ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ರುಪಾಯಿ ಮೌಲ್ಯ ಕುಸಿಯಲು ಮುಖ್ಯವಾಗಿ ನೀವೇ ಕಾರಣ! | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, October 07, 2018

ರುಪಾಯಿ ಮೌಲ್ಯ ಕುಸಿಯಲು ಮುಖ್ಯವಾಗಿ ನೀವೇ ಕಾರಣ!

  Pundalik       Sunday, October 07, 2018
ಕಳೆದ ಕೆಲವು ದಿನಗಳಿಂದ ಟಿವಿ ಹಾಗೂ ಪೇಪರ್‌ಗಳಲ್ಲಿ ನೋಡುತ್ತ ಬಂದಿರಬಹುದು. ಎಲ್ಲಿ ನೋಡಿದರೂ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ. ಎಲ್ಲಿ ನೋಡಿದರೂ ಬರೀ ಇದರದ್ದೇ ಸುದ್ದಿ. ಎಲ್ಲರೂ ಆರ್ಥಿಕ ತಜ್ಞರಾಗಿಬಿಟ್ಟಿದ್ದಾರೆ. ಯಾರನ್ನು ನೋಡಿದರೂ ಡಾಲರ್ ಕುಸಿತ, ರುಪಾಯಿ ಕುಸಿತ ಮತ್ತು ಅದಕ್ಕೆ ಅವರದ್ದೇ ಕಾರಣಗಳನ್ನು ಹೇಳಿ ಹೇಳಿ ಸುಸ್ತಾಗುತ್ತಿದ್ದಾರೆ. ಯಾರೆಷ್ಟು ಗಂಟಲು ಹರಿದುಕೊಂಡರೂ ಜನರಿಗೆ ಮಾತ್ರ ನಿಜವಾದ ಸಂದೇಶ ತಲುಪಲೇ ಇಲ್ಲ. ಜನಗಳಿಗೆ ಸರಿಯಾದ ಕಾರಣ ಏನೆಂಬುದು ತಿಳಿಯಲೇ ಇಲ್ಲ. ಮಾಧ್ಯಮದವರು ಪ್ರಶ್ನೆಗಳನ್ನು ಕೇಳಿ, ಉತ್ತರ ಕೊಡಲು ಅವರೇ ಸಹಾಯವನ್ನೂ ಮಾಡುತ್ತಿದ್ದ ದೃಶ್ಯ ಹಲವೆಡೆ ಕಂಡುಬರುತ್ತಲಿತ್ತು. ಹಾಗಾದರೆ ಏನು ಈ ರುಪಾಯಿ, ಡಾಲರ್, ಪೆಟ್ರೋಲ್, ಡೀಸೆಲ್‌ಗೆ ಇರುವ ಸಂಬಂಧ? ಇದನ್ನು ಪ್ರತಿಯೊಬ್ಬ ನಾಗರಿಕನೂ ತಿಳಿಯಲೇ ಬೇಕು. ಇಲ್ಲವೆಂದರೆ ಬೆಲೆ ಏರಿಕೆಯ ಹಿಂದಿನ ಮರ್ಮ ಅರ್ಥವಾಗುವುದೇ ಇಲ್ಲ.
ಡಾಲರ್ ಎದುರು ರುಪಾಯಿಯ ಮೌಲ್ಯ ಕುಸಿಯಲು ಮುಖ್ಯವಾದ ಕಾರಣವನ್ನು ‘ರಾಷ್ಟ್ರೀಯಮಟ್ಟದ ಸಮಸ್ಯೆ’ಯೆಂದು ಎಲ್ಲೆಡೆಯೂ ಬಿಂಬಿಸುವ ಯತ್ನ ನಡೆಯುತ್ತಿದೆ. ಒಂದು ಕಡೆಯಿಂದ ನೋಡಿದರೆ ಈ ರೀತಿಯ ವಾದವೂ ಸರಿಯೇ ಎನಿಸುತ್ತದೆ. ಯಾಕೆಂದರೆ ಡಾಲರ್ ಈಗ ಕೇವಲ ಅಮೆರಿಕ ಮಾತ್ರವಲ್ಲ, ಇಡೀ ವಿಶ್ವದ ಕರೆನ್ಸಿಯಾಗಿದೆ. ಅಮೆರಿಕನ್ನರ ಮುಂದಾಲೋಚನೆಯೆಂದರೆ ಏನು ಸುಮ್ಮನೆಯೇ? ಅವರು ಕೇವಲ ಹೆಸರಿಗೆ ಮಾತ್ರ ದೊಡ್ಡಣ್ಣನಲ್ಲ, ಅವರು ಮಾಡುವ ಯೋಜನೆಗಳು ಕೂಡ ತುಂಬಾ ಮುಂದಾಲೋಚನೆಯಿಂದಲೇ ಕೂಡಿರುತ್ತವೆ.
ವಿಶ್ವಾದ್ಯಂತ ನಡೆಯುವ ಎಲ್ಲ ಪ್ರಮುಖ ವ್ಯಾಪಾರಗಳನ್ನು ಡಾಲರ್‌ಗಳಿಂದಲೇ ಮಾಡಬೇಕೆಂದು ತಾಕೀತು ಮಾಡಿ, ದಿನೇದಿನೆ ಬೆಳೆಯುತ್ತಲೇ ಹೋದ ದೇಶ ಅಮೆರಿಕ. ಅದರಲ್ಲಿಯೂ ಕೊಲ್ಲಿ ರಾಷ್ಟ್ರಗಳಲ್ಲಿಯೇ ಅಧಿಕ ನಿಕ್ಷೇಪಗಳು ಇರುವುದರಿಂದ ಅಲ್ಲಿನ ಶೇಖ್‌ಗಳನ್ನು ತನ್ನ ಅಂಗೈಯಲ್ಲಿಯೇ ಇಟ್ಟುಕೊಂಡು ಪೆಟ್ರೋಲ್ ವ್ಯವಹಾರವೆಲ್ಲವೂ ಡಾಲರ್ ಮೂಲಕವೇ ಆಗಬೇಕೆಂದು ಅಲಿಖಿತ ನಿಯಮವನ್ನು ಜಾರಿಗೆ ತಂದಿತು. ಕಾರಣವಿಷ್ಟೇ, ಪ್ರಪಂಚದ ಬಹುತೇಕ ರಾಷ್ಟ್ರಗಳು ಕೊಲ್ಲಿ ರಾಷ್ಟ್ರಗಳಿಂದಲೇ ಪೆಟ್ರೋಲಿಯಂ ಆಮದು ಮಾಡಿಕೊಳ್ಳುವುದರಿಂದ ಆ ಕೊಲ್ಲಿ ರಾಷ್ಟ್ರಗಳಿಗೆ ನೀಡಬೇಕಾದ ಹಣವೂ ಕೂಡ ಡಾಲರ್‌ನಲ್ಲಿಯೇ ಇದ್ದರೆ, ಡಾಲರ್ ಅತೀ ಮಹತ್ವವನ್ನು ಪಡೆದುಕೊಳ್ಳುತ್ತದೆ. ಭಾರತದ ಸ್ಥಿತಿಯೂ ಇತರೆ ರಾಷ್ಟ್ರಗಳಿಗಿಂತ ಭಿನ್ನವಾಗಿಯೇನೂ ಇಲ್ಲ. ಭಾರತವೂ ಸಹ ಅತಿ ಹೆಚ್ಚು ಪೆಟ್ರೋಲಿಯಂ ಆಮದನ್ನು ಕೊಲ್ಲಿ ರಾಷ್ಟ್ರಗಳಿಂದಲೇ ಮಾಡುವುದರಿಂದ ನಾವು ಡಾಲರ್‌ಗಳಲ್ಲಿಯೇ ಹಣವನ್ನು ಆ ರಾಷ್ಟ್ರಗಳಿಗೆ ನೀಡಬೇಕು. ಯಾವಾಗ ಡಾಲರ್‌ಗಳು ಹೆಚ್ಚಾಗಬೇಕಾಗುತ್ತವೆಯೋ ಆಗ ಅದರ ಮುಂದೆ ರುಪಾಯಿಯ ಮೌಲ್ಯ ಕುಸಿಯುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ, ಈಗ ಹಬ್ಬಗಳಲ್ಲಿ ಹೂವು, ಹಣ್ಣುಗಳ ಬೆಲೆಯೂ ಏಕೆ ಗಗನಕ್ಕೇರುತ್ತದೆ? ಯೋಚಿಸಿ ನೋಡೋಣ.
ಎಲ್ಲರ ಮನೆಗಳಲ್ಲಿ ಪೂಜೆಗಳು ಹಬ್ಬದ ದಿನಗಳಲ್ಲಿ ಹೆಚ್ಚಾಗಿ ನಡೆಯುವುದರಿಂದ ಹೂ-ಹಣ್ಣುಗಳ ಬೇಡಿಕೆಯೂ ಹೆಚ್ಚಿರುತ್ತದೆ. ಆದರೆ ಅವುಗಳ ಪೂರೈಕೆ ಕಡಿಮೆ ಇರುತ್ತದೆ. ಯಾವಾಗ ಬೇಡಿಕೆ ಹೆಚ್ಚಾಗುತ್ತದೋ ಆ ವಸ್ತುವಿನ ಏರಿಕೆಯಾಗುತ್ತದೆ. ಇದೇ ರೀತಿ ನಾವು ಪೆಟ್ರೋಲಿಯಂ ಉತ್ಪನ್ನಗಳನ್ನು ಹೆಚ್ಚು ಆಮದು ಮಾಡಿಕೊಳ್ಳಬೇಕಿರುವುದರಿಂದ ಪೆಟ್ರೋಲಿಯಂ ವಸ್ತುಗಳ ಬೇಡಿಕೆಯೂ ಹೆಚ್ಚಾಗುತ್ತದೆ ಇದರ ಜತೆಗೆ ನಾವು ಪೆಟ್ರೋಲಿಯಂ ಆಮದಿಗೆ ಕೊಡುವ ಹಣವನ್ನು ಡಾಲರ್‌ಗಳ ಲೆಕ್ಕದಲ್ಲಿ ಕೊಡಬೇಕಿರುವುದರಿಂದ, ಯಾವಾಗ ಡಾಲರ್ ಬೇಡಿಕೆ ಹೆಚ್ಚಾಗುತ್ತದೆಯೋ, ಡಾಲರ್ ಅನ್ನು ಹೆಚ್ಚು ಹಣವನ್ನು ನೀಡಿ ಪಡೆಯಬೇಕಾಗುತ್ತದೆ. ಆಗ ಡಾಲರ್, ರುಪಾಯಿ ಎದುರು ಹೆಚ್ಚುತ್ತಲೇ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇದು ಅಂತಾರಾಷ್ಟ್ರೀಯ ಸಮಸ್ಯೆಯಂತೆಯೇ ಕಾಣುತ್ತದೆ. ನಾವು ಕೇವಲ ಸರಕಾರಗಳು ಹಾಕುವ ತೆರಿಗೆಗಳ ಬಗ್ಗೆ ಮಾತನಾಡುತ್ತೇವೆ. ಹಾಗಾದರೆ ಪ್ರಜೆಗಳಾದ ನಮಗೆ ಯಾವ ಜವಾಬ್ದಾರಿ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿದೆ. ಹಾಗಾದರೆ ಪ್ರಜೆಗಳಾಗಿ ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲವೇ? ಇದೆ, ತುಂಬಾನೇ ಇದೆ. ಎಲ್ಲವನ್ನೂ ಸರಕಾರಗಳೇ ಮಾಡಬೇಕೆಂಬ ನಿಯಮ ಎಲ್ಲಿಯೂ ಇಲ್ಲ. ಸರಕಾರ ಯಾರದ್ದು? ನಮ್ಮದೇ ತಾನೆ? ಹಾಗಾಗಿ ನಾವು ಸಹ ಈ ಬಗ್ಗೆ ಯೋಚನೆ ಮಾಡಬೇಕು.
2017ರಲ್ಲಿ ಒಟ್ಟಾರೆ ಭಾರತದ ಆಮದಿನಲ್ಲಿ ಸುಮಾರು 123 ಕೋಟಿ ಅಮೆರಿಕನ್ ಕೇವಲ ಪೆಟ್ರೋಲಿಯಂ ಉತ್ಪನ್ನಗಳಿಂದ ಕೂಡಿದೆ. ಅಂದರೆ ಶೇ. 28ರಷ್ಟು ಆಮದು ಕೇವಲ ಪೆಟ್ರೋಲಿಯಂ ಉತ್ಪನ್ನಗಳು. ಈ ಆಮದನ್ನು ಕಡಿಮೆ ಮಾಡದ ಹೊರತು ರುಪಾಯಿಯು ಡಾಲರ್‌ನ ಎದುರು ಬಲವಾಗುವುದೇ ಇಲ್ಲ. ಇದು ಕಡಿಮೆಯಾಗಬೇಕೆಂದರೆ ನಮ್ಮ ದೇಶದಲ್ಲಿಯೇ ನಾವು ಕಚ್ಚಾತೈಲದ ಬಾವಿಗಳನ್ನು ಹುಡುಕಬೇಕಿದೆ. ಇಲ್ಲವಾದರೆ ಬ್ಯಾಟರಿ ಚಾಲಿತ ಕಾರುಗಳು, ಬೈಕುಗಳು, ಎಥೆನಾಲ್ ಬಳಕೆಯ ವಾಹನಗಳು ಬಳಕೆ ಹೆಚ್ಚು ಮಾಡಬೇಕಿದೆ. ಆದರೆ ಈ ಯೋಜನೆಗಳು ಅಷ್ಟು ಬೇಗ ಜಾರಿಯಾಗುವುದಿಲ್ಲ. ಯಾಕೆಂದರೆ ಲಕ್ಷಾಂತರ ಕೋಟಿಯಷ್ಟು ಸರಕಾರ ಖರ್ಚು ಮಾಡಬೇಕು. ಜತೆಗೆ ಕನಿಷ್ಠವೆಂದರೂ ಹತ್ತು ವರ್ಷಗಳಾದರೂ ಕಾಲಾವಧಿ ಬೇಕಾಗುತ್ತದೆ. ಆದ್ದರಿಂದ ಪ್ರಜೆಗಳಾಗಿ ನಾವೇ ಸ್ವಲ್ಪ ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು. ಆದರೆ ಇಲ್ಲಿ ನಡೆಯುತ್ತಿರುವ ಚಿತ್ರಣವೇ ಬೇರೆ.
ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟೇ ಹೆಚ್ಚಾದರೂ ದ್ವಿಚಕ್ರ, ನಾಲ್ಕು ಚಕ್ರಗಳ ವಾಹನಗಳ ಮಾರಾಟದಲ್ಲಿ ಮಾತ್ರ ಕಡಿಮೆಯಾಗಿಲ್ಲ. ಎಲ್ಲರ ಬಳಿಯೂ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇವುಗಳ ಜತೆಗೆ ಓಲಾ, ಉಬರ್‌ಗಳು ಏರಿಕೆಯಾಗುತ್ತಿದೆ. ಇದೆಲ್ಲದರ ಮಧ್ಯೆ ಮೆಟ್ರೋ, ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಒಂದು ಅಂಗಡಿಗೆ ಹೋಗಿ, ಹಾಲು, ಮೊಸರು ತರಲು ವಾಹನದಲ್ಲೇ ಹೋಗುವಂಥ ಪರಿಸ್ಥಿತಿಯಲ್ಲಿ ನಮ್ಮ ಜನ ಬದುಕುತ್ತಿದ್ದಾರೆ. ಇನ್ನು ನಾಲ್ಕು ಜನರಿರುವ ಒಂದು ಕುಟುಂಬದಲ್ಲಿ ಮೂರು ಕಾರುಗಳು ಎರಡು ದ್ವಿಚಕ್ರ ವಾಹನಗಳಿರುತ್ತವೆ. ಹೇಗೆ ತಾನೇ ಪೆಟ್ರೋಲ್ ಮಿತ ಬಳಕೆ ಸಾಧ್ಯ? ನೀವುಗಳೇ ನೋಡಿರುವ ಹಾಗೆ ವೈಟ್‌ಫಿಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ, ಕಾರ್ಪೋರೆಟ್ ಕಂಪನಿಗಳಿರುವ ಜಾಗಗಳಿಗೆ ಕೆಲಸಕ್ಕೆಂದು ತೆರಳುವ ಹಲವಾರು ಜನರು ಕೇವಲ ಒಬ್ಬರೇ ಇದ್ದರೂ ಸಹ ಕಾರಿನಲ್ಲಿಯೇ ಹೋಗುತ್ತಿರುತ್ತಾರೆ. ಅದೇ ಕಂಪನಿಯಲ್ಲಿ ಕೆಲಸ ಮಾಡುವ ಅವರ ಸಹೋದ್ಯೋಗಿಯೂ ಅದೇ ಏರಿಯಾದಿಂದ ಅಥವಾ ಹತ್ತಿರದ ಏರಿಯಾದಿಂದ ಬರುತ್ತಿದ್ದರು ಸಹ, ಇಬ್ಬರು ಬೇರೆ ಬೇರೆ ಕಾರಿನಲ್ಲಿಯೇ ಒಬ್ಬಂಟಿಯಾಗಿಯೇ ಬರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಹೇಗೆ ತಾನೇ ಪೆಟ್ರೋಲ್ ಬೆಲೆ ಕಡಿಮೆಯಾಗಲು ಸಾಧ್ಯ? ಇಲ್ಲಿಯೂ ಅಷ್ಟೇ, ಕಾರ್ ಪೂಲಿಂಗ್‌ನಂತಹ ವ್ಯವಸ್ಥೆ ಮಾಡಿಕೊಳ್ಳಲೇಬೇಕಿದೆ. ಆಗ ಮಾತ್ರ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಸಾಧ್ಯ.
ಇನ್ನು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವುದರಿಂದಲೂ ನಾವು ಪೆಟ್ರೋಲ್, ಡೀಸೆಲ್ ನಿಯಂತ್ರಿಸಬಹುದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯನ್ನು ನೋಡಿ. ಅಲ್ಲಿ ಸಾರ್ವಜನಿಕ ಬಸ್ ಸಂಚಾರವಿದೆ. 12 ಲೈನುಗಳ ಮೆಟ್ರೋ ರೈಲು ಇದೆ. ಜತೆಗೆ ಓಲಾ, ಉಬರ್ ಟ್ಯಾಕ್ಸಿಗಳು. ಇಷ್ಟೆಲ್ಲ ಇದ್ದರೂ ಸಹ ಸಾರಿಗೆ ಸಮಸ್ಯೆ ನೀಗಿಲ್ಲ. ವಾಯುಮಾಲಿನ್ಯ ಕಡಿಮೆಯಾಗಿಲ್ಲ. ಜನಸಂಖ್ಯೆ ಹೆಚ್ಚಿದೆ. ಆದರೆ ಅತಿ ಹೆಚ್ಚು ವಾಹನಗಳ ಬಳಕೆದಾರರೂ ಸಹ ಇಲ್ಲಿಯೇ ಇದ್ದಾರೆ. ಅವರ‍್ಯಾರೂ ಸಹ ವಾಹನಗಳ ಬಳಕೆಯನ್ನು ಕಡಿಮೆ ಮಾಡಿಲ್ಲ.
ನಿಜವಾಗಿಯೂ ಒಂದು ಮಾದರಿ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ನೋಡಬೇಕೆಂದರೆ ಹಾಂಗ್‌ಕಾಂಗ್‌ಗೆ ಹೋಗಬೇಕು. ಅಬ್ಬಬ್ಬಾ.. ಸುಮಾರು 40 ವರ್ಷಗಳ ಹಿಂದೆಯೇ ಇಡೀ ದೇಶದಲ್ಲಿ ಮೆಟ್ರೋ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜನಸಂಖ್ಯೆ ಅತಿ ಹೆಚ್ಚಿದ್ದರೂ ಸಹ ಜನರು ನಿಮಗೆ ರಸ್ತೆಗಳಲ್ಲಿ ಕಾಣುವುದೇ ಇಲ್ಲ. ಎಲ್ಲ ಮೆಟ್ರೋ ಲೈನ್‌ಗಳು ಇರುವುದು ಸುರಂಗಗಳಲ್ಲಿಯೇ. ಕೇವಲ ಉಗಿಐ ಜಾಗದಲ್ಲಿ ಮಾತ್ರ ಜನರನ್ನು ಕಾಣಬಹುದು. ಹಾಗೆ ಭೂಮಿಯ ಕೆಳಗಡೆ ಬೇರೆಯದ್ದೇ ಒಂದು ಲೋಕವನ್ನು ಸೃಷ್ಟಿಸಿರುವ ದೇಶ ಹಾಂಗ್‌ಕಾಂಗ್. ಮೆಟ್ರೋ ಸುರಂಗ ಕನಿಷ್ಠವೆಂದರೂ 10-12 ಅಂತಸ್ತುಗಳ ಕೆಳಗಡೆ ನಿರ್ಮಾಣವಾಗಿದೆ. ನೆಲದಡಿಯೇ ಮಳಿಗೆಗಳು, ಎಂಥಹ ಅದ್ಭುತ ಸೃಷ್ಟಿ ಎಂದರೆ ಅಲ್ಲಿ ಹೋಗಿಯೇ ಅನುಭವಿಸಿ ನೋಡಬೇಕು. ‘ಟೈಮ್ಸ್ ಸ್ಕ್ವೇರ್’ನ ಕಟ್ಟಡವು ಸುಮಾರು 50 ಅಂತಸ್ತುಗಳಿದ್ದರೆ, ಅದರ ಕೆಳಗೆ ಸುಮಾರು 10 ಅಂತಸ್ತುಗಳಲ್ಲಿ ಮೆಟ್ರೋ ಮಾರ್ಗವಿದೆ. ಇವುಗಳ ಮಧ್ಯೆ ಸುರಂಗದಲ್ಲಿ ಅವೆಷ್ಟೋ ಮಾಲ್‌ಗಳು, ಮಳಿಗೆಗಳು, ಹೋಟೆಲ್‌ಗಳಿವೆ.
ಹಾಂಗ್‌ಕಾಂಗ್‌ನಲ್ಲಿ ಮೆಟ್ರೋ ಜನರ ಜೀವನಾಡಿ. ಅದಿಲ್ಲದೇ ಅಲ್ಲಿನ ಜನರು ಬದುಕಲು ಆಗುವುದೇ ಇಲ್ಲ. ಶೇ.90 ರಷ್ಟು ಜನರು ಇಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ. ಹಾಂಗ್‌ಕಾಂಗ್‌ನಲ್ಲಿ ಟ್ಯಾಕ್ಸಿಗಳು ತುಂಬಾ ದುಬಾರಿಗೆ ಸುಮಾರು 120 ರುಪಾಯಿಗಳು. ಆದರೆ ಅಲ್ಲಿನ ಜನರು ಅತಿ ಹೆಚ್ಚು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿರುವುದರಿಂದ ಟ್ಯಾಕ್ಸಿಯನ್ನು ಹತ್ತುವುದೇ ಇಲ್ಲ.
ಪ್ರವಾಸಿಗರೂ ಅಲ್ಲಿ ಹೆಚ್ಚಾಗಿ ಮೆಟ್ರೋವನ್ನೇ ಬಳಸುತ್ತಾರೆ. ಯಾವ ಮೂಲೆಯಿಂದ, ಯಾವ ಮೂಲೆಗೆ ಹೊರಟೆವೆಂದರೂ ಅಷ್ಟೇ ಮೆಟ್ರೋ ಹಾಂಗ್‌ಕಾಂಗ್ ಜೀವನಾಡಿ. ರೋಡುಗಳು ಖಾಲಿ, ಖಾಲಿಯಾಗಿರುತ್ತವೆ. ಅಲ್ಲಿ ಶ್ರೀಮಂತರು-ಬಡವರು ಎಂಬ ಭೇದಭಾವ ಇಲ್ಲ. ರೋಲ್‌ಸ್ರಾಯ್ಸ್ ಕಾರ್‌ನಲ್ಲಿ ಓಡಾಡುವವನೂ ಸಹ ಮೆಟ್ರೋವನ್ನು ಬಳಸುತ್ತಾನೆ. ಇವರೆಲ್ಲ ನಿಜವಾಗಿಯೂ ದೇಶಸೇವೆಯನ್ನು ಮಾಡುತ್ತಿರುವ ರೀತಿ ನಮ್ಮಲ್ಲಿನ ಪರಿಸ್ಥಿತಿ ಹೀಗಿದೆಯೆ? ಸುತರಾಂ ಇಲ್ಲ! ಸ್ವಲ್ಪ ದುಡ್ಡು ನೋಡಿದವನಿಗೂ ಓಡಾಡಲು ಕಾರು ಬೇಕೇ ಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವುದೆಂದರೆ, ಅವಮಾನವಾದ ರೀತಿ ಆಡುತ್ತಾರೆ.
ನಮ್ಮ ಬಹುಜನರ ಮನಸ್ಥಿತಿ ಹೀಗೆ ಇರುವಾಗ, ಹೇಗೆ ತಾನೆ ಪೆಟ್ರೋಲ್, ಡೀಸೆಲ್‌ನ ಆಮದು ಕಡಿಮೆಯಾಗಲು ಸಾಧ್ಯ? ಕಡಿಮೆಯಾಗಲಿಲ್ಲವೆಂದರೆ ಹೇಗೆ ತಾನೇ ಡಾಲರ್ ಎದುರು ರುಪಾಯಿ ಏರಿಕೆ ಕಾಣಲು ಸಾಧ್ಯ? ನಮ್ಮ, ನಿಮ್ಮೆಲ್ಲರ ಜವಾಬ್ದಾರಿ ಸಹ ಈ ವಿಷಯದಲ್ಲಿ ಅತಿ ಹೆಚ್ಚಿದೆಯೆಂದು ತಿಳಿಯಿತಲ್ಲವೇ? ಹಾಗಾಗಿ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಎಲ್ಲರೂ ಕೈ ಜೋಡಿಸಬೇಕಿದೆ. ರುಪಾಯಿ, ಡಾಲರಿನ ಕಥೆ ಕೇವಲ ಪೆಟ್ರೋಲ್, ಡೀಸೆಲ್‌ಗಷ್ಟೇ ಸೀಮಿತವಾಗಿಲ್ಲ. ನಮ್ಮ ದೇಶದಲ್ಲಿ ಮತ್ತೊಂದು ದೊಡ್ಡ ಬಾಂಬ್ ಇದೆ. ಇದು ಸಹ ಅಷ್ಟೇ, ಪೆಟ್ರೋಲ್, ಡೀಸೆಲ್ ಆಮದಿನಷ್ಟೇ ಡೇಂಜರಸ್! ಭಾರತದಲ್ಲಿ ಕಚ್ಚಾತೈಲದ ನಂತರ ಅತೀ ಹೆಚ್ಚು ಆಮದಾಗುವ ವಸ್ತುವೇ ಚಿನ್ನ, ವಜ್ರ, ವೈಢೂರ್ಯ.
2017ರಲ್ಲಿ ಭಾರತವು ಸುಮಾರು 74 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ. ಅಂದರೆ ಶೇ.17 ಆಮದು ಚಿನ್ನದ ರೂಪದಲ್ಲಿದೆ. ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಬಂಗಾರವನ್ನು ಆಮದು ಮಾಡಿಕೊಳ್ಳುವ ದೇಶ. ನಮ್ಮ ದೇಶದ ಜನರಿಗೆ, ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಈ ಬಂಗಾರದ ಮೇಲೆ ಅದ್ಯಾಕ ಇಷ್ಟು ವ್ಯಾಮೋಹವೋ ನಾನರಿಯೆ. ಸಾಲ ಮಾಡಿಯಾದರೂ, ಒಂದು ಚೀಟಿ ನಡೆಸಿಯಾದರೂ ಮನೆಯಲ್ಲಿ ಬಂಗಾರವಿಡಬೇಕೆಂಬ ಮನಸ್ಥಿತಿ ಇವರದು.
ಇಲ್ಲಿಯೂ ಅಷ್ಟೇ, ಚಿನ್ನವನ್ನು ಆಮದು ಮಾಡಿಕೊಂಡರೂ ಸಹ ಭಾರತವು ಡಾಲರ್‌ನಲ್ಲಿಯೇ ಅದಕ್ಕೆ ಪಾವತಿಸಬೇಕು. ಅತಿ ಹೆಚ್ಚು ಬಂಗಾರ ಆಮದಾದ ಕೂಡಲೇ ಡಾಲರಿನ ಹೆಚ್ಚಾಗುತ್ತದೆ. ಆಗ ರುಪಾಯಿ, ಡಾಲರಿನ ಎದುರು ಕುಸಿಯುತ್ತದೆ. ಯಾವಾಗ ಅದು ಕುಸಿಯುತ್ತದೆಯೋ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತದೆ.
ಬೆಂಗಳೂರಿನಲ್ಲಂತೂ ಈ ಬಂಗಾರದ ಶೋಕಿಯು ಅತಿ ಹೆಚ್ಚಾಗಿ ಬಿಟ್ಟಿದೆ. ವರಮಹಾಲಕ್ಷ್ಮಿ, ಗೌರಿ ಗಣೇಶ, ದೀಪಾವಳಿ ಹಬ್ಬ ಬಂತೆಂದರೆ, ದೇವರ ಪೂಜೆಯನ್ನು ಭಕ್ತಿಯಿಂದ ಮಾಡುತ್ತಾರೋ ಇಲ್ಲವೋ ಅಂದಿನ ದಿನ ಬಂಗಾರವನ್ನು ಹಾಕಿಕೊಂಡು ಅರಶಿನ ಕುಂಕುಮಕ್ಕೆ ಕರೆಯುವ ನೆಪದಲ್ಲಿ ಬೀದಿಯಲ್ಲಿ ಚಿನ್ನದ ಪ್ರದರ್ಶನ ಮಾಡುವುದಕ್ಕಂತೂ ಭಂಗವಿಲ್ಲ. ಮನೆಗೆ ಬಂದವರೋ ದೇವರ ಬಗ್ಗೆ ಮಾತನಾಡುವುದು ಯಾವ ನೆಕ್ಲೆಸ್, ಎಲ್ಲಿ ತಗೊಂಡ್ರಿ.. ಬರೀ ಈ ಮಾತುಗಳೇ. ತೋರ್ಪಡಿಕೆಯ ಈ ವಿಚಿತ್ರ ಮನಸ್ಥಿತಿಯಿಂದಲೇ ಇವತ್ತು ನಾವಿನ್ನೂ ಉದ್ಧಾರವಾಗಿಲ್ಲ. ಇನ್ನು ಮದುವೆ ಸಮಾರಂಭಗಳಲ್ಲಿ ಇವರದ್ದೇ ಕಾರುಬಾರು. ಬಂಗಾರದ್ದೇ ಮಾತು ಎಲ್ಲೆಲ್ಲೂ. ಹೊಟ್ಟೆ, ಬಟ್ಟೆಗೆ ಕಡಿಮೆ ಮಾಡಿ ಚಿನ್ನ ಖರೀದಿ ಮಾಡುತ್ತಾರೆ. ನಿಜವಾಗಿಯೂ ಇದರಿಂದ ಇಂದಿನ ಕಾಲಘಟ್ಟದಲ್ಲಿ ಏನು ಉಪಯೋಗವಿದೆಯೋ ನಾನರಿಯೆ.
ಹಿಂದಿನ ದಿನಗಳಲ್ಲಿ ಚಿನ್ನವೆಂದರೆ ಒಂದು ರೀತಿ ಸಾಮಾಜಿಕ ಭದ್ರತೆಯ ರೂಪದಲ್ಲಿ ನೋಡಲಾಗುತ್ತಿತ್ತು. ಅದು ನಿಜವೂ ಕೂಡ. ಜೀವನದಲ್ಲಿ ಕೆಟ್ಟ ಪರಿಸ್ಥಿತಿ ಎದುರಾದರೆ, ಆಸ್ಪತ್ರೆಗಳಿಗೆ ಹಣ ಹೊಂದಿಸಲು ಚಿನ್ನವು ಮುಖ್ಯ ಪಾತ್ರವಹಿಸುತ್ತಿತ್ತು. ಜತೆಗೆ ತುರ್ತು ಪರಿಸ್ಥಿತಿಯಲ್ಲಿ ಚಿನ್ನವನ್ನು ಅಡವಿಟ್ಟು ಹಣ ಹೊಂದಿಸುವ ಯೋಜನೆಗಾಗಿಯೇ ಚಿನ್ನವನ್ನು ಖರೀದಿ ಮಾಡಲಾಗುತ್ತಿತ್ತು. ಆದರೆ ಈಗ ಕಾಲವು ಬದಲಾಗಿದೆ. ಹಿಂದಿನ ರೀತಿಯ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಮಾ ಕಂಪನಿಗಳಿವೆ, ಬ್ಯಾಂಕುಗಳಿವೆ. ಇಷ್ಟೆಲ್ಲ ಇರುವಾಗ ಕೇವಲ ಆಡಂಬರಕ್ಕಾಗಿ ಚಿನ್ನವನ್ನು ಖರೀದಿಸಿ, ಹಿಂಬಾಗಿಲಿನಿಂದ ನಮ್ಮ ವಸ್ತುಗಳ ಮೇಲೆಯೇ ಬೇರೆ ವಸ್ತುಗಳ ಬೆಲೆ ಏರಿಕೆಯನ್ನು ಏಕೆ ಹೇರಿಕೊಳ್ಳಬೇಕೋ ನನಗರ್ಥವಾಗುವುದಿಲ್ಲ. ಚಿನ್ನದ ಆಭರಣಗಳ ಮಳಿಗೆಗಳನ್ನು ನೋಡಿದರೆ ಭಯವಾಗುತ್ತದೆ. ರೋಡಿಗೊಂದು ಎಂಬಂತೆ ಸಾವಿರಾರು ಮಳಿಗೆಗಳು. ಅಷ್ಟು ಬಾಡಿಗೆಯನ್ನು ಎಲ್ಲಿಂದ ಕಟ್ಟುತ್ತಾರೋ, ಆ ಸಂಬಳಗಳನ್ನು ಎಲ್ಲಿಂದ ನೀಡುತ್ತಾರೋ ನಿಜವಾಗಿಯೂ ಅರ್ಥವಾಗುವುದಿಲ್ಲ.
ಬಂಗಾರದ ವಿಷಯದಲ್ಲಿ ವಿದೇಶಗಳನ್ನು ನೋಡಿ ಕಲಿಯಬೇಕು. ಪಕ್ಕದ ಚೀನಾದ ಜನಸಂಖ್ಯೆಯೂ ನಮ್ಮಷ್ಟೇ ಇದೆ. ಆದರೆ ಇವರು ಅಮೆರಿಕವನ್ನು ಮೀರಿಸುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಅಲ್ಲಿ ಯಾರೂ ನಮ್ಮಂತೆ ಬಂಗಾರದ ಮೇಲೆ ಇಷ್ಟೊಂದು ವ್ಯಾಮೋಹ ಇಟ್ಟುಕೊಂಡಿಲ್ಲ. ಯಾಕೆಂದರೆ ಅದರಿಂದ ದೇಶಕ್ಕಾಗುವ ನಷ್ಟವನ್ನು ಅವರು ತಿಳಿದಿರುತ್ತಾರೆ. ಕರೆನ್ಸಿ ಎಂದೂ ರುಪಾಯಿಯಷ್ಟು ಕೆಳಗೆ ಇಳಿದೇ ಇಲ್ಲ. ಯಾಕೆಂದರೆ ಅವರು ಅಷ್ಟೊಂದು ಚಿನ್ನವನ್ನು ಆಮದು ಮಾಡಿಕೊಳ್ಳುವುದೇ ಇಲ್ಲ. ಅವರೇನಿದ್ದರೂ ದೇಶ ಕಟ್ಟುವ ತವಕದಲ್ಲಿ ಇರುತ್ತಾರೆ. ನಮ್ಮವರು ಕೇವಲ ಫೇಸ್‌ಬುಕ್, ವಾಟ್ಸಪ್, ಟ್ವಿಟರ್‌ನಲ್ಲಿ ಮಾತ್ರ ದೇಶವನ್ನು ಕಟ್ಟುತ್ತಾರೆ!
ಸರಕಾರವೆಂದರೆ ಎಲ್ಲವನ್ನೂ ಉಚಿತವಾಗಿ ನೀಡಬೇಕೆಂಬ ಕಲ್ಪನೆ ಇವರದ್ದು. ಸರಕಾರ ರಚಿಸಿದ್ದು ತಾವೆ. ಸರಕಾರ ಮಾಡುವ ಖರ್ಚು ತಮ್ಮದೇ, ಸರಕಾರದ ಆದಾಯವೂ ತಮ್ಮದೇ ಎಂಬ ಸಂಗತಿಯನ್ನು ಜನ ಅರ್ಥಮಾಡಿಕೊಳ್ಳಬೇಕು. ಅದರಲ್ಲಿಯೂ 130 ಕೋಟಿ ಸಾಕುವುದು ಎಂದರೆ ಸುಲಭದ ಮಾತಲ್ಲ. ಈಗಿನ ಕಾಲದಲ್ಲಿ ನಾಲ್ಕು ಜನರಿರುವ ಒಂದು ಸಂಸಾರವನ್ನು ಸಾಕಲು ಗಂಡ-ಹೆಂಡತಿ ಇಬ್ಬರು ದುಡಿದರೂ ಸಾಲುವುದಿಲ್ಲ. ಹೀಗಿರುವಾಗ, 130 ಕೋಟಿ ಜನರನ್ನು ಸಾಕುವುದು ಎಷ್ಟು ಕಷ್ಟ ಯೋಚಿಸಿ ನೋಡಿ.
ನಿಮ್ಮ ಮನೆಯಲ್ಲಿಯೇ ಅಣ್ಣನೋ, ತಮ್ಮನೋ ದುಡಿಯುತ್ತಿಲ್ಲವೆಂದರೆ, ಎಷ್ಟು ದಿನ ಅವರನ್ನು ಸಾಕಲು ಸಾಧ್ಯವಾಗುತ್ತದೆ. ಅದೇ ರೀತಿ ದೇಶವನ್ನು ಮುನ್ನಡೆಸುವಾಗಲೂ ಅಷ್ಟೇ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಸಣ್ಣ ಮಕ್ಕಳು, ವಯಸ್ಸಾದವರು, ಅತಿ ಮುಖ್ಯವಾಗಿ ನಮ್ಮ ಸೋಂಬೇರಿಗಳನ್ನು ಸಹ ಸಾಕಬೇಕಾಗಿದೆ. ಹಾಗಂತ ಈ ಪರಿಸ್ಥಿತಿ ಬೇರೆ ಯಾವ ದೇಶಗಳಲ್ಲಿಯೂ ಇಲ್ಲವೆಂದು ಹೇಳುತ್ತಿಲ್ಲ.
ಆದರೆ ನಮ್ಮಷ್ಟು ತೊಂದರೆಯಂತೂ ಇಲ್ಲವೇ ಇಲ್ಲ. ದೇಶದ ಜ್ವಲಂತ ಸಮಸ್ಯೆಗಳಿಗೆ ನಮ್ಮ ಬಳಿಯೇ ಪರಿಹಾರ ಇರುವಾಗ ಸರಕಾರಗಳನ್ನು ದೂರಿ ಪ್ರಯೋಜನವಿಲ್ಲ. ಇನ್ನಾದರೂ ಸ್ವಲ್ಪ ದೇಶದ ಬೆಳವಣಿಗೆಯಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸಿ. ಆದಷ್ಟು ಹೆಚ್ಚು ಹೆಚ್ಚಾಗಿ ಸಾರ್ವನಿಕ ಸಾರಿಗೆಯನ್ನು ಬಳಸಿ, ಕಾರುಗಳಿದ್ದರೆ ಶೇರ್ ಮಾಡಿ. ಎಷ್ಟು ಪೆಟ್ರೋಲ್, ಡೀಸೆಲ್ ಉಳಿಯುತ್ತದೆಯೋ ಉಳಿಯಲಿ. ಚಿನ್ನದ ವಿಚಾರದಲ್ಲಿ ಯೋಜನೆಗಳಿಂದ ಹೊರಬಂದು ಬಳಸುವುದು ಕಡಿಮೆ ಮಾಡಿ. ಹನಿ ಹನಿಗೂಡಿದರೆ ಹಳ್ಳವೆಂಬಂತೆ ಕನಿಷ್ಠ 10% ಕಡಿಮೆಯಾದರೂ ಸಹ ರುಪಾಯಿ, ಡಾಲರ್ ಎದುರು 50 ರ ಅಸುಪಾಸಿನಲ್ಲಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಆಗ ಅಗತ್ಯ ವಸ್ತುಗಳ ಬೆಲೆಯೂ ತಂತಾನೆ ಕಡಿಮೆಯಾಗುತ್ತದೆ. ನಿಜವಾದ ದೇಶಸೇವೆಯೆಂದರೆ ಇದು!

ಮೋಹನ್‌ ಕುಮಾರ್‌‌ ಬಿ.ಎನ್‌

logoblog

Thanks for reading ರುಪಾಯಿ ಮೌಲ್ಯ ಕುಸಿಯಲು ಮುಖ್ಯವಾಗಿ ನೀವೇ ಕಾರಣ!

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *