವರು ಯೋಗದ ಮೂಲಕ ಆನಂದ ನೀಡಿದರು. ಯೋಗದಿಂದ ರೋಗ ನಿವಾರಣೆ ಸಾಧ್ಯ ಎಂಬುದು ಅವರ ಸೂತ್ರ. ಸ್ವತಃ ಅವರ ಬದುಕೇ ಇದಕ್ಕೆ ಜೀವಂತ ಉದಾಹರಣೆ.
ಅವರು ನೊಡಲು ಕೆದರಿದ ಕೂದಲು, ವಿಶಾಲ ಶರೀರ, ಪೊದೆಪೊದೆಯಾದ ಹುಬ್ಬುಗಳನ್ನು ಹೊಂದಿದ್ದರು. ಆದರೆ ಹೃದಯದಲ್ಲಿ ಮಾತ್ರ ಮಗುವಿನಂತೆ ಇದ್ದರು. ಆಧುನಿಕ ಜೀವನಶೈಲಿಯಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದವರಿಗೆ ಅವರು ನಿಜಕ್ಕೂ ಆಪತ್ಬಾಂಧವರಾಗಿದ್ದರು.
ಪತಂಜಲಿಯ ದಾರಿಯಲ್ಲಿ ನಡೆದ ಈ ಕನ್ನಡಿಗರು ಕೊನೆ ತನಕ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು. ಅವರನ್ನು ಈ ಕಾಲದ ಯೋಗ ಆಚಾರ್ಯ, ಆಧ್ಯಾತ್ಮಿಕ ಗುರು ಎಂದು ಕಾಣುವವರ ಸಂಖ್ಯೆ ಅಪಾರವಾಗಿದೆ. ತನ್ನ ದೈಹಿಕ ಮಿತಿ ಮೀರಲು ಹೊರಟ ಕರ್ನಾಟಕದ ಹುಡುಗನೊಬ್ಬ ಲಕ್ಷಾಂತರ ಜನರ ಬದುಕಿಗೆ ‘ಯೋಗ ಪ್ರವೇಶ’ ಮಾಡಿಸಿದ್ದು ಒಂದು ವಿಶೇಷ ವಿದ್ಯಮಾನ.


ವಿಶೇಷ

ಸಂದಿಹಲ್ಲಿನ ನಗೆಯ ಸಿನಿಮಾ ಧ್ಯಾನಿ ರಿಚರ್ಡ್ ಅಟೆನ್‌ಬರೊ




‘ಡಿ­­­ಕಿ’ ಎಂದು ವಿಶ್ವದ ಸಿನಿಮಾ ಅಭಿಮಾನಿಗಳು ಅವರನ್ನು ಕರೆದರು. ಇನ್ನೂ ಒತ್ತಿಹೇಳುವುದಾದರೆ ‘ಡಿಕಿ ಡಾರ್ಲಿಂಗ್’. ತಮಗೆ ಡಿಕಿ ಎನ್ನುವ ಹೆಸರು ಅಷ್ಟು ಇಷ್ಟವಿಲ್ಲ ಎಂದು ಕನಿಷ್ಠ ಹತ್ತು ಸಂದರ್ಶನಗಳಲ್ಲಿ ಅವರು ಹೇಳಿಕೊಂಡಿದ್ದುಂಟು. ‘ಡಿಕ್’ ಎನ್ನುವ ಹೆಸರೇ ಚೆಂದ ಎಂದು ಮುಂಭಾಗದ ಹಲ್ಲುಗಳ ಸಂದಿಯನ್ನು ತೋರಿಸಿ ನಗುತ್ತಿದ್ದರು. ವರ್ಷಗಟ್ಟಲೆ ಅವರು ‘ಸರ್ ರಿಚರ್ಡ್’; ಈಚಿನ ದಿನಗಳಲ್ಲಿ ಅಧಿಕೃತವಾಗಿ ‘ಲಾರ್ಡ್ ಅಟೆನ್‌ಬರೊ’. ಅಪರಿಚಿತರೇ ಆಗಲೀ, ತಮ್ಮನ್ನು ಏನೆಂದು ಕರೆಯುವುದು ಎಂದು ಕಳೆದ ಎಂಟ್ಹತ್ತು ವರ್ಷಗಳಲ್ಲಿ ಕೇಳಿದರೆ, ಅವರು ಹೇಳುತ್ತಿದ್ದುದು– ‘ನನ್ನನ್ನು ಬಾಲ್ಡಿ ಎನ್ನಿ’.
ರಿಚರ್ಡ್ ಅಟೆನ್‌ಬರೊ ಎಷ್ಟೆಲ್ಲಾ ಹೆಸರು ಸಂಪಾದಿಸಿದ್ದರು ಎನ್ನುವುದಕ್ಕೆ ಅವರ ಇಷ್ಟೆಲ್ಲಾ ನಾಮಧೇಯಗಳೇ ಸಾಕ್ಷಿ. ಇನ್ನು ಸಂದಿಹಲ್ಲಿನ ನಗು ಅವರ ಹೃದಯವಂತಿಕೆಗೆ ಕನ್ನಡಿ. ತಮ್ಮ ೮೪ನೇ ವಯಸ್ಸಿನಲ್ಲಿ ನೀಲಿ ಡೆನಿಮ್ ಜೀನ್ಸ್, ಟಿ–ಶರ್ಟ್ ಹಾಕಿಕೊಂಡು, ಏದುಸಿರು ಬಿಡುತ್ತಲೇ ಮೆಟ್ಟಿಲುಗಳನ್ನು ಏರುತ್ತಿದ್ದ ಅವರ ತಲೆಯಲ್ಲಿ ಆಗಷ್ಟೇ ಹೊಸ ಸ್ಕ್ರಿಪ್ಟ್ ಮೂಡಿತ್ತು. ಅವರ ಹೃದಯದಲ್ಲಿ ಪೇಸ್‌ಮೇಕರ್ ಅಳವಡಿಸಲಾಗಿತ್ತು. ಕೊನೆಯ ದಿನಗಳಲ್ಲಿ ಆ ಆರ್ದ್ರ ಹೃದಯ ಎಷ್ಟೋ ಸಲ ಹೇಳಿದ ಮಾತನ್ನು ಕೇಳುತ್ತಿರಲಿಲ್ಲ. ಪಾರ್ಶ್ವವಾಯುವಿನಿಂದ ಐದು ವರ್ಷ ಪಡಿಪಾಟಲು ಪಟ್ಟ ಅವರು ತಮ್ಮ ಆಸ್ತಿಪಾಸ್ತಿಯನ್ನೆಲ್ಲಾ ಮಾರಾಟ ಮಾಡಿ, ೨೦೧೩ರಲ್ಲಿ ಪಶ್ಚಿಮ ಲಂಡನ್‌ನ ‘ಕೇರ್ ಹೋಮ್‌’ನಲ್ಲಿ ನೆಲೆ ಪಡೆದುಕೊಂಡರು.
ಅವರ ಬದುಕಿನಲ್ಲಿ ಸಿನಿಮೀಯವೂ, ಬೆರಗು ಮೂಡಿಸುವಂಥವೂ ಆದ ಫ್ಲಾಷ್‌ಬ್ಯಾಕ್‌ಗಳಿವೆ. ೧೯೪೫ರಲ್ಲಿ ರಾಡಾದಲ್ಲಿ (ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್‌ ಆರ್ಟ್) ಕಂಡ ನಟಿ ಶಿಲಾ ಸಿಮ್ ಅವರನ್ನು ಅಟೆನ್‌ಬರೊ ಮದುವೆಯಾದರು. ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಹುಟ್ಟಿದ. ಹಿರಿಯ ಮಗಳು ಜೇನ್ ಹೋಲೆಂಡ್ ೨೦೦೪ರಲ್ಲಿ ಸುನಾಮಿ ಅಪ್ಪಳಿಸಿದಾಗ ಥಾಯ್ಲೆಂಡ್‌ನಲ್ಲಿ ಕೊಚ್ಚಿಕೊಂಡು ಹೋದರು. ಅವರೊಬ್ಬರೇ ಅಲ್ಲ; ಅವರ ಮಗಳು, ಅತ್ತೆಯೂ ನೀರುಪಾಲಾದರು. ಅದನ್ನು ವಿಪರೀತ ತಲೆಗೆ ಹಚ್ಚಿಕೊಂಡ ಅಟೆನ್‌ಬರೋ ಆರೋಗ್ಯದಲ್ಲಿ ಏರುಪೇರಾಯಿತು.
ಅದಕ್ಕಿಂತ ಒಂದು ವರ್ಷ ಮೊದಲು ಅಟೆನ್‌ಬರೋ ಹೇಳಿದ್ದರು: ‘ನಾನು ಯಾವ ರೀತಿಯಲ್ಲೂ ಬುದ್ಧಿಜೀವಿ ಅಲ್ಲ. ವಿದ್ವತ್ತಿನ ನಿರ್ಬಂಧಗಳಿಗೆ ಒಳಪಟ್ಟವನು ನಾನು. ನನ್ನ ಜ್ಞಾನದ ವ್ಯಾಪ್ತಿಗೆ ಮೀರಿದ ಯಾವುದನ್ನೂ ಮಾಡಲಾಗದ ಕಾರಣಕ್ಕೆ ಹಠಾತ್ತನೆ ಸಿಟ್ಟಿಗೇಳುತ್ತೇನೆ. ಎಂದೂ ವಿಶ್ವವಿದ್ಯಾಲಯದಲ್ಲಿ ಕಲಿತವನು ನಾನಲ್ಲ ಎಂಬ ಸಂಗತಿಯೂ ನನಗೆ ಕೋಪ ತರಿಸುತ್ತದೆ’.
ಬ್ರಿಟನ್ ಸರ್ಕಾರ ಸಾಧಕ ಎಂದು ೧೯೭೬ರಲ್ಲಿ ‘ನೈಟ್‌ಹುಡ್’ ಪದವಿ ಕೊಟ್ಟ ದಿಗ್ಗಜ, ೧೯೯೩ರಲ್ಲಿ ‘ಲೈಫ್ ಪೀರ್’ ಗೌರವ ಪಡೆದ ಅಪರೂಪದ ವ್ಯಕ್ತಿ ಅಟೆನ್‌ಬರೊ ತಮ್ಮ ೮೦ನೇ ವಯಸ್ಸಿನಲ್ಲಿಯೂ ಹೇಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಅವರ ಈ ಮಾತೇ ಪುಷ್ಟಿ. ಇಂಥ ಅಸಂಖ್ಯ ಅಭಿಪ್ರಾಯ, ಅನುಭವ ನುಡಿಗಳು ಡಯಾನಾ ಹಾಕಿನ್ಸ್ ಬರೆದ ಅಟೆನ್‌ಬರೊ ಆತ್ಮಕಥೆಯಲ್ಲಿ ಅಡಕವಾಗಿವೆ.
‘ನನ್ನ ಇಬ್ಬರೂ ಸಹೋದರರಾದ ಡೇವಿಡ್ ಹಾಗೂ ಜಾನ್ ನನಗಿಂತ ಬುದ್ಧಿವಂತರಾಗಿದ್ದರು. ಕಾರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅವರು ವಿಶ್ವವಿದ್ಯಾಲಯ ಸೇರಿದರು. ನಾನು ಡ್ರಾಮಾ ಸ್ಕೂಲ್ ಸೇರಿದೆ’ ಎಂದು ಆತ್ಮಕಥೆಯಲ್ಲಿ ಉಲ್ಲೇಖವಿದೆ. ೧೯೪೧ರಲ್ಲಿ ಮೊದಲ ಅವಧಿಯ ಕಲಿಕೆ ಮುಗಿಸಿ ಮನೆಗೆ ಬಂದಾಗ ಅಪ್ಪನ ಓದುವ ಕೋಣೆಯಲ್ಲಿ ನಾಟಕಕ್ಕೆ ಸಂಬಂಧಿಸಿದ ಕ್ಲಾಸಿಕ್ ಕೃತಿಗಳು ಕಣ್ಣಿಗೆ ಬಿದ್ದವು. ಗ್ರೀಕ್ ರಂಗಭೂಮಿ ಚರಿತ್ರೆ, ಚೀನಾ ರಂಗಭೂಮಿ ಇತ್ಯಾದಿ. ಮಗ ನಾಟಕ ಕಲಿಯತೊಡಗಿದ ಮೇಲೆ ಅಪ್ಪ ತಾನೂ ಅವುಗಳ ಬಗೆಗೆ ಓದಬೇಕು ಎಂದು ಕೊಂಡುತಂದಿದ್ದ ಪುಸ್ತಕಗಳು ಅವು ಎಂದು ತಕ್ಷಣ ಅಟೆನ್‌ಬರೊಗೆ ಗೊತ್ತಾಗಿ ಕಣ್ಣು ತೇವಗೊಂಡವು.
ರಿಚರ್ಡ್ ಸ್ಯಾಮ್ಯುಯಲ್ ಅಟೆನ್‌ಬರೊ ಹುಟ್ಟಿದ್ದು ಆಗಸ್ಟ್ 29, 1923ರಲ್ಲಿ, ಕೇಂಬ್ರಿಜ್‌ನಲ್ಲಿ. ಎರಡನೇ ಮಹಾಯುದ್ಧದ ಕಾಲದಲ್ಲಿ ‘ರಾಯಲ್‌ ಏರ್‌ಫೋರ್ಸ್‌’ನಲ್ಲಿ ಕೆಲಸ ಮಾಡಿದವರು. ಪೈಲಟ್‌ ತರಬೇತಿ ಪಡೆದರೂ ಅವರ ಗಮನ ಅಭಿನಯದ ಕಡೆಗೆ ಹೊರಳಿದ್ದು ಸೋಜಿಗ. ‘ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್‌ ಆರ್ಟ್’ನ ಮಾರ್ಗದರ್ಶಕ ರಾಗಿ ತಮ್ಮ ಕೊನೆಯುಸಿರಿರುವವರೆಗೂ ಅವರು ಸೇವೆ ಸಲ್ಲಿಸಿದರು. ಅವರ ಅಭಿನಯದ ಹಣೆಬರಹ ಬರೆದ ಆ ಸಂಸ್ಥೆಗೂ ಮೊದಲು ಲೀಸೆಸ್ಟರ್‌ಷೈರ್‌ನ ಲಿಟ್ಲ್‌ ಥಿಯೇಟರ್‌ನಲ್ಲಿ ತಾಲೀಮಿಗೆ ಒಡ್ಡಿಕೊಂಡಿದ್ದರು.
ಸಿನಿಮಾ ರಂಗದ ನಂಟು ಹತ್ತಿಸಿಕೊಂಡು, 1942ರ ವೇಳೆಗಾಗಲೇ ಅಭಿನಯಿಸ ತೊಡಗಿದರು. ಅವರಿಗೆ ಹೆಸರು ತಂದುಕೊಟ್ಟಿದ್ದು ‘ಬ್ರಿಗ್ಟನ್‌ ರಾಕ್‌’ (1947) ಚಿತ್ರದಲ್ಲಿನ ನೆಗೆಟಿವ್ ಪಾತ್ರ. ಅದಾಗಿ ಎರಡು ವರ್ಷ ಉರುಳುವುದರಲ್ಲಿ ಬ್ರಿಟನ್‌ನ ಜನಪ್ರಿಯ ನಟರ ಸಾಲಿನಲ್ಲಿ ಅವರ ಹೆಸರಿತ್ತು. 1967–68ರಲ್ಲಿ ಸತತ ಎರಡು ವರ್ಷ ‘ಗೋಲ್ಡನ್‌ ಗ್ಲೋಬ್‌’ ಪ್ರಶಸ್ತಿ ಅವರಿಗೆ ಒಲಿಯಿತು.
ಎಪ್ಪತ್ತೆಂಟು ಸಿನಿಮಾಗಳಲ್ಲಿ ಅಭಿನಯ, ಹನ್ನೆರಡು ಸಿನಿಮಾಗಳ ನಿರ್ದೇಶನ, ಹದಿಮೂರರ ನಿರ್ಮಾಣ ಸಂಖ್ಯಾ ದೃಷ್ಟಿಯಲ್ಲಿ ಅಷ್ಟು ದೊಡ್ಡದೇನೂ ಅಲ್ಲ. ಆದರೆ, ಅವರ ದೊಡ್ಡಸ್ಥಿಕೆ ಇರುವುದು ‘ಗಾಂಧಿ’ ಕುರಿತ ಸಿನಿಮಾ ಮಾಡಿದುದರಲ್ಲಿ. ಹದಿನೆಂಟು ವರ್ಷಗಳ ತಪಸ್ಸು ಅದು. ಲಂಡನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೋತಿಲಾಲ್‌ ಕೊಠಾರಿ ಎನ್ನುವ ಗಾಂಧಿವಾದಿ ತುಂಬಿದ ಮಹಾತ್ಮನ ಬದುಕಿನ ಚಿತ್ರಣಗಳನ್ನು ಸಿನಿಮಾ ಆಗಿ ಮೂಡಿಸುವ ಬಯಕೆ ಮೂಡಿಸಿಕೊಂಡ ಅಟೆನ್‌ಬರೊ ಅದಕ್ಕಾಗಿ ಸವೆಸಿದ ಹಾದಿ ಕಷ್ಟದ್ದೇ ಆಗಿತ್ತು. ಆ ಸಿನಿಮಾದ ಎರಡನೇ ಕ್ಯಾಮೆರಾ ಯೂನಿಟ್‌ನಲ್ಲಿ ಸಹಾಯಕ ಸಿನಿಮಾಟೋ ಗ್ರಫರ್‌ ಆಗಿದ್ದ ಜಿ.ಎಸ್‌. ಭಾಸ್ಕರ್‌ ಆ ಕಾಲಘಟ್ಟದ ಅನುಭವಗಳನ್ನು ನೆನೆಯುವುದು ಹೀಗೆ: ‘ಅಟೆನ್‌ಬರೊ ಅವರ ಜೊತೆ ಮಾತುಕತೆಗೆ ತೊಡಗುವ ಅವಕಾಶ ನನಗೆಂದೂ ಸಿಗಲಿಲ್ಲ. ಆದರೆ, ಆ ಅಗಾಧ ಕೆಲಸದ ಭಾಗವಾದುದರಿಂದ ಅನೇಕ ಸಿನಿಮಾಟೋಗ್ರಫಿಯ ಸೂಕ್ಷ್ಮಗಳನ್ನು ಕಲಿತೆ. ಮುಖ್ಯವಾಗಿ ಪಾಶ್ಚಾತ್ಯ ಚಿತ್ರ ತಯಾರಿಕೆಯಲ್ಲಿ ಇರುವ ಶಿಸ್ತಿನಿಂದ ನಾನು ಸಾಕಷ್ಟು ಕಲಿತೆ. ನಮ್ಮಲ್ಲಿ ಆ್ಯಕ್ಷನ್‌, ಕಟ್‌ ಹೇಳುವವರು ನಿರ್ದೇಶಕರು. ಆದರೆ, ಅಲ್ಲಿ ಸಹಾಯಕ ನಿರ್ದೇಶಕರು ಆ ಕೆಲಸ ಮಾಡುತ್ತಾರೆ. ಅಟೆನ್‌ಬರೊ ಇಡೀ ನಿರ್ದೇಶನದ ರೂಹನ್ನು ನಿರ್ಧರಿಸಿ, ಎಲ್ಲವನ್ನೂ ದೂರದಿಂದಲೇ ನಿಯಂತ್ರಿಸುತ್ತಿದ್ದ ವೈಖರಿಯೇ ಬೆರಗು ಮೂಡಿಸುವಂಥದ್ದು’.
1981, ಜನವರಿ 31ರಂದು ಗಾಂಧಿ ಅಂತಿಮ ಸಂಸ್ಕಾರದ ಚಿತ್ರೀಕರಣ ನಡೆಯಿತು. ಅದಕ್ಕೆ ಪೂರ್ವಭಾವಿಯಾಗಿ ದೊಡ್ಡ ಕಾನ್ಫರೆನ್ಸ್‌ ರೂಮ್‌ನಲ್ಲಿ ಹಿಂದಿನ ದಿನವೇ ಎಲ್ಲಾ ತಂತ್ರಜ್ಞರಿಗೂ ನಕಾಶೆ ತೋರಿಸಿ, ಎಲ್ಲೆಲ್ಲಿ ಯಾವ್ಯಾವ ಕ್ಯಾಮೆರಾವನ್ನು ಯಾವ ಕೋನದಲ್ಲಿ ಇಡಬೇಕು ಎಂದು ಯೋಜಿಸಲಾಯಿತು. ಸುಮಾರು 12 ಕ್ಯಾಮೆರಾಗಳು ಚಿತ್ರೀಕರಣಕ್ಕೆ ಸಜ್ಜಾಗಿದ್ದವು. ಯಾವ ಶಾಟ್‌ ಕೂಡ ಓವರ್‌ಲ್ಯಾಪ್‌ ಆಗದಂತೆ ಎಚ್ಚರ ವಹಿಸಿದ್ದೇ ಒಂದು ಸೋಜಿಗ. ನಮ್ಮಲ್ಲಿ ರೋಲ್‌, ಕ್ಯಾಮೆರಾ ಎಂದೊಡನೆ ಆ್ಯಕ್ಷನ್‌ ಹೇಳಿಬಿಡಬೇಕು ಎಂಬ ತುರ್ತು ಸೃಷ್ಟಿಯಾಗುತ್ತದೆ. ಆದರೆ, ಅಲ್ಲಿ ರೋಲ್‌, ಕ್ಯಾಮೆರಾ ಎಂದು ಸಹಾಯಕ ನಿರ್ದೇಶಕ ಹೇಳಿದ ನಂತರವೂ ವಿನ್ಸ್‌ ವಾಕರ್‌ ಪಾತ್ರಧಾರಿ ಮಾರ್ಟಿನ್‌ ಶೀನ್‌ ಅವರಿಗೆ ಖುದ್ದು ಅಟೆನ್‌ಬರೊ, ಎಲ್ಲಿಂದ ಹೇಗೆ ಸಾಗಬೇಕು ಎಂದು ರನ್ನಿಂಗ್‌ ಕಾಮೆಂಟ್ರಿ ಕೊಡತೊಡಗಿದರು. 18 ಟೇಕ್‌ಗಳ ನಂತರ ಓಕೆ ಆದ ಆ ಶಾಟ್‌ ಇನ್ನೂ ಭಾಸ್ಕರ್‌ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಬೆನ್‌ ಕಿಂಗ್ಸ್‌ಲೇ ಅಭಿನಯದ ‘ಗಾಂಧಿ’ ಸಿನಿಮಾ ನೋಡದೆ ಮಹಾತ್ಮನ ಕುರಿತ ಇನ್ನೊಂದು ದೃಶ್ಯ ಪ್ರಯೋಗ ನಡೆಯುವುದೇ ವಿರಳ. ‘ಕೂರ್ಮಾವತಾರ’ ಚಿತ್ರದಲ್ಲಿ ಗಾಂಧಿ ಪಾತ್ರಧಾರಿಯ ಕಣ್ಣಲ್ಲಿ ಒಂದೇ ಹನಿ ನೀರು ಬರಬೇಕು ಎಂದು ಧಾರಾವಾಹಿ ನಿರ್ದೇಶಕ ತಾಕೀತು ಮಾಡುವ ವ್ಯಂಗ್ಯಸೂಕ್ಷ್ಮವನ್ನು ಹೇಳಲು ಅಟೆನ್‌ಬರೊ ಮರುಸೃಷ್ಟಿಸಿದ ‘ಗಾಂಧಿ’ ಸಿನಿಮಾದ ದೃಶ್ಯವನ್ನೇ ಗಿರೀಶ್‌ ಕಾಸರವಳ್ಳಿ ಬಳಸಿರುವುದು ಇದಕ್ಕೆ ಸಾಕ್ಷಿ.
ರಮ್ಯ ಕಥಾನಕಗಳ ದೊಡ್ಡ ಹಂದರಕ್ಕೆ ಹೆಚ್ಚು ಜೋತುಬೀಳುವ ಮನಸ್ಸುಗಳ ನಡುವೆ ಇತಿಹಾಸದ ಆವರಣಕ್ಕೆ ಅಟೆನ್‌ಬರೊ ಪದೇಪದೇ ಪ್ರವೇಶಿಸಿ, ಸಿನಿಮಾ ಪ್ರಯೋಗ ಮಾಡಿದರು. ಚರ್ಚಿಲ್‌ರ ಕುರಿತ ‘ಯಂಗ್‌ ವಿನ್‌ಸ್ಟನ್‌’ (1972) ಹಾಗೂ ಚಾರ್ಲಿ ಚಾಪ್ಲಿನ್‌ ಬಗೆಗಿನ ‘ಚಾಪ್ಲಿನ್‌’ (1992) ಚಿತ್ರಗಳು ಇದಕ್ಕೆ ಉದಾಹರಣೆಗಳು.  ಐರ್ಲೆಂಡ್‌ ಕವಿ ಸಿ.ಎಸ್‌. ಲೆವಿಸ್‌ ವಿಚ್ಛೇದಿತ ಮಹಿಳೆಯೊಂದಿಗೆ ಹೊಂದಿದ್ದ ಸಂಬಂಧದ ವಸ್ತುವಿನ ‘ಶಾಡೊ ಲ್ಯಾಂಡ್ಸ್‌’ ಬಗೆಗೆ ಹಲವು ಟೀಕೆ–ಟಿಪ್ಪಣಿಗಳು ವ್ಯಕ್ತವಾದಾಗ ಅದೇ ಸಂದುಹಲ್ಲುಗಳ ನಗೆ ಚೆಲ್ಲಿದ್ದರು ಅಟೆನ್‌ಬರೊ.
‘ಜುರಾಸಿಕ್‌ ಪಾರ್ಕ್‌’ನಲ್ಲಿ ಊರುಗೋಲು ಹಿಡಿದು ಥೀಮ್‌ ಪಾರ್ಕ್‌ ಡೆವಲಪರ್‌ ಪಾತ್ರದಲ್ಲಿ ತಮ್ಮ ಹಳೆಯ ಗತ್ತನ್ನು ನೆನಪಿಸಿ, ಅಭಿನಯದ ಕೊನೆಯ ಇನಿಂಗ್ಸ್‌ ತೋರಿದ ಅವರು, ಹೆಸರಾಂತ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್ ಮನಸ್ಸನ್ನೂ ಗೆದ್ದವರು. ‘ಕ್ಲೋಸಿಂಗ್‌ ದಿ ರಿಂಗ್’ (2007) ಅವರ ನಿರ್ದೇಶನದ ಕೊನೆಯ ಚಿತ್ರ.
ಅವರು ನಿರ್ಮಿಸಿದ ‘ದಿ ಆ್ಯಂಗ್ರಿ ಸೈಲೆನ್ಸ್‌’, ‘ವಿಷಲ್‌ ಡೌನ್‌ ಅಂಡ್‌ ವಿಂಡ್‌’ ಬಹುಕಾಲ ನೆನಪಿನಲ್ಲಿ ಇಡುವಂಥವು. ‘ಓಹ್‌! ವಾಟ್‌ ಎ ಲವ್ಲಿ ವಾರ್‌’ (1969) ಅವರ ನಿರ್ದೇಶನದ ಮೊದಲ ರುಜು.
ಚೆಲ್ಸಿ ಫುಟ್‌ಬಾಲ್‌ ಕ್ಲಬ್‌ನ ಪರಮ ಅಭಿಮಾನಿಯಾಗಿದ್ದ ಅವರು, 1969–82ರವರೆಗೆ ಅದರ ನಿರ್ದೇಶಕರಾಗಿ ಕೆಲಸ ಮಾಡಿದರು. 1993–2008ರವರೆಗೆ ಗೌರವ ಉಪಾಧ್ಯಕ್ಷನಾಗುವ ಭಾಗ್ಯವೂ ಅವರದ್ದಾಯಿತು.
ಮಗ ಮೈಕಲ್‌ ಅಪ್ಪನಂತೆ ರಂಗ ನಿರ್ದೇಶನದಲ್ಲಿ ತೊಡಗಿದ್ದರೆ, ಬದುಕಿ ಉಳಿದಿರುವ ಮಗಳು ಶಾರ್ಲೊಟ್‌ ನಾಟಕಗಳಲ್ಲಿ ಅಭಿನಯಿಸಲು ಬಣ್ಣ ಹಚ್ಚುತ್ತಿದ್ದಾರೆ. ಪತಿಯ ಆರೋಗ್ಯ ಕೈಕೊಟ್ಟಾಗಲೇ ‘ಸೆನೆಲ್ ಡೆಮೆನ್ಷಿಯಾ’ ಎಂಬ ನೆನಪಿನ ಶಕ್ತಿ ಕುಂದಿದ ಕಾಯಿಲೆಗೆ ಪತ್ನಿ ಶೆಲಾ ಸಿಮ್ ತುತ್ತಾದರು. ತಮ್ಮ ಪತಿಗಿಂತ ಒಂದು ವರ್ಷ ವಯಸ್ಸಿನಲ್ಲಿ ದೊಡ್ಡವರಾದ ಅವರಿಗೆ ತಾವು ಮಾರಿದ ಆಸ್ತಿ ಪಾಸ್ತಿಯ ನೆನಪೂ ಸರಿಯಾಗಿ ಇಲ್ಲ.
‘ನಿತ್ಯವೂ ಯಾರು ಯಾರಿಗೆ ಸಂತಾಪ ಸೂಚಿಸಲಾಗಿದೆ ಎಂದು ಪತ್ರಿಕೆಗಳ ಪುಟಗಳನ್ನು ತಿರುಗಿಸಿ ನೋಡುತ್ತೇನೆ. ಅಲ್ಲಿ ನನ್ನ ಹೆಸರು ಇಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಮತ್ತೆ ಕೆಲಸಕ್ಕೆ ಅಣಿಯಾಗುತ್ತೇನೆ’ ಎಂದು ತಮ್ಮ ಎಂಬತ್ತೈದರ ಹರೆಯದಲ್ಲೂ ಹೇಳುತ್ತಿದ್ದ ಅಟೆನ್‌ಬರೊ ಜೀವನಪ್ರೀತಿಯನ್ನು ಅವರು ಕೊನೆಯುಸಿರೆಳೆದ ಆಗಸ್ಟ್‌ 25ರಂದು ಅನೇಕರು ನೆನೆದರು. ಹಾಗೆ ನೆನಪಿಸಿಕೊಂಡು ಹನಿಗಣ್ಣಾಗುವವರ ಎದೆಗಳಲ್ಲಿ ಈಗಲೂ ಅವರು ಬದುಕಿದ್ದಾರೆ!   


ವ್ಯಕ್ತಿ

ಕೃಷ್ಣ ಸುಂದರಿಯ ಅನನ್ಯ ಸಾಧನೆ          



‘ಕನ್ನಡಿ ಮುಂದೆ ನಿಂತು ಪ್ರತಿ ಬಾರಿ ನನ್ನ ದೇಹ ನೋಡಿಕೊಂಡಾಗ ಮೈಕಟ್ಟಿನ ಬಗ್ಗೆ ಕೀಳರಿಮೆ ಉಂಟಾಗುತಿತ್ತು. ಎದೆಯ ಮತ್ತು ತೊಡೆಗಳ ಭಾಗ ತುಂಬಾ ದಪ್ಪವಾಗಿದೆ ಎನಿಸುತ್ತಿತ್ತು. ದೇಹವನ್ನು ಸಹಜ ಸ್ಥಿತಿಗೆ ತರಲು ದೈಹಿಕ ಕಸರತ್ತು ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡಿದೆ. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಹುಡುಗರು ಹಾಗಿರಲಿ, ಹುಡುಗಿಯರೂ ನನ್ನನ್ನು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ನನ್ನ ಕೈಹಿಡಿದಿದ್ದು ಟೆನಿಸ್‌. ಇದರಿಂದಾಗಿ ನನ್ನ ಬೆತ್ತಲೆ ದೇಹಕ್ಕೂ ಬೇಡಿಕೆ ಉಂಟಾಯಿತು’.
ನಿಯತಕಾಲಿಕೆಯೊಂದರ ಮುಖಪುಟಕ್ಕಾಗಿ ಬಟ್ಟೆ ಕಳಚಿ ಛಾಯಾಗ್ರಾಹಕನ ಮುಂದೆ ನಿಂತ ಸಂದರ್ಭದ ಬಗ್ಗೆ ಟೆನಿಸ್‌ ಲೋಕದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಪ್ರತಿಕ್ರಿಯಿಸಿದ್ದುದು ಹೀಗೆ. ಹಿರಿಯ ಸಹೋದರಿ ವೀನಸ್‌ ವಿಲಿಯಮ್ಸ್‌ ಕೂಡ ಬೆತ್ತಲೆಯಾಗಿ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು.
ಹೌದು, ಸ್ವತಃ ಸೆರೆನಾ ಹೇಳಿಕೊಂಡಂತೆ ಅವರ ರೂಪ ಹಾಗೂ ದೇಹ ರಚನೆ ಪ್ರಸಕ್ತ ಜಾಹೀರಾತು ಹಾಗೂ ಮಾರುಕಟ್ಟೆ ಲೋಕ ಬಯಸುವ ಮಟ್ಟದಲ್ಲಿಲ್ಲ. ಆದರೆ, ಟೆನಿಸ್‌ ಜೀವನ ಅವರ ಬದುಕನ್ನೇ ಬದಲಾಯಿಸಿತು. ಬಹುಮಾನದ ಮೊತ್ತವಾಗಿ ಅವರು ಇದುವರೆಗೆ ₨ 360 ಕೋಟಿಗೂ ಹೆಚ್ಚು ಹಣ ಸಂಪಾದಿಸಿದ್ದಾರೆ. ವಿಶ್ವದ ಬೇರೆ ಯಾವುದೇ ಮಹಿಳಾ ಕ್ರೀಡಾಪಟು ಇಷ್ಟು ಹಣ ಗಳಿಸಿಲ್ಲ.
ಟೆನಿಸ್‌ ಅಂಗಳಕ್ಕೆ ಕಾಲಿರಿಸುವ ಮುನ್ನ ಆಫ್ರಿಕನ್‌–ಅಮೆರಿಕನ್‌ ಮೂಲದ ಸೆರೆನಾ, ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಕ್ಯಾಲಿಫೋರ್ನಿಯಾದ ಕಾಂಪ್ಟನ್‌ ಇವರ ತವರು. ಕೋಟಿಗಟ್ಟಲೆ ಹಣದ ಮುಖ ನೋಡುವ ಮುನ್ನ ಕೋಟಿ ಕೋಟಿ ಕಷ್ಟಗಳನ್ನು ಎದುರಿಸಿದ್ದಾರೆ. ದೀಪದ ಕೆಳಗೆ ಕತ್ತಲು ಎನ್ನುವಂತೆ ಅವರ ಬದುಕು ಸೋಲು, ಗೆಲುವುಗಳ ಮಿಶ್ರಣ.
ವರ್ಣಭೇದದ ನಡುವೆ ತಂದೆ ರಿಚರ್ಡ್‌ ವಿಲಿಯಮ್ಸ್‌ ಪ್ರತಿ ಕ್ಷಣವೂ ಅವಮಾನ ನುಂಗುತ್ತಾ ತನ್ನ ಐವರು ಪುತ್ರಿಯರನ್ನು ಬೆಳೆಸಬೇಕಾಯಿತು. ಟೆನಿಸ್‌ ಆಟದಲ್ಲಿ ಆಸಕ್ತಿ ಹೊಂದಿದ್ದ ಸೆರೆನಾ ಹಾಗೂ ವೀನಸ್‌ ಮೇಲೆ ರಿಚರ್ಡ್‌ಗೆ ವಿಪರೀತ ಪ್ರೀತಿ. ತಮಗಾದ ಅವಮಾನಗಳಿಂದ ಹೊರಬರಲು ಅವರು ತಮ್ಮ ಪುತ್ರಿಯರನ್ನೇ ಅಸ್ತ್ರಗಳನ್ನಾಗಿ ಮಾಡಿಕೊಂಡರು. ಮಕ್ಕಳನ್ನು ಅತ್ಯುತ್ತಮ ಟೆನಿಸ್‌ ಆಟಗಾರ್ತಿಯರನ್ನಾಗಿ ರೂಪಿಸಬೇಕೆಂಬ ಛಲ ಹೊಂದಿದ್ದ ಅವರು ಮಾಡಿದ ತ್ಯಾಗ, ಎದುರಿಸಿದ ಮೂದಲಿಕೆ ಅಷ್ಟಿಷ್ಟಲ್ಲ.
‘ಪುತ್ರಿಯರು ಟೆನಿಸ್‌ ಆಡುವುದನ್ನು ಕಣ್ತುಂಬಿಕೊಳ್ಳಬೇಕು. ಅವರ ಆಟ ಮೆಚ್ಚಿ ಜನರು ಹೊಡೆಯುವ ಚಪ್ಪಾಳೆ ಸದ್ದಿಗೆ ಕಿವಿಗೊಡಬೇಕು. ಕ್ರೀಡಾಂಗಣದಲ್ಲಿ ಎಲ್ಲರ ಮುಂದೆ ಮಕ್ಕಳನ್ನು ತಬ್ಬಿಕೊಂಡು ಸಂಭ್ರಮಿಸಬೇಕು’ ಎಂಬುದು ಅವರ ಕನಸಾಗಿತ್ತು.
ಚೆಂಡನ್ನು ಖರೀದಿಸಲೂ ಸಾಧ್ಯವಿಲ್ಲದಂಥ ಬಡತನ. ಅದಕ್ಕಾಗಿ ಸ್ಥಳೀಯ ಕ್ಲಬ್‌ಗಳಲ್ಲಿ ಕಾಡಿ ಬೇಡಿ ಚೆಂಡನ್ನು ತಂದುಕೊಡುತ್ತಿದ್ದರು. ಇಷ್ಟಾದರೂ ಟೆನಿಸ್‌ ಆಡಲು ಈ ಸಹೋದರಿಯರಿಗೆ ಅವಕಾಶ ಸಿಗುತ್ತಿರಲಿಲ್ಲ. ಇದನ್ನು ಸೆರೆನಾ ಪದೇಪದೇ ನೆನಪಿಸಿಕೊಳ್ಳುತ್ತಿರುತ್ತಾರೆ.
‘ಈ ಕಪ್ಪು ಹುಡುಗಿಯರಿಗೆ ಟೆನಿಸ್‌ ಆಡಲು ಅವಕಾಶ ನೀಡಬಾರದು. ಬೇರೆ ಏನನ್ನಾದರೂ ಮಾಡಿಕೊಂಡಿರಲಿ ಎಂದು ಸುತ್ತಮುತ್ತಲಿನವರು ನಮ್ಮನ್ನು ಸದಾ ಹೀಯಾಳಿಸುತ್ತಿದ್ದರು. ಅವಮಾನ ನುಂಗಿಕೊಂಡು ಮುಂದೆ ಸಾಗದೆ ನಮಗೆ ಬೇರೆ ವಿಧಿ ಇರಲಿಲ್ಲ’ ಎಂದು ಹೇಳುತ್ತಾರೆ.
ಮೂವತ್ತೆರಡು ವರ್ಷ ವಯಸ್ಸಿನ ಸೆರೆನಾ ಈಗ ವಿಶ್ವದ ನಂಬರ್‌ ಒನ್‌ ಆಟಗಾರ್ತಿ. 18 ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಪ್ರಶಸ್ತಿಗಳ ಒಡತಿ.  ಸಿಂಗಲ್ಸ್‌ ಮಾತ್ರವಲ್ಲ, ಡಬಲ್ಸ್‌ನಲ್ಲಿ 13 ಬಾರಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಎರಡು ಬಾರಿ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ.  ವೃತ್ತಿಜೀವನದ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಯನ್ನು ಅವರು 1999ರಲ್ಲಿ ಸ್ವದೇಶದಲ್ಲಿಯೇ ಜಯಿಸಿದ್ದರು. ಆಗ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು.
ಅಕ್ಕ ವೀನಸ್‌ ಏಳು ಬಾರಿ ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದಾರೆ. ಆದರೆ,  ಸಾಧನೆಯಲ್ಲಿ ಸೆರೆನಾ ಅಕ್ಕನನ್ನು ಮೀರಿಸಿದ್ದಾರೆ. ಇವರಿಗಿಂತ ಎರಡು ವರ್ಷ ದೊಡ್ಡವರು ವೀನಸ್‌. ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯ ಫೈನಲ್‌ನಲ್ಲಿ ಇವರಿಬ್ಬರು ಎಂಟು ಬಾರಿ ಪರಸ್ಪರ ಎದುರಾಗಿದ್ದಾರೆ. ಇದರಲ್ಲಿ ಸೆರೆನಾ ಆರು ಬಾರಿ ಗೆದ್ದಿದ್ದಾರೆ.
‘ಟೆನಿಸ್‌ ಆಟ ನನ್ನ ಬದುಕು, ನನ್ನ ಉಸಿರು. ಪ್ರಿಯಕರನಿಲ್ಲದ ರಾತ್ರಿ ಕಳೆಯಬಲ್ಲೆ. ಆದರೆ, ಟೆನಿಸ್‌ ಆಡದೆ ನನಗೆ ನಿದ್ರೆ ಬಾರದು’ ಎನ್ನುತ್ತಾರೆ ಕೃಷ್ಣ ಸುಂದರಿ. ವಿಶೇಷವೆಂದರೆ ಇವತ್ತಿಗೂ ಅವರಿಗೆ ತಂದೆಯೇ ಕೋಚ್‌. ಸೆರೆನಾಗೆ ಈಗ ಒಬ್ಬ ‘ಬಾಯ್‌ಫ್ರೆಂಡ್‌’ ಕೂಡ ಇದ್ದಾನೆ. ಆದರೆ, ‘ಈ ಪ್ರಪಂಚದಲ್ಲಿ ನನ್ನ ತಂದೆಗಿಂತ ಸುಂದರವಾದ ಗಂಡಸು ಯಾರೂ ಇಲ್ಲ’ ಎಂದಿದ್ದಾರೆ ಸೆರೆನಾ. 
ಅವರು ಈಗ ಮತ್ತೊಂದು ಸಾಧನೆಗೆ ಭಾಜನರಾಗಿದ್ದಾರೆ. ಕಳೆದ ಭಾನುವಾರ ಯುಎಸ್‌ ಓಪನ್‌ ಟೆನಿಸ್‌ ಜಯಿಸುವ ಮೂಲಕ 18ನೇ ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಕೀರ್ತಿಗೆ ಪಾತ್ರರಾದರು. ಈ ಮೂಲಕ ಅತಿ ಹೆಚ್ಚು ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಗೆದ್ದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾರ್ಗರೆಟ್‌ ಕೋರ್ಟ್‌ (24), ಜರ್ಮನಿಯ ಸ್ಟೆಫಿ ಗ್ರಾಫ್‌ (22) ಮತ್ತು ಅಮೆರಿಕದ ಹೆಲೆನ್‌ ವಿಲ್ಸ್‌ ಮೂಡಿ (19) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
ಒಂದು ಸಮಯದಲ್ಲಿ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಸೆರೆನಾ ಈಗ ವಿಶ್ವದ ವಿವಿಧೆಡೆ ಫ್ಯಾಷನ್‌ ಶೋಗಳಲ್ಲಿ ಪಾಲ್ಗೊಂಡು ಗಮನ ಸೆಳೆಯುತ್ತಿದ್ದಾರೆ. ಹೆಚ್ಚು ಬೇಡಿಕೆ ಇರುವ ಆಟಗಾರ್ತಿ ಕೂಡ. ಹಲವು ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿದ್ದಾರೆ. ವಸ್ತ್ರ ವಿನ್ಯಾಸದಲ್ಲೂ ಹೆಸರು ಮಾಡಿದ್ದಾರೆ.
ವಿವಾದಗಳ ಮೂಲಕವೂ ಸೆರೆನಾ ಸದ್ದು ಮಾಡಿದ್ದಾರೆ. ಟೀಕಾ ಪ್ರಹಾರಕ್ಕೆ ಗುರಿಯಾಗಿದ್ದುಂಟು. ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಪುರುಷರಿಗೆ ನೀಡುವಷ್ಟು ಬಹುಮಾನ ಮೊತ್ತವನ್ನು ಮಹಿಳೆಯರಿಗೂ ನೀಡಬೇಕು ಎಂದು ಮೊದಲು ಧ್ವನಿ ಎತ್ತಿದವರು ವಿಲಿಯಮ್ಸ್‌ ಸಹೋದರಿಯರು. ಅದೇನೇ ಇರಲಿ, ತಂದೆ ರಿಚರ್ಡ್‌ ವಿಲಿಯಮ್ಸ್‌ ಅಂದು ಕಂಡ ಕನಸು ನನಸಾಗಿದೆ.  ಕ್ರೀಡಾಂಗಣದಲ್ಲಿ ಕುಳಿತು ತನ್ನ ಪುತ್ರಿಯರ ಆಟ ನೋಡಬೇಕು, ಸಾಧನೆ ಮಾಡಿದಾಗ ಅವರನ್ನು ತಬ್ಬಿಕೊಂಡು ಮುದ್ದಾಡಬೇಕು ಎಂಬ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಸೆರೆನಾ ಆಡುವ ಪ್ರತಿ ಅಂಗಳದಲ್ಲಿ ಅವರ ತಂದೆಯ ಹಾಜರಾತಿ ಇದ್ದೇ ಇರುತ್ತದೆ.


ವ್ಯಕ್ತಿ

ಸೃಜನಶೀಲ ವಿದ್ವಾಂಸ ನಾಮವರ ಸಿಂಗ್          

 

ಥಟ್ಟನೆ ನೋಡಿದರೆ, ಒಂದು ಕೋನದಿಂದ ಕಲಾವಿದ ಕೆ.ಕೆ. ಹೆಬ್ಬಾರರನ್ನು, ಇನ್ನೊಂದು ಕೋನದಿಂದ ಜ್ಯೋತಿ ಬಸು ಅವರನ್ನು ಹೋಲುವ ಈ ಮಹನೀಯ ಹೆಸರಿಗೆ ತಕ್ಕಂತೆ ‘ಹೆಸರಾಂತ ವ್ಯಕ್ತಿ’.  ಇವರು ಪ್ರೊ. ನಾಮವರ ಸಿಂಗ್. ಹಿಂದಿ ಭಾಷಿಕ ಸಾಹಿತ್ಯ ವಲಯದ ಶ್ರೇಷ್ಠ ಆಲೋಚಕ. ಸಾಂಪ್ರದಾಯಿಕತೆಯ ವಿರುದ್ಧ ನಿರಂತರ ಸಂಘರ್ಷದಲ್ಲಿ ತೊಡಗಿರುವ ಸೃಜನಶೀಲ. ಸಮಾಜಮುಖಿ ಚಿಂತಕ. ಮತ್ತು ಪ್ರಖರ ಮಾರ್ಕ್ಸ್ ವಾದಿ. 
ಅವರಿಗೆ ಚರ್ಚೆ ಎಂದರೆ ಹಸಿವು ಮರೆಯುವಷ್ಟು ಆಸಕ್ತಿ. ವಿಮರ್ಶೆ ಎಂದರೆ ಎಲ್ಲಿಲ್ಲದ ಹುಕಿ. ಮಾತು ಎಂದರೆ ಪ್ರೀತಿ. ಅದು ಕಾಡು ಹರಟೆಯಲ್ಲ, ಅರ್ಥಪೂರ್ಣ ಸಂವಾದ. ತಾವು ನಂಬಿದ ದಾರಿಯನ್ನು ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುವ ಅವರ ಪರಿಯೇ ಅನನ್ಯ. ಆದರೆ, ಎಂದಿಗೂ ಅವರು ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ‘ಹೇರು’ವುದಿಲ್ಲ. ಎದುರಿಗಿರುವವರು ಒಪ್ಪುವ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ ಈ ಪ್ರೊಫೆಸರ್ ಸಾಹೇಬರು. ಅವರ ಮಾತೆಂದರೇ ಹಾಗೆ. ಅದು ಸ್ಫಟಿಕದ ಶಲಾಕೆ. 
ಅಂತೆಯೇ ಅವರು ಹಿಂದೀ ಸಾಹಿತ್ಯದ ಸುಪ್ರಸಿದ್ಧ ಕತೆಗಾರರು, ಕವಿಗಳು, ಕಾದಂಬರಿಕಾರರು ಇತ್ಯಾದಿ ಎಲ್ಲರೊಂದಿಗೆ ಆಗಾಗ ‘ಸಂವಾದ’ ಏರ್ಪಡಿಸುವುದುಂಟು. ಇದು ನಾಲ್ಕು ದಶಕಗಳಿಂದಲೂ ನಡೆದುಬಂದ ಪರಿಪಾಠ. ಅವರು ಭಾಗವಹಿಸುವ ‘ಸಂವಾದ’ಗಳು ಬಲು ವಿಶೇಷದವು. ಆ ‘ಮಾತುಕತೆ’ಯನ್ನು ಪುಸ್ತಕರೂಪದಲ್ಲಿ ಆಸಕ್ತರಿಗೆ ಒದಗಿಸುತ್ತ ಬಂದಿರುವುದು ಓದುಗರಿಗೆ ಅವರು ಮಾಡಿದ ದೊಡ್ಡ ಉಪಕಾರ.  
                    
ಹೀಗೆ ಕಳೆದ ಆರು ದಶಕಗಳಿಂದ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಪ್ರೊ. ನಾಮವರ ಸಿಂಗ್ ಸಾಹಿತ್ಯಕ್ಕೆ ಸಂಬಂಧಪಟ್ಟ ಹಾಗೆ ‘ಹೊಸ ಪರಂಪರೆಯ ಶೋಧ’ದಲ್ಲಿ ಸಾಗಿರುವವರು. ‘ಆಲೋಚನಾ’ ಎಂಬ ಸಾಹಿತ್ಯ ತ್ರೈಮಾಸಿಕದ ಸಂಪಾದಕರೂ ಆಗಿರುವ ಇವರು ತಮ್ಮ ಆಲೋಚನೆಯನ್ನು ಸ್ಪಷ್ಟವಾಗಿ ಓದುಗರಿಗೆ ತಲಪಿಸುವವರು. 
ಅವರ ಜೀವನೋತ್ಸಾಹ ದೊಡ್ಡದು. ತಮ್ಮ ಸಂಪರ್ಕಕ್ಕೆ ಬರುವವರನ್ನು ‘ಅಮಿತ ಜೀವನೋತ್ಸಾಹಿ’ಯನ್ನಾಗಿ ಪರಿವರ್ತಿಸುವಂಥ ಅಪೂರ್ವ ಜೀವನೋತ್ಸಾಹ ಅದು. ಅವರು ಹುಟ್ಟಿದ ಊರೇ ಜೀವನೋತ್ಸಾಹದ ತಾಣ (ಜನನ: 28 ಜುಲೈ 1927). ಅದು ‘ಜೀವನಪುರ’. ಉತ್ತರಪ್ರದೇಶದ ವಾರಾಣಸಿ ಜಿಲ್ಲೆಯ ಒಂದು ಹಳ್ಳಿ. ಅಲ್ಲಿಯ ಜೀವದಾಯಿ ರೈತಾಪಿ ಕುಟುಂಬಕ್ಕೆ ಸೇರಿದ ಈ ಜೀವಪರ ಚಿಂತಕ ಹುಟ್ಟೂರಲ್ಲೇ ಓದು ಆರಂಭಿಸಿ, ಹೈಸ್ಕೂಲು ಕಾಲೇಜು ಶಿಕ್ಷಣವನ್ನು ವಾರಾಣಸಿಯಲ್ಲಿ ಪೂರೈಸಿದರು.
ಮುಂದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಹಿಂದಿ) ಪದವಿ ಮತ್ತು 1953ರಲ್ಲಿ ಅದೇ ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯದಲ್ಲಿ ಪಿಎಚ್‌.ಡಿ ಪಡೆದರು. ಡಾಕ್ಟರೇಟ್ ಪಡೆದರೂ ಅವರಿಗೆ ‘ಪ್ರೊಫೆಸರ್’ ಎಂದು ಕರೆಸಿಕೊಳ್ಳುವುದರಲ್ಲೇ ಖುಷಿ. ಅಷ್ಟೇ ಅಲ್ಲ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಆರಂಭಿಸಿ, ಮುಂದೆ ಸಾಗರ್ ವಿಶ್ವವಿದ್ಯಾಲಯದಲ್ಲೂ ಕೆಲಸ ಮಾಡಿದರು. ಆ ನಂತರ ಜೋಧಪುರ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥನಾಗಿ ದುಡಿದ ಅವರು ಕೊನೆಯಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥನಾಗಿ ನಿವೃತ್ತರಾದರು.
ನಂತರದಲ್ಲಿ ಗುಜರಾತಿನ ವಾರ್ಧಾದಲ್ಲಿ ‘ಮಹಾತ್ಮಾ ಗಾಂಧೀ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ’ದ ಕುಲಪತಿ ಸ್ಥಾನ ಅಲಂಕರಿಸಿದರು. ಈ ವಿಶ್ವವಿದ್ಯಾಲಯದ ಬೋಧನಾ ಕ್ರಮದ ಸುಧಾರಣಾ ಕಾರ್ಯ, ಚಟುವಟಿಕೆಗಳ ವ್ಯಾಪಕತೆ ನಿರ್ಧಾರ ಮತ್ತು ತನ್ನ ವೈಶಿಷ್ಟ್ಯವನ್ನು ಸಾರುವಂಥ ಸಾಧನೆಗಳು ನಡೆದದ್ದು ಪ್ರೊ. ನಾಮವರ ಸಿಂಗ್ ಅವರ ಕಾಲದಲ್ಲಿಯೇ. ಅವರು ಮೂಲತಃ ಒಬ್ಬ ಕವಿ. ತಮ್ಮೊಳಗಿನ ಕವಿಯನ್ನು ಅವರು ಗುರುತಿಸಿಕೊಂಡದ್ದು ವಿದ್ಯಾರ್ಥಿ ದೆಸೆಯಲ್ಲಿಯೇ.
ಅಲ್ಪಾವಧಿಯಲ್ಲೇ ಅವರು ಪ್ರಗತಿಶೀಲ ಲೇಖಕರ ಜತೆ ಕೈಗೂಡಿಸಿ ಆ ಆಂದೋಲನದಲ್ಲಿ ಒಂದಾದರು. ಮಾರ್ಕ್ಸ್ ವಾದದತ್ತ ಒಲವು ಮೂಡಿಸಿಕೊಂಡದ್ದು ಆ ಸಂದರ್ಭದಲ್ಲಿಯೇ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. ಓದುತ್ತಿರುವ ಕಾಲದಲ್ಲಿಯೇ ಅವರು ತಮ್ಮ ಮೊದಲ ಪ್ರಬಂಧಗಳ ಸಂಕಲನ ‘ಬಕಲಂ ಖುದ್’ ಪ್ರಕಟಿಸಿದರು (1951). ಆ ನಂತರವೇ ಪ್ರೊ. ನಾಮವರ್ ಸಿಂಗ್ ಸಾಹಿತ್ಯ ವಿಮರ್ಶಾ ಕ್ಷೇತ್ರದತ್ತ ಕಣ್ಣು ಹಾಕಿದ್ದು, ಸಾಧನೆಗೈದದ್ದು, ಅನೇಕ ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದ್ದು. 
‘ಕವಿತಾ ಕೆ ನಯೇ ಪ್ರತಿಮಾನ್’ ಎಂಬ ಕೃತಿಯಲ್ಲಿ ಹಿಂದಿ ಕಾವ್ಯ ವಿಮರ್ಶೆಗೆ ಅವಶ್ಯಕವಿರುವ ಹೊಸ ಮಾನದಂಡಗಳ ಕುರಿತ ತಮ್ಮ ಸ್ಪಷ್ಟ ಮತ್ತು ನಿಖರ ದೃಷ್ಟಿಕೋನವನ್ನು ಬಿಂಬಿಸಿದ್ದಾರೆ ಪ್ರೊ. ನಾಮವರ ಸಿಂಗ್. ಅದು ಅವರ ನಿರಂತರ ನಿರೀಕ್ಷಣೆ, ಅಧ್ಯಯನ ಮತ್ತು ಅನುಭವಗಳ ಲೇಖನ ಸಂಕಲನ. ಅದರಲ್ಲಿ ಅವರು ವ್ಯಕ್ತಪಡಿಸಿರುವ ಸ್ಪಷ್ಟ ಮತ್ತು ಪಾರದರ್ಶಕ ನಿಲುವು ಮತ್ತು ವಿಮರ್ಶಾತ್ಮಕ ದೃಷ್ಟಿಕೋನಗಳ ಕಾರಣದಿಂದ ‘ಸಮಕಾಲೀನ ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಸಂದ ಮಹತ್ವಪೂರ್ಣ ಕೃತಿ’ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಯಿತು. ಈ ಕೃತಿಗೆ 1971ನೆಯ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. 
ಹಿಂದಿಯ ಕವಿಗಳು, ಕಾದಂಬರಿಕಾರರು ಮತ್ತು ನಾಟಕಕಾರರನ್ನು ಹೊರತುಪಡಿಸಿದರೆ, ವಿಮರ್ಶಾ ಕ್ಷೇತ್ರದಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರಲ್ಲಿ ಪ್ರೊ. ನಾಮವರ ಸಿಂಗ್ ಮೊದಲಿಗರು. ಅಷ್ಟೇ ಅಲ್ಲ, 1991ರ ಅಕಾಡೆಮಿಯ ‘ಸಾಹಿತ್ಯೋತ್ಸವ’ದಲ್ಲಿ ಆಶಯ ಭಾಷಣ ಮಾಡಲು ಆಹ್ವಾನಿತರಾದ ಮೊದಲ ಹಿಂದಿ ಸಾಹಿತ್ಯ ವಿಮರ್ಶಕ ಅವರು. ಇದು ಶ್ರೇಷ್ಠ ಸೃಜನಶೀಲ ಲೇಖಕರಿಗೆ ಸಲ್ಲುವ ಗೌರವ ಎಂಬುದು ಇಲ್ಲಿ ಗಮನಾರ್ಹ.
‘ಆಧುನಿಕ್ ಸಾಹಿತ್ಯ ಕಿ ಪ್ರವೃತ್ತಿಯಾಂ’, ‘ಆಧುನಿಕ್ ಹಿಂದಿ ಉಪನ್ಯಾಸ್’, ‘ಆಲೋಚಕ್ ಕೆ ಸುಖ ಮೇಂ’, ‘ಆಲೋಚನಾ ಔರ್ ವಿಚಾರಧಾರಾ’ ‘ಛಾಯಾವಾದ್’, ‘ದೂಸರೇ ಪರಂಪರಾ ಕಿ ಖೋಜ್’, ‘ಬಾತ್ ಬಾತ್ ಮೇಂ ಬಾತ್’, ‘ಸಾಥ್ ಸಾಥ್’, ‘ಸಾಹಿತ್ಯ ಕಿ ಪೆಹಚಾನ್’ ಮತ್ತು ‘ಪ್ರಾರಂಭಿಕ್ ರಚನಾಯೇಂ’ ಮುಂತಾದವು ಅವರ ಕೃತಿಗಳಲ್ಲಿ ಕೆಲವು. ಸಮಕಾಲೀನ ಹಿಂದಿ ಸಾಹಿತ್ಯ ಕ್ಷೇತ್ರದ ಬಹು ಮಹತ್ವದ ವಿಮರ್ಶಕ ಎಂದು ಖ್ಯಾತಿ ಗಳಿಸಿರುವವರು ಪ್ರೊ. ನಾಮವರ ಸಿಂಗ್.
ಅಷ್ಟೇ ಅಲ್ಲ, ಹಿಂದಿ ಕಥಾ ಸಾಹಿತ್ಯಕ್ಕೆ ಆಧುನಿಕತೆಯ ಹೊಳಹನ್ನು ತಂದುಕೊಟ್ಟ ಶ್ರೇಷ್ಠರಲ್ಲಿ ಮೊದಲಿಗರೆನಿಸಿದ ನಿರ್ಮಲ್ ವರ್ಮಾ ಅವರ ಹಾಗೆ, ಪ್ರೊ. ನಾಮವರ ಸಿಂಗ್ ಎಲ್ಲರೊಂದಿಗೆ ಸಂಪರ್ಕವಿಟ್ಟು ಕೊಂಡ ನಿಗರ್ವಿ. ತಾವೊಬ್ಬ ಚಿಂತಕ ಎಂಬ ಅಹಮ್ಮನ್ನು ತಲೆಗೆ ಏರಿಸಿಕೊಳ್ಳದೇ ಸರಳ ಬದುಕನ್ನು ನಡೆಸುತ್ತಿರುವವರು. ಒಂದೆರಡು ದಶಕಗಳಿಂದ ಅವರು ಅಂತರರಾಷ್ಟ್ರೀಯ ಖ್ಯಾತಿಗೂ ಭಾಜನರಾದ ಭಾರತೀಯ ಸಾಹಿತಿ. 
logoblog

Thanks for reading ವ್ಯಕ್ತಿ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *