ಇಂದಿರಾ ಗಾಂಧಿ ಅವರಂತೆ ಜಾಜಿ ದೇಶವನ್ನು ಆಳಿದವರಲ್ಲ. ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ಕಿರಣ್ ಬೇಡಿ ಅವರಂತೆ ಖಡಕ್ ಅಧಿಕಾರಿಯಲ್ಲ. ಮೇಧಾ ಪಾಟ್ಕರ್ ಅವರಂತೆ ದೇಶಮಟ್ಟದ ಹೋರಾಟಗಾರರಲ್ಲ. ಅವರು ಅಕ್ಷರ ಲೋಕದ ಗೊಂಬೆಯೂ ಅಲ್ಲ. ಅವರಿಗೆ ಅಕ್ಷರ ಹುಟ್ಟಿನಿಂದ ಬರಲೇ ಇಲ್ಲ. ಆದರೆ ಸಹಸ್ರಾರು ವರ್ಷಗಳಿಂದ ಕಾಡಿನ ಚಿಪ್ಪಿನೊಳಗೇ ಇದ್ದ ಆದಿವಾಸಿಗರ ನೋವಿನ ಪ್ರತಿನಿಧಿಯಾಗಿದ್ದರು ಅವರು. ಅಕ್ಷರ ಇಲ್ಲದಿದ್ದರೂ ಪ್ರಜ್ಞೆಯ ಸೆಲೆಯಲ್ಲಿಯೇ ಬೆಳೆದು ಬಂದ ಕಾಡಿನ ಮಗಳು ಅವರು. ಅಧಿಕಾರದ ಗದ್ದುಗೆಯನ್ನು ಏರಿದರೂ ಅಧಿಕಾರ ಚಲಾಯಿಸಲು ಹೆದರುವ ನಾಡಿನ ಹೆಣ್ಣು ಮಕ್ಕಳಂತೆ ಅಲ್ಲ ಅವರು. ಕಾಡಿನಿಂದ ಬಂದು ನಾಡಿನಲ್ಲಿ ಗರ್ಜಿಸಿದವರು.
ಜಾಜಿ ಅವರ ಬದುಕು ಸಂಪೂರ್ಣ ಹೋರಾಟಮಯ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಅವರು ರಾಜಕೀಯದಲ್ಲಿಯೂ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಗ್ರಾಮ ಪಂಚಾಯ್ತಿ ರಾಜಕಾರಣದಿಂದ ಆರಂಭಿಸಿ ಜಿಲ್ಲಾ ಪಂಚಾಯ್ತಿ ಮಟ್ಟದವರೆಗೆ ಬೆಳೆದವರು. ಮೈಸೂರು ಜಿಲ್ಲಾ ಪಂಚಾಯ್ತಿಯ ಉಪಾಧ್ಯಕ್ಷೆಯಾಗಿ ತಮ್ಮನ್ನು ನಂಬಿದ ಕಾಡು ಮಂದಿಗೆ ನ್ಯಾಯ ಒದಗಿಸಿದವರು. ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆದ ಮೊದಲ ಆದಿವಾಸಿ ಮಹಿಳೆ ಅವರು. ವಿಧಾನಸಭೆ ಚುನಾವಣೆಗೆ ನಿಂತು ಸೋತಿದ್ದರೂ ಹೋರಾಟದ ಹಾದಿಯನ್ನು ಬಿಟ್ಟವರಲ್ಲ.
ದೆಹಲಿಯಲ್ಲಿಯೂ ಚಳವಳಿಯನ್ನು ಮಾಡಿ ರಾಜಕಾರಣಿಗಳನ್ನು ನಡುಗಿಸಿದ ಜಾಜಿ ತಿಮ್ಮಯ್ಯ ತಮ್ಮ ಅಧಿಕಾರದಲ್ಲಿ ಯಾರೂ ತಲೆ ಹಾಕದಂತೆ ಮಾಡಿದ್ದರು. ಅವರು ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದಾಗ ತಮ್ಮ ಪತಿ ಆ ಕಡೆ ಬರದಂತೆ ನೋಡಿಕೊಂಡಿದ್ದರು. ಕಾಡಿನಲ್ಲಿದ್ದ ಜಾಜಿಯನ್ನು ಗುರುತಿಸಿ ಅವರಿಗೆ ಅಕ್ಷರ ಕಲಿಸಿ ಹೋರಾಟದ ಹಾದಿಯನ್ನು ತೋರಿದವರು ಹುಣಸೂರಿನ ಡೀಡ್ ಸಂಸ್ಥೆಯ ಶ್ರೀಕಾಂತ್, ಆದರೆ ಅಧಿಕಾರ ಬಂದಾಗ ಅವರನ್ನೂ ತಮ್ಮ ಹೆಸರಿನಲ್ಲಿ ಅಧಿಕಾರ ನಡೆಸಲು ಬಿಡಲಿಲ್ಲ.
ಆದಿವಾಸಿಗಳ ಅರಣ್ಯ ಹಕ್ಕು, ಭೂಮಿ ಹಕ್ಕು, ಬೆಟ್ಟದ ಕಾಡು, ನಾಗರಹೊಳೆಯಲ್ಲಿ ತಾಜ್ ಹೋಟೆಲ್ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಜಾಜಿ ತಿಮ್ಮಯ್ಯ ಕಾಡಿನಿಂದ ಹೊರಬಂದ ಆದಿವಾಸಿಗಳಿಗೆ ಭೂಮಿ ಕೊಡಿಸಲು ನಿರಂತರ ಹೋರಾಟ ನಡೆಸಿದ್ದರು. ‘ಕಾಡಿನಿಂದ ಹೊರಬಂದ ನಮಗೆ ಬದುಕಲು ಒಂದಿಷ್ಟು ಭೂಮಿ ಕೊಡಿ ಎಂಬ ಕೂಗು ಸರ್ಕಾರಕ್ಕೆ ಕೇಳುತ್ತಿರಲಿಲ್ಲ. ನಮ್ಮ ಭೂಮಿಯನ್ನು ಅಪಹರಿಸಿದವರಿಂದ ನಾವು ಭೂಮಿಯನ್ನು ಪಡೆದುಕೊಳ್ಳಬೇಕಾಗಿತ್ತು. ಈ ಭೂಮಿ ನಮ್ಮದೇ ಆಗಿತ್ತು. ನಾವು ಈ ಕಾಡನ್ನು ಸಾವಿರಾರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ನಾವು ಕಾಡಿನಲ್ಲಿ ಇದ್ದಾಗ ಕಾಡು ಸಮೃದ್ಧವಾಗಿತ್ತು. ನಾಡಿನ ಮಂದಿ ಕಾಡಿಗೆ ಬಂದ ಮೇಲೆ ಕಾಡು ಹಾಳಾಯಿತು. ನಮ್ಮನ್ನು ಬಲವಂತವಾಗಿ ಕಾಡಿನಿಂದ ಹೊರಕ್ಕೆ ಹಾಕಿದ ಮೇಲೆ ನಾವು ಭಿಕಾರಿಗಳಂತೆ ನಿಂತುಕೊಂಡಿದ್ದೇವೆ.
ನಮ್ಮ ಹಕ್ಕನ್ನು ನಾವು ಮತ್ತೆ ಪಡೆದುಕೊಳ್ಳಲೇ ಬೇಕು. ಅದಕ್ಕಾಗಿ ನಮಗೆ ಅಧಿಕಾರ ಬೇಕಾಗಿತ್ತು. ಅದಕ್ಕಾಗಿಯೇ ನಾನು ರಾಜಕೀಯಕ್ಕೆ ಬಂದೆ’ ಎಂದು ಹೇಳುತ್ತಿದ್ದ ಅವರು ನಿರಂತರವಾಗಿ ಅದರ ಬಗ್ಗೆ ಹೋರಾಟ ನಡೆಸುತ್ತಿದ್ದರು. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬರಲು ಜಾಜಿ ತಿಮ್ಮಯ್ಯ ಅವರ ಹೋರಾಟದ ಕೊಡುಗೆ ಬಹಳಷ್ಟು ಇದೆ.
ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೆಹಲಿನಲ್ಲಿ ನಡೆದ ಅಖಿಲ ಭಾರತ ಆದಿವಾಸಿಗಳ ಸಮ್ಮೇಳನದಲ್ಲಿ ಭಾಗಿಯಾಗಿ ಜೇನು ಕುರುಬ ಸಮುದಾಯದ ಬಗ್ಗೆ ಭಾಷಣ ಮಾಡಿದ ಜಾಜಿ ಅಲ್ಲಿ ಆಗ ನಡೆಯುತ್ತಿದ್ದ ಅಯೋಡಿನ್ ಉಪ್ಪು ವಿರುದ್ಧದ ಚಳವಳಿಯಲ್ಲಿ ಭಾಗಿಯಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. 1999ರಲ್ಲಿ ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ದೆಹಲಿಗೆ ಹೋಗಿದ್ದ ಅವರು ಮತ್ತೊಮ್ಮೆ ದೆಹಲಿಯಲ್ಲಿ ಮಿಂಚಿದ್ದರು.
ನಾಗರಹೊಳೆ ಕಾಡಿನಿಂದ ಆದಿವಾಸಿಗರನ್ನು ಶಾಶ್ವತವಾಗಿ ಹೊರ ಹಾಕಲು ಯತ್ನಿಸಿದ ಸರ್ಕಾರದ ವಿರುದ್ಧ ನಡೆಸಿದ ಹೋರಾಟ ಹಾಗೂ ನಾಗರಹೊಳೆಯ ಮೂರ್ಕಲ್ನಲ್ಲಿ ತಾಜ್ ಹೊಟೇಲ್ ನಿರ್ಮಾಣದ ವಿರುದ್ಧ ಜಾಜಿ ನಡೆಸಿದ ಹೋರಾಟ ಅವರ ಬದುಕಿನ ಅತ್ಯಂತ ಮಹತ್ವದ ಕ್ಷಣಗಳಾಗಿದ್ದವು. ‘ನಮ್ಮನ್ನು ಕಾಡಿನಿಂದ ಹೊರಕ್ಕೆ ಅಟ್ಟಿ, ಹಣ ಇದ್ದವರ ಮೋಜು ಮೇಜುವಾನಿಗೆ ಹೊಟೇಲ್ ನಿರ್ಮಾಣ ಮಾಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಕರೆ ಕೊಟ್ಟ ಅವರು ನಿರಂತರವಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿದ್ದೇ ಅಲ್ಲದೆ ಸುಪ್ರೀಂಕೋರ್ಟ್ವರೆಗೂ ಹೋಗಿ ತಾಜ್ ಹೋಟೆಲ್ ಬರುವುದನ್ನು ತಡೆದರು.
ತಾಜ್ ಹೋಟೆಲ್ ವಿರುದ್ಧ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆಗ ಅರಣ್ಯ ಸಚಿವರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಹೋರಾಟಗಾರರೊಂದಿಗೆ ಸಂಧಾನಕ್ಕೆ ಬಂದಾಗ ‘ಪ್ರವಾಸೋದ್ಯಮದ ದೃಷ್ಟಿಯಿಂದ ತಾಜ್ನವರಿಗೆ ಹೋಟೆಲ್ ಮಾಡಲು ಜಾಗ ಕೊಟ್ಟಿದ್ದೇವೆ. ಅದರಿಂದ ಹಣ ಬರುತ್ತದೆ. ಅದನ್ನು ಆದಿವಾಸಿಗಳ ಪುನರ್ವಸತಿಗೇ ಬಳಸುತ್ತೇವೆ’ ಎಂದು ಹೇಳಿದರು. ಇದನ್ನು ಕೇಳಿ ಸಿಡಿದೆದ್ದ ಜಾಜಿ ‘ಕಾಡು ನಿಮ್ಮಪ್ಪನ ಆಸ್ತಿಯಲ್ಲ. ಅದು ನಮ್ಮಪ್ಪನ ಆಸ್ತಿ. ನಾವು ಇಲ್ಲಿನ ಮೂಲ ನಿವಾಸಿಗಳು. ನಮ್ಮನ್ನು ಹೊರಕ್ಕೆ ಹಾಕಿ ಅತಂತ್ರರನ್ನಾಗಿ ಮಾಡಿ ತಾಜ್ನವರಿಗೆ ಕಾಡು ಕೊಡಲು ಬಿಡಲ್ಲ. ಇಷ್ಟೆಲ್ಲಾ ಮಾತನಾಡುತ್ತೀರಲ್ಲ. ದೇಶ ಸೇವೆ ಮಾಡುವ ನೀವು ನಿಮ್ಮ ಆಸ್ತಿಯನ್ನು ದೇಶಕ್ಕಾಗಿ ಎಷ್ಟು ಬಿಟ್ಟುಕೊಟ್ಟಿದ್ದೀರಿ’ ಎಂದು ಸಚಿವರ ಬೆವರು ಇಳಿಸಿದರು. ಸಂಧಾನ ವಿಫಲವಾಯಿತು. ಹೋರಾಟ ಮುಂದುವರಿಯಿತು. ತಾಜ್ ಕಂಬಿ ಕಿತ್ತಿತು.
‘ಆ ಶಿವ ಕೊಟ್ಟಿದ್ದು ನಂಗ ಕಾಡು. ಸರ್ಕಾರ ಕಾಡಿಗೂ ಬೀಜ ನೆಟ್ಟಿಲ್ಲೆ’ ಎಂದು ಕೂಗುತ್ತಿದ್ದ ಜಾಜಿ ತಮ್ಮ ಬದುಕಿನ ಬಹುತೇಕ ಸಮಯವನ್ನು ಕಾಡಿನಲ್ಲಿಯೇ ಕಳೆದವರು. ‘ನಾಡು ನಮ್ಮನ್ನು ಬಾ ಎಂದು ಆತ್ಮೀಯವಾಗಿ ಕರೆಯಬೇಕಿತ್ತು. ಆದರೆ ನಾಡು ನಮ್ಮನ್ನು ಕಾಡಿನಿಂದ ಬಲವಂತವಾಗಿ ದಬ್ಬಿತು. ನೀರಿನಿಂದ ಹೊರ ಬಂದ ಮೀನಿನಂತಾದ ನಾವು ಇನ್ನೂ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.
‘ಕಾಡಿನಲ್ಲಾದರೆ ನಮಗೆ ಯಾವ ಪ್ರಾಣಿ ಯಾವಾಗ ಹಾಯುತ್ತದೆ. ಯಾವಾಗ ಒದೆಯುತ್ತದೆ ಎನ್ನುವುದು ಗೊತ್ತಿರುತ್ತದೆ. ಆದರೆ ನಾಡಿನ ಪ್ರಾಣಿಯ ಚಲನವಲನ ಗೊತ್ತೇ ಆಗುವುದಿಲ್ಲ’ ಎಂದು ಹೇಳುತ್ತಿದ್ದ ಜಾಜಿ ಅವರಿಗೆ ಕಡೆಗೂ ನಾಡಿನ ಪ್ರಾಣಿಯ ಚಲನೆ ಅರ್ಥವಾಗಲೇ ಇಲ್ಲ.
ವ್ಯಕ್ತಿ
ಜಿಂಗಲ್ಸ್ ರಿಕ್ಕಿಗೆ ಗ್ರಾಮಿ ಗರಿ
ಈಗ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಇಂದಿರಾನಗರದ ಮನೆಯೊಂದರಲ್ಲಿದ್ದ ಪುಟ್ಟ ಹಾಗೂ ಸುಸಜ್ಜಿತ ಸ್ಟುಡಿಯೊದಲ್ಲಿ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ರಚಿಸಿದ್ದ ‘ಜಯಹೇ ಕನ್ನಡ ತಾಯೇ’ ಗೀತೆಯನ್ನು ಹಾಡಲು ಕನ್ನಡದ ಗಾಯಕರು, ಸಂಗೀತಗಾರರು, ನಟರು ಹಾಗೂ ಸಾಹಿತಿಗಳು ಸೇರಿದ್ದರು. ಕನ್ನಡ ಮೂಲದವರಲ್ಲದ ರಿಕ್ಕಿಗೆ ಕನ್ನಡದಲ್ಲಿ ಒಂದು ಸುಂದರ ಗೀತೆಗೆ ಸ್ವರ ಸಂಯೋಜಿಸುವ ಮಹದಾಸೆ ಇತ್ತು. ಹೀಗಾಗಿಯೇ ಸ್ವರ ಸಂಯೋಜನೆಯ ಇಂಚಿಂಚನ್ನೂ ವಿವರವಾಗಿ ಗಾಯಕರಿಗೆ ಹೇಳುತ್ತಿದ್ದರು. ಈ ವಿಶಿಷ್ಟ ಗೀತ ಸಂಯೋಜಕನಿಗೆ ಈಗ ಗ್ರಾಮಿ ಪ್ರಶಸ್ತಿ ಒಲಿದಿದೆ.
ಸಂಗೀತದೊಂದಿಗೆ 16 ವರ್ಷಗಳ ಸುದೀರ್ಘ ಒಡನಾಟ ಅವರದು. ಈ ಸಮಯದಲ್ಲಿ ಅವರು ಸಾವಿರಾರು ಜಿಂಗಲ್ಗಳನ್ನು ನುಡಿಸಿದ್ದಾರೆ. ಸಂಗೀತದಲ್ಲಿ ನಿರಂತರ ಪ್ರಯೋಗಗಳನ್ನು ನಡೆಸುತ್ತಲೇ ಬಂದಿರುವ ರಿಕ್ಕಿ ಅವರಿಗೆ ದೇಶ ವಿದೇಶಗಳ ಪ್ರತಿಭಾವಂತ ಸಂಗೀತಗಾರರೊಡನೆ ನಿರಂತರ ಸಂಪರ್ಕವಿದೆ. ಹೀಗಾಗಿಯೇ ದಕ್ಷಿಣ ಆಫ್ರಿಕಾದ ಪ್ರಖ್ಯಾತ ಸಂಗೀತಗಾರ ವೌಟರ್ ಕೆಲ್ಲರ್ಮನ್ ಜತೆಗೂಡಿ ಸಂಯೋಜಿಸಿದ ‘ವಿಂಡ್ಸ್ ಆಫ್ ಸಂಸಾರ’ಕ್ಕೆ 57ನೇ ಗ್ರಾಮಿ ಪ್ರಶಸ್ತಿ ಲಭಿಸಿದೆ. ಕರ್ನಾಟಕದವರೇ ಆದ ಮಂಗಳೂರಿನ 20 ಕಲಾವಿದರೂ ಸೇರಿದಂತೆ ಐದು ಖಂಡಗಳ 120 ಕಲಾವಿದರು ಈ ಆಲ್ಬಂಗಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎನ್ನುವುದೇ ಗ್ರಾಮಿ ಪ್ರಶಸ್ತಿ ವಿಜೇತ ‘ವಿಂಡ್ಸ್ ಆಫ್ ಸಂಸಾರ’ದ ವಿಶೇಷ.
ಹೊಸ ತಲೆಮಾರಿನ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಪಡೆದ ರಿಕ್ಕಿ ಅವರು, ವಿದೇಶಿ ನೆಲದಲ್ಲಿ ಸಾಧನೆ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ಕಳೆದ ಆಗಸ್ಟ್ನಲ್ಲಿ ಅಮೆರಿಕದ ಬಿಲ್ಬೋರ್ಡ್ ನ್ಯೂ ಏಜ್ ಆಲ್ಬಂನಲ್ಲಿ ‘ಫೋರ್ಟೀನ್ತ್ ಸ್ಟುಡಿಯೊ ಆಲ್ಬಂ’ ಪ್ರಸ್ತುತಪಡಿಸಿದ್ದರು. ಅಲ್ಲಿನ ರೇಡಿಯೊಗಳಲ್ಲಿ ಇದು ಅತಿ ಹೆಚ್ಚು ಪ್ರಸಾರಗೊಂಡ ಗೀತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ರಿಕ್ಕಿ ಅವರಿಗೆ ವಿದೇಶಿ ನೆಲ ಹೊಸತಲ್ಲ. 33 ವರ್ಷದ ರಿಕ್ಕಿ ಹುಟ್ಟಿದ್ದು ಅಮೆರಿಕದ ನಾರ್ಥ್ ಕ್ಯಾರೊಲಿನಾದಲ್ಲಿ. ತಂದೆ ರಾಜಸ್ತಾನದ ಡಾ. ಗ್ಯಾನ್ ಎಚ್. ಕೇಜ್. ತಾಯಿ ಪಂಜಾಬ್ನ ಅಮೃತಸರದ ಪಮ್ಮಿ. ರಿಕ್ಕಿಗೆ ಎಂಟು ವರ್ಷವಿದ್ದಾಗ ಕೇಜ್ ಕುಟುಂಬ ಭಾರತದತ್ತ ಬಂದು, ನೆಲೆಯೂರಿದ್ದು ಬೆಂಗಳೂರಿನಲ್ಲಿ. ನಂತರ ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜಿನಲ್ಲಿ ರಿಕ್ಕಿ ದಂತ ವೈದ್ಯ ಪದವಿ ಮುಗಿಸಿದರೂ, ಅದನ್ನು ಅವರು ವೃತ್ತಿಯನ್ನಾಗಿ ಸ್ವೀಕರಿಸಲಿಲ್ಲ. ಬದಲಿಗೆ ಬಾಲ್ಯದಿಂದಲೂ ಆಳವಾದ ನಂಟು ಬೆಳೆಸಿಕೊಂಡಿದ್ದ ಸಂಗೀತವನ್ನೇ ಕಸುಬು ಮಾಡಿಕೊಂಡರು.
ಇವರ ಆಸಕ್ತಿಗೆ ಪೋಷಕರ ವಿರೋಧವಿದ್ದರೂ ಅದನ್ನೇ ಮುಂದುವರಿಸಿಕೊಂಡು ಬಂದರು. ಯಾವುದೇ ಗುರುವಿಲ್ಲದೆ ಸಂಗೀತದ ಆರಂಭದ ದಿನಗಳನ್ನು ಕಳೆದ ರಿಕ್ಕಿಗೆ ಅದನ್ನು ಶಾಸ್ತ್ರೀಯವಾಗಿ ಕಲಿಯುವಾಸೆ ಮೂಡಿತು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದೊಂದಿಗೆ, ಪಾಶ್ಚಾತ್ಯ ಸಂಗೀತದಲ್ಲಿ ಪಿಯಾನೊ ನುಡಿಸುವುದನ್ನು ಕಲಿತರು.
ತಮ್ಮ ಸಂಗೀತ ಕೃಷಿಗಾಗಿ ಇಂದಿರಾನಗರದಲ್ಲಿರುವ ತಮ್ಮ ಮನೆಯಲ್ಲೇ ಸುಸಜ್ಜಿತ ಸ್ಟುಡಿಯೊ ನಿರ್ಮಿಸಿಕೊಂಡರು. ದಿನದ ಬಹುಪಾಲನ್ನು ಇಲ್ಲೇ ಕಳೆಯುತ್ತಿದ್ದ ರಿಕ್ಕಿ ಸಂಗೀತ ಪ್ರಯೋಗಗಳಲ್ಲಿ ತೊಡಗಿಸಿಕೊಂಡರು. ಆರಂಭದಲ್ಲಿ ಜಾಹೀರಾತು ಅಥವಾ ಕಂಪೆನಿ ಉತ್ಪನ್ನಗಳಿಗೆ ಕೆಲವೇ ಸೆಕೆಂಡುಗಳ ಜಿಂಗಲ್ಸ್ ಸಿದ್ಧಪಡಿಸುತ್ತಿದ್ದ ರಿಕ್ಕಿ ಅವರು ಹಂತ ಹಂತವಾಗಿ ಮೇಲೇರುತ್ತಾ ಹೋದರು. ಈವರೆಗೂ ಅವರು ಮೂರು ಸಾವಿರ ಜಿಂಗಲ್ಸ್ ಸೃಜಿಸಿದ್ದಾರೆ. 2011ರ ವಿಶ್ವಕಪ್ ಕ್ರಿಕೆಟ್ನ ಥೀಮ್ ಗೀತೆ, ಗೂಗಲ್, ಇಂಟೆಲ್, ಐಬಿಎಂ, ಸೋನಿ, ಪೆಪ್ಸಿ, ಮೆಕ್ಡೊನಾಲ್ಡ್ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ಇವರು ಜಿಂಗಲ್ಸ್ ಸಿದ್ಧಪಡಿಸಿದ್ದಾರೆ.
2003ರಲ್ಲಿ ರಿಕ್ಕಿ ತಮ್ಮ ಮೊದಲ ಅಂತರರಾಷ್ಟ್ರೀಯ ಲಾಂಜ್ ಆಲ್ಬಂ ‘ಕಮ್ಯುನಿಕೇಟಿವ್ ಆರ್ಟ್–ಲಾಂಜ್ ಫ್ರಮ್ ದ ಬೇ’ ಬಿಡುಗಡೆ ಮಾಡಿದರು. ಇದು ಭಾರತ ಮಾತ್ರವಲ್ಲದೆ ಫ್ರಾನ್ಸ್, ಪೋಲೆಂಡ್, ಚೀನಾ, ತೈವಾನ್, ಇಸ್ರೇಲ್ ಹಾಗೂ ಜರ್ಮನಿ ಸೇರಿದಂತೆ ವಿವಿಧೆಡೆ 20 ಅವತರಣಿಕೆಗಳಲ್ಲಿ ಬಿಡುಗಡೆಗೊಂಡವು. ಇದರ ಯಶಸ್ಸಿನಿಂದ ಉತ್ತೇಜನಗೊಂಡ ರಿಕ್ಕಿ ‘ಆಶಾವಾಲಿ ಧೂಪ್’ ಎಂಬ ಆಲ್ಬಂ ಸಿದ್ಧಪಡಿಸಿದರು. ಇದಾದ ನಂತರ ‘ಕಾಮಸೂತ್ರ ಲಾಂಜ್’ ಎಂಬ ಆಲ್ಬಂ ಇವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತು. ಇದರ ಯಶಸ್ಸಿನಿಂದಲೇ ರಿಕ್ಕಿ ಇದರ ಎರಡನೇ ಭಾಗವನ್ನೂ ಸಿದ್ಧಪಡಿಸಿ ಬಿಡುಗಡೆ ಮಾಡಿದರು. ಇವುಗಳಿಂದಾಗಿ ರಿಕ್ಕಿ ಕೇಜ್ ಅವರ ಹೆಸರು ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗತೊಡಗಿತು.
ಇದಾದ ಬಳಿಕ 2008ರಲ್ಲಿ ರಿಕ್ಕಿ ಅವರ ಕೆಲಸಗಳಿಗೆ ಮನ್ನಣೆ, ಪುರಸ್ಕಾರಗಳು ಸಿಗಲು ಆರಂಭಿಸಿದವು. 2008ರಲ್ಲಿ ಜಾಹೀರಾತು ಸಂಗೀತಕ್ಕಾಗಿ ಕ್ಲಿಯೋ ಪ್ರಶಸ್ತಿ, ಆ್ಯಡ್ಫೆಸ್ಟ್ ಏಷ್ಯಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದವು. ಇವರ ಸಂಗೀತ ಸಂಯೋಜನೆಗಳನ್ನು ಕೇಳಿದ್ದ ನಟ ರಮೇಶ್ ಅರವಿಂದ್ 2008ರಲ್ಲಿ ತಮ್ಮ ‘ಆ್ಯಕ್ಸಿಡೆಂಟ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರಿಕ್ಕಿ ಅವರನ್ನು ಪರಿಚಯಿಸಿದರು. ನಂತರ ಅವರು ‘ವೆಂಕಟ ಇನ್ ಸಂಕಟ’, ‘ಕ್ರೇಜಿ ಕುಟುಂಬ’ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದರು.
ಅಮೆರಿಕದ ಪೌರತ್ವ ಹೊಂದಿರುವ ರಿಕ್ಕಿ ‘ತಾನೊಬ್ಬ ಅಪ್ಪಟ ಕನ್ನಡಿಗ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿವೃತ್ತ ಕೆಎಎಸ್ ಅಧಿಕಾರಿ ವೈ.ಕೆ. ಮುದ್ದುಕೃಷ್ಣ ಅವರ ಮಗಳು ವರ್ಷಾ ಗೌಡ ಅವರನ್ನು ವರಿಸಿ ಕರ್ನಾಟಕದ ಅಳಿಯನಾಗಿರುವ ರಿಕ್ಕಿ ಅವರಿಗೆ ಹಾಸನದ ಕೋಳಿ ಸಾರು ಎಂದರೆ ಬಲು ಇಷ್ಟ.
‘ಭಾರತದಲ್ಲಿ ಸಂಗೀತವೆಂದರೆ ಅದು ಸಿನಿಮಾ ಸಂಗೀತಕ್ಕಷ್ಟೇ ಸೀಮಿತವಾಗಿದೆ. ಹೀಗಾಗಿ ಪ್ರಯೋಗಶೀಲ ಮನಸ್ಸುಗಳು ಹೊಸತನಗಳಿಗೆ ಹಾತೊರೆಯುತ್ತಿದ್ದರೆ ಅಂಥವರಿಗೆ ಸ್ವತಂತ್ರ ಆಲ್ಬಂಗಳು ಎಂದಿಗೂ ಸಹಕಾರಿ. ಈ ಹದಿನಾರು ವರ್ಷಗಳಲ್ಲಿ ಯಾವ ರಾಜಿ ಮಾಡಿಕೊಳ್ಳದೆ ನನ್ನಿಷ್ಟದ ಸಂಗೀತವನ್ನೇ ಸಂಯೋಜನೆ ಮಾಡಿದ್ದೇನೆ. ಹಾಗೆಯೇ ಚಿತ್ರ ನಿರ್ದೇಶನದಲ್ಲಿ ರಾಜಿ ಮಾಡಿಕೊಳ್ಳದ ಗಿರೀಶ್ ಕಾಸರವಳ್ಳಿ ಅವರ ಚಿತ್ರದಲ್ಲಿ ಅವಕಾಶ ಸಿಕ್ಕರೆ ಇವೆಲ್ಲವನ್ನೂ ಬದಿಗಿಟ್ಟು ಕೆಲಸ ಮಾಡುವಾಸೆ’ ಎಂದು ತಮ್ಮ ಮನದ ಬಯಕೆಯನ್ನು ರಿಕ್ಕಿ ಕೇಜ್ ಅವರು ವ್ಯಕ್ತಪಡಿಸುತ್ತಾರೆ.
ವ್ಯಕ್ತಿ
ಬುಡಕಟ್ಟು ಜನಾಂಗದ ‘ಚಿನ್ನ’ ಮೇರಿ ಕೋಮ್
‘ನನ್ನನ್ನು ಬಿಟ್ಟು ಹೋಗಬೇಡಮ್ಮ...’ 2011ರಲ್ಲಿ ಏಷ್ಯಾಕಪ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ತೆರಳಲು ಸಿದ್ಧರಾಗಿದ್ದ ಮೇರಿ ಕೋಮ್ಗೆ ಅವರ ಮೂರೂವರೆ ವರ್ಷದ ಮಗ ಅಳುತ್ತಾ ಕೇಳಿದ. ಆಗ ಆ ಪುಟಾಣಿಯ ಹೃದಯ ಶಸ್ತ್ರಚಿಕಿತ್ಸೆಗೆ ವೈದ್ಯರು ಸಿದ್ಧತೆ ನಡೆಸುತ್ತಿದ್ದರು.
ದುರದೃಷ್ಟವೆಂದರೆ ಶಸ್ತ್ರ ಚಿಕಿತ್ಸೆಯ ದಿನವೇ ಮೇರಿ ಅವರ ಸ್ಪರ್ಧೆ ಇತ್ತು. ದೇಶವನ್ನು ಪ್ರತಿನಿಧಿಸಬೇಕು ಎಂಬ ತುಡಿತ ಒಂದೆಡೆ, ಅನಾರೋಗ್ಯಕ್ಕೆ ಒಳಗಾಗಿರುವ ಕಂದಮ್ಮನಿಂದ ದೂರ ಇರಬೇಕಲ್ಲ ಎಂಬ ಚಿಂತೆ ಮತ್ತೊಂದೆಡೆ.
‘ನಾನಿರುತ್ತೇನೆ ಹೋಗಿ ಬಾ’ ಎಂದು ಪತಿ ಭರವಸೆ ನೀಡಿದ್ದರಿಂದ ಕಂದನ ಹಣೆಗೆ ಮುತ್ತಿಕ್ಕಿದ ಅವರು ಚೀನಾಕ್ಕೆ ಹೊರಟು ನಿಂತರು. ಹೈಕೋದಲ್ಲಿ ನಡೆದ ಆ ಚಾಂಪಿಯನ್ಷಿಪ್ನಲ್ಲಿ ಮೇರಿ, ನೋವನ್ನು ಅದುಮಿಟ್ಟುಕೊಂಡು ಚಿನ್ನ ಗೆದ್ದು ಬಂದರು. ಇತ್ತ ಚಂಡೀಗಡದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಪುತ್ರನ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಯಿತು. ಆ ಚಿನ್ನದ ಪದಕವನ್ನು ಕಂದನ ಕೊರಳಿಗೆ ಹಾಕಿದ ಕೋಮ್ ಭಾವುಕರಾಗಿ ಮತ್ತೆ ಹಣೆಗೆ ಮುತ್ತಿಕ್ಕಿದರು.
‘ಅಭ್ಯಾಸ ನಡೆಸುವಾಗ ಕಂದನ ನೆನಪು ಉಕ್ಕಿ ಬರುತ್ತಿತ್ತು. ಸ್ಪರ್ಧೆಗಾಗಿ ರಿಂಗ್ನೊಳಗೆ ಇಳಿಯುವಾಗ ಕಣ್ಣೀರು ಬರುತ್ತಿತ್ತು. ಸ್ಪರ್ಧೆಯನ್ನು ಅರ್ಧಕ್ಕೆ ಬಿಟ್ಟು ಹಿಂದಕ್ಕೆ ತೆರಳಬೇಕು ಅನಿಸುತ್ತಿತ್ತು’ ಎಂದು ಮೇರಿ ಪದೇ ಪದೇ ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.
ವಿಶ್ವ ಶ್ರೇಷ್ಠ ಅಮೆಚೂರ್ ಬಾಕ್ಸರ್ ಮೇರಿ ಕೋಮ್ ಅವರ ಸಾಧನೆಯ ಹಾದಿಯಲ್ಲಿ ಎದುರಾದ ಹಲವು ಸಂಕಷ್ಟದ ಕ್ಷಣಗಳಲ್ಲಿ ಈ ಘಟನೆಯೂ ಒಂದು. ಮೂವರು ಮಕ್ಕಳ ತಾಯಿ ಮೇರಿ, ರಿಂಗ್ನೊಳಗೆ ಮಾತ್ರವಲ್ಲ; ಹೊರಗಡೆಯೂ ಹೋರಾಡುತ್ತಲೇ ಬದುಕುತ್ತಿದ್ದಾರೆ.
ಬುಡಕಟ್ಟು ಜನಾಂಗದ ಪ್ರತಿಭೆ
30 ವರ್ಷ ವಯಸ್ಸಿನ ಮೇರಿ ಅವರದ್ದು ಮಣಿಪುರದ ರಾಜಧಾನಿ ಇಂಫಾಲ್ ಬಳಿಯ ಗುಡ್ಡಗಾಡು ಪ್ರದೇಶ. ಬುಡಕಟ್ಟು ಜನಾಂಗದಲ್ಲಿ ಕನಸುಗಳನ್ನು ಕಟ್ಟಿಕೊಂಡು ಬೆಳೆದ ಅವರು ಹೊಲಗದ್ದೆಗಳಲ್ಲಿ ದುಡಿಯಲು, ಸೌದೆ ಕಡಿಯಲು, ಮೀನು ಹಿಡಿಯಲು ಪೋಷಕರಿಗೆ ನೆರವಾಗುತ್ತಿದ್ದರು. ಕ್ರೀಡಾಕ್ಷೇತ್ರದತ್ತಲೂ ಅವರ ಚಿತ್ತ ವಾಲಿತು. ಆರಂಭದಲ್ಲಿ ಅಥ್ಲೀಟ್ ಆಗಿದ್ದ ಮೇರಿ, ಮಣಿಪುರದ ಬಾಕ್ಸರ್ ಡಿಂಕೊ ಸಿಂಗ್ ಅವರ ಸಾಧನೆಯಿಂದ ಸ್ಫೂರ್ತಿ ಪಡೆದು 2000ರಲ್ಲಿ ಬಾಕ್ಸಿಂಗ್ನತ್ತ ಆಕರ್ಷಿತರಾದರು.
ಬಾಕ್ಸಿಂಗ್ ಕ್ರೀಡೆ ಬಗ್ಗೆ ಏನೂ ಗೊತ್ತಿಲ್ಲದ ಪೋಷಕರು ಮೇರಿ ನಡೆಯನ್ನು ವಿರೋಧಿಸಿದ್ದರು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ತಮ್ಮ ಮಗಳನ್ನು ಯಾರೂ ಮದುವೆಯಾಗುವುದಿಲ್ಲ ಎಂಬ ಭಯ ಅವರಿಗಿತ್ತು. ಆಕೆಯ ರೂಪದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿತ್ತು. ಮೇರಿ ಬಾಕ್ಸರ್ ಆಗಿದ್ದನ್ನು ಕಂಡು ಅವರ ಸಂಬಂಧಿಗಳೇ ವ್ಯಂಗ್ಯವಾಡಿದ್ದರು. ಪದೇ ಪದೇ ಈ ರೀತಿಯ ವಿರೋಧವನ್ನು ಅವರು ಎದುರಿಸಬೇಕಾಯಿತು. ಮದುವೆಯಾದಾಗ ಹಾಗೂ ಅವಳಿ ಮಕ್ಕಳಾದ ಸಂದರ್ಭದಲ್ಲಿ ಸಿಸೇರಿಯನ್ಗೆ ಒಳಗಾದಾಗಲೂ ಬಾಕ್ಸಿಂಗ್ ತ್ಯಜಿಸಬೇಕು ಎಂಬ ಒತ್ತಡ ಅವರ ಮೇಲಿತ್ತು.
ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಲೇ ಮೇರಿ ಐದು ಬಾರಿ ವಿಶ್ವ ಚಾಂಪಿಯನ್ ಆದರು. 2001ರಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕೋಮ್ ಮೊದಲ ಬಾರಿ ಬೆಳ್ಳಿ ಜಯಿಸಿದ್ದರು. ಆ ಬಳಿಕ ಐದು ಬಾರಿ ಚಿನ್ನ ಗೆದ್ದಿದ್ದಾರೆ. 2010ರ ಗುವಾಂಗ್ಜೌ ಏಷ್ಯನ್ ಕೂಟದಲ್ಲಿ ಕಂಚಿನ ಸಾಧನೆ ಮಾಡಿದ್ದರು.
ತಿರುವು ನೀಡಿದ ಒಲಿಂಪಿಕ್ಸ್
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದು ಮೇರಿ ಅವರ ಬದುಕಿಗೆ ಲಭಿಸಿದ ದೊಡ್ಡ ತಿರುವು. ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಕೂಡ. ಆ ಬಳಿಕ ಹಲವು ಉತ್ಪನ್ನಗಳಿಗೆ ರೂಪದರ್ಶಿಯಾದರು. ಪ್ರಾಯೋಜಕರು ಸಿಕ್ಕಿದರು. ಬಹುಮಾನ ರೂಪದಲ್ಲಿ ಹಣ ಹರಿದುಬಂತು. ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ ‘ಮೆಗ್ನಿಫಿಶೆಂಟ್ ಮೇರಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರಿಗೆ ಪದ್ಮ ಭೂಷಣ, ಪದ್ಮಶ್ರೀ, ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರ ಒಲಿದಿವೆ.
ಅವರ ಸಾಧನೆಗಳ ಪಟ್ಟಿಗೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇಂಚೆನ್ ಏಷ್ಯನ್ ಕ್ರೀಡಾಕೂಟದ ಮಹಿಳಾ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 51 ಕೆ.ಜಿ. ಫ್ಲೈವೇಟ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
ಮೇರಿ ಅವರ ಬದುಕು ಮತ್ತು ಸಂಘರ್ಷಗಳನ್ನು ವಸ್ತುವಾಗಿಸಿಕೊಂಡು ಇತ್ತೀಚೆಗೆ ‘ಮೇರಿ ಕೋಮ್’ ಎಂಬ ಹಿಂದಿ ಸಿನಿಮಾ ಬಂದಿದ್ದು ಗೊತ್ತೇ ಇದೆ. ಹೋದ ವರ್ಷ ಅವರ ಆತ್ಮಕಥೆ ‘ಅನ್ಬ್ರೇಕಬಲ್’ ಪುಸ್ತಕವಾಗಿ ಪ್ರಕಟವಾಗಿತ್ತು. 2007ರಲ್ಲಿ ಸಿಸೇರಿಯನ್ಗೆ ಒಳಗಾಗಿದ್ದಾಗ ಒಂದು ವರ್ಷ ಹಾಗೂ ಮೂರನೇ ಮಗು ಜನಿಸಿದಾಗ ಒಂದು ವರ್ಷ ಬಾಕ್ಸಿಂಗ್ನಿಂದ ದೂರವಿದ್ದರು.
‘ವರ್ಷಕ್ಕೆ 200 ದಿನಗಳ ತರಬೇತಿ, ಸ್ಪರ್ಧೆಗಳಲ್ಲೇ ಪಾಲ್ಗೊಂಡಿರಬೇಕಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಸಂಜೆ ಮಕ್ಕಳು ಮನೆಗೆ ಬರುವ ಹಾದಿಯನ್ನು ಕಾಯುತ್ತಿರಬೇಕು ಎಂಬ ಆಸೆ ನನಗೂ ಇದೆ. ತಾಯಿ ಸದಾ ತಮ್ಮ ಜೊತೆಗಿರುವುದನ್ನು ಮಕ್ಕಳೂ ಇಷ್ಟಪಡುತ್ತಾರೆ. ಇಷ್ಟಕ್ಕೇ ನಾನು ಬದ್ಧಳಾಗಿದ್ದರೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕುಟುಂಬದಂತೆ ದೇಶವೂ ಮುಖ್ಯ’ ಎನ್ನುತ್ತಾರೆ ಕೋಮ್.
ಅವರೀಗ ಮಣಿಪುರದಲ್ಲಿ ಪೊಲೀಸ್ ಅಧಿಕಾರಿ ಕೂಡ. ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿ ಅವರಿಗೆ ಉಚಿತ ನಿವಾಸವನ್ನು ಉಡುಗೊರೆಯಾಗಿ ನೀಡಲಾಗಿದೆ. ಆದರೆ, ಈ ಬಾಕ್ಸರ್ಗೆ ಗ್ಲಾಸ್ಗೊದಲ್ಲಿ ಎರಡು ತಿಂಗಳು ಹಿಂದೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ.
ಮೇರಿ ಅವರು ಮಣಿಪುರದಲ್ಲಿ ಬಾಕ್ಸಿಂಗ್ ಅಕಾಡೆಮಿಯೊಂದನ್ನು ಸ್ಥಾಪಿಸಿ ತರಬೇತಿ ನೀಡುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ೩೦ ಮಕ್ಕಳು ಇದ್ದಾರೆ. ಇವರಲ್ಲಿ ಒಬ್ಬರು ಚಾಂಪಿಯನ್ ಆದರೂ ಅಕಾಡೆಮಿ ಕಟ್ಟಿದ ತಮ್ಮ ಶ್ರಮ ಸಾರ್ಥಕ ಎನ್ನುತ್ತಾರೆ ಕೋಮ್. ಮೇರಿ ಕೇವಲ ಪುಟಾಣಿ ಮಕ್ಕಳ ತಾಯಿ ಅಷ್ಟೇ ಅಲ್ಲ, ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯ ಸೆಲೆ.
ವ್ಯಕ್ತಿ
ನಾಚಿಕೆ ಸ್ವಭಾವದ ಫ್ರೆಂಚ್ ಕಾದಂಬರಿಕಾರ ಪ್ಯಾಟ್ರಿಕ್ ಮೊಡಿಯಾನೊ
ಕೆಲವು ಸಲ ಆಗುವುದೇ ಹೀಗೆ. ಎಲ್ಲೋ ಮಳೆ ಆಗುತ್ತಿರುತ್ತದೆ, ಎಲ್ಲೋ ಸಸಿ ಚಿಗುರುತ್ತಿರುತ್ತದೆ, ನಮ್ಮ ಕಣ್ಣಿಗೆ ಅದು ಬೀಳುವುದೇ ಇಲ್ಲ, ಬಿದ್ದರೂ ಬಹಳ ತಡವಾಗಿರುತ್ತದೆ. ನೊಬೆಲ್ ಪ್ರಶಸ್ತಿ ಸುತ್ತ ಏನೇ ವ್ಯಾಖ್ಯಾನಗಳಿರಬಹುದು. ಅದು ಈಗಲೂ ಹಲವು ಜನ ಅಪರಿಚಿತ ಸಾಧಕರನ್ನು ಜಗತ್ತಿನ ಮುಂದೆ ತಂದು ನೋಡಿ ಎಂದು ನಿಲ್ಲಿಸಿಬಿಡುತ್ತದೆ. ಈ ಸಲದ ಸಾಹಿತ್ಯ ನೊಬೆಲ್ ಪಡೆದ ಪ್ಯಾಟ್ರಿಕ್ ಮೊಡಿಯಾನೊ ಕೂಡ ಅಂಥ ಸಾಹಿತಿ.
ಸಾಹಿತ್ಯ ನೊಬೆಲ್ ಬಹುಮಾನಕ್ಕೆ ಆಯ್ಕೆ ಆಗಿರುವಿರಿ ಎಂದು ತಿಳಿಸಲು ಆ ಸಂಸ್ಥೆಯಿಂದ ಫೋನ್ ಕರೆ ಬಂದಾಗ ಅವರು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಸಾರ್ವಜನಿಕವಾಗಿ ಮಾತನಾಡಲು, ಕಾಣಿಸಿಕೊಳ್ಳಲು ಬಹಳ ಸಂಕೋಚ ಪಡುವ ಸ್ವಭಾವದ ಪ್ಯಾಟ್ರಿಕ್ ಬಹಳ ಚುಟುಕಾಗಿ ತಮಗಾದ ಸಂತೋಷ ವ್ಯಕ್ತಪಡಿಸಿದರು. ‘ಇದನ್ನು ನಂಬಲು ತುಸು ಕಷ್ಟವಾಗುತ್ತಿದೆ’ ಎನ್ನುವುದು ಅವರ ಮೊದಲ ಪ್ರತಿಕ್ರಿಯೆಯಾಗಿತ್ತು. ಅವರ ಪುಸ್ತಕಗಳು ಸುಮಾರು ಮೂವತ್ತು ಭಾಷೆಗಳಿಗೆ ಅನುವಾದವಾಗಿವೆ.
ಈ ಬಾರಿಯ ಆಯ್ಕೆ ಸಮಿತಿಗೆ ಸವಾಲಾಗುವಂಥ ಹೆಸರುಗಳೇ ಇದ್ದವು. ಜಪಾನಿನ ಹರುಕಿ ಮುರಾಕಮಿ ಹಾಗೂ ಕೆನ್ಯಾದ ಗೂಗಿ ವಾ ಥಿಯಾಂಗೊ ಅವರ ಹೆಸರುಗಳು ಪಕ್ಕಕ್ಕೆ ಸರಿದು ಈ ಬಾರಿ ಸಾಹಿತ್ಯ ನೊಬೆಲ್ ಪ್ಯಾಟ್ರಿಕ್ ಮೊಡಿಯಾನೊ ಅವರಿಗೆ ಒಲಿದಿದೆ. 69 ವಸಂತಗಳನ್ನು ಕಳೆದಿರುವ ಪ್ಯಾಟ್ರಿಕ್ ಮೊಡಿಯಾನೊ ಫ್ರೆಂಚ್ ಲೇಖಕ. ಕಾದಂಬರಿ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಎರಡನೇ ವಿಶ್ವಯುದ್ಧದಲ್ಲಿ ಹಿಟ್ಲರನ ನಾಜಿ ಪಡೆ ಫ್ರಾನ್ಸಿನ ಮೇಲೆ ನಡೆಸಿದ ದಾಳಿ ಪ್ಯಾಟ್ರಿಕ್ ಅವರ ಮೇಲೆ ಬಹಳ ಪ್ರಭಾವ ಮಾಡಿದೆ. ಅವರ ಬಹುಪಾಲು ಕೃತಿಗಳು ನಾಜಿ ವಿಷಯವನ್ನೇ ಕುರಿತಂಥವು.
ಒಂದು ಕಾಲದ ಪ್ಯಾರಿಸ್ನ ರಸ್ತೆ, ಮನೆ, ಹೋಟೆಲ್ಗಳು ಅವರ ಸೃಜನಶೀಲ ಕೃತಿಗಳ ಮೂಲಕ ಓದುಗರ ನೆನಪಿನಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಈ ಹಿಂದೆ ಸಾಹಿತ್ಯಕ್ಕೆ ನೊಬೆಲ್ ಗೌರವ ಗಳಿಸಿದ ಫ್ರೆಂಚ್ ಲೇಖಕರಾದ ಆಂದ್ರೆ ಜಿದ್, ಆಲ್ಬರ್ಟ್ ಕಾಮು, ಜೀನ್ ಪಾಲ್ ಸಾರ್ತ್ರೆ ಇವರ ಸಾಲಿಗೆ ಈಗ ಪ್ಯಾಟ್ರಿಕ್ ಅವರ ಹೆಸರೂ ಸೇರಿದೆ.
ಒಂದು ವಿಚಿತ್ರವೆಂದರೆ ಭಾರತದಲ್ಲೂ ಬಹುತೇಕ ಜನರಿಗೆ ಅವರ ಹೆಸರು ಅಪರಿಚಿತ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಪ್ಯಾಟ್ರಿಕ್ ಅವರು ಫ್ರೆಂಚ್ನಲ್ಲಿ ಬರೆದಿರುವುದು ಹಾಗೂ ಅವರು ರಚಿಸಿರುವ ಬಹುಪಾಲು ಪುಸ್ತಕಗಳೂ ಇಂಗ್ಲಿಷ್ಗೆ ಅನುವಾದವಾಗದಿರುವುದು.
ನೊಬೆಲ್ ಸಮಿತಿಯು ಪ್ಯಾಟ್ರಿಕ್ ಅವರನ್ನು 19ನೇ ಶತಮಾನದ ಸುಪ್ರಸಿದ್ಧ ಫ್ರೆಂಚ್ ಕಾದಂಬರಿಕಾರ, ವಿಮರ್ಶಕ ಮಾರ್ಸೆಲ್ ಫ್ರೌಸ್ಟ್ ಅವರಿಗೆ ಹೋಲಿಸುವುದರ ಮೂಲಕ ಅವರಿಗೆ ದೊಡ್ಡ ಗೌರವ ನೀಡಿದೆ.
ಪ್ಯಾಟ್ರಿಕ್ ಅವರ ಬರಹಗಳು ಓದಲು ಉದ್ದ ಇರುವುದಿಲ್ಲ. ಬಹಳ ಚುರುಕಾಗಿ ಮತ್ತು ಚುಟುಕಾಗಿ 130–150 ಪುಟಗಳಲ್ಲಿ ಹೇಳಬೇಕಾದ್ದನ್ನು ಹೇಳುವುದು ಅವರ ವಿಶೇಷ ಗುಣ. ಅವರು ಬರೆಯುವುದು ಬಹಳ ನೇರವಾಗಿರುತ್ತದೆ, ಮೇಲ್ನೋಟಕ್ಕೆ ಸರಳ ಎನ್ನುವಂತೆ ಇರುತ್ತದೆ. ಮತ್ತೆ ಮತ್ತೆ ಓದಿದಾಗ ಅವರ ಬರಹದ ಆಳ ಓದುಗನನ್ನು ಸೆಳೆಯುತ್ತದೆ. ಪ್ಯಾಟ್ರಿಕ್ ಅವರು ಬಹಳ ಶ್ರಮ ಹಾಕಿ ಸರಳವಾಗಿ ಬರೆಯುವುದನ್ನು ಕಲಿತಿದ್ದಾರೆ.
ಜರ್ಮನಿಯು ಫ್ರಾನ್ಸ್ ದೇಶದ ಮೇಲೆ ದಾಳಿ ಮಾಡಿದಾಗ ನಡೆದ ಸಂಗತಿಗಳು ಪ್ಯಾಟ್ರಿಕ್ ಅವರನ್ನು ಮತ್ತೆ ಮತ್ತೆ ಕಾಡುವ ಸಂಗತಿ. ಅವರೇ ಹೇಳುವಂತೆ ಈ ವಸ್ತುವನ್ನು ಅವರು ಹುಡುಕಿಕೊಂಡು ಹೋಗಿ ಮರಳಿ ಸೃಷ್ಟಿ ಸುತ್ತಲೇ ಇದ್ದಾರೆ. ಫ್ರೆಂಚ್ನಲ್ಲಿ ಪ್ಯಾಟ್ರಿಕ್ ಸುಮಾರು ನಲವತ್ತು ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಅವರಿಗೆ ಬಹಳ ಹೆಸರು ತಂದು ಕೊಟ್ಟಿರುವ ಕೆಲವು ಪುಸ್ತಕಗಳೆಂದರೆ: ‘ಮಿಸ್ಸಿಂಗ್ ಪರ್ಸನ್’, ‘ಎ ಟ್ರೇಸ್ ಆಫ್ ಮಲೈಸ್’, ‘ಹನಿಮೂನ್’.
ಬರಹಗಾರರಾಗಿ ಅವರು ತಮ್ಮ ಕನಸನ್ನು ಒಂದು ಕಡೆ ಹೀಗೆ ಹೇಳಿಕೊಂಡಿದ್ದಾರೆ : ‘ನನಗೆ ದೀರ್ಘ ಕಾಲದಿಂದ ಮರಳಿ ಮರಳಿ ಒಂದು ಕನಸು ಬೀಳುತ್ತಿದೆ: ನನಗೆ ಬರೆಯಲು ಏನೂ ಉಳಿದಿಲ್ಲ ಎಂಬ ಕನಸು. ಬರೆಯಲು ಏನೂ ಇಲ್ಲವೆಂಬ ನನಗೆ ನಾನು ಎಲ್ಲದರಿಂದ ಮುಕ್ತನಾಗಿರುವಂತೆ ಕನಸು ಬೀಳುತ್ತದೆ. ಆದರೆ ನಾನು ಇನ್ನೂ ಬಿಡುಗಡೆಯಾಗಿಲ್ಲ’. ಅವರ ಕಾದಂಬರಿಗಳ ಪೈಕಿ ‘ರಿಂಗ್ ಆಫ್ ರೋಡ್ಸ್ : ಎ ನಾವೆಲ್’, ‘ವಿಲ್ಲ ಟ್ರಿಟೈಸ್’, ‘ಎ ಟ್ರೇಸ್ ಆಫ್ ಮಲೈಸ್’, ‘ಹನಿಮೂನ್’ ಮುಂತಾದವು ಇಂಗ್ಲಿಷ್ಗೆ ಅನುವಾದವಾಗಿವೆ.
ಅವರು ಅನೇಕ ಸ್ವಾರಸ್ಯಕರವಾದ ವಿಷಯಗಳ ಬೆನ್ನು ಹತ್ತಬಲ್ಲರು. ಅವರ ಕಾದಂಬರಿಗಳು ಪತ್ತೇದಾರಿ ಎಂದು ಹೇಳಲು ಆಗದಿದ್ದರೂ ಅವರು ಪತ್ತೇದಾರಿ ಬರಹದ ತಂತ್ರವನ್ನು ಬಳಸಿಕೊಂಡಿದ್ದಾರೆ. ‘ಮಿಸ್ಸಿಂಗ್ ಪರ್ಸನ್’ ಕಾದಂಬರಿಯಲ್ಲಿ ಸ್ವತಃ ಬಲವಂತದ ಮರೆವಿಗೆ ತುತ್ತಾದ ಪತ್ತೇದಾರ ತಾನು ಯಾರು ಎಂದು ಹುಡುಕುತ್ತಿರುತ್ತಾನೆ! ಓದುಗರೊಡನೆ ಆಟ ಆಡುವುದನ್ನು ಪ್ಯಾಟ್ರಿಕ್ ಬಹಳ ಇಷ್ಟ ಪಡುತ್ತಾರೆ. ಅವರ ಬೇರೆ ಬೇರೆ ಕಾದಂಬರಿಗಳ ಐದು ಪಾತ್ರಗಳು ಹೊಂದಿರುವ ದೂರವಾಣಿ ಸಂಖ್ಯೆ ಒಂದೇ ಆಗಿದೆ.
ಮತ್ತೊಬ್ಬ ಫ್ರೆಂಚ್ ಲೇಖಕ ರೇಮಂಡ್ ಮೂಲಕ ಅವರು ಗಾಲಿಮಾರ್ಡ್ ಪ್ರಕಾಶನ ಸಂಸ್ಥೆಯ ಸಂಪರ್ಕಕ್ಕೆ ಬಂದರು. ಪ್ಯಾಟ್ರಿಕ್ ಕೃತಿಗಳನ್ನು ಈ ಸಂಸ್ಥೆ ಪ್ರಕಟಿಸಿದ್ದು ಅವರ ಬದುಕಿನ ದೊಡ್ಡ ತಿರುವು. ಹುಡುಕಾಟ, ಅಸ್ಮಿತೆ, ನೆನಪು ಎಲ್ಲವೂ ಬೆರೆತುಹೋಗುವಂತೆ ಬರೆಯುವ ಪ್ಯಾಟ್ರಿಕ್ ಕಳೆದು ಹೋದ ಕಾಲವೊಂದರ ಬದುಕನ್ನು ತಮ್ಮದೇ ವಿಶಿಷ್ಟ ನೋಟದಲ್ಲಿ ಹಿಡಿದಿಡುವುದರಲ್ಲಿ ಪ್ರಸಿದ್ಧರು.
ಈ ಭಾರಿ ಮೊತ್ತದ ಪ್ರಶಸ್ತಿ (₨6.6 ಕೋಟಿ) ಅವರನ್ನು ಉಬ್ಬಿಸಿದಂತಿಲ್ಲ.
ಅವರನ್ನು ಈಗ ಕಾಡುತ್ತಿರುವ ಸಮಸ್ಯೆ ಬೇರೆಯೇ ಇದೆ. ಅಷ್ಟು ದೊಡ್ಡ ಫ್ರೆಂಚ್ ಲೇಖಕ ಕಾಮು ಜತೆ ತಮ್ಮನ್ನು ಇನ್ನು ಜನ ಹೋಲಿಸುತ್ತಾರಲ್ಲಾ ಎಂಬುದು ಪ್ಯಾಟ್ರಿಕ್ ಅವರ ಚಿಂತೆ. ಇವರ ತಂದೆ ಆಲ್ಬರ್ಟ್ ಯೆಹೂದಿ, ಹಾಗೂ ತಾಯಿ ಲೂಯಿಸ್ ವೃತ್ತಿಯಲ್ಲಿ ನಟಿ. ಅವರ ಮನೆತನ ಒಂದು ರೀತಿ ಬಹಳ ಸಂಕೀರ್ಣವಾದದ್ದು. ಯುದ್ಧ ಮುಗಿದ ಬಳಿಕ ಪ್ಯಾಟ್ರಿಕ್ಗೆ ಅವರ ತಂದೆಯನ್ನು ಎಲ್ಲಿ ಸಮಾಧಿ ಮಾಡಿದರು ಎಂಬುದೂ ತಿಳಿಯಲಿಲ್ಲ. ನಾಜಿಗಳಿಂದ ಗಾಸಿಗೊಂಡ ಬಾಲ್ಯವೇ ಪ್ಯಾಟ್ರಿಕ್ ಅವರನ್ನು 2014ರ ಸಾಹಿತ್ಯದ ನೊಬೆಲ್ಗೆ ಆಯ್ಕೆಯಾಗುವಂತೆ ಮಾಡಿತು.
ವ್ಯಕ್ತಿ
ಸಹೃದಯಿ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು
ದಶಕದ ಹಿಂದಿನ ಮಾತು. ಅಪ್ಪ- ಅಮ್ಮಂದಿರನ್ನು ಕಳೆದುಕೊಂಡ ತಮ್ಮ ಮೊಮ್ಮಗಳಿಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಲು ಬ್ಯಾಂಕೊಂದಕ್ಕೆ ಆದೇಶಿಸುವಂತೆ ಕೋರಿ ವೃದ್ಧೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿತ್ತು. ನೌಕರಿಗೆ ಅರ್ಜಿ ಸಲ್ಲಿಸಲು ನಿಯಮದಲ್ಲಿ ಉಲ್ಲೇಖಿಸಿರುವ ಅವಧಿ ಮೀರಿದ್ದರಿಂದ ನೌಕರಿ ನೀಡಲು ಬ್ಯಾಂಕ್ ನಿರಾಕರಿಸಿತ್ತು. ಕಾನೂನಿನ ಪ್ರಕಾರ ಬ್ಯಾಂಕ್ ವಾದ ಸರಿಯಾಗಿಯೇ ಇತ್ತು. ಆದರೆ, ಹೈಕೋರ್ಟ್ ತೀರ್ಪು ಮಾತ್ರ ಅಜ್ಜಿಯ ಪರವಾಯಿತು! ಏಕೆಂದರೆ ಅಲ್ಲಿ ಕಾನೂನಿಗಿಂತ ಮಿಗಿಲಾಗಿ ಮಾನವೀಯತೆ ಮೆರೆದಿತ್ತು.
‘ಒಬ್ಬ ಅನಕ್ಷರಸ್ಥೆ, ಮೊಮ್ಮಕ್ಕಳನ್ನು ಕಷ್ಟಪಟ್ಟು ಸಾಕಿ, ವಿದ್ಯಾವಂತರನ್ನಾಗಿ ಮಾಡಿ ಅನುಕಂಪದ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಕಾನೂನು, ನಿಯಮಗಳೆಲ್ಲ ಅವರಿಗೆ ತಿಳಿದಿಲ್ಲ. ಇಂತಹ ಸಮಯದಲ್ಲೂ ನಿಯಮ ಅದೂ ಇದೂ ಅಂತೆಲ್ಲ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಬೇಡಿ. ಇದನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಆ ಯುವತಿಗೆ ಉದ್ಯೋಗ ನೀಡಿ’ ಎಂದು ಕೋರ್ಟ್ ಆದೇಶಿಸಿತ್ತು. ಮೊಮ್ಮಗಳಿಗೆ ನೌಕರಿಯೇ ಸಿಗುವುದಿಲ್ಲ ಎಂದುಕೊಂಡಿದ್ದ ಆ ವೃದ್ಧೆಗೆ ಮರುಜೀವ ಬಂದಿತ್ತು.
ಇಂಥದ್ದೊಂದು ಅಪರೂಪದ ತೀರ್ಪು ನೀಡಿ ಅಂದು ಮಾನವೀಯತೆ ಮೆರೆದಿದ್ದವರು ನ್ಯಾಯಮೂರ್ತಿಗಳಾಗಿದ್ದ ಎಚ್.ಎಲ್.ದತ್ತು.
ಇದೊಂದೇ ಪ್ರಕರಣವಲ್ಲ. ಇಂಥ ಹತ್ತು ಹಲವಾರು ಮಾನವೀಯ ನೆಲೆಗಟ್ಟಿನ ತೀರ್ಪನ್ನು ಅವರು 1995ರಿಂದ 2007ರವರೆಗೆ ರಾಜ್ಯ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನೀಡಿದ್ದಾರೆ. 2007ರಲ್ಲಿ ಛತ್ತೀಸ್ಗಡಕ್ಕೆ ಅವರಿಗೆ ವರ್ಗಾವಣೆಯಾಯಿತು. ಅಲ್ಲಿ ಅವರು ಕೆಲಸ ನಿರ್ವಹಿಸಿದ್ದು ಕೇವಲ 80 ದಿನ. ಆದರೆ ಈ ಚಿಕ್ಕ ಅವಧಿ, ಹೈಕೋರ್ಟ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ನೌಕರರ ಪಾಲಿಗೆ ಮರೆಯಲಾಗದ ದಿನಗಳು. ಏಕೆಂದರೆ ಅನೇಕ ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತ, ಕಾಯಮಾತಿಗೆ ಹೋರಾಟ ನಡೆಸುತ್ತಿದ್ದ ಈ ಎಲ್ಲ ನೌಕರ ರನ್ನು ಕಾಯಂ ಮಾಡಿ ಆದೇಶ ಹೊರಡಿಸಿದರು ನ್ಯಾ. ದತ್ತು.
ಅಲ್ಲಿಂದ ಅವರು 2007ರಲ್ಲಿಯೇ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದು, ಅಲ್ಲಿಯೂ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಅಲ್ಲಿಂದ ಅವರ ಪಯಣ ಸುಪ್ರೀಂಕೋರ್ಟ್ನತ್ತ. 2008ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡು, ಇದೀಗ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದು ಈ ಉನ್ನತ ಸ್ಥಾನ ಏರಿದ ನಾಲ್ಕನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲಿನಿಂದಲೂ ಮಾನವೀಯ ಗುಣಗಳಿಗೆ ಹೆಸರಾಗಿರುವ ನ್ಯಾ.ದತ್ತು ಅವರು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನಕ್ಕೆ ಕಾಶ್ಮೀರಕ್ಕೆ ತೆರಳಿ ಅಲ್ಲಿಯ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿಕೊಂಡು ಬಂದದ್ದು ಅವರ ಹತ್ತಿರ ಇರುವ ಅನೇಕರಿಗೇ ತಿಳಿದಿಲ್ಲ. ಎಲ್ಲಿಯೂ ಪ್ರಚಾರ ಮಾಡಿಕೊಳ್ಳದೇ, ಗೋಪ್ಯವಾಗಿ ಕಾಶ್ಮೀರಕ್ಕೆ ಹೋಗಿ ಅಲ್ಲಿ ಒಂದೆರಡು ದಿನ ಇದ್ದು ಸಮಸ್ಯೆ ಆಲಿಸಿ, ಅದಕ್ಕೊಂದಿಷ್ಟು ಪರಿಹಾರ ಒದಗಿಸಿ ಬಂದಿದ್ದಾರೆ.
ಮಾನವೀಯ ವಿಷಯ ಬಂದಾಗ ಎಷ್ಟು ಸೂಕ್ಷ್ಮವೋ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಷ್ಟೇ ಕಟ್ಟುನಿಟ್ಟು. ಭ್ರಷ್ಟಾಚಾರದ ಆರೋಪ ಹೊತ್ತವರ ಪರ ವಕೀಲರು ವಾದಿಸುವಾಗ, ಆ ವಾದದಲ್ಲಿ ಹುರುಳಿಲ್ಲ ಎಂದು ತಿಳಿದರೆ ಸಾಕು, ಅವರು ಹಿರಿಯ ವಕೀಲರೋ, ಸುಪ್ರೀಂಕೋರ್ಟ್ ವಕೀಲರೋ ಎಂದೆಲ್ಲ ನೋಡುವುದೇ ಇಲ್ಲ. ‘ನೀವು ವಾದ ಮುಂದುವರಿಸಿ ನಿಮ್ಮ ಕರ್ತವ್ಯ ಮಾಡಿ, ನಾನು ಅಡ್ಡಿ ಪಡಿಸಲಾರೆ. ಆದರೆ ನಾನು ಏನು ತೀರ್ಪು ನೀಡಬೇಕೋ ಅದನ್ನೇ ನೀಡುವುದು’ ಎಂದು ಹೇಳಿ ವಕೀಲರ ಬಾಯಿ ಮುಚ್ಚಿಸುತ್ತಿದ್ದರು!
ಸಿವಿಲ್, ಕ್ರಿಮಿನಲ್, ತೆರಿಗೆ ವಿಷಯಗಳಲ್ಲಿ ಹೆಚ್ಚಿನ ಪಾಂಡಿತ್ಯ ಹೊಂದಿರುವ ನ್ಯಾ. ದತ್ತು ಅವರು 1975ರಿಂದ 1990ರವರೆಗೆ ಹೈಕೋರ್ಟ್ನಲ್ಲಿ ವಕೀಲರಾಗಿದ್ದಾಗ ಹೆಚ್ಚಾಗಿ ಅದೇ ಪ್ರಕರಣಗಳಲ್ಲಿ ವಾದಿಸುತ್ತಿದ್ದರು. ಸರ್ಕಾರಿ ಪ್ಲೀಡರ್ ಆಗಿ, ನಂತರ ಸರ್ಕಾರಿ ವಕೀಲರಾಗಿ ನೇಮಕಗೊಂಡಾಗಲೂ ಆದಾಯ ತೆರಿಗೆ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಾಗಿ ಇವರ ಬಳಿ ಬಂದಿದ್ದವು.
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರವೂ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ತೀರ್ಪು ನೀಡಿದ್ದಾರೆ.
‘ಒಂದು ಕಪ್ ಫಿಲ್ಟರ್ ಕಾಫಿ ಮತ್ತು ಒಂದೈದು ನಿಮಿಷದ ಕರ್ನಾಟಕ ಸಂಗೀತ ಇಷ್ಟಿದ್ದರೆ ಮನಸ್ಸು ಯಾವಾಗಲೂ ಪ್ರಫುಲ್ಲವಾಗಿರುತ್ತದೆ’ ಎನ್ನುವ ನ್ಯಾ. ದತ್ತು ಅವರಿಗೆ ಗಿಡ ಮರಗಳೆಂದರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ಸಾಕ್ಷಿಯಾಗಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಇರುವ ಅವರ ತೋಟ. ಸುಮಾರು ಐದಾರು ವರ್ಷಗಳ ಹಿಂದೆ ಮಳೆ ಸರಿಯಾಗಿ ಬಾರದೇ ಅಂತರ್ಜಲ ಕುಸಿದು ಇವರ ತೋಟದ ಗಿಡ ಮರಗಳೂ ಒಣಗಿ ಹೋಗಿದ್ದವು. ಗಿಡಗಳ ಈ ಪರಿಸ್ಥಿತಿ ನೋಡಿ ದತ್ತು ಅವರು ಊಟ, ನಿದ್ದೆಯನ್ನೇ ಬಿಟ್ಟಿದ್ದರು. ನಂತರ ಬೋರ್ವೆಲ್ ಕೊರೆಸಿ ನೀರು ಬರುವವರೆಗೂ ಕಾದು, ಗಿಡ ಮರಗಳಿಗೆ ನೀರು ಉಣಿಸಿದ ಬಳಿಕವೇ ತಾವು ಆಹಾರ ಸೇವಿಸಿದ್ದರು. ಅರಣ್ಯ , ತೋಟಗಾರಿಕೆ ಇಲಾಖೆಗಳಿಗೆ ಆಗಾಗ್ಗೆ ಭೇಟಿ ನೀಡಿ, ಹೊಸ ಹೊಸ ಬಗೆಯ ಸಸಿಗಳನ್ನು ತಂದು ತೋಟದಲ್ಲಿ ನೆಡುವುದು ಅವರ ಆಸಕ್ತಿಗಳಲ್ಲಿ ಒಂದು.
ಕುಟುಂಬದ ಬಗ್ಗೆ ಒಂದಿಷ್ಟು
ಇವರು ಹುಟ್ಟಿದ್ದು ಬಳ್ಳಾರಿಯ ಹಂದ್ಯಾಲ ಗ್ರಾಮದಲ್ಲಿ ೧೯೫೦ರ ಡಿಸೆಂಬರ್ ೩ರಂದು. ಅಪ್ಪ ಶಿಕ್ಷಕ ಲಕ್ಷ್ಮೀನಾರಾಯಣ ಮತ್ತು ಅಮ್ಮ ಶಾಕುಂತಲಮ್ಮ. ಇವರಿಗೆ ಮಕ್ಕಳಾಗದಿದ್ದ ಹಿನ್ನೆಲೆಯಲ್ಲಿ ಗುರು ದತ್ತಾತ್ರೇಯನ ಮೊರೆ ಹೋಗಿದ್ದರು. ನಂತರ ಅವರಿಗೆ ಗಂಡು ಮಗುವಾದ ಕಾರಣ, ಇವರಿಗೆ ‘ದತ್ತು’ ಎಂದು ಹೆಸರಿಟ್ಟರು. ದತ್ತು ಅವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆಯಿತು. ನಂತರ ಬೆಂಗಳೂರಿನಲ್ಲಿ ಬಿ.ಎಸ್ಸಿ, ಎಲ್ಎಲ್ಬಿ ಪದವಿ ಪಡೆದರು.
ಇವರದ್ದು ಚಿಕ್ಕ- ಚೊಕ್ಕ ಕುಟುಂಬ. ಇವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ. ಮಗಳು ಹಾಗೂ ಅಳಿಯ ಇಬ್ಬರೂ ಬೆಂಗಳೂರಿನಲ್ಲಿ ವೈದ್ಯರಾಗಿದ್ದರೆ, ಮಗ ಹಾಗೂ ಸೊಸೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಇಬ್ಬರು ಮಕ್ಕಳಿಗೂ ಇಬ್ಬಿಬ್ಬರು ಗಂಡು ಮಕ್ಕಳು. ನ್ಯಾ. ದತ್ತು ಅವರ ಪತ್ನಿ ಗಾಯತ್ರಿ ಅವರು ಬಡ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದಾರೆ.
ಮೂಲತಃ ತಮಿಳುನಾಡಿನವರಾದ ಅರವಿಂದ, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್ನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ, ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇಂಗ್ಲೆಂಡ್ನ ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್ನಿಂದ ಎಂ.ಫಿಲ್ ಮತ್ತು ಡಿ.ಫಿಲ್ ಪಡೆದುಕೊಂಡಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸಂಶೋಧನಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಹುರಾಷ್ಟ್ರೀಯ ವ್ಯಾಪಾರ ಸಂಧಾನಕ್ಕೆ ಸಂಬಂಧಿಸಿದ ಉರುಗ್ವೆ ಸುತ್ತಿನ ಮಾತುಕತೆಗಳಲ್ಲೂ (1988ರಿಂದ 92) ಅವರು ತೊಡಗಿಕೊಂಡಿದ್ದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನೆಡಿ ಸ್ಕೂಲ್ ಆಫ್ ಗವರ್ನಮೆಂಟ್ (1999–2000) ಮತ್ತು ಜಾನ್ ಹಾಪ್ಕಿನ್ಸ್ ಸ್ಕೂಲ್ ಫಾರ್ ಅಡ್ವಾನ್ಸಡ್ ಇಂಟರ್ನ್ಯಾಷನಲ್ ಸ್ಟಡೀಸ್ನಲ್ಲಿ 2008ರಿಂದ 2010ರವರೆಗೆ ಬೋಧಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಅಂಕಣಕಾರ
ವಿಶ್ವದ ಪ್ರಮುಖ ಆರ್ಥಿಕ ನಿಯತಕಾಲಿಕೆಗಳಲ್ಲಿ ಅಂಕಣಕಾರಾಗಿಯೂ ಇವರು ಮನ್ನಣೆ ಗಳಿಸಿದ್ದಾರೆ. ಇಕನಾಮಿಸ್ಟ್, ಫೈನಾನ್ಶಿಯಲ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮತ್ತು ದೇಶದ ಪ್ರಮುಖ ಹಣಕಾಸು ದೈನಿಕ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಸೇರಿದಂತೆ ವಿಶ್ವದ ಪ್ರಮುಖ ಅಂಕಣಕಾರರಾಗಿಯೂ ಇವರು ಜನಪ್ರಿಯರಾಗಿದ್ದಾರೆ.
‘ಜಿ-20’ಗೆ ಸಂಬಂಧಿಸಿದ ಹಣಕಾಸು ಸಚಿವರ ಪರಿಣತರ ತಂಡದ ಸದಸ್ಯ ಸೇರಿದಂತೆ ಹಲವಾರು ಹುದ್ದೆಗಳನ್ನು ನಿಭಾಯಿಸುವ ಮೂಲಕವೂ ಇವರು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ.
ಇವರಲ್ಲೊಬ್ಬ ‘ಅಭಿವೃದ್ಧಿ ಆರ್ಥಿಕ ತಜ್ಞ’ ಇದ್ದಾನೆ. ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದ ಗವರ್ನರ್ ರಘುರಾಂ ರಾಜನ್ ಜತೆಗೂ ಐಎಂಎಫ್ನಲ್ಲಿ ಕೆಲಸ ಮಾಡಿದ್ದಾರೆ. ರಾಜನ್ ಅವರು ಆರ್ಬಿಐಗೆ ತೆರಳಿದ ನಂತರ ತೆರವಾಗಿದ್ದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯು ಇವರನ್ನೇ ಹುಡುಕಿಕೊಂಡು ಬಂದಿರುವುದು ಕಾಕತಾಳೀಯವೂ ಇದ್ದೀತು.
ಅರವಿಂದ ಅವರನ್ನು ನೇಮಕ ಮಾಡುವ ಮೂಲಕ ನರೇಂದ್ರ ಮೋದಿ ಅವರು ಸರ್ಕಾರದ ಬೌದ್ಧಿಕ ಸಾಮರ್ಥ್ಯಕ್ಕೆ ಇನ್ನಷ್ಟು ಸಾಣೆ ಹಿಡಿದಿದ್ದಾರೆ.
ಆರ್ಥಿಕ ತಜ್ಞ ಜತೆಗೆ ಸಂಶೋಧನಾ ಆರ್ಥಿಕ ತಜ್ಞರೂ ಆಗಿರುವ ಅರವಿಂದ, ದೇಶಿ ಅರ್ಥ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಸರಿದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ತಮ್ಮೆಲ್ಲ ಅನುಭವವನ್ನು ಧಾರೆ ಎರೆದರೆ, ಸರ್ಕಾರವೂ ಅವರ ಚಿಂತನೆಗೆ ಸೂಕ್ತವಾಗಿ ಸ್ಪಂದಿಸಿದರೆ ದೇಶಿ ಅರ್ಥ ವ್ಯವಸ್ಥೆಯ ಅಭಿವೃದ್ಧಿ ಓಘ ಇನ್ನಷ್ಟು ತೀವ್ರಗೊಳ್ಳಬಹುದು.
ವಿಶ್ವದಾದ್ಯಂತ ಮನ್ನಣೆಗೆ ಪಾತ್ರರಾಗಿರುವ ಆರ್ಥಿಕ ತಜ್ಞರಲ್ಲಿ ಒಬ್ಬರಾಗಿರುವ ಮತ್ತು ಜನಪ್ರಿಯ ಅಂಕಣಕಾರರೂ ಆಗಿರುವ, ‘ಫಾರಿನ್ ಪಾಲಿಸಿ’ ನಿಯತಕಾಲಿಕೆಯು ವಿಶ್ವದ ಮುಂಚೂಣಿ 100 ಜಾಗತಿಕ ಚಿಂತಕರಲ್ಲಿ ಒಬ್ಬರು ಎಂದು ಗುರುತಿಸಿರುವ ಅಮೆರಿಕ ಮೂಲದ ಆರ್ಥಿಕ ತಜ್ಞ ಅರವಿಂದ ಸುಬ್ರಹ್ಮಣಿಯನ್ ಅವರು ಈಗ ದೇಶದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ.
ಆರ್ಥಿಕ ನೀತಿ ನಿರೂಪಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಈ ಮಹತ್ವದ ಹುದ್ದೆಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅರವಿಂದ ಅವರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿತ್ತು. ಮೋದಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಸಮರ್ಥ ಆರ್ಥಿಕ ಚಿಂತಕರೇ ಇಲ್ಲ ಎನ್ನುವ ಕೊರತೆಯನ್ನು ಈ ಹೊಸ ಗುರು ದೂರ ಮಾಡಲಿದ್ದಾರೆ.
ಎರಡು ಮಹತ್ವದ ರಾಜ್ಯಗಳ ಚುನಾವಣಾ ಪ್ರಚಾರ ಭರಾಟೆ ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈಗ ದೇಶದ ಅರ್ಥವ್ಯವಸ್ಥೆಯ ಆರೋಗ್ಯದತ್ತ ಗಮನ ಕೇಂದ್ರೀಕರಿಸಿದ್ದಾರೆ. ಕೇಂದ್ರ ಸರ್ಕಾರದ ಉನ್ನತ ಮಟ್ಟದ ಆರ್ಥಿಕ ಹುದ್ದೆಗಳ ಬಾಬುಗಳನ್ನು ಬದಲಾಯಿಸುವ ಮಹತ್ವದ ಮತ್ತು ದೂರಗಾಮಿ ಪರಿಣಾಮ ಬೀರುವ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿದ್ದಾರೆ. ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೈಗೊಂಡ ಅಧಿಕಾರಶಾಹಿ ಬದಲಾವಣೆಯ ಮಹತ್ವಾಕಾಂಕ್ಷೆಯ ನಿರ್ಧಾರ ಇದಾಗಿದೆ.
ಅರವಿಂದ ನೇಮಕಾತಿಯು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಪಕ ಪ್ರಮಾಣದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಹೊರಟಿರುವುದರ ಸಂಕೇತವೂ ಆಗಿದೆ.
ಅರವಿಂದ ಸುಬ್ರಹ್ಮಣಿಯನ್ ಅವರನ್ನು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸುವ ಮೂಲಕ, ವ್ಯಾಪಕ ಪ್ರಮಾಣದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳು ಜಾರಿಗೆ ಬರಲಿರುವ ಸ್ಪಷ್ಟ ಸೂಚನೆಯನ್ನೂ ನೀಡಿದ್ದಾರೆ.
ಅರವಿಂದ ಅವರು ಆರ್ಥಿಕ ಬೆಳವಣಿಗೆ ಮತ್ತು ಸುಧಾರಣಾ ಕ್ರಮಗಳ ಪರವಾಗಿರುವ ಆರ್ಥಿಕ ತಜ್ಞರಾಗಿದ್ದು, ತಮಗನಿಸಿದ್ದನ್ನು ಯಾವುದೇ ಮುಚ್ಚುಮರೆ ಇಲ್ಲದೇ ಹೇಳುವ ಎದೆಗಾರಿಕೆಯೂ ಅವರಿಗೆ ಇದೆ ಎಂದು ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ಬಣ್ಣಿಸಿರುವುದು ಇವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.
ಜಾಗತಿಕ ವಾಣಿಜ್ಯ ವಹಿವಾಟಿನ ಅಧ್ಯಯನದ ಪರಿಣತರಾಗಿರುವ ಅರವಿಂದ, ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒದ) ಇತ್ತೀಚಿನ ಸಭೆಯಲ್ಲಿ ಕೇಂದ್ರ ಸರ್ಕಾರ ತಳೆದಿರುವ ಆಹಾರ ಸುರಕ್ಷತೆ ಮತ್ತು ಕೃಷಿ ಸಬ್ಸಿಡಿ ನಿಲುವನ್ನು ಟೀಕಿಸಿ ಗಮನ ಸೆಳೆದಿದ್ದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೊದಲ ಬಜೆಟ್ ಅನ್ನು ನಿರಾಶಾದಾಯಕವಾಗಿದೆ ಎಂದೂ ಟೀಕಿಸಿದ್ದರು.
ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಇವರ ದಿಟ್ಟತನದ ಹೊರತಾಗಿಯೂ ಅವರ ವಿಶ್ವಾಸಾರ್ಹತೆ ಮತ್ತು ಹಣಕಾಸು, ಆರ್ಥಿಕ ನೀತಿ ನಿರೂಪಣೆ ಸಿದ್ಧಪಡಿಸುವಲ್ಲಿ ಇವರು ಕಠಿಣ ಪರಿಶ್ರಮಿ ಎನ್ನುವ ಪ್ರಶಂಸೆಯೂ ಇವರ ನೇಮಕಾತಿಯಲ್ಲಿ ಪ್ರಮುಖವಾಗಿ ಪರಿಗಣನೆಗೆ ಬಂದಿದೆ.
ಮುಕ್ತ ವ್ಯಾಪಾರವನ್ನು ಬಲವಾಗಿ ಪ್ರತಿಪಾದಿಸುವ, ದೇಶದ ಅರ್ಥ ವ್ಯವಸ್ಥೆಯಲ್ಲಿ ಸರಕುಗಳ ತಯಾರಿಕಾ ರಂಗವು ಅತಿ ದೊಡ್ಡ ಪಾತ್ರ ನಿರ್ವಹಿಸಬೇಕು, ಅಮೆರಿಕ ಜತೆಗಿನ ವಾಣಿಜ್ಯ ಸಂಬಂಧ ವೃದ್ಧಿಯಾಗಬೇಕು ಮತ್ತು ಚೀನಾದ ಅರ್ಥ ವ್ಯವಸ್ಥೆ ಮೇಲೆ ನಿರಂತರವಾಗಿ ಕಣ್ಣು ನೆಟ್ಟಿರಲೇಬೇಕು ಎನ್ನುವುದು ಅರವಿಂದ ಅವರ ಆಲೋಚನಾ ಲಹರಿಯಾಗಿದೆ.
ಬಹುರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಿಇಎ ನಡುವೆ ಭಿನ್ನಮತ ಸ್ಫೋಟಿಸುವುದೇ ಎನ್ನುವುದು ಇವರ ಅಧಿಕಾರಾವಧಿಯಲ್ಲಿ ಪರೀಕ್ಷೆಗೆ ಒಳಪಡಲಿದೆ.
ಬದಲಾವಣೆ ಮತ್ತು ಸುಧಾರಣೆಗೆ ಸ್ಪಷ್ಟ ಜನಾದೇಶ ಪಡೆದಿರುವ ನರೇಂದ್ರ ಮೋದಿ ಸರ್ಕಾರದ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ತಮಗೆ ಸಂದ ಗೌರವ ಎಂದೇ ಬಣ್ಣಿಸಿರುವ ಅರವಿಂದ, ದೇಶಿ ಅರ್ಥ ವ್ಯವಸ್ಥೆಯು ಪುಟಿದೇಳುವ ಬಗ್ಗೆ ಭಾರಿ ಆಶಾವಾದಿಯಾಗಿದ್ದಾರೆ.
ಭಾರತದಂತಹ ಅರ್ಥ ವ್ಯವಸ್ಥೆ ಹೊಂದಿರುವ ಯಾವುದೇ ದೇಶದ ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ಇರಬೇಕು ಮತ್ತು ಆರ್ಥಿಕತೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ವ್ಯಾಪಕ ಪ್ರಮಾಣದ ಬಂಡವಾಳ ಹೂಡಿಕೆಗೆ ಅಗತ್ಯವಾದ ಪೂರಕ ವಾತಾವರಣವೂ ಇರಬೇಕು. ಜತೆಗೆ ದೇಶದ ಎಲ್ಲ ಸಮುದಾಯಗಳಿಗೆ ಅವಕಾಶ ಒದಗಿಸಿ ಕೊಡುವ ಪ್ರಕ್ರಿಯೆಯಲ್ಲಿ ಯಾರೊಬ್ಬರನ್ನೂ ಕೈಬಿಡಬಾರದು ಎನ್ನುವುದು ಅರವಿಂದ ಅವರ ಆಶಯವಾಗಿದೆ.
ಕಠಿಣ ಸ್ವರೂಪದ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡಿರುವ ದೇಶಗಳಲ್ಲಿ ಇವರು ಇದುವರೆಗೂ ಕೆಲಸ ಮಾಡಿಲ್ಲ. ಹೀಗಾಗಿ ಇವರು ತಮ್ಮ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವರೇ ಎನ್ನುವ ಅನುಮಾನ ಕೆಲವರಲ್ಲಿ ಇದೆ. ಇದೇ ಕಾರಣಕ್ಕೆ, ದೇಶಿ ಅರ್ಥ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಲು ಇವರಿಗೆ ಕೆಲಮಟ್ಟಿಗೆ ಕಾಲಾವಕಾಶವನ್ನೂ ಕೊಡಬೇಕಾಗುತ್ತದೆ.
ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆ ನಿಭಾಯಿಸುವಲ್ಲಿ ಆರ್ಥಿಕ ಪರಿಣತಿಯೊಂದೇ ಕೆಲಸಕ್ಕೆ ಬರುವುದಿಲ್ಲ. ರಾಜಕೀಯ ಪರಿಮಿತಿ ಒಳಗೇ ಕಾರ್ಯ ಇವರು ನಿರ್ವಹಿಸಬೇಕಾಗುತ್ತದೆ. ದೆಹಲಿಯಲ್ಲಿನ ರಾಜಕೀಯ ವಾತಾವರಣಕ್ಕೂ ಅವರು ಇನ್ನೂ ಒಗ್ಗಿಕೊಳ್ಳಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಅವರಿಂದ ಅಲ್ಪಾವಧಿಯಲ್ಲಿ ಅತಿಯಾದ ನಿರೀಕ್ಷೆ ಮಾಡುವುದು ಸರಿಯಾಗದು.
ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಆರ್ಥಿಕ ತಜ್ಞನ ಹುದ್ದೆ ನಿರ್ವಹಿಸುತ್ತಿದ್ದ ಅರವಿಂದ ಅವರು ಭಾರತ, ಚೀನಾ ಅರ್ಥ ವ್ಯವಸ್ಥೆ ಮತ್ತು ಜಾಗತಿಕ ಆರ್ಥಿಕ ಶಕ್ತಿಯ ಸಮತೋಲನದಲ್ಲಿನ ಬದಲಾವಣೆ ಬಗೆಗಿನ ಪರಿಣತರು ಎಂದೇ ಖ್ಯಾತರಾಗಿದ್ದಾರೆ.
ಕೃತಿಗಳು
ಎರಡು ಸ್ವತಂತ್ರ ಪುಸ್ತಕಗಳನ್ನು ಅರವಿಂದ ಸುಬ್ರಹ್ಮಣಿಯನ್ ಅವರು ರಚಿಸಿದ್ದಾರೆ. ಇಂಡಿಯಾಸ್ ಟರ್ನ್: ಅಂಡರ್ಸ್ಟ್ಯಾಂಡಿಂಗ್ ದ ಇಕನಾಮಿಕ್ ಟ್ರಾನ್ಸ್ ಫಾರ್ಮೇಶನ್ (ಭಾರತದ ಸರದಿ: ಆರ್ಥಿಕ ಪರಿವರ್ತನೆ ತಿಳಿದುಕೊಳ್ಳುವುದು) - 2008ರಲ್ಲಿ ಪ್ರಕಟವಾಗಿದೆ.
‘ಎಕ್ಲಿಪ್ಸ್: ಲಿವಿಂಗ್ ಇನ್ ದ ಶಾಡೊ ಆಫ್ ಚೀನಾಸ್ ಇಕನಾಮಿಕ್ ಡಾಮಿನನ್ಸ್’ (ಗ್ರಹಣ: ಚೀನಾದ ಆರ್ಥಿಕ ಪ್ರಾಬಲ್ಯದ ನೆರಳಿನಲ್ಲಿನ ಬದುಕು) ಮತ್ತು ‘ಹೂ ನೀಡ್ಸ್ ಟು ಓಪನ್ ದ ಕ್ಯಾಪಿಟಲ್ ಅಕೌಂಟ್’ (ಬಂಡವಾಳ ಖಾತೆ ತೆರೆಯಲು ಯಾರಿಗೆ ಅಗತ್ಯ ಇದೆ) ಕೃತಿಯ ಸಹ ಲೇಖಕರಾಗಿದ್ದಾರೆ.
ಆರ್ಥಿಕ ಬೆಳವಣಿಗೆ, ವ್ಯಾಪಾರ, ಅಭಿವೃದ್ಧಿ, ನೆರವು, ತೈಲ ವಹಿವಾಟು, ವಿಶ್ವ ವ್ಯಾಪಾರ ಸಂಘಟನೆಗೆ ಸಂಬಂಧಿಸಿದಂತೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರೆ.
ಮೂಲತಃ ತಮಿಳುನಾಡಿನವರಾದ ಅರವಿಂದ, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್ನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ, ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇಂಗ್ಲೆಂಡ್ನ ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್ನಿಂದ ಎಂ.ಫಿಲ್ ಮತ್ತು ಡಿ.ಫಿಲ್ ಪಡೆದುಕೊಂಡಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸಂಶೋಧನಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಹುರಾಷ್ಟ್ರೀಯ ವ್ಯಾಪಾರ ಸಂಧಾನಕ್ಕೆ ಸಂಬಂಧಿಸಿದ ಉರುಗ್ವೆ ಸುತ್ತಿನ ಮಾತುಕತೆಗಳಲ್ಲೂ (1988ರಿಂದ 92) ಅವರು ತೊಡಗಿಕೊಂಡಿದ್ದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನೆಡಿ ಸ್ಕೂಲ್ ಆಫ್ ಗವರ್ನಮೆಂಟ್ (1999–2000) ಮತ್ತು ಜಾನ್ ಹಾಪ್ಕಿನ್ಸ್ ಸ್ಕೂಲ್ ಫಾರ್ ಅಡ್ವಾನ್ಸಡ್ ಇಂಟರ್ನ್ಯಾಷನಲ್ ಸ್ಟಡೀಸ್ನಲ್ಲಿ 2008ರಿಂದ 2010ರವರೆಗೆ ಬೋಧಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಅಂಕಣಕಾರ
ವಿಶ್ವದ ಪ್ರಮುಖ ಆರ್ಥಿಕ ನಿಯತಕಾಲಿಕೆಗಳಲ್ಲಿ ಅಂಕಣಕಾರಾಗಿಯೂ ಇವರು ಮನ್ನಣೆ ಗಳಿಸಿದ್ದಾರೆ. ಇಕನಾಮಿಸ್ಟ್, ಫೈನಾನ್ಶಿಯಲ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮತ್ತು ದೇಶದ ಪ್ರಮುಖ ಹಣಕಾಸು ದೈನಿಕ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಸೇರಿದಂತೆ ವಿಶ್ವದ ಪ್ರಮುಖ ಅಂಕಣಕಾರರಾಗಿಯೂ ಇವರು ಜನಪ್ರಿಯರಾಗಿದ್ದಾರೆ.
‘ಜಿ-20’ಗೆ ಸಂಬಂಧಿಸಿದ ಹಣಕಾಸು ಸಚಿವರ ಪರಿಣತರ ತಂಡದ ಸದಸ್ಯ ಸೇರಿದಂತೆ ಹಲವಾರು ಹುದ್ದೆಗಳನ್ನು ನಿಭಾಯಿಸುವ ಮೂಲಕವೂ ಇವರು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ.
ಇವರಲ್ಲೊಬ್ಬ ‘ಅಭಿವೃದ್ಧಿ ಆರ್ಥಿಕ ತಜ್ಞ’ ಇದ್ದಾನೆ. ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದ ಗವರ್ನರ್ ರಘುರಾಂ ರಾಜನ್ ಜತೆಗೂ ಐಎಂಎಫ್ನಲ್ಲಿ ಕೆಲಸ ಮಾಡಿದ್ದಾರೆ. ರಾಜನ್ ಅವರು ಆರ್ಬಿಐಗೆ ತೆರಳಿದ ನಂತರ ತೆರವಾಗಿದ್ದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯು ಇವರನ್ನೇ ಹುಡುಕಿಕೊಂಡು ಬಂದಿರುವುದು ಕಾಕತಾಳೀಯವೂ ಇದ್ದೀತು.
ಅರವಿಂದ ಅವರನ್ನು ನೇಮಕ ಮಾಡುವ ಮೂಲಕ ನರೇಂದ್ರ ಮೋದಿ ಅವರು ಸರ್ಕಾರದ ಬೌದ್ಧಿಕ ಸಾಮರ್ಥ್ಯಕ್ಕೆ ಇನ್ನಷ್ಟು ಸಾಣೆ ಹಿಡಿದಿದ್ದಾರೆ.
ಆರ್ಥಿಕ ತಜ್ಞ ಜತೆಗೆ ಸಂಶೋಧನಾ ಆರ್ಥಿಕ ತಜ್ಞರೂ ಆಗಿರುವ ಅರವಿಂದ, ದೇಶಿ ಅರ್ಥ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಸರಿದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ತಮ್ಮೆಲ್ಲ ಅನುಭವವನ್ನು ಧಾರೆ ಎರೆದರೆ, ಸರ್ಕಾರವೂ ಅವರ ಚಿಂತನೆಗೆ ಸೂಕ್ತವಾಗಿ ಸ್ಪಂದಿಸಿದರೆ ದೇಶಿ ಅರ್ಥ ವ್ಯವಸ್ಥೆಯ ಅಭಿವೃದ್ಧಿ ಓಘ ಇನ್ನಷ್ಟು ತೀವ್ರಗೊಳ್ಳಬಹುದು.
ಮತ್ತೆ 'ದಾಲ್ಮಿಯ ಯುಗ'
By Prajavani, 08 Mar 2015 01:00 AM
(8 Mar) ವಿಶೇಷ › ಈ ಭಾನುವಾರ ವ್ಯಕ್ತಿ ಮಹಮ್ಮದ್ ನೂಮಾನ್ 'ಕಮ್ಬ್ಯಾಕ್ ಮ್ಯಾನ್' ಎಂಬುದು ಜಗಮೋಹನ್ ದಾಲ್ಮಿಯ ಅವರ ಮತ್ತೊಂದು ಹೆಸರು. ಹಿನ್ನಡೆ ಅನುಭವಿಸಿದಾಗ ಕುಗ್ಗದೆ, ಛಲದಿಂದ ಎದ್ದುನಿಲ್ಲುವ ಸಾಮರ್ಥ್ಯ ಹೊಂದಿರುವುದರಿಂದ ಅವರಿಗೆ ಈ ಹೆಸರು ಬಂದಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಚುಕ್ಕಾಣಿ 74ರ ಹರೆಯದ ಈ ಹಿರಿಯ ಆಡಳಿತಗಾರನ ಕೈಗೆ ಮತ್ತೆ ದೊರೆತಿದೆ. ಕ್ರಿಕೆಟ್ ವಲಯದಲ್ಲಿ 'ಏಷ್ಯಾದ ಹುಲಿ' ಎಂದೇ ಬಿಂಬಿತವಾಗಿರುವ ದಾಲ್ಮಿಯ ಒಂದೂವರೆ ದಶಕದ ಹಿಂದೆ ಈ ಹುದ್ದೆಯನ್ನು ಮೊದಲ ಬಾರಿ ಅಲಂಕರಿಸಿದ್ದರು. ಕ್ರಿಕೆಟ್ ಆಡಳಿತದಲ್ಲಿ 35 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಅವರು ಎರಡನೇ ಬಾರಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅನಿರೀಕ್ಷಿತವೇ ಸರಿ. 2001ರಿಂದ 2004ರವರೆಗೆ ಅಧ್ಯಕ್ಷ ಸ್ಥಾನದಲ್ಲಿದ್ದಾಗ ಅವರು ಕೈಗೊಂಡಿದ್ದ ಕೆಲವು ದಿಟ್ಟ ನಿರ್ಧಾರಗಳಿಂದಾಗಿ ಬಿಸಿಸಿಐ ಇಂದು ಕ್ರಿಕೆಟ್ ಜಗತ್ತಿನ ಬಲಾಢ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಅವರ ದೂರದೃಷ್ಟಿ ಯೋಜನೆಗಳಿಂದ ಮಂಡಳಿಗೆ ಅಪಾರ ಲಾಭವಾಗಿದೆ. 'ಕ್ರಿಕೆಟ್ನ ಬೆಳವಣಿಗೆಗೆ ಸಂಬಂಧಿಸಿದಂತೆ ದಾಲ್ಮಿಯ ಹೊಂದಿದ್ದ ದೂರದೃಷ್ಟಿ ಹಾಗೂ ಕಾರ್ಯತತ್ಪರತೆಯನ್ನು ಇತರ ಯಾವುದೇ ಆಡಳಿತಗಾರರಲ್ಲೂ ನಾನು ಕಂಡಿಲ್ಲ' ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಇಯಾನ್ ಚಾಪೆಲ್ ಒಮ್ಮೆ ಹೇಳಿದ್ದರು. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್
'ಭಾರತದ ಮಗಳ'ನ್ನು ನೋಡಿದಿರಾ?
By Prajavani, 08 Mar 2015 01:00 AM
(8 Mar) ವಿಶೇಷ › ಈ ಭಾನುವಾರ -ಬಿ.ಎಂ.ಹನೀಫ್ ಲೆಸ್ಲೀ ಉಡ್ವಿನ್ ಅತ್ಯಾಚಾರ ಅಪರಾಧಿ ಮುಕೇಶ್ 'ಭಾರತದ ಮಗಳು' ಸುದ್ದಿಯಲ್ಲಿದ್ದಾಳೆ. ಲೆಸ್ಲೀ ಉಡ್ವಿನ್ ಎಂಬ ಇಂಗ್ಲೆಂಡಿನ ಹೆಣ್ಣು ಮಗಳು ನಿರ್ಮಿಸಿದ ಈ ಸಾಕ್ಷ್ಯಚಿತ್ರವನ್ನು ಭಾರತ ಸರ್ಕಾರ ನಿಷೇಧಿಸಿದೆ. 2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ನಿರ್ದಯವಾಗಿ ಅತ್ಯಾಚಾರ ನಡೆಸಿ, ಕೋರ್ಟಿನಲ್ಲಿ ಮರಣದಂಡನೆಯ ಶಿಕ್ಷೆ ಪಡೆದು ಈಗ ತಿಹಾರ್ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ನ ಸಂದರ್ಶನ ಈ ಸಾಕ್ಷ್ಯಚಿತ್ರದಲ್ಲಿದೆ. ಈ ಸಾಕ್ಷ್ಯಚಿತ್ರದ ವಿರುದ್ಧ ಸಂಸತ್ತಿನಲ್ಲಿ ಪಕ್ಷಭೇದವಿಲ್ಲದೆ ಹಲವಾರು ಸದಸ್ಯರು ಮುಗಿಬಿದ್ದರು. 'ಈ ಸಾಕ್ಷ್ಯಚಿತ್ರವನ್ನು ಯಾರಾದರೂ ವೀಕ್ಷಿಸಿದರೆ ಭಾರತದ ಘನತೆಗೆ ಕುಂದುಂಟಾಗುತ್ತದೆ. ಹೈಕೋರ್ಟ್ನಿಂದ ಮರಣದಂಡನೆ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಒಬ್ಬ ಅತ್ಯಾಚಾರಿ, ತಾನು ಮಾಡಿದ್ದೇ ಸರಿ ಎನ್ನುವಂತೆ ಮಾತನಾಡಿದ್ದನ್ನು ಪ್ರಸಾರ ಮಾಡಿದರೆ ಆತನನ್ನು ಸಮರ್ಥಿಸಿದಂತೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತದೆ...' ಎಂಬೆಲ್ಲ ಮಾತುಗಳನ್ನು ಆಡಲಾಯಿತು. ಟಿ.ವಿ ಚಾನೆಲ್ಗಳಲ್ಲಿ ಇದರ ಪರ- ವಿರುದ್ಧ ವಾಗ್ವಾದಗಳು ಜೋರಾಗಿ ನಡೆದವು. ಕೊನೆಗೂ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ನಿಷೇಧಿಸಿತು. ಸರ್ಕಾರಕ್ಕೆ ಧನ್ಯವಾದ ಹೇಳಬೇಕು. ಹಾಗೆ ಅದು ನಿಷೇಧಕ್ಕೆ ಒಳಗಾಗಿದ್ದು
ನಿರೀಕ್ಷೆಯ ಹೊರೆಯಲ್ಲಿ ಮುಫ್ತಿ ಮಹಮದ್ ಸಯೀದ್
By Prajavani, 01 Mar 2015 01:00 AM
(1 Mar) ವಿಶೇಷ › ಈ ಭಾನುವಾರ ವ್ಯಕ್ತಿ - ಹೊನಕೆರೆ ನಂಜುಂಡೇಗೌಡ ಮುಫ್ತಿ ಮಹಮದ್ ಸಯೀದ್ ಹೆಸರು ಕಿವಿಗೆ ಬಿದ್ದ ತಕ್ಷಣ ನೆನಪಾಗುವುದು ರುಬಿಯಾ ಸಯೀದ್ ಅಪಹರಣ ಪ್ರಕರಣ. ಕೇಂದ್ರದಲ್ಲಿ ಆಗಷ್ಟೇ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮುಫ್ತಿ ಗೃಹ ಸಚಿವರಾಗಿ ನೇಮಕ ಆಗಿದ್ದರು. ದೇಶದ ಮೊದಲ ಮುಸ್ಲಿಂ ಗೃಹ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಸಂಭ್ರಮದಲ್ಲಿ ಮುಳುಗಿದ್ದಾಗಲೇ ರುಬಿಯಾ ಅಪಹರಣ ಪ್ರಕರಣ ನಡೆದಿತ್ತು. ಶ್ರೀನಗರ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ರುಬಿಯಾ, ಮುಫ್ತಿ ಅವರ ಮೂರನೇ ಮಗಳು. ಮಧ್ಯಾಹ್ನ ಕಾಲೇಜಿನಿಂದ ಹೊರಟಿದ್ದ ಅವರನ್ನು ಮೂವರು ಉಗ್ರರು ಅಪಹರಿಸಿದ್ದರು. ಜಮ್ಮು ಆಯಂಡ್ ಕಾಶ್ಮೀರ್ ಲಿಬರೇಷನ್ ಫ್ರಂಟ್ನ (ಜೆಕೆಎಲ್ಎಫ್) ಐವರು ಬಂಧಿತ ಉಗ್ರರನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು. ಉಗ್ರರನ್ನು ಬಿಡುಗಡೆ ಮಾಡದಿದ್ದರೆ ರುಬಿಯಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲಿವರೆಗೆ ಕಣಿವೆಯೊಳಗೆ ಯಾರೂ ಉಗ್ರರ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಹೊಸ ಸರ್ಕಾರ ರುಬಿಯಾ ಅವರನ್ನು ಬಿಡಿಸಿಕೊಳ್ಳಲು ಐವರು ಉಗ್ರರನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಗಿತ್ತು. ಮುಫ್ತಿ ಮಹಮದ್ ಹೆಸರು ಎಲ್ಲರಿಗೂ ಪರಿಚಯವಾದದ್ದು ಈ ಪ್ರಕರಣದಿಂದ. 'ಉಗ್ರರ ಬೆದರಿಕೆಗೆ ಗೃಹ ಸಚಿವರು
ವಿಶ್ವಸಂಸ್ಥೆ: ಮಾನವ ಹಕ್ಕು ಮುಖ್ಯಸ್ಥರೆದುರು ಭಾರಿ ಸವಾಲು
By Prajavani, 22 Feb 2015 01:00 AM
(22 Feb) ವಿಶೇಷ › ಈ ಭಾನುವಾರ ನಿಕ್ ಕಮ್ಮಿಂಗ್ ಬ್ರೂಸ್ ನ್ಯೂಯಾರ್ಕ್ ಟೈಮ್ಸ್ ವಿಶ್ವಸಂಸ್ಥೆಯಲ್ಲಿ 20 ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಜೈದ್ ರಾವುದ್ ಜೈದ್ ಅಲ್-ಹುಸೇನ್ ಅವರು ಜೋರ್ಡಾನ್ನ ರಾಜಮನೆತನಕ್ಕೆ ಸೇರಿದವರು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕದ ಹೊಸ ಮುಖ್ಯಸ್ಥರಾಗಿರುವ ಅವರು ಮಾನವನ ಕ್ರೌರ್ಯವನ್ನು ಸಾಕಷ್ಟು ಬಾರಿ ಹತ್ತಿರದಿಂದ ಕಂಡಿದ್ದಾರೆ. ಆದರೆ 1990ರ ಬಾಲ್ಕನ್ ಯುದ್ಧದಲ್ಲಿ ನಡೆದ ಎರಡು ಘಟನೆಗಳು ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ನಿಂತಿವೆ. ಮೊದಲನೆಯ ಘಟನೆ: ಜೈದ್ ಅವರು ವಿಶ್ವಸಂಸ್ಥೆಯ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ವಾಹನದ ಪಕ್ಕ ಬೋಸ್ನಿಯಾದ ಅರೆಸೈನಿಕ ಪಡೆಯ ವಾಹನ ಬಂತು. ಅದರ ಎದುರಿನಲ್ಲಿ ಬೋಸ್ನಿಯಾದ ಮುಸ್ಲಿಂ ಮಗುವೊಂದರ ರುಂಡ ಇತ್ತು. ರುಂಡದ ಮೇಲೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸೈನಿಕರು ಬಳಸುವ ನೀಲಿ ಬಣ್ಣದ ಹೆಲ್ಮೆಟ್ ಇಡಲಾಗಿತ್ತು. ಇನ್ನೊಂದು ಘಟನೆ: ಸರಜೆವೊನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಗುಂಡಿಕ್ಕಿ ಕೊಂದಿದ್ದನ್ನು ಇವರು ನೋಡಿದರು. ಅದಾಗಿ ದಶಕಗಳೇ ಕಳೆದಿದ್ದರೂ, ಅವರು ಕೇಳುತ್ತಿರುವ ಪ್ರಶ್ನೆ ಒಂದೇ. 'ಇಂಥ ಘಟನೆಗಳನ್ನು ಅರ್ಥೈಸಿಕೊಳ್ಳುವುದು ಹೇಗೆ?' 'ನಮ್ಮ ಮನಸ್ಸು ಸಹಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದ ಹಿಂಸೆ ಇಲ್ಲಿದೆ. ನಮ್ಮ ಮನಸ್ಸನ್ನು ಕಲಕಿಬಿಡುವ ಈ ಕ್ರೌರ್ಯ, ನಮ್ಮಿಂದ ಪ್ರಶ್ನೆಗಳನ್ನು ಕೇಳಿಸುತ್ತದೆ. ಯಾವುದಾದರೂ ಒಂದು
ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಎಬೋಲಾ ಸೋಂಕು ಅಮೆರಿಕಗೆ ಯಾವ ಪರಿ ದಿಗಿಲು ಹುಟ್ಟಿಸಿದೆ ಎಂದರೆ, ಅಮೆರಿಕನ್ನರು ಭಾವಾತಿರೇಕಕ್ಕೆ ಒಳಗಾಗುವುದರೊಂದಿಗೆ ತಾವು ಕಠಿಣ ಹೃದಯಿಗಳಾಗುವಷ್ಟರ ಮಟ್ಟಿಗೆ ಭಯಗೊಂಡಿದ್ದಾರೆ.
ನ್ಯೂಜೆರ್ಸಿ ನಗರದಲ್ಲಿರುವ ರುವಾಂಡದ ಇಬ್ಬರು ವಿದ್ಯಾರ್ಥಿಗಳಿಗೆ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ. ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಿಂದ 2,800 ಮೈಲುಗಳಷ್ಟು ದೂರದಲ್ಲಿರುವ ರುವಾಂಡದಲ್ಲಿ ಎಬೋಲಾ ಸೋಂಕಿನ ಲವಲೇಶ ಇಲ್ಲದಿದ್ದರೂ ಆ ದೇಶದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಬಲವಂತದ ಗೃಹಬಂಧನಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ನೈಜೀರಿಯಾದ ವಿದ್ಯಾರ್ಥಿಗಳಿಗೆ ಟೆಕ್ಸಾಸ್ನ ನವಾರೊ ಕಾಲೇಜು ಪ್ರವೇಶ ನಿರಾಕರಿಸಿದೆ. ಇದಕ್ಕೆ ಕಾಲೇಜು ನೀಡಿರುವ ಕಾರಣ: ಎಬೋಲಾ ಸೋಂಕು ಪಸರಿಸಿರುವ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ, ಅಮೆರಿಕದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು.
ಎಬೋಲಾ ಸೋಂಕು ದೃಢಪಟ್ಟವರನ್ನು ‘ಮಾನವೀಯವಾಗಿ ದಮನಮಾಡುವುದು’ ಈ ಸೋಂಕಿನ ತಡೆಗೆ ಇರುವ ಮಾರ್ಗ ಎಂದು ದಕ್ಷಿಣ ಕ್ಯಾಲಿಫೋರ್ನಿಯಾ ರಿಪಬ್ಲಿಕನ್ ಪಕ್ಷದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಟೊಡ್ ಕಿನ್ಕೆನಾನ್ (ಸ್ವಲ್ಪ ವ್ಯಂಗ್ಯವಾಗಿ) ನೀಡಿರುವ ಸಲಹೆ ಬೆಚ್ಚಿಬೀಳಿಸುವಂತಿದೆ.
ರಿಪಬ್ಲಿಕನ್ ಪಕ್ಷದ ಅನೇಕರು ಮತ್ತು ಡೆಮಾಕ್ರೆಟಿಕ್ ಪಕ್ಷದ ಕೆಲವರು ಎಬೋಲಾ ಸೋಂಕು ಹಬ್ಬಿರುವ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಿಗೆ ವಿಮಾನ ಹಾರಾಟ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಅಂಶವನ್ನೇ ಇರಿಸಿಕೊಂಡು ರಾಯಿಟರ್ಸ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಮುಕ್ಕಾಲು ಪಾಲು ಅಮೆರಿಕ ನಿವಾಸಿಗಳು ಇದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.
ಮೇಲ್ನೋಟಕ್ಕೆ ಇದು ವಿಚಿತ್ರ ಪರಿಕಲ್ಪನೆ ಅನಿಸಿದರೂ, ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಕುರಿತ ಅಮೆರಿಕದ ಜನರ ಸಮ್ಮಿಶ್ರ ಗ್ರಹಿಕೆಯನ್ನು ಸೂಚಿಸುತ್ತದೆ. ಸತ್ಯ ಏನೆಂದರೆ ಎಬೋಲಾ ಸೋಂಕು ಗಂಭೀರವಲ್ಲ ಮತ್ತು ಅದು ಗಂಭೀರವೂ ಹೌದು. ಈ ಸೋಂಕು ಗಂಭೀರ ಅಲ್ಲ ಏಕೆಂದರೆ ನೈಜೀರಿಯಾ ಮತ್ತು ಸೆನಗಲ್ಗಳಂತಹ ರಾಷ್ಟ್ರಗಳೇ ಎಬೋಲಾವನ್ನು ಯಶಸ್ವಿಯಾಗಿ ತಡೆಗಟ್ಟಿವೆ ಎಂದ ಮೇಲೆ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಗಳಿರುವ ಅಮೆರಿಕಗೂ ಈ ಸೋಂಕನ್ನು ತಡೆಯಲು ಸಾಧ್ಯ. ಡಲ್ಲಾಸ್ ಆಸ್ಪತ್ರೆ ಎಬೋಲಾ ಸೋಂಕು ತಪಾಸಣೆಯನ್ನು ಕೌಶಲದಿಂದ ನಡೆಸದಿರುವುದು, ಈ ಸೋಂಕು ಗಂಭೀರವೂ ಆಗಬಹುದು ಎಂಬುದಕ್ಕೆ ನಿರ್ದಶನ.
ಆದರೆ, ಎಬೋಲಾ ಮೇಲೆ ಚರ್ಚಿಸಿದಷ್ಟು ಸರಳವಾದ ಸೋಂಕಲ್ಲ. ಪಶ್ಚಿಮ ಆಫ್ರಿಕಾದಲ್ಲಿ ಇದು ಸಾಂಕ್ರಾಮಿಕವಾಗಿದೆ ಮತ್ತು ಆ ಪ್ರದೇಶದ ಇತರ ರಾಷ್ಟ್ರಗಳಿಗೂ ಪಸರಿಸುತ್ತಿದೆ. ಇದು ಭಾರತ, ಬಾಂಗ್ಲಾದೇಶ, ಚೀನಾದತ್ತ ಹಬ್ಬಬಹುದು. ಎಬೋಲಾ ಭಾರತಕ್ಕೆ ಏನಾದರೂ ತೀವ್ರವಾಗಿ ಹಬ್ಬಿದರೆ ಪರಿಣಾಮ ಭೀಕರವಾಗಿರುತ್ತದೆ.
ಎಬೋಲಾ ಸೋಂಕು ‘ಈ ತಲೆಮಾರಿನ ಮಾನವ ನಿರ್ಮಿತ ದೊಡ್ಡ ದುರಂತ’ ಆಗಬಾರದು ಎಂದಿದ್ದರೆ ಇದನ್ನು ತಡೆಯಲು ಹೆಚ್ಚಿನ ಸಂಪನ್ಮೂಲದ ಅಗತ್ಯ ಇದೆ ಎಂದು ‘ಆಕ್ಸ್ಫ್ಯಾಮ್’ (ಆಕ್ಸ್ಫರ್ಡ್ನ ಕ್ಷಾಮ ಪರಿಹಾರ ಸಮಿತಿ) ಸೂಕ್ತವಾಗಿ ಎಚ್ಚರಿಕೆ ನೀಡಿದೆ. ಸೋಂಕು ಏನಾದರೂ ಬಡ ರಾಷ್ಟ್ರಗಳಿಗೆ ಹಬ್ಬಿದರೆ ಅದು ಕಾಲಾನುಕ್ರಮೇಣ ಅಮೆರಿಕೆಗೂ ಕಾಲಿಡುತ್ತದೆ. ಜಾಗತೀಕರಣದ ಸಂದರ್ಭದಲ್ಲಿ ಎಬೋಲಾ ಸೋಂಕು ಎಲ್ಲಿದ್ದರೂ ಅದು ವಿಶ್ವದೆಲ್ಲೆಡೆ ಇರುವವರಿಗೆಲ್ಲಾ ಆತಂಕಕಾರಿ ಸೋಂಕು.
ಈ ಸೋಂಕು ದೇಶಗಳ ಸುರಕ್ಷತೆ ಮತ್ತು ಭದ್ರತೆಗೂ ಆತಂಕ ತಂದೊಡ್ಡಿದೆ. ಉಗ್ರರ ಕೈಗೇನಾದರೂ ಈ ಸೋಂಕು ಸಿಕ್ಕಿದರೆ ಇದನ್ನು ಅವರು ತಮ್ಮ ಶತ್ರುಗಳ ಮೇಲೆ ಪ್ರಯೋಗಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಬಾಂಬ್ ದಾಳಿಗಿಂತ ಸಹಸ್ರಾರು ಜನರನ್ನು ಬಲಿ ತೆಗೆದುಕೊಳ್ಳುವ ಜೈವಿಕ ಅಸ್ತ್ರಗಳು ಉಗ್ರರಿಗೆ ಅನುಕೂಲವೇ ಆಗುತ್ತವೆ.
1992ರಲ್ಲಿ ಜಪಾನ್ ಉಗ್ರರ ಗುಂಪಾದ ಅಯುಮ್ ಶಿನ್ರಿಕ್ಯೊ ಕಾಂಗೊದಲ್ಲಿ ಎಬೋಲಾ ಸೋಂಕಿನ ಮಾದರಿಗಳನ್ನು ಒಂದು ಜೈವಿಕ ಭಯೋತ್ಪಾದನಾ ಅಸ್ತ್ರವಾಗಿ ಬಳಸಲು ಸಂಗ್ರಹಿಸುವ ಪ್ರಯತ್ನಕ್ಕೆ ಕೈಹಾಕಿತ್ತು. ಆದರೆ, ಯಶಸ್ವಿಯಾಗಲಿಲ್ಲ. ಆದರೆ, ಈಗ ಇಂತಹ ಮಾದರಿಗಳನ್ನು ವಿಧ್ವಂಸಕರು ಸಂಗ್ರಹಿಸುವುದು ಸುಲಭವಾಗಿದೆ. ಆತ್ಮಾಹುತಿ ದಾಳಿ ನಡೆಸುವವರು ಈ ಸೋಂಕಿನ ಮಾದರಿ ಸಂಗ್ರಹಿಸಿಕೊಂಡು ಅಮೆರಿಕ ಮತ್ತಿತರ ದೇಶಗಳಿಗೆ ಹರಡಬಹುದು.
ಜಾಗತಿಕ ಆರೋಗ್ಯ ಎನ್ನುವುದು ಉಪೇಕ್ಷಿಸುವ ತಮಾಷೆಯ ವಿಷಯವಲ್ಲ. ಇದರಲ್ಲಿ ಪ್ರತಿಯೊಬ್ಬರ ಹಿತಾಸಕ್ತಿಯೂ ಅಡಗಿದೆ. ಜತೆಗೆ ಇದರಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯವೂ ಸೇರಿದೆ. ಆದ್ದರಿಂದ ಎಬೋಲಾವನ್ನು ಅದರ ಮೂಲದಲ್ಲೇ ನಿವಾರಿಸಬೇಕು. ವಿಮಾನ ಸಂಚಾರ ರದ್ದು ಮಾಡುವಂತಹ ಕ್ರಮಕ್ಕೆ ಮುಂದಾದರೆ ಗಿನಿ, ಲೈಬೀರಿಯಾ ಮುಂತಾದ ಪಶ್ಚಿಮ ಆಫ್ರಿಕಾ ದೇಶಗಳಿಗೆ ಆರೋಗ್ಯ ಕಾರ್ಯಕರ್ತರ ಸಂಪರ್ಕ ಮತ್ತು ಔಷಧಗಳ ರವಾನೆಗೆ ಅಡಚಣೆ ಆಗುತ್ತದೆ.
‘ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ವಿಮಾನ ಹಾರಾಟಗಳನ್ನು ರದ್ದು ಮಾಡಿದರೆ ಅದರಿಂದ ಸೋಂಕು ತಡೆಗೆ ಹಿನ್ನಡೆಯಾಗುತ್ತದೆ ಮತ್ತು ತಡೆಗಟ್ಟುವ ಪ್ರಯತ್ನ ಮತ್ತಷ್ಟು ದುಬಾರಿಯಾಗುತ್ತದೆ’ ಎಂದು 1976ರಲ್ಲಿ ಎಬೋಲಾ ಸೋಂಕನ್ನು ಪತ್ತೆ ಹಚ್ಚಲು ಶ್ರಮಿಸಿದ ಡಾ. ಪೀಟರ್ ಪಿಯೊಟ್ ಅಭಿಪ್ರಾಯಪಡುತ್ತಾರೆ.
‘ವಿಮಾನ ಹಾರಾಟ ರದ್ದು ಮಾಡುವ ನಿರ್ಧಾರ ಎಬೋಲಾ ಸೋಂಕು ತಡೆಯುವ ಪ್ರಯತ್ನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂಬುದು ಈ ಸೋಂಕು ತಡೆಯುವ ಪ್ರಯತ್ನದಲ್ಲಿರುವ ಗುಂಪಿನ ವೈದ್ಯ ಪೌಲ ಅವರ ಖಚಿತ ನುಡಿ. ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸೋಂಕು ತಪಾಸಣೆ ಮಾಡುತ್ತಿರುವುದು ಗೊಂದಲ ಸೃಷ್ಟಿಸುವ ಕಾರ್ಯ ಎಂದು ವೈದ್ಯಕೀಯ ನಿಯತಕಾಲಿಕೆ ‘ಬಿಎಂಜೆ’ ತನ್ನ ಸಂಪಾದಕೀಯದಲ್ಲಿ ಬರೆದಿದೆ. ಕೆನಡಾದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಉಸಿರಾಟ ತೊಂದರೆಗೆ ಒಳಗಾದವರನ್ನು ಪರೀಕ್ಷಿಸಲು ಸಾಧನ ಸಲಕರಣೆಗಳನ್ನು ಅಳವಡಿಸಲಾಗಿದೆ. ಈ ಸೋಂಕು ತಗುಲಿದೆ ಎಂದು ಶಂಕಿಸಲಾದ ಪ್ರಯಾಣಿಕರು ಪ್ರಶ್ನಾವಳಿಯ ಸರಮಾಲೆ ಜೊತೆಗೆ ಥರ್ಮಲ್ ಸ್ಕ್ಯಾನಿಂಗ್ಗೂ ಒಳಗಾಗಬೇಕಾಯಿತು. ಇದಕ್ಕಾಗಿ 1.50 ಕೋಟಿ ಡಾಲರ್ ವೆಚ್ಚ ಮಾಡಲಾಯಿತು. ಇಷ್ಟಾದರೂ ಎಬೋಲಾ ಸೋಂಕು ತಗುಲಿದ ಒಬ್ಬ ವ್ಯಕ್ತಿಯೂ ಪತ್ತೆಯಾಗಲಿಲ್ಲ. ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತಿರುವ ಈ ಕಾರ್ಯದಿಂದ ಯಾವುದೇ ಉಪಯೋಗ ಇಲ್ಲ. ಬದಲಿಗೆ ಈ ಸಂಪನ್ಮೂಲವನ್ನು ಸೋಂಕು ಪೀಡಿತ ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಬಳಕೆ ಮಾಡಿದ್ದರೆ ಎಷ್ಟೋ ಉಪಯೋಗವಾಗುತ್ತಿತ್ತು ಎಂದು ‘ಬಿಎಂಜೆ’ ಹೇಳಿದೆ.
ನಮ್ಮ ಗಡಿಗಳನ್ನು ಕುರಿತು ಆರೋಪ, ಪ್ರತ್ಯಾರೋಪ ಮಾಡುವುದರ ಅರ್ಧದಷ್ಟು ಶ್ರಮವನ್ನು, ಸೋಂಕು ಪ್ರಬಲವಾಗಿರುವ ಪಶ್ಚಿಮ ಆಫ್ರಿಕಾದತ್ತ ವಿನಿಯೋಗಿಸಿದ್ದರೆ ಅದರಿಂದ ನಿಜಕ್ಕೂ ಪ್ರಯೋಜನವಾಗುತ್ತಿತ್ತು. ಎಬೋಲಾ ಸೋಂಕನ್ನು ಸದೆಬಡೆಯ ಬೇಕಿದ್ದರೆ ಅಮೆರಿಕ ಮತ್ತು ಇತರ ರಾಷ್ಟ್ರಗಳು ಸೋಂಕು ಪೀಡಿತ ದೇಶಗಳತ್ತ ಮೊದಲು ಚಿತ್ತ ಹರಿಸಬೇಕು. ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ನಾಲ್ಕು ಸಾವಿರ ಯೋಧರನ್ನು ಪಶ್ಚಿಮ ಆಫ್ರಿಕಾದ ಕಡೆಗೆ ಕಳುಹಿಸಿದರೆ ಅವರಿಗೆ ಭೇಷ್ ಎನ್ನಬಹುದು. ಆದರೆ ಅಮೆರಿಕ ಮತ್ತು ಇನ್ನಿತರ ದೇಶಗಳು ಈ ಕುರಿತು ಇನ್ನಷ್ಟು ಚುರುಕಾಗಿ ಕ್ರಮ ಕೈಗೊಳ್ಳಬೇಕು.
ಎರಡರಿಂದ ನಾಲ್ಕು ವಾರಗಳ ಅವಧಿಯಲ್ಲಿ ಎಬೋಲಾ ಪೀಡಿತರ ಸಂಖ್ಯೆ ದ್ವಿಗುಣವಾಗುತ್ತಿರುವ ದೇಶಗಳು ಈ ಸೋಂಕಿನ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಲೈಬೀರಿಯಾದಲ್ಲಿ ವೈದ್ಯೋಪಚಾರ ನೀಡುವಂತಹ 50 ವೈದ್ಯರು ಮಾತ್ರ ಇದ್ದಾರೆ. ಆದರೆ, ಅಮೆರಿಕದಲ್ಲಿ ಲೈಬೀರಿಯಾದ ಮೂಲದ ವೈದ್ಯರ ಸಂಖ್ಯೆ ಲೈಬೀರಿಯಾದಲ್ಲಿರುವುದಕ್ಕಿಂತ ಹಲವು ಪಟ್ಟು ಹೆಚ್ಚಿದೆ ಎಂದು ರಾಯಿಟರ್ಸ್ ಮೂಲಗಳು ತಿಳಿಸಿವೆ. ಈ ಬೌದ್ಧಿಕ ವಲಸೆಯ ಅರ್ಥವೆಂದರೆ, ಲೈಬೀರಿಯಾ ದೇಶ ಅಮೆರಿಕಗೆ ವೈದ್ಯಕೀಯ ವಿದೇಶೀ ನೆರವು ನೀಡುತ್ತಿದೆ ಎಂದು.
ಉತ್ತಮ ದೇಶ, ಸ್ನೇಹಪರ ಜನರು ಆದರೆ ಹೃದಯಹೀನ ವೈದ್ಯೋಪಚಾರಕರು. ರಸ್ತೆ, ವಿದ್ಯುತ್ ಮತ್ತು ಮೂಲಸೌಕರ್ಯಗಳು ನಿಕೃಷ್ಟ– ಇದು ಲೈಬೀರಿಯಾದ ಸ್ಥೂಲ ಸ್ಥಿತಿಗತಿ. ಡಲ್ಲಾಸ್ನ ಕೌಬಾಯ್ಸ್ ಫುಟ್ಬಾಲ್ ಮೈದಾನದಲ್ಲಿ ಬಳಕೆ ಯಾಗುವ ಮೂರನೇ ಒಂದು ಭಾಗದಷ್ಟು ವಿದ್ಯುಚ್ಛಕ್ತಿ ಯನ್ನೂ ಲೈಬೀರಿಯಾ ಉತ್ಪಾದನೆ ಮಾಡುತ್ತಿಲ್ಲ. ಈ ಕಾರಣಗಳಿಂದಲೇ ಪಶ್ಚಿಮ ಆಫ್ರಿಕಾದ ದೇಶಗಳಿಗೆ ಅಮೆರಿಕದ ಸೇನೆ ನೀಡುತ್ತಿರುವ ನೆರವು ಮಹತ್ವದ್ದಾಗಿದೆ. ವಿಶ್ವಸಂಸ್ಥೆಯ ಎಬೋಲಾ ಪರಿಹಾರ ನಿಧಿ ಈ ರಾಷ್ಟ್ರಗಳಿಗೆ ನೆರವಿನ ಮೊತ್ತದ ಮಿತಿಯನ್ನು ಹೆಚ್ಚಿಸಿದೆ. ಎಬೋಲಾ ಸೋಂಕು ತಡೆಯಬೇಕು ಎಂಬುದು ಎಲ್ಲರ ಕಳಕಳಿ. ಈ ನಿಟ್ಟಿನಲ್ಲಿ ಅಮೆರಿಕನ್ನರು ಸಹನೆಯಿಂದ ವರ್ತಿಸಿ, ಅವರ ದೇಶಕ್ಕೆ ಈ ಸೋಂಕು ಕಾಲಿಡದಂತೆ ತಡೆಯಲು ಅದನ್ನು ಅದರ ಮೂಲ ದಲ್ಲೇ ನಿವಾರಿಸುವ ಪ್ರಯತ್ನಕ್ಕೆ ಕೈ ಜೋಡಿಸಬೇಕು.
ಗಾಂಧಿ: ‘ಹೊಸ’ ಆವೃತ್ತಿಗಳು
ಇತ್ತೀಚೆಗೆ ಗಾಂಧೀಜಿ, ದೆಹಲಿಯ ರಾಜಕೀಯ ವಲಯದಲ್ಲಿ ಮತ್ತೆ ಮತ್ತೆ ‘ಕಾಣಿಸಿಕೊಳ್ಳು’ತ್ತಿದ್ದಾರೆ. ಗಾಂಧಿ ಕನ್ನಡಕ ಪ್ರಧಾನಿ ಮೋದಿ ಅವರಿಗೆ ಗಾಂಧಿ ಜಯಂತಿಯಂದು ‘ಸ್ವಚ್ಛ ಭಾರತ ಅಭಿಯಾನ’ ಆರಂಭಿಸುವಾಗ ಸಂಕೇತವಾಯಿತು. ಬಿಜೆಪಿ ಜತೆ ನಂಟು ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿಯಾದ ‘ಆರ್ಗನೈಸರ್’ ವಾರಪತ್ರಿಕೆಯ ಮುಖಪುಟದಲ್ಲಿ ಪೊರಕೆ ಹಾಗೂ ಬುಟ್ಟಿಯೊಂದನ್ನು ಹಿಡಿದುಕೊಂಡು ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಚಿತ್ರ ಪ್ರಕಟವಾಯಿತು. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತಕ್ಕೆ ಭೇಟಿ ನೀಡಿದಾಗ, ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡಿದ್ದು ಗುಜರಾತ್ನ ಗಾಂಧೀಜಿ ಆಶ್ರಮದಲ್ಲಿ. ಬಳಿಕ ಅಮೆರಿಕಕ್ಕೆ ತೆರಳಿದ ಮೋದಿ, ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಉಡುಗೊರೆಯಾಗಿ ಗಾಂಧೀಜಿ ಅನುವಾದಿಸಿದ್ದ ‘ಭಗವದ್ಗೀತೆ’ ಗ್ರಂಥದ ಪ್ರತಿಯೊಂದನ್ನು ನೀಡಿದರು.
ಮಹಾನ್ ನೇತಾರ ಮಹಾತ್ಮ ಗಾಂಧೀಜಿ ಭಾರತದ ಹೆಮ್ಮೆಯ ವ್ಯಕ್ತಿ. ಕಳೆದ ಶತಮಾನದವರೆಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸಾಂಕೇತಿಕ ನಾಯಕರಂತೆ ಅವರು ಇದ್ದರು. ಈ ವರ್ಷ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಕೆಳಗಿಳಿಸಿ ಮೋದಿ, ತಾವು ಅಧಿಕಾರದ ಚುಕ್ಕಾಣಿ ಹಿಡಿದರು. ಗಾಂಧೀಜಿಯ ದೃಷ್ಟಿ ಮೂಲಭೂತವಾಗಿ ಬಂಡವಾಳಶಾಹಿ ವಿರೋಧಿಯಾಗಿತ್ತು. ಗ್ರಾಮಗಳ ಅಭಿವೃದ್ಧಿಯಿಂದಲೇ ಪ್ರಗತಿ ಸಾಧ್ಯ ಎಂದು ಅವರು ನಂಬಿದ್ದರು. ಕೈಗಾರಿಕೀಕರಣವನ್ನು ‘ಮಾನವ ಕುಲದ ಶಾಪ’ ಎಂದು ಅವರು ಟೀಕಿಸುತ್ತಿದ್ದರು. ಭಾರತದ ಮುಸ್ಲಿಮರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದ ಗಾಂಧೀಜಿ, ಈ ಕಾರಣದಿಂದಾಗಿಯೇ ಯಾವಾಗಲೂ ಬಲಪಂಥೀಯರಿಂದ ಟೀಕೆಗೆ ಒಳಗಾಗುತ್ತಿದ್ದರು.
ನರೇಂದ್ರ ಮೋದಿಯವರು ಗಾಂಧೀಜಿ ಕುರಿತು ಸದಾ ಗೌರವಯುತವಾಗಿ ಮಾತಾಡುತ್ತಾರಾದರೂ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಓಲೈಸುವ ಪ್ರವೃತ್ತಿಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ೨೦೦೨ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಮೋದಿಯವರು ಉಗ್ರ ಟೀಕೆ ಎದುರಿಸಬೇಕಾಯಿತು. ೧,೨೦೦ ಜನರ ಕಗ್ಗೊಲೆಗೆ ಕಾರಣವಾದ ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯವೂ ಅವರನ್ನು ತಪ್ಪಿತಸ್ಥ ಎಂದು ಘೋಷಿಸಲಿಲ್ಲ. ಈಗ ಮೋದಿಯವರು, ಗಾಂಧೀಜಿ ಹೊಸ ಆವೃತ್ತಿಯನ್ನು ಅಪ್ಪಿಕೊಂಡಿದ್ದಾರೆ. ಗಾಂಧೀಜಿ ಎಂದರೆ ಮೊತ್ತಮೊದಲಿಗೆ ನೆನಪಿಗೆ ಬರುವುದು ಅವರೊಬ್ಬ ನೈರ್ಮಲ್ಯದ ಪ್ರತಿಪಾದಕ. ತಮ್ಮ ಶೌಚಾಲಯವನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳುತ್ತಿದ್ದವರು ಗಾಂಧೀಜಿ. ಗಾಂಧೀಜಿಯ ಚಿಂತನೆಗಳನ್ನು ಮೋದಿಯವರು ಈಗ ಹೆಚ್ಚೆ ಹೆಚ್ಚು ಪ್ರಚುರಪಡಿಸುತ್ತಿದ್ದಾರೆ. ಆಮದು ಮಾಡಿಕೊಳ್ಳುವ ವಸ್ತ್ರಕ್ಕಿಂತ ಸ್ವದೇಶಿ ಬಟ್ಟೆ ಧರಿಸುವಂತೆ ಗ್ರಾಹಕರನ್ನು ಪ್ರೇರೇಪಿಸುತ್ತಿದ್ದಾರೆ.
‘ಭಾರತದ ಭವಿಷ್ಯ ಇರುವುದು ಹಳ್ಳಿಗಳಲ್ಲಿ’ ಎಂದು ಗಾಂಧೀಜಿ ಪದೇ ಪದೇ ಹೇಳುತ್ತಿದ್ದರು. ಈ ತಿಂಗಳು ಅಮೆರಿಕಕ್ಕೆ ತೆರಳಿ, ನ್ಯೂಯಾರ್ಕ್ನಲ್ಲಿ ನೆರೆದಿದ್ದ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಗಾಂಧೀಜಿ ಅಂದರೆ ವಿದೇಶಕ್ಕೆ ಹೋಗಿ, ಬ್ಯಾರಿಸ್ಟರ್ ಆಗಿ, ಅವಕಾಶವಿದ್ದರೂ ಅವನ್ನೆಲ್ಲ ಬಿಟ್ಟು ಬಂದು ಭಾರತ ದೇಶದ ಸೇವೆಗೆ ನಿಂತ ಮಹಾನ್ ಸಂತ’ ಎಂದು ಬಣ್ಣಿಸಿದ್ದರು.
ಗಾಂಧೀಜಿಯ ಹಿರಿಯ ಮೊಮ್ಮಗ ತುಷಾರ್ ಗಾಂಧಿ ಇದನ್ನೆಲ್ಲಾ ಗಮನಿಸಿದ್ದಾರೆ. ಅವರು ವಿಶ್ಲೇಷಿಸುವ ಹಾಗೆ, ‘ಗುಜರಾತ್ನಲ್ಲಿ ಆಡಳಿತ ನಡೆಸಿದ ೧೨ ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರಲ್ಲಿ ಯಾವತ್ತೂ ಗಾಂಧೀಜಿ ಬಗ್ಗೆ ಇಷ್ಟೊಂದು ಉತ್ಸಾಹ ಕಾಣಿಸಿರಲಿಲ್ಲ. ಪ್ರಧಾನಿಯಾದ ಬಳಿಕ ನೂರು ದಿನಗಳ ಅವಧಿಯಲ್ಲಿ ಅವರು ಬಾಪು ಅವರಿಂದ ಮತ್ತೆ ಮತ್ತೆ ಮಾರ್ಗದರ್ಶನ ಪಡೆಯುತ್ತಿರುವಂತೆ ಭಾಸವಾಗುತ್ತಿದೆ’ ಎನ್ನುತ್ತಾರೆ ತುಷಾರ್ ಗಾಂಧಿ. ಸದ್ಯದ ಮಟ್ಟಿಗೆ ಹೇಳುವುದಾದರೆ ಮೋದಿಯವರ ನಡವಳಿಕೆಯಲ್ಲಿ ನಮ್ರತೆ ಕಾಣಿಸುತ್ತಿದೆ ಎಂದೂ ತುಷಾರ್ ಹೇಳುತ್ತಾರೆ.
ಪ್ರಧಾನಿ ಪಟ್ಟಕ್ಕೇರುವ ಉತ್ಸಾಹದಲ್ಲಿದ್ದ ಮೋದಿಯವರು, ಅದಕ್ಕಿಂತ ಮೊದಲು ಹಿಂದೂ ಬಲಪಂಥೀಯ ಪ್ರಭಾವದ ಆಚೆಯೂ ರಾಜಕೀಯವಾಗಿ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದು ಉಲ್ಲೇಖನೀಯ. ಸ್ವಾತಂತ್ರ್ಯಯೋಧ, ಉಕ್ಕಿನ ಮನುಷ್ಯ ಹಾಗೂ ಮಾಜಿ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೫೯೭ ಅಡಿ ಎತ್ತರದ ಪುತ್ಥಳಿ ಸ್ಥಾಪನೆ ಅಂಥದ್ದೊಂದು ಪ್ರಯತ್ನ. ಇದು ಗಿನ್ನೆಸ್ ದಾಖಲೆಯೂ ಆಗಲಿದೆ.
ಸರ್ದಾರ್ ಪಟೇಲ್ ಅವರೊಂದಿಗೆ ಮೋದಿ ಯಾಕೆ ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ನಿಗೂಢ ಸಂಗತಿ ಈವರೆಗೆ ಬಯಲಾಗಿಲ್ಲ. ಹಾಗೆ ನೋಡಿದರೆ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಪಟೇಲ್ ಪ್ರತಿಸ್ಪರ್ಧಿ ಆಗಿದ್ದರು. ಜವಹರಲಾಲ್ ನೆಹರೂ ಅವರನ್ನು ‘ಚಾಚಾ ನೆಹರೂ’ ಅಥವಾ ‘ಅಂಕಲ್ ನೆಹರೂ’ ಎಂದು ಕರೆದ ಮೋದಿ, ಅವರ ಜನ್ಮದಿನ ನವೆಂಬರ್ ೧೪ ಅನ್ನು ರಾಷ್ಟ್ರವ್ಯಾಪಿಯಾಗಿ ನೈರ್ಮಲ್ಯ ಹಾಗೂ ಶುದ್ಧತೆ ಆಚರಣೆಯ ದಿನವೆಂದು ಆಚರಿಸುವಂತೆ ಘೋಷಣೆ ಮಾಡಿದ್ದಾರೆ. ‘ನೆಹರೂ ಅವರನ್ನು ಒಳಗೆ ಹಾಕಿಕೊಳ್ಳುವುದರ ಮೂಲಕ ಮೋದಿ ಕಾಂಗ್ರೆಸ್ನ ‘ಹೀರೋ’ಗಳನ್ನೆಲ್ಲ ತಮ್ಮ ಬುಟ್ಟಿಗೆ ಹಾಕಿಕೊಂಡಂತಾಗಿದೆ’ ಎಂದು ಚಿಂತಕ ಶಿವ ವಿಶ್ವನಾಥನ್ ವಿಶ್ಲೇಷಿಸಿದ್ದಾರೆ. ‘ಈಗ ಕಾಂಗ್ರೆಸ್ ಬಳಿ ಉಳಿದುಕೊಂಡಿರುವುದು ಕೆಲವೇ ಕೆಲವು ಮಂದಿ. ಇದು ಬೌದ್ಧಿಕ ಆಸ್ತಿ ಕಳವಿನಂತೆ ಅಲ್ಲವೇ?’ ಎಂದೂ ಅವರು ಪ್ರಶ್ನಿಸಿದ್ದಾರೆ.
ಇದನ್ನು ಮೋದಿಯವರ ಸೈದ್ಧಾಂತಿಕ ಬದಲಾವಣೆ ಎಂದು ಭಾವಿಸಬಹುದೇ? ಆ ಬಗ್ಗೆ ನಿಖರವಾಗಿ ಏನನ್ನೂ ಹೇಳುವಂತಿಲ್ಲ. ಭಾರತದ ಇತ್ತೀಚಿನ ನಾಯಕರ ಪೈಕಿ ಮೋದಿಯವರದು ಅತಿ ಜಾಣ್ಮೆಯ ನಡೆ. ಒಂದೇ ಸಲಕ್ಕೆ ಎಲ್ಲ ದಿಕ್ಕುಗಳಿಗೂ ಸಂಕೇತಗಳನ್ನು ಪ್ರಸಾರ ಮಾಡುವ ಬುದ್ಧಿವಂತಿಕೆ ಅವರದು. ನೇಪಾಳಕ್ಕೆ ಎರಡು ದಿನಗಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ, ಅವರು ಅಲ್ಲಿನ ಪ್ರಖ್ಯಾತ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಲು ಹೋದರು. ಅಮೆರಿಕ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ನವರಾತ್ರಿ ಉಪವಾಸ ವ್ರತ ಆಚರಿಸುತ್ತಿದ್ದುದರಿಂದ ಬಿಸಿನೀರಿನ ಹೊರತಾಗಿ ಅವರು ಏನನ್ನೂ ಸೇವಿಸಲಿಲ್ಲ.
ಗಾಂಧೀಜಿಗೆ ಕನಸು ಕಾಣುತ್ತಿದ್ದ ಹೆಚ್ಚು ಉಗ್ರವಲ್ಲದ ‘ಕೋಮಲ’ ಸ್ವಭಾವದ ಹಿಂದೂಧರ್ಮ ಹಾಗೂ ಭಾರತೀಯ ಮುಸ್ಲಿಮರ ಬಗೆಗಿನ ಪ್ರೇಮ ಇತ್ಯಾದಿಗಳು ವರ್ತಮಾನದಲ್ಲಿ ಪಕ್ಕಕ್ಕೆ ಸರಿದಿದ್ದು ಇದೂ ಅಸಹಜವೇನಲ್ಲ ಎನ್ನುತ್ತಾರೆ ಬ್ರೌನ್ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ, ಆಶುತೋಷ್ ವಾರ್ಶ್ನೆ. ‘ಕಾಂಗ್ರೆಸ್ ಸೇರಿದಂತೆ ಯಾರೊಬ್ಬರೂ ಗಾಂಧೀಜಿಯನ್ನು ಸಂಪೂರ್ಣವಾಗಿ ಅಪ್ಪಿಕೊಂಡಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ. ‘ಗಾಂಧೀಜಿ ರಾಷ್ಟ್ರಪಿತ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಅವರೊಬ್ಬ ಕಠಿಣ ತಂದೆ’ ಎನ್ನುತ್ತಾರೆ ವಾರ್ಶ್ನೆ.
ಮೋದಿಯವರು ಪ್ರತಿಪಾದಿಸುವ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಯಾರದೂ ತಕರಾರು ಇರಲಿಕ್ಕಿಲ್ಲ. ಆದರೆ ಗಾಂಧೀಜಿ ಮೊಮ್ಮಗ ರಾಜಮೋಹನ ಗಾಂಧಿ ಅವರು ಹೇಳುವ ಹಾಗೆ, ‘ಅದು ಗಾಂಧೀಜಿ ಚಿಂತನೆಗಳ ಅಪೂರ್ಣ ಪ್ರತೀಕವಷ್ಟೇ ಆಗಿದೆ’.
‘ಬಳಕೆ ಅಥವಾ ದುರ್ಬಳಕೆ ಮಾಡಿಕೊಳ್ಳಲು ಗಾಂಧೀಜಿ ಎಲ್ಲರಿಗೂ ಸುಲಭವಾಗಿ ಸಿಗುವಂಥವರು. ನನ್ನ ಆಕ್ಷೇಪದಿಂದ ಏನೂ ಬದಲಾಗಲಿಕ್ಕಿಲ್ಲ. ಆದರೆ ಗಾಂಧೀಜಿಯನ್ನು ದುರ್ಬಳಕೆ ಮಾಡಿಕೊಳ್ಳುವವರು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸುತ್ತಾರೆ’ ಎಂದು ರಾಜಮೋಹನ ಗಾಂಧಿ ಹೇಳುತ್ತಾರೆ.
1945ರಲ್ಲಿ ಆಸ್ಟ್ರಿಯದ ಬ್ರೌನೌ ಆಮ್ ಇನ್ ನಗರವನ್ನು ಅಮೆರಿಕದ ಭದ್ರತಾ ಪಡೆಗಳು ಸುತ್ತುವರಿದ ನಂತರ, ಅಲ್ಲಿನ ಮೂರು ಅಂತಸ್ತಿನ ಕಟ್ಟಡವೊಂದನ್ನು ನೆಲಸಮಗೊಳಿಸಲು ಜರ್ಮನಿಯ ಸೈನಿಕರು ಯತ್ನಿಸಿದ್ದರು. ಆದರೆ, ಅಮೆರಿಕದ ಸೈನಿಕರು ಅದಕ್ಕೆ ಅವಕಾಶ ಕೊಡಲಿಲ್ಲ. ಆ ಕಟ್ಟಡ 1930ರಿಂದಲೂ ನಾಜಿಗಳ ಪವಿತ್ರ ಸ್ಥಳವಾಗಿ ಮಾರ್ಪಟ್ಟಿತ್ತು.
ಎರಡನೇ ಮಹಾಯುದ್ಧಕ್ಕೆ ಕಾರಣನಾದ ನಾಜಿ ಪಕ್ಷದ ಮುಖ್ಯಸ್ಥ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಹುಟ್ಟಿದ ಮನೆ ಅದು. ಆ ಕಟ್ಟಡ ನೆಲಸಮಕ್ಕೆ ಅವಕಾಶ ನಿರಾಕರಿಸುವ ಮೂಲಕ, ಬ್ರೌನೌ ಆಮ್ ಇನ್ ನಗರದ ನಿವಾಸಿಗಳು ಯಾರೊಂದಿಗೂ ಹಂಚಿಕೊಳ್ಳಲು ಬಯಸದ ಪರಂಪರೆಯೊಂದಕ್ಕೆ (ಹಿಟ್ಲರ್ ತಮ್ಮ ಊರಿನಲ್ಲಿ ಜನಿಸಿದವನು ಎಂಬ) ಅಮೆರಿಕದ ಭದ್ರತಾ ಪಡೆ ಅಡಿಗಲ್ಲು ಹಾಕಿತ್ತು.
‘ಇನ್’ ನದಿ ದಂಡೆಯಲ್ಲಿರುವ ಈ ನಗರವನ್ನು ಜಗತ್ತು ಯಾವ ರೀತಿ ಗುರುತಿಸಬೇಕು ಎಂಬುದರ ಬಗ್ಗೆ ಇಲ್ಲಿನ ಜನರಿಗೆ ಹಲವು ಕಲ್ಪನೆಗಳಿವೆ. ‘ಶಾಂತಿ’ಗೆ ಹೆಸರಾದ ನಗರ, ‘ಅತ್ಯುತ್ತಮ ಕಾರ್ಖಾನೆಗಳ ತವರು’ ಎಂದೆಲ್ಲ ಗುರುತಿಸುವುದನ್ನು ಅವರು ಅಪೇಕ್ಷಿಸುತ್ತಾರೆ. ‘ಸ್ತೋತ್ರಗಳ ಸೃಷ್ಟಿಕರ್ತನ’ ನಗರ ಎಂದು ಕರೆಯಬೇಕು ಎಂದು ಇಚ್ಛಿಸುತ್ತಾರೆ. ಆದರೆ, ಇಲ್ಲಿನ ಜನ ಪ್ರತಿ ಬಾರಿ ಹೊರಗಿನವರಿಂದ ಆ ಮೂರಂತಸ್ತಿನ ಕಟ್ಟಡದ ಬಗ್ಗೆಯೇ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.
ನಗರದ ಸಾಲ್ಜ್ಬರ್ಗರ್ ವರ್ಸ್ಟಾಟ್ ರಸ್ತೆಯಲ್ಲಿರುವ ಈ ಕಟ್ಟಡ ಧ್ವಂಸವಾಗದೇ ಉಳಿದಾಗಿನಿಂದ ಇಂದಿನವರೆಗೂ ಬಗೆಹರಿಯದ ಬಿಕ್ಕಟ್ಟಾಗಿದೆ. ಆಸ್ಟ್ರಿಯ ಸರ್ಕಾರಕ್ಕೆ ಈಗಲೂ ಈ ಕಟ್ಟಡ ದೊಡ್ಡ ತಲೆನೋವು.
ಖಾಸಗಿ ಮಾಲೀಕತ್ವ ಹೊಂದಿರುವ ಮೂರಂತಸ್ತಿನ ಕಟ್ಟಡವನ್ನು ಸರ್ಕಾರ ಬಾಡಿಗೆಗೆ ಪಡೆದುಕೊಂಡಿದೆ. ಡಿಸೆಂಬರ್ ತಿಂಗಳಿನಿಂದ ಅದು ಖಾಲಿಯಾಗಿದೆ. ಯಾವೊಬ್ಬ ಬಾಡಿಗೆದಾರರೂ ಬರುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ, ಪರಿಹಾರ ಇನ್ನೂ ಸಿಕ್ಕಿಲ್ಲ. ಕಟ್ಟಡವನ್ನು ನವೀಕರಣ ಮಾಡಿದರೆ ಬಾಡಿಗೆದಾರರು ಸಿಗುವ ಸಾಧ್ಯತೆ ಇದೆ. ಹಾಗಾಗಿ ಅದನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಕಟ್ಟಡದ ವಾರಸುದಾರರು ನವೀಕರಣಕ್ಕೆ ಅಡ್ಡಿಪಡಿಸಿದರೆ, ಬಲವಂತವಾಗಿಯಾದರೂ ಅದನ್ನು ವಶಕ್ಕೆ ಪಡೆದುಕೊಳ್ಳುವ ಬಗ್ಗೆಯೂ ಆಡಳಿತ ಚಿಂತನೆ ನಡೆಸಿದೆ.
ಹಲವು ವರ್ಷಗಳ ಕಾಲ ಈ ಕಟ್ಟಡವು ತಾತ್ಕಾಲಿಕ ಮ್ಯೂಸಿಯಂ, ಶಾಲೆ ಮತ್ತು ಗ್ರಂಥಾಲಯಗಳಾಗಿ ಕಾರ್ಯ ನಿರ್ವಹಿಸಿದೆ. ಅಂಗವಿಕಲರಿಗೆ ನೆರವಾಗುವ ಸಂಸ್ಥೆಯೊಂದು ಮೂರು ದಶಕಗಳಿಗೂ ಹೆಚ್ಚು ಕಾಲ ಇದನ್ನು ಮಳಿಗೆ ಹಾಗೂ ಕಾರ್ಖಾನೆಯಾಗಿ ಬಳಸಿತ್ತು. 2011ರಲ್ಲಿ ಆ ಸಂಸ್ಥೆಯು ಕಟ್ಟಡವನ್ನು ತೆರವುಗೊಳಿಸಿತು. ಆ ಸಂದರ್ಭದಲ್ಲೂ ಆಸ್ಟ್ರಿಯ ಸರ್ಕಾರಕ್ಕೆ ಈಗ ಎದುರಾಗಿರುವ ಸಮಸ್ಯೆಯೇ ತಲೆದೋರಿತ್ತು.
ಈ ಕಟ್ಟಡವನ್ನು ಯಾವ ಉದ್ದೇಶಕ್ಕೆ ಬಳಸಬಹುದು ಎಂಬ ಬಗ್ಗೆ ಕಲ್ಪನೆಗಳಿಗೆ ಬರವಿಲ್ಲ. ಅಲ್ಲಿನ ಆಡಳಿತಗಾರರಲ್ಲಿ ಸಾಕಷ್ಟು ಯೋಚನೆಗಳಿವೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ ಅಷ್ಟೆ. ‘ನಿರಾಶ್ರಿತರು ಯಾಕೆ ಅಲ್ಲಿ ಆಶ್ರಯ ಪಡೆಯಬಾರದು?’ ಎಂದು ಪ್ರಶ್ನಿಸುತ್ತಾರೆ ಬ್ರೌನೌ ಕಮಿಷನರ್ ಜಾರ್ಜ್ ವೊಜಕ್. ‘ನಮಗೆ ಈ ಮನೆ ಬೇಡ. ಆದರೆ, ನಿರಾಶ್ರಿತರ ಬಳಕೆಗೆ ಈ ಕಟ್ಟಡ ಅತ್ಯಂತ ಸೂಕ್ತ’ ಎಂದು ಅವರು ಹೇಳುತ್ತಾರೆ.
ಇನ್ಸ್ಬ್ರುಕ್ನ ಇತಿಹಾಸ ತಜ್ಞ ಆಂಡ್ರಿಯಾಸ್ ಮೈಸ್ಲಿಂಗರ್ ಅವರ ತಲೆಯಲ್ಲಿ ಅತ್ಯುತ್ತಮ ಯೋಚನೆಯೊಂದಿದೆ. ಈ ಕಟ್ಟಡವನ್ನು ಅಂತರ ರಾಷ್ಟ್ರೀಯ ಸ್ಮಾರಕ ಮತ್ತು ಶಾಂತಿ ಸಾರುವ ಕೇಂದ್ರವಾಗಿ ರೂಪಿಸಲು ಅವರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಯುವಜನತೆಯನ್ನು ಸೇರಿಸಿಕೊಂಡು ಅಂತರ ರಾಷ್ಟ್ರೀಯ ಸಹಕಾರದಲ್ಲಿ ಈ ಯೋಜನೆ ಕಾರ್ಯಗತಗೊಳಿಸಿ, ಆ ಸ್ಥಳದ ವಿಶಿಷ್ಟತೆಯನ್ನು ಜಗತ್ತಿನ ಮುಂದಿಡುವುದು ಅವರ ಬಯಕೆ.
‘ಬ್ರೌನೌ ಒಂದು ಸ್ಮಾರಕವಾಗಲು ಯೋಗ್ಯವಾದ ಜಾಗ. ಇಲ್ಲಿ ಯಾವುದೇ ಅಪರಾಧ ಚಟುವಟಿಕೆಗಳು ನಡೆದಿಲ್ಲ. ಅದಕ್ಕೆ ಪೂರಕವಾದಂತಹ ನಿರ್ಧಾರಗಳನ್ನು ಸಹ ಇಲ್ಲಿ ಕೈಗೊಂಡಿಲ್ಲ. ಆದರೂ ದಶಕಗಳಿಂದ ಈ ಸ್ಥಳದ ಬಗ್ಗೆ ನಾವು ಪೂರ್ವಗ್ರಹಪೀಡಿತರಾಗಿದ್ದೇವೆ’ ಎಂದು ಮೈಸ್ಲಿಂಗರ್ ಹೇಳುತ್ತಾರೆ.
‘ಬ್ರೌನೌ ಒಂದು ಸಂಕೇತ. ದುಷ್ಟ ಶಕ್ತಿ ಜಗತ್ತಿಗೆ ಪ್ರವೇಶ ಪಡೆದಿದ್ದು ಇಲ್ಲಿಂದಲೇ’ ಎಂದು ಅವರು ಅಭಿಪ್ರಾಯಪಡುತ್ತಾರೆ.
ವಿರೋಧಿ ನಿಲುವು: ಎರಡನೇ ಮಹಾಯುದ್ಧದ ನಂತರ ಹಿಟ್ಲರ್ಗೆ ಸಂಬಂಧಿಸಿದ ಎಲ್ಲ ಕಟ್ಟಡಗಳನ್ನೂ ನೆಲಸಮಗೊಳಿಸಲು ಜರ್ಮನಿ ಹಾಗೂ ಇತರ ಭದ್ರತಾ ಪಡೆಗಳು ಬಯಸಿದ್ದವು. ಇದೇ ನಿಲುವು ಈಗಲೂ ಜರ್ಮನಿ ಜನಪ್ರತಿನಿಧಿಗಳಲ್ಲಿದೆ. ತಮ್ಮ ಯೋಜನೆ ಜಾರಿಗೆ ಶ್ರಮಿಸುತ್ತಿರುವ ಮೈಸ್ಲಿಂಗರ್ ಅವರಿಗೆ ಇದರ ಅನುಭವವಾಗಿದೆ. ಜರ್ಮನಿಯ ಕೆಲವು ಸಂಸದರು ಕಟ್ಟಡವನ್ನು ಧ್ವಂಸಗೊಳಿಸಲು ಒಲವು ತೋರುತ್ತಿದ್ದಾರೆ.
ಕಟ್ಟಡವನ್ನು ನಿರ್ಮಿಸಿದ ಕುಟುಂಬಕ್ಕೆ ಸೇರಿದ ಗೆರ್ಲಿಂಡ್ ಪೊಮ್ಮರ್ ಎಂಬುವವರು ಈಗ ಅದರ ಮಾಲೀಕತ್ವ ಹೊಂದಿದ್ದಾರೆ. ಈ ಸ್ಥಳ ನಾಜಿ ಬೆಂಬಲಿಗರ ಯಾತ್ರಾ ಕ್ಷೇತ್ರವಾಗಿ ಬದಲಾಗಬಹುದು ಎಂಬ ಆತಂಕದಿಂದ ಆಸ್ಟ್ರಿಯ ಸರ್ಕಾರ 1972ರಲ್ಲಿ ಈ ಕಟ್ಟಡವನ್ನು ಬಾಡಿಗೆಗೆ ಪಡೆದಿತ್ತು. ನೆಲ ಮಹಡಿಯಲ್ಲಿ ಹೋಟೆಲ್ ಹೊಂದಿದ್ದ ಕಟ್ಟಡದ ಮೇಲಿನ ಅಂತಸ್ತುಗಳಲ್ಲಿ ಮನೆಗಳಿದ್ದವು. 1889ರಲ್ಲಿ ಹಿಟ್ಲರ್ ಜನಿಸುವುದಕ್ಕೂ ಮೊದಲು ಅವರ ಪೋಷಕರು ಇಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು.
ಕಟ್ಟಡ ನವೀಕರಣಕ್ಕೆ ಗೆರ್ಲಿಂಡ್ ಪೊಮ್ಮರ್ ವಿರೋಧಿಸುತ್ತಿದ್ದುದರಿಂದ 2011ರಲ್ಲಿ ಅಂಗವಿಕಲರಿಗಾಗಿ ದುಡಿಯುತ್ತಿದ್ದ ಸಂಸ್ಥೆಯು ಆ ಸ್ಥಳವನ್ನು ತೊರೆದಿತ್ತು. ಮಾಲೀಕರ ವಿರೋಧದಿಂದಾಗಿ ಬೇರೆಯವರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಿದ್ದರೂ ಆಸ್ಟ್ರಿಯ ಸರ್ಕಾರ ಆಕೆಗೆ ಪ್ರತಿ ತಿಂಗಳೂ 5,600 ಡಾಲರ್ (ಅಂದಾಜು ₨ 3.36 ಲಕ್ಷ) ಬಾಡಿಗೆ ನೀಡುತ್ತಿದೆ.
ಈ ಕಟ್ಟಡದಲ್ಲಿ ಅಲ್ಯೂಮಿನಿಯಂ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುವ ಯೋಚನೆ ಬ್ರೌನೌ ಮೇಯರ್ ಜೊಹಾನ್ಸ್ ವೈಡ್ಬಾಷರ್ ಅವರದ್ದು. ಸರ್ಕಾರ ಸೇರಿದಂತೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ಕೆಲಸಕ್ಕೆ ಕಟ್ಟಡವನ್ನು ಬಳಸುವಂತಾಗಬೇಕು ಎಂಬ ಉದ್ದೇಶದಿಂದ ಅವರು ಹಲವು ತಿಂಗಳಿನಿಂದ ನಗರಪಾಲಿಕೆ ಮತ್ತು ಇತರ ಸಂಸ್ಥೆಗಳೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಈಗ ಅವರು ಕೈಕಟ್ಟಿ ಕುಳಿತಿದ್ದಾರೆ. ಈ ನಗರ ಮತ್ತು ಆ ಕಟ್ಟಡದ ಪ್ರಸ್ತಾಪವಾದಾಗಲೆಲ್ಲ ಬೇಡ ಬೇಡವೆಂದರೂ ವಿವಾದಾತ್ಮಕ ಇತಿಹಾಸ ಕಣ್ಣೆದುರಿಗೆ ಬರುತ್ತದೆ ಎಂಬುದು ಅವರ ನೋವು.
ನಾಜಿ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಸ್ಥಳದಲ್ಲಿ ಜೀವಿಸುವುದು ಕಷ್ಟದ ಕೆಲಸ ಎಂಬುದು ಅಲ್ಲಿನ ನಿವಾಸಿಗಳ ಅಳಲು. ನಗರದ ಹೆಸರೂ ನಾಜಿ ಪಕ್ಷದೊಂದಿಗೆ ಬೆರೆತಿದೆ ಎಂಬುದು ಅವರ ವಾದ. ‘ಬ್ರೌನ್’ (braun), ಜರ್ಮನಿಯಲ್ಲಿ ಕಂಡುಬರುವ ಸಾಮಾನ್ಯವಾದ ಮನೆತನದ ಹೆಸರು. ಉಚ್ಚಾರಣೆಯಲ್ಲಿ ಕಂದು (brown) ಬಣ್ಣವೂ ಹೌದು. ಈ ಬಣ್ಣ ನಾಜಿ ಪಕ್ಷದ ಜೊತೆಯೂ ಗುರುತಿಸಿಕೊಂಡಿದೆ. ಅದಕ್ಕಾಗಿ, ನಗರದ ವರ್ಚಸ್ಸು ಹೆಚ್ಚಿಸುವುದಕ್ಕಾಗಿ ‘ಬ್ರೌನೌ ಅಂದರೆ ಬ್ರೌನ್ ಅಲ್ಲ’ (brauno is not brown) ಎಂಬ ಘೋಷ ವಾಕ್ಯವನ್ನು ಘೋಷಿಸಲಾಗಿದೆ.
ಇತ್ತೀಚೆಗೆ ಅಲ್ಲಿ ‘ಬ್ರೌನೌ’ ಪದಕ್ಕೂ ‘ಶಾಂತಿ’ಗೂ ಸಂಬಂಧ ಕಲ್ಪಿಸುವ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ವೊಜಕ್ ಅವರು 2008ರಲ್ಲಿ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ, ಶಾಂತಿಯ ದ್ಯೋತಕವಾಗಿರುವ ನಿಂಬೆ ಗಿಡಗಳನ್ನು (linden) ನಗರದಾದ್ಯಂತ ನೆಟ್ಟಿದ್ದಾರೆ. ಇದಲ್ಲದೇ, ನಗರದ ಮೇಲೆ ಬಿದ್ದಿರುವ ಹಿಟ್ಲರ್ ಕರಿಛಾಯೆಯನ್ನು ದೂರ ಮಾಡಲು ಸ್ಥಳೀಯ ಜನರು ಸಮುದಾಯ ತಂಡಗಳನ್ನು ಕಟ್ಟಿಕೊಂಡು ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ. ನಾಜಿ ವಿರೋಧಿ ಹೋರಾಟಗಾರ ಫ್ರಾಂಜ್ ಜಾಗರ್ಸ್ಟಾಟರ್ ಅಂತಹವರ ಗೌರವಾರ್ಥವಾಗಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಖ್ಯಾತ ಗೀತ ರಚನೆಕಾರ ಫ್ರಾಂಜ್ ಕ್ಸೇವರ್ ಗ್ರುಬರ್ ಅವರ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ.
ಆ ಮೂರಂತಸ್ತಿನ ಕಟ್ಟಡ, ಅದರ ಇತಿಹಾಸ ಹಾಗೂ ಅದು ಹುಟ್ಟುಹಾಕಿರುವ ಕೆಟ್ಟ ಪರಂಪರೆಯಿಂದ ಬ್ರೌನೌ ನಗರದ ಜನರು ಎಷ್ಟರ ಮಟ್ಟಿಗೆ ಬೇಸತ್ತಿದ್ದಾರೆ ಎಂದರೆ, ಅದರ ಸಮೀಪವೇ ಹಾದು ಹೋಗುವ ನಿವಾಸಿಗಳು ಮತ್ತು ಪಕ್ಕದಲ್ಲೇ ಇರುವ ನಿಲ್ದಾಣದಲ್ಲಿ ಬಸ್ಗಾಗಿ ಕಾಯುವ ಪ್ರಯಾಣಿಕರು, ಕಟ್ಟಡದ ಮುಂದೆ ನೆಟ್ಟಿರುವ, ನಿರಂಕುಶ ಆಡಳಿತದ ಅಪಾಯದ ಬಗ್ಗೆ ಎಚ್ಚರಿಸುವ ಸಾಲುಗಳನ್ನೊಳಗೊಂಡ ಶಿಲಾ ಸ್ಮಾರಕದತ್ತ ದೃಷ್ಟಿಯನ್ನೂ ಹಾಯಿಸುವುದಿಲ್ಲ!
ಹಿಟ್ಲರ್ ಖ್ಯಾತಿ ಮತ್ತು ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಅವರ ಜನ್ಮಸ್ಥಳ ಮತ್ತು ಆ ಮೂಲಕ ಬ್ರೌನ್ಗೂ ಹೆಚ್ಚಿನ ಮಹತ್ವ ದೊರೆಯುತ್ತಾ ಬಂತು. ಎರಡನೇ ಮಹಾಯುದ್ಧ ಮುಗಿದ ದಶಕಗಳ ನಂತರವೂ ಇಲ್ಲಿಗೆ ಭೇಟಿ ನೀಡುತ್ತಿದ್ದ, ಅದರಲ್ಲೂ ಹಿಟ್ಲರ್ ಜನ್ಮದಿನದ ಸಂದರ್ಭದಲ್ಲಿ ಬರುತ್ತಿದ್ದ ನಾಜಿ ಬೆಂಬಲಿಗರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುತ್ತಾರೆ ಸ್ಥಳೀಯ ಪೊಲೀಸರು.
ಆದಾಗ್ಯೂ ಇಲ್ಲಿನ ಕೆಲವರು ಹೊರಗಿನವರ ಮುಂದೆ ತಾವು ಈ ಊರಿನವರು ಎಂದು ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ‘ನಾನು ಹೊರದೇಶಕ್ಕೆ ಪ್ರಯಾಣಿಸುವಾಗಲೆಲ್ಲ ನೀವು ಎಲ್ಲಿನವರು ಎಂದು ಯಾರಾದರೂ ಕೇಳಿದರೆ ಮೊದಲು ನನ್ನ ನಗರದ ಹೆಸರು ಹೇಳುವುದಿಲ್ಲ. ಸಾಲ್್ಸಬರ್ಗ್ ಸಮೀಪದವನು ಅಥವಾ ಮ್ಯೂನಿಚ್ಗೆ ಹತ್ತಿರದ ಊರಿನವನು ಎನ್ನುತ್ತೇನೆ. ಆದರೂ ಅವರಿಗೆ ಅರ್ಥವಾಗದಿದ್ದಾಗ ಅನಿವಾರ್ಯವಾಗಿ ಬ್ರೌನೌ ಹೆಸರು ಹೇಳಲೇಬೇಕಾಗುತ್ತದೆ. ಆದರೆ ಹಾಗೆಂದ ಕೂಡಲೇ, ಓಹೋ ಹಿಟ್ಲರನ ಜನ್ಮಸ್ಥಳ. ಅದನ್ನು ಆಗಲೇ ಯಾಕೆ ಹೇಳಲಿಲ್ಲ? ಎಂಬ ಪ್ರತಿಕ್ರಿಯೆಯೇ ಎಲ್ಲರಿಂದಲೂ ಬರುತ್ತದೆ’ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಹ್ಯಾನ್್ಸ ಸ್ವಾರ್ಜ್ಮೇರ್.
Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com
No comments:
Post a Comment