ಕೇಂದ್ರ ಸರ್ಕಾರ 2018ರಲ್ಲಿ ಹೊಸ ಕನಸಿನೊಂದಿಗೆ ರಾಜ್ಯಗಳ ಸಹಭಾಗಿತ್ವದಲ್ಲಿ ‘ರಾಷ್ಟ್ರ ಬಿದಿರು ಮಿಷನ್’ಗೆ ಮರು ಚಾಲನೆ ನೀಡಿದೆ. ಬಿದಿರು ಬೆಳೆಯಲು ಪ್ರೋತ್ಸಾಹಿಸುವ ದೃಷ್ಟಿಯಿಂದ 1200 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈಗ ವಿವಿಧ ರಾಜ್ಯಗಳಿಂದ ಯಾವ ರೀತಿಯಲ್ಲಿ ಬಿದಿರು ಬೆಳೆಸಬಹುದು ಎಂಬ ಕುರಿತು ಯೋಜನೆ ಸಿದ್ಧಪಡಿಸಿ ಮೊದಲ ಹಂತದ ಹಣ ಬಿಡುಗಡೆ ಮಾಡಿದೆ. ಯೋಜನೆಯಿಂದ ರಾಜ್ಯಕ್ಕೆ ಸಿಕ್ಕಿದ್ದೇನು? ರೈತರ ಅನುಭವವೇನು? ಇಲ್ಲಿದೆ ಮಾಹಿತಿ.
| ನಾಗರಾಜ ಮತ್ತಿಗಾರ/ ಸುಭಾಸ ಧೂಪದಹೊಂಡ
ಹುಟ್ಟಿನಿಂದ ಸಾಯುವವರೆಗೆ ಬೇಕಾಗುವ ವಸ್ತು ಬಿದಿರು ಎಂಬುದನ್ನು ಬಹಳ ಹಿಂದೆಯೇ ಜಾನಪದರು ಈ ಹಾಡಿನ ಮೂಲಕ ಸಾರಿದ್ದಾರೆ. ಈಗ ಮತ್ತೆ ಬಿದಿರು ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ. ‘ಹಸಿರು ಹೊನ್ನು’ ಎನ್ನುವ ಬಿದಿರಿನೊಂದಿಗೆ ಪುನಃಶ್ಚೇತನಗೊಳ್ಳಲು ತಯಾರಿ ನಡೆಸಿದೆ. ಇದಕ್ಕಾಗಿ, ರಾಷ್ಟ್ರೀಯ ಬಿದಿರು ಮಿಷನ್ (ಎನ್ಬಿಎಂ) ಯೋಜನೆಗೆ ಕೇಂದ್ರದ ಎನ್ಡಿಎ ಸರ್ಕಾರ ಮತ್ತೆ ಚಾಲನೆ ನೀಡಿದೆ. ಜತೆಯಲ್ಲಿ ಬಿದಿರು ಬೆಳೆಯಲು ರೈತರಿಗಿದ್ದ ತೊಡಕುಗಳನ್ನೂ ನಿವಾರಿಸಿದೆ. ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯದ ಸರ್ಕಾರವೂ ಸಾಥ್ ನೀಡಿದ್ದು ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಇತ್ತೀಚೆಗೆ ಬಿದಿರು ಬೆಳೆಯಲು ರೈತರನ್ನು ಉತ್ತೇಜಿಸಲಾಗುವುದು ಎಂಬ ಹೇಳಿಕೆ ನೀಡಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಕೆಲಸ ಆರಂಭವಾಗಿದೆ: ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ (ಎಸ್ಎಲ್ಇಸಿ) ರಾಜ್ಯ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ 174.02 ಕೋಟಿ ರೂ. ಯೋಜನೆ ರೂಪಿಸಿ ಎನ್ಬಿಎಂಗೆ ಸಲ್ಲಿಸಿತ್ತು. ಅದರಲ್ಲಿ 27.87 ಕೋಟಿ ರೂ. (ಕೇಂದ್ರದ ಪಾಲು 16.72 + ರಾಜ್ಯದ ಪಾಲು 11.09 ಕೋಟಿ) ಕಾಮಗಾರಿಗಳಿಗೆ ರಾಷ್ಟ್ರೀಯ ಬಿದಿರು ಮಿಷನ್ನ 1 ನೇ ಕಾರ್ಯಕಾರಿ ಸಮಿತಿ ಸಭೆ ಒಪ್ಪಿಗೆ ನೀಡಿದೆ.
ಯಾವ ಕಾಮಗಾರಿಗಳು?: ಮೊದಲ ಹಂತದಲ್ಲಿ 12.35 ಕೋಟಿ ರೂ. ಒದಗಿಸಲಾಗುತ್ತಿದೆ. ಅದರಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಶಿವಮೊಗ್ಗ, ಬೆಳಗಾವಿ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಹೈಟೆಕ್ ನರ್ಸರಿಗಳು, ತಲಾ 25 ಲಕ್ಷ ರೂ. ನೆರವು ನೀಡಿ ಖಾಸಗಿಯಾಗಿ ಶಿವಮೊಗ್ಗ ಹಾಗೂ ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ತಲಾ 1 ಹೈಟೆಕ್ ನರ್ಸರಿಗಳು ಅಸ್ತಿತ್ವಕ್ಕೆ ಬರಲಿವೆ. ತಲಾ 16 ಲಕ್ಷ ರೂ. ವೆಚ್ಚದಲ್ಲಿ ಶಿರಸಿ, ಸಾಗರ, ಚಿಕ್ಕಮಗಳೂರು, ಹಾವೇರಿ ತುಮಕೂರು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ದೊಡ್ಡ ನರ್ಸರಿಗಳು, ತಲಾ 8 ಲಕ್ಷ ರೂ. ನೆರವಿನಲ್ಲಿ ತುಮಕೂರು, ಕೊಪ್ಪ, ಗೋಕಾಕ, ಯಲ್ಲಾಪುರ, ಭದ್ರಾವತಿಯಲ್ಲಿ ದೊಡ್ಡ ನರ್ಸರಿಗಳು, ತಲಾ 10 ಲಕ್ಷ ರೂ. ವೆಚ್ಚದಲ್ಲಿ ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಕೋಲಾರ, ವಿಜಯಪುರ, ಹಾವೇರಿಯಲ್ಲಿ ಸರ್ಕಾರಿ ಸ್ವಾಮ್ಯದ ಸಣ್ಣ ನರ್ಸರಿಗಳು ಆರಂಭವಾಗಲಿವೆ. ತಲಾ 5 ಲಕ್ಷ ರೂ.ವೆಚ್ಚದಲ್ಲಿ ಬೆಂಗಳೂರು ನಗರ, ಸಾಗರ, ಬಾಗಲಕೋಟೆ, ಗದಗ, ಧಾರವಾಡಗಳಲ್ಲಿ ಖಾಸಗಿ ನರ್ಸರಿಗಳನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ದೊಡ್ಡ ಪ್ರಮಾಣದ ಭೂಮಿ ಹೊಂದಿರುವ ರೈತರನ್ನು ಗುರುತಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನರ್ಸರಿಗಳಲ್ಲಿ ಸಿದ್ಧವಾದ ಸಸಿಗಳಲ್ಲಿ 5.62 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ 200, ಕೊಪ್ಪದಲ್ಲಿ 175, ಸಾಗರದಲ್ಲಿ 150, ಭದ್ರಾವತಿ, ಶಿವಮೊಗ್ಗ, ಧಾರವಾಡದಲ್ಲಿ ತಲಾ 100, ಚಿಕ್ಕಮಗಳೂರು, ಮಡಿಕೇರಿ, ಹಾವೇರಿ, ಹಾಸನ, ಮಂಗಳೂರು, ಕುಂದಾಪುರ ವಿಭಾಗಗಳ ವ್ಯಾಪ್ತಿಯಲ್ಲಿ ತಲಾ 50 ಸೇರಿ 1125 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಬಿದಿರು ಬೆಳೆಯಲು ಯೋಜಿಸಲಾಗಿದೆ.
ರೈತರ ತೋಟದಲ್ಲಿ ಈ ಬಾರಿ ರಾಷ್ಟೀಯ ಬಿದಿರು ಅಭಿಯಾನದ ಅಡಿ ರೈತರ ಭೂಮಿಯಲ್ಲಿ, ಬದುಗಳ ಮೇಲೆ ಬಿದಿರು ಬೆಳೆಯಲು ಪ್ರೋತ್ಸಾಹಿಸುವುದು ವಿಶೇಷವಾಗಿದೆ. ಪ್ರತಿ ಅರಣ್ಯ ವಿಭಾಗದ ತಲಾ 25 ಹೆಕ್ಟೇರ್ ಖಾಸಗಿ ಭೂಮಿಯಲ್ಲಿ (ಒಟ್ಟು- 779 ಹೆಕ್ಟೇರ್) ಬಿದಿರು ಬೆಳೆಸುವ ಗುರಿ ನಿಗದಿ ಮಾಡಲಾಗಿದೆ. ವಿಭಾಗಕ್ಕೆ ತಲಾ 6.25 ಲಕ್ಷ ರೂ. ಗಳಂತೆ 1.94 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಏನಿದು ರಾಷ್ಟ್ರೀಯ ಬಿದಿರು ಮಿಷನ್?
ರಾಷ್ಟ್ರೀಯ ಬಿದಿರು ಮಿಷನ್ (ಎನ್ಬಿಎಂ) 2006-07ನೇ ಸಾಲಿನಲ್ಲಿ ಪ್ರಾರಂಭವಾಗಿ 2015ರವರೆಗೂ ಮುಂದುವರಿದಿತ್ತು. ಮೊದಲು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಅಭಿಯಾನ (ಎಂಐಡಿಎಚ್)ದಡಿ ಜಾರಿಯಾಗಿದ್ದ ಕಾರ್ಯಕ್ರಮವನ್ನು ಈಗ 2018-19ನೇ ಸಾಲಿನಲ್ಲಿ ಸುಸ್ಥಿರ ಕೃಷಿ ಅಭಿವೃದ್ಧಿ ಅಭಿಯಾನ (ಎನ್ಎಂಎಸ್ಎ) ಅಡಿ ಜೋಡಿಸಿ ಮರು ರಚನೆ ಮಾಡಿ ಅದಕ್ಕೆ 14ನೇ ಹಣಕಾಸು ಯೋಜನೆಯಿಂದ 1290 ಕೋಟಿ ರೂ. ಗಳನ್ನು ನೀಡಲಾಗಿದೆ. ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಪ್ಲಾಂಟೇಷನ್ ಮಾಡುವುದು, 4 ಸಾವಿರದಷ್ಟು ಬಿದಿರು ಉತ್ಪನ್ನ ಸಂಸ್ಕರಣೆ ಹಾಗೂ ಅಭಿವೃದ್ಧಿ ಘಟಕ ಸ್ಥಾಪಿಸುವುದು ಮಿಷನ್ನ ಗುರಿಯಾಗಿದೆ. ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಪ್ರೋತ್ಸಾಹ, ಗೃಹ ಕೈಗಾರಿಕೆಗಳ ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಸಲು ಯೋಜಿಸಲಾಗಿದೆ.
ಭಾರತ ನಂ.2
ಹುಲ್ಲಿನ ವರ್ಗಕ್ಕೆ ಸೇರಿದ ಬಿದಿರಿನಲ್ಲಿ 148 ಪ್ರಭೇದಗಳಿವೆ. ವಿಶ್ವದ ಬಿದಿರಿನ ಪ್ರಭೇದಗಳ ಶೇ.25ರಷ್ಟು ಭಾರತದಲ್ಲಿವೆ. ಆದರೆ, ಕೆಲವೇ ಕೆಲವು ಪ್ರಭೇದಗಳು ವಾಣಿಜ್ಯಿಕವಾಗಿ ಬೆಳೆಯಲು ಅನುಕೂಲಕರವಾಗಿವೆ. ಶೆಮೆ ಬಿದಿರು, ಆನೆ ಬಿದಿರು (ಡೆಂಡ್ರೊಕಲಮಸ್ ಜಿಗಾಂಟಸ್) ಹಳದಿ ಬಿದಿರು (ವುಲಗರೀಸ್ ಯೆಲ್ಲೊ), ಬರ್ವ ಬಿದಿರು, ಚೈನಿ ಬಿದಿರು ಮುಂತಾದವು ಬೆಳೆಯಲು ಯೋಗ್ಯವಾಗಿವೆ.
ಬಿದಿರಿನ ಉತ್ಪಾದನೆಯಲ್ಲಿ ಚೀನಾ ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಮಣಿಪುರ, ಮಿಜೋರಾಂ, ತ್ರಿಪುರ, ಅಗರ್ತಲಾ, ನಾಗಾಲ್ಯಾಂಡ್ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಬಿದಿರನ್ನು ಹೇರಳವಾಗಿ ಬೆಳೆಯಲಾಗುತ್ತದೆ. ದೇಶದ ಒಟ್ಟಾರೆ ಬಿದಿರಿನ ಉತ್ಪಾದನೆಯ ಶೇ.4.27ರಷ್ಟು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ.
ಕಳಕಳಿ ಇರಲಿ
ಈಗ ಬಿದಿರು ಬೆಳೆಯಲು ಅನುಮತಿ ಸುಲಭವಾಗಿ ಸಿಗುತ್ತದೆ. ಇದರಲ್ಲಿ ಹಲವಾರು ತಳಿಗಳಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಈಗ ಹಣವೂ ದೊರೆಯುತ್ತಿದೆ. ಅರಣ್ಯ ಇಲಾಖೆಯವರು ಬಿದಿರನ್ನು ರೈತರು ಪರಿಣಾಮಕಾರಿಯಾಗಿ ಬೆಳೆಯುವಂತೆ ಪ್ರೋತ್ಸಾಹ ನೀಡುವ ಜತೆಯಲ್ಲಿ ಮಾರುಕಟ್ಟೆ ಕಂಡುಕೊಳ್ಳುವ ಬಗೆಯನ್ನು ತಿಳಿಸುವುದು ಅಗತ್ಯ. ಹಾಗೆಯೇ ಬಿದಿರ ಮೌಲ್ಯವರ್ಧನೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಎನ್ನುವ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರೆ ಉತ್ತಮ. ಆಗ ರಾಷ್ಟ್ರೀಯ ಬಿದಿರು ಮಿಷನ್ ಸ್ಥಾಪನೆಯಾಗಿರುವುದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಒಂದಷ್ಟು ಹಣ ಬಂತು, ಎಲ್ಲಿ ಹೋಯಿತು ಎಂಬುದು ಯಾರಿಗೂ ಗೊತ್ತಾಗುವುದಿಲ್ಲ!
ಕಡಿಯಲು ಅನುಮತಿ ಬೇಡ
ನಮ್ಮ ಭಾಗದ ಕಾಡುಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ದೊಡ್ಡ ಬಿದಿರು (ಬಾಂಬುಸಾ ಅರೌಂಡಿ ನೇಸಿಯಾ), ಕಿರು ಬಿದಿರು (ಡೆಂಡ್ರೊಕಲಮಸ್ ಸ್ಟ್ರಿಕ್ಟಸ್), ನದಿಗಳ ಪಕ್ಕ ಬೆಳೆಯುವ ವಾಟೆ ಗಳು (ಜೀನಸ್ ಒಛಲಂಡ್ರ), ಇವುಗಳನ್ನು ಕಡಿಯಲು ಅನುಮತಿ ಬೇಕು. ಉಳಿದ ಯಾವುದೇ ಬಿದಿರು ಕಡಿಯಲು ಅರಣ್ಯ ಇಲಾಖೆ ಅನುಮತಿ ಬೇಕಿಲ್ಲ.
ರೈತರಿಗೆ ಮನವರಿಕೆ ಮಾಡುವುದು ಮುಖ್ಯ
‘ಬಿದಿರು ಎನ್ನುವುದು ಹಲವು ರೂಪದಲ್ಲಿ ಪರಿಸರಕ್ಕೆ ಅಗತ್ಯವಾದ ದೊಡ್ಡಹುಲ್ಲು. ಮಣ್ಣಿನ ಸವೆತ ತಡೆಯುತ್ತದೆ. ಭೂಮಿಯ ಸಾರಜನಕ ಹೆಚ್ಚಿಸುತ್ತದೆ. ಒಂದು ವರ್ಷಕ್ಕೆ ಒಂದು ಎಕರೆ ಬಿದಿರು ಇದ್ದರೆ 4 ಟನ್ನಷ್ಟು ಎಲೆ ಸಿಗುತ್ತದೆ. ಇಂತಹ ಅಂಶಗಳು ರೈತರಿಗೆ ಮನವರಿಕೆಯಾಗಬೇಕು. ಬಿದಿರಿನಲ್ಲಿರುವ ಹಲವಾರು ತಳಿಗಳಲ್ಲಿ ಗುವಾಡೂವಾ ಎನ್ನುವುದು 100 ವರ್ಷ ಬಾಳಿಕೆ ಬರುತ್ತದೆ. ಇದರಿಂದ ಮನೆ ಕಟ್ಟಬಹುದು; ಪೀಠೋಪಕರಣಗಳನ್ನು ತಯಾರಿಸಬಹುದು. ಇಂತಹ ತಳಿಗಳ ಕುರಿತು ಜನರಿಗೆ ತಿಳಿಸಬೇಕು. ಬಿದಿರನ್ನು ಪರಿಣಾಮಕಾರಿಯಾಗಿ ಮೌಲ್ಯವರ್ಧನೆ ಮಾಡಬೇಕು. ಇದರ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಅತ್ಯಂತ ಕಾಳಜಿಯಿಂದ ಕೆಲಸ ಮಾಡಬೇಕು. ಆಗ ಬಿದಿರಿನಿಂದ ಸಾಮಾಜಿಕ, ಆರ್ಥಿಕ, ಉದ್ಯೋಗ ವಲಯ ಬೆಳೆಯುತ್ತದೆ’ ಎನ್ನುತ್ತಾರೆ ಬಿದಿರಿನ ಕುರಿತು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಪರಿಸರ ಇಲಾಖೆಯ ನಿವೃತ್ತ ಕಾರ್ಯ ದರ್ಶಿ ಮತ್ತು ದೇವರಾಜ ಅರಸು ಬಿದಿರು ವನದ ಚೇರ್ಮನ್ ಎ.ಸಿ. ಲಕ್ಷ್ಮಣ.
ಸೋನ್ಸ್ ಫಾರ್ಮರ್ನಲ್ಲಿ ಬಾಂಬೂ ವೈವಿಧ್ಯ
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಎಲ್. ಸಿ. ಸೋನ್ಸ್ ಅವರು ಮೂರ್ನಾಲ್ಕು ದಶಕಗಳ ಹಿಂದೆಯೇ ಜಾಯಂಟ್ ಬರ್ವ ಬಿದಿರನ್ನು ಸುಮಾರು ಒಂದೂವರೆ ಎಕರೆಯಲ್ಲಿ ನಾಟಿ ಮಾಡಿದ್ದರು. ವೈವಿಧ್ಯಮಯ ಬೆಳೆಗಳಿರುವ ಅವರ ಫಾಮರ್್ನಲ್ಲಿ 41 ವಿವಿಧ ಬಿದಿರುಗಳಿವೆ. ಜಾಯಿಂಟ್ ಬರ್ವ ಬಿದಿರು ಕಳೆದ ನಾಲ್ಕು ವರ್ಷಗಳ ಹಿಂದೆ ಹೂ ಬಂದು ಬೆಳವಣಿಗೆ ನಿಂತಿತ್ತು. ಈಗ ಮರು ನಾಟಿ ಮಾಡಿದ್ದಾರೆ. ಕೃಷಿ ಪ್ರವಾಸೋದ್ಯಮಕ್ಕೆ ಅನುಕೂಲಕರವಾಗಿರುವ ಇವರ ತೋಟದಲ್ಲಿ ಕೆಲವು ಸಂಘ-ಸಂಸ್ಥೆಯವರು ಔತಣಕೂಟ ಏರ್ಪಡಿಸುತ್ತಾರೆ. ಇದಕ್ಕಾಗಿ ಬಿದಿರು ಇರುವ ಜಾಗ ಬಳಕೆಯಾಗುತ್ತಿತ್ತು. ಇದೇ ಬಿದಿರು ಬೆಳೆಯಲು ಇವರಿಗೆ ಪೂರಕ ಅಂಶವಾಗಿತ್ತು. ಅಲ್ಲದೆ, ಬಿದಿರಿನ ಮರಿ ಸಸಿಯಾದ ಕಳಲೆಯ ಉಪ್ಪಿನ ಕಾಯಿಯನ್ನು ಮಾಡಿ ಮೌಲ್ಯವರ್ಧನೆಗೆ ಯತ್ನಿಸಿದ್ದಾರೆ. ಅಲ್ಲದೆ, ಪೋಲ್ಗಳನ್ನು ಮಾರಿ ಆದಾಯ ಪಡೆದುಕೊಂಡಿದ್ದಾರೆ. ‘ನಮ್ಮ ತೋಟದಲ್ಲಿ ಬಿದಿರು ಬೆಳೆಯಲು ತಂದೆಯವರಾದ ಎಲ್.ಸಿ. ಸೋನ್ಸ್ ಮತ್ತು ಸಹೋದರ ಐ.ವಿ. ಸೋನ್ಸ್ ಕಾರಣ. ಈಗ ರಾಷ್ಟ್ರೀಯ ಬಿದಿರು ಮಿಷನ್ ಚಾಲ್ತಿಗೆ ಬರುತ್ತಿರುವುದರಿಂದ ಬೆಳೆಗಾರರಿಗೆ ಅನುಕೂಲವಾಗಬಹುದು ಎಂದು ಅನಿಸುತ್ತಿದೆ. ಅಲ್ಲದೆ, ಉದ್ಯಮಗಳಿಗೆ ಬಾಂಬೂಗಳು ಬಳಕೆಯಾದರೆ ಮತ್ತಷ್ಟು ಉತ್ತಮ’ ಎನ್ನುತ್ತಾರೆ ವಿನೋದ ಸೋನ್ಸ್ .
ಮಾರುಕಟ್ಟೆ ಮಾಡಿಕೊಂಡರೆ ಲಾಭ
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅಂಗ್ರೊಳ್ಳಿ ಗ್ರಾಮದ ರೈತ ಬಸವಣ್ಣೆಪ್ಪ ಉಳ್ಳೆಗಡ್ಡಿ ಅವರು 2000ನೇ ಇಸವಿಯಿಂದ ಬಿದಿರು ಕೃಷಿ ಮಾಡುತ್ತಿದ್ದಾರೆ. ಜುಂಜುವಾಡ ಕೆಜಿ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ಆರಂಭದಲ್ಲಿ 80 ಸಸಿಗಳನ್ನು ನಾಟಿ ಮಾಡಿದ್ದರು. 10 ಅಡಿ ಅಂತರದಲ್ಲಿ ಮಾರಿಹಾಳ ಬಾಂಬು ತಳಿ ನಾಟಿ ಮಾಡಿದ್ದಾರೆ. ಇದು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕಟಾವಿಗೆ ಬರುತ್ತದೆ. ಈ ಬಿದಿರಿಗೆ ಸ್ಥಳೀಯವಾಗಿ ಮಾರುಕಟ್ಟೆಯಿದೆ. ಮುಳ್ಳುರಹಿತ ಬಿದಿರಾಗಿರುವುದರಿಂದ ಬುಟ್ಟಿ, ತಟ್ಟಿಗೆ ಮಾಡಲು ಮೇದಾರರು ಹೆಚ್ಚು ಖರೀದಿಸುತ್ತಾರೆ. ಸದ್ಯ ಇವರ ಹೊಲದಲ್ಲಿ 150 ಹಿಂಡುಗಳಿದ್ದು, ಸುಮಾರು 3000 ಗಳಗಳು (ಪೋಲ್ಸ್) ಇವೆ. ಪ್ರತಿ ಪೋಲ್ಗೆ 100 ರೂ. ಬೆಲೆ ಸಿಗುತ್ತದೆ. ‘4 ವರ್ಷಗಳಿಂದ 45 ವರ್ಷಗಳವರೆಗೆ ನಿರಂತರ ಆದಾಯ ನೀಡುವ ಮಾರಿಹಾಳ ಬಿದಿರಿನ ತಳಿ ಮಲೆನಾಡು ಹಾಗೂ ಉತ್ತರ ಕರ್ನಾಟಕ ಎರಡೂ ಕಡೆ ಚೆನ್ನಾಗಿ ಬೆಳೆಯುತ್ತದೆ. ಮಳೆ ಜಾಸ್ತಿಯಾದರೆ ಬಿದಿರು ಚೆನ್ನಾಗಿ ಆಗುತ್ತದೆ. ಸ್ಥಳೀಯವಾಗಿ ಮಾರುಕಟ್ಟೆ ಕಂಡುಕೊಂಡರೆ ಈ ಬಿದಿರು ರೈತರಿಗೆ ಆಪತ್ಕಾಲದ ಬಾಂಧವ ಎನ್ನಲು ಅಡ್ಡಿಯಿಲ್ಲ. ಅಗತ್ಯವಿದ್ದಾಗ ಕಡಿದು ಮಾರಾಟ ಮಾಡಬಹುದು. ನಮ್ಮ ಜಮೀನಿನ ಸುತ್ತ ಇದನ್ನು ಬೆಳೆಸಿಕೊಂಡರೆ ಬೇಲಿಯೂ ಆಗುತ್ತದೆ, ಆದಾಯವೂ ದೊರೆಯುತ್ತದೆ. ನಾವು ಬಿದಿರು ಬೆಳೆಯಲು ಆರಂಭಿಸಿದಾಗ ಮಾಲ್ಕಿ ಜಮೀನಿನಲ್ಲಿ ಮಾತ್ರ ಬಿದಿರು ಬೆಳೆದು ಕಟಾವು ಮಾಡಬೇಕಾಗಿತ್ತು. ಉಳಿದ ನಮ್ಮ ಜಾಗದಲ್ಲೇ ಬೆಳೆಸಿದರೂ ಕಟಾವು ಮತ್ತು ಮಾರಾಟಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಈಗ ಈ ನಿಯಮ ತೆಗೆದಿರುವುದು ರೈತರಿಗೆ ಅನುಕೂಲವಾಗಿದೆ. ಅಲ್ಲದೆ, ರಾಷ್ಟ್ರೀಯ ಬಾಂಬೂ ಮಿಷನ್ ಅಸ್ತಿತ್ವಕ್ಕೆ ಬಂದಿರುವುದರಿಂದ ಇನ್ನಷ್ಟು ಉತ್ತೇಜನ ಬಿದಿರು ಬೆಳೆಗಾರರಿಗೆ ದೊರೆಯುತ್ತದೆ ಎನ್ನುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬಸವಣ್ಣೆಪ್ಪ.
ಬಿದಿರು ಬೆಳೆಯಲು ಇರುವ ಅವಕಾಶಗಳ ಕುರಿತು ಸಮಗ್ರ ಯೋಜನೆ ತಯಾರಿಸಿ ರಾಜ್ಯ ಸರ್ಕಾರದ ಮೂಲಕ ರಾಷ್ಟ್ರೀಯ ಬಿದಿರು ಮಿಷನ್ಗೆ ಕಳುಹಿಸಲಾಗಿತ್ತು. ಅದರಲ್ಲಿ ಕೆಲವಷ್ಟು ಅರಣ್ಯ ವಿಭಾಗಗಳಿಗೆ ಬಿದಿರು ನರ್ಸರಿ ಹಾಗೂ ಅರಣ್ಯ ಬೆಳೆಯಲು ಅನುಮತಿ ದೊರೆತಿದೆ. ಜಿಲ್ಲೆಯಲ್ಲಿ ಅರಣ್ಯ ಜಮೀನಿನ ಜತೆಗೆ ಖಾಸಗಿ ಜಾಗದಲ್ಲಿ ನರ್ಸರಿ, ಬಿದಿರು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ಖಾಸಗಿಯವರಿಗೆ ಪ್ರೋತ್ಸಾಹಧನವನ್ನು ಯಾವ ಮಾದರಿಯಲ್ಲಿ ನೀಡಬೇಕು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
| ಅಶೋಕ ಬಾಸರಗೋಡ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೆನರಾ ವೃತ್ತ, ಶಿರಸಿ
ಫ್ಯಾಷನ್ ಲೋಕದಲ್ಲೂ ಮೆಚ್ಚುಗೆ
ಬಡವರ ಕಟ್ಟಿಗೆ(ನಾಟಾ) ಎಂದೇ ಹೆಸರಾಗಿರುವುದು ಬಿದಿರು. ಮನೆಗಳ ಮೇಲ್ಛಾವಣಿ, ದೊಡ್ಡ ಕಟ್ಟಡ ನಿರ್ವಣದಲ್ಲಿ ಆಸರೆಗೆ, ಕಾಗದ, ಪ್ಲೈವುಡ್ ತಯಾರಿಕೆಗೆ ಬಿದಿರು ಬಳಸಲಾಗುತ್ತದೆ. ಅಲ್ಲದೆ, ಶಮೆ ಬಿದಿರಿನಂತಹ 2 ಇಂಚಿನ ಪಿವಿಸಿ ಪೈಪ್ ಗಾತ್ರದ ಬಿದಿರನ್ನು ಅಲಂಕಾರಿಕ ಕರಕುಶಲ ವಸ್ತುಗಳನ್ನು ತಯಾರಿಸಲು ಹಾಗೂ ರೆಸಾರ್ಟ್ಗಳಂತಹ ಮನೆಗಳ ವಿನ್ಯಾಸಕ್ಕೆ ಬಳಕೆ ಮಾಡಲಾಗುತ್ತದೆ. ಅಲ್ಲದೆ, ಬಿದಿರು ಫ್ಯಾಷನ್ ಲೋಕದಲ್ಲೂ ಛಾಪು ಮೂಡಿಸುವ ಶಕ್ತಿ ಹೊಂದಿದೆ. ಈಗಾಗಲೇ ಬಿದಿರಿನ ಬಳೆ, ಕಿವಿಯೋಲೆ, ಹೂವಿನ ಬೊಕೆ, ಪೆನ್ ಸ್ಟ್ಯಾಂಡ್, ಗೋಡೆ ನೇತಾಡಿಸುವ ಹಲವಾರು ರೀತಿಯ ಕುಂಡಗಳನ್ನು ತಯಾರಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದ ಸುರಭಿ ಗ್ರಾಮೋದ್ಯೋಗ ಸಂಸ್ಥೆಯವರು ಬಿದಿರಿನ ಉತ್ಪನ್ನಗಳನ್ನು ತಮ್ಮ ಕಲ್ಪನೆಯ ಮೂಸೆಯಲ್ಲಿ ಬಂದದ್ದನ್ನು ಕೃತಿಯನ್ನಾಗಿ ಮಾಡುತ್ತ ಬಂದಿದ್ದಾರೆ. ಬಿದಿರಿನಿಂದ ತಯಾರಿಸಿದ ಫ್ಯಾಷನ್ ವಸ್ತುಗಳ ಮೇಲೆ ಮಲೆನಾಡಿನ ವಿಶಿಷ್ಟ ಕಲೆ, ಹಸೆ ಚಿತ್ರಗಳನ್ನು ಒಪ್ಪಓರಣವಾಗಿ ಬಿಡಿಸಿ ಅದರ ಚೆಲುವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈ ರೀತಿಯ ಮೌಲ್ಯವರ್ಧನೆಯಿಂದ ಬಿದಿರು ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment