ಅಯ್ಯಪ್ಪ ಸ್ವಾಮಿ ಹರ ಹಾಗೂ ಹರಿಯ ಪುತ್ರ. ಪುರುಷೋತ್ತಮ ರಾಮ, ದೋಬಿಯೊಬ್ಬನ ಮಾತನ್ನು ಕೇಳಿ ಸೀತೆಯ ಮೇಲೆ ಅನುಮಾನ ಪಟ್ಟು ಹೆಂಡತಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ. ಗಂಡ ಕುರುಡನಾಗಿದ್ದರೂ ಗಾಂಧಾರಿ ಸಿಂಹಾಸನದ ಮೇಲೆ ಕೂರಲಿಲ್ಲ. ತಪ್ಪು ಯಾರದ್ದೋ ಗೊತ್ತಿಲ್ಲ, ಅಹಲ್ಯೆ ಕಲ್ಲಾದಳು. ರಾಮಾಯಣದಲ್ಲಿ ದಶರಥನಿಗೆ ಮೂವರು ಹೆಂಡಿರು, ಮಹಾಭಾರತದಲ್ಲಿ ದ್ರೌಪದಿಗೆ ಐವರು ಗಂಡಂದಿರು. ಏಸು ಕ್ರಿಸ್ತ ಹುಟ್ಟಿದ್ದು ಮೇರಿಗೆ. ಮೇರಿ ಆಜೀವ ಕುಮಾರಿ! ಒಂದೇ, ಎರಡೇ? ಇಂತಹ ಎಷ್ಟೋ ಇತಿಹಾಸ-ಪುರಾಣ ಸಂಗತಿಗಳನ್ನು ನೆನಪಿಸಿಕೊಳ್ಳಬಹುದು…ಕೆಲವೊಂದು ಕಥೆ, ಕೆಲವೊಂದು ಸತ್ಯ. ಕಥೆಯಾದರೇನು, ಪ್ರತಿಯೊಂದರಲ್ಲೂ ಸತ್ಯದ ವಾಸನೆ ಇದ್ದೇಇದೆ.
ಇಂದು ಸಮಾಜದಲ್ಲಿ ತಲೆ ಎತ್ತಿರುವ ಸಮಸ್ಯೆಗಳಲ್ಲಿ ಕೆಲವೊಂದಕ್ಕೆ ನೂರು ವರ್ಷಗಳ ಇತಿಹಾಸವಿದ್ದರೆ, ಇನ್ನು ಕೆಲವಕ್ಕೆ ಸಾವಿರಾರು ವರ್ಷಗಳದ್ದು. ಆ ಕಾಲದಲ್ಲಿ ಸರಿ ಎನಿಸಿದ್ದು ಈ ಕಾಲದಲ್ಲಿ ತಪ್ಪು, ಈಗ ಸರಿ ಎನಿಸಿದ್ದು ನಾಳೆ ತಪ್ಪು. ಸೂಕ್ಷ್ಮವಾಗಿ ನೋಡಿದರೆ ರಾಮಾಯಣ ಕಾಲದಲ್ಲಿ ಸಂಭವಿಸಿದ ಘಟನೆಗಳೇ ಮತ್ತೆ ಪುನಃ ಮಹಾಭಾರತದ ಕಾಲದಲ್ಲೂ ಸಂಭವಿಸುತ್ತವೆ! ಚರ್ಚುಗಳಲ್ಲಿ ನಡೆಯುವ ಶೋಷಣೆ ಹಾಗೂ ಅತ್ಯಾಚಾರ ಕೇಳಿದರೆ ಮನಸ್ಸು ಹೇಸುತ್ತದೆ. ಆದರೆ ಚರ್ಚಿನೊಳಗೆ ಆಗುತ್ತಿರುವ ವಿಷಯಗಳು ಹಿಂದಿನಂತಲ್ಲದೆ, ಈಗ ಬೀದಿಗೆ ಬಂದಿವೆ. ಇತ್ತಿಚೆಗೆ ಪೋಪ್ ಫ್ರಾನ್ಸಿಸ್, ಚರ್ಚಿನಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಆಗುತ್ತಿರುವ ಬಲಾತ್ಕಾರ ತಡೆಯಲು ಜಾಗತಿಕ ಸಮ್ಮೇಳನ ಆಗ್ರಹಿಸಿದ್ದಾರೆ. ಕುರಾನಿನಲ್ಲಿ ಸಲಿಂಗಕಾಮದ ಕುರಿತಾಗಿ ಹಲವಾರು ನಿದರ್ಶನಗಳ ಉಲ್ಲೇಖವಿದೆ. ತ್ರಿವಳಿ ತಲಾಕ್ ಇವತ್ತಿಗೂ ಬಗೆಹರಿಯದ ಒಂದು ಸಾಮಾಜಿಕ ಪಿಡುಗು. ಖುದ್ದಾಗಿ ಮುಸ್ಲಿಂ ಮಹಿಳೆಯರು ಕೋರ್ಟಿಗೆ ಬಂದು ಇದರ ವಿರುದ್ಧ ಹೋರಾಟ ನಡೆಸಿದ್ದಾರೆ.
ಶೋಷಣೆ, ಅಸಮಾನತೆ, ಲಿಂಗ ತಾರತಮ್ಯ, ಸಲಿಂಗಕಾಮ, ವಿವಾಹೇತರ ಸಂಬಂಧಗಳು…ಹೀಗೆ ಏನೇನೆಲ್ಲಾ ಯಾವತ್ತೂ ಚರ್ಚೆಯ ವಿಷಯಗಳಾಗಿವೆ. ಇಂದು ಅವನ್ನೆಲ್ಲ ಕಾನೂನಿನ ಅಡಿಯಲ್ಲಿ ತಂದಿರುವುದು ಹೊಸದಿರಬಹುದು ಆದರೆ ಇದು ಯಾವತ್ತೂ ಸಮಾಜದ ಒಳಗೆ ಅಂಟಿಕೊಂಡೇ ಇದೆ. ಆಯಾ ಕಾಲದ ಸಂವಿಧಾನವು ಆಯಾ ಕಾಲಕ್ಕೆ ತಕ್ಕಂತೆ ರಚನೆಯಾಗಿರುತ್ತದೆ. ಸಾಮಾಜಿಕ ನಡೆವಳಿಕೆಗಳು ಆಗಾಗ ಬದಲಾಗುತ್ತವೆ. ಈ ವಿಷಯದಲ್ಲಿಯೂ ಇತಿಹಾಸ ಮರುಕಳಿಸುತ್ತದೆ. ಕಾಲದಿಂದ ಕಾಲಕ್ಕೆ, ಸಮಾಜದ ಅವಶ್ಯಕತೆಗೆ ತಕ್ಕಂತೆ, ಸಮಾಜ ಬದಲಾದಂತೆ ಕಾನೂನು ಕೂಡ ಬದಲಾಗುತ್ತಾ ಹೋಗುತ್ತದೆ.
ಸೆಕ್ಷನ್ 377, ಸೆಕ್ಷನ್ 497, 198 ಮತ್ತು ಶಬರಿಮಲೆಯ ಕುರಿತಾದ ಸುಪ್ರೀಂ ಕೋರ್ಟಿನ ಮೂರು ತೀರ್ಪುಗಳು ನಮ್ಮ ಸಮಾಜದ ಹಲವಾರು ಮುಖಗಳನ್ನು ತೆರೆದಿಟ್ಟಿವೆ. ಆ್ಯಲ್ಫರ್ಡ್ ಕಿನ್ಸೇ ಎನ್ನುವ ಒಬ್ಬ ವಿಜ್ಞಾನಿ ತನ್ನ ಸಂಶೋಧನೆಯನ್ನು ಮುಂದಿಟ್ಟು ಇವತ್ತಿನ ನೂರರಲ್ಲಿ ಹತ್ತು ಜನರು ಸಲಿಂಗಕಾಮಿಗಳು ಎಂದಿದ್ದ. ಈ ಮಾಹಿತಿ ಹೊರಗೆ ಬಂದಾಗಿನಿಂದ ಅದರ ನಿಖರತೆಯ ಬಗ್ಗೆ ವಿವಾದ ನಡೆಯುತ್ತಲೇ ಇದೆ. ಆದರೆ ಈ ವರ್ಷದ ಗ್ಯಾಲಪ್ ಪೋಲ್ ಏನು ಸೂಚಿಸುತ್ತದೆ ಗೊತ್ತೇ? ಪ್ರತಿ ವರ್ಷ ಸಲಿಂಗಕಾಮಿಗಳ ಸಂಖ್ಯೆ ಹೆಚ್ಚುತ್ತಿದೆಯಂತೆ. ಅಮೆರಿಕದಲ್ಲಿ 2012ರಲ್ಲಿ ಶೇಕಡಾ 3.5ರಷ್ಟು ಜನರು ತಮ್ಮನ್ನು ಸಲಿಂಗಕಾಮಿಗಳು ಎಂದು ಗುರುತಿಸಿಕೊಂಡಿದ್ದರು. ಈ ವರ್ಷ ಅದು 4.5ಕ್ಕೆ ತಲುಪಿದೆ. ಇನ್ನೊಂದು ಸರ್ವೆ ಅಮೆರಿಕ ಶೇ.12 ಜನರು ಎನ್ನುತ್ತಿದೆ. ಹಾಗಿದ್ದರೆ ಕಾನೂನು ಬಂದಾಕ್ಷಣ ಸಮಾಜ ಇವರನ್ನು ಒಪ್ಪಲು ಶುರುಮಾಡುತ್ತದೆಯೋ? ಇಲ್ಲ. ಸಮಾಜದ ದೃಷ್ಟಿಯಲ್ಲಿ ಇವತ್ತಿಗೂ ಇದೊಂದು ಅಸಹಜ ರೀತಿಯ ವರ್ತನೆ. ಸೃಷ್ಟಿಯ ನಿಯಮವೇ ಇದಾಗಿದ್ದರೆ, ಕಾಲದ ಮದ್ದಿನ ಮೂಲಕ ದಿನಗಳು ಕಳೆದಂತೆ ಸಮಾಜಕ್ಕೆ ಇದೂ ಸಹಜವೆನಿಸಬಹುದು. ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಅದನ್ನು ಗೌರವಿಸುವ ಸಮಾಜ ನಮ್ಮದಾಗಬಹುದೇ? ಬೇರೆ ಬೇರೆ ಧರ್ಮದ ಜನರು ತಮ್ಮ ಧರ್ಮದ ಸಂವಿಧಾನದಲ್ಲಿ ಇದನ್ನು ಅಳವಡಿಸಿಕೊಳ್ಳುವರೇ? ಧರ್ಮ, ಕಾನೂನು ಹಾಗೂ ನಮ್ಮ ಭಾವನೆಗಳ ಸಂಘರ್ಷಕ್ಕೆ ಪಕ್ಕಾದ ವಿಷಯ ಇದು.
ಮೊದಲನೆಯದಾಗಿ ನೋಡಿದರೆ, ಸೆಕ್ಷನ್ 497 ಸುಮಾರು ಒಂದೂವರೆ ಶತಮಾನದ ಹಳೆಯದು. ಬೇರೊಬ್ಬನ ಪತ್ನಿ ಜತೆ ಒಬ್ಬ ಪುರುಷ, ಆಕೆಯ ಪತಿಯ ಸಹಮತವಿಲ್ಲದೆ ದೈಹಿಕ ಸಂಪರ್ಕ ಸಾಧಿಸಿದಲ್ಲಿ ಅಂಥ ಕೃತ್ಯ ಅಪರಾಧ ಎನಿಸುತ್ತದೆ. ಕಾಯಿದೆ ಪ್ರಕಾರ ವಿವಾಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಿದಾತ ಅಪರಾಧಿ ಎನಿಸುತ್ತಾನೆ. ಆದರೆ ಸಂಬಂಧ ಬೆಳೆಸಿದ ಮಹಿಳೆಗೆ ಶಿಕ್ಷೆ ಅನ್ವಯವಾಗುವುದಿಲ್ಲ. ಬ್ರಿಟಿಷ್ ಸಾಮ್ರಾಜ್ಯದ ಕಾಲದಲ್ಲಿ ಆದ ಮೊದಲ ಡ್ರಾಫ್ಟ್ ನಲ್ಲಿ ಅನೈತಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಿರಲಿಲ್ಲ, ಎರಡನೆಯ ಕರಡಿನಲ್ಲಿ ಇದನ್ನು ಬದಲಾವಣೆ ಮಾಡಲಾಯಿತು. ಹೆಣ್ಣನ್ನು ಅಪರಾಧದಿಂದ ಹೊರಗಿಡಲು ಅದರಲ್ಲಿ ಕಾರಣಗಳಿದ್ದವು. ಬಾಲ್ಯವಿವಾಹ, ಬಹುಪತ್ನಿತ್ವ, ವಯಸ್ಸಿನ ಅಂತರಗಳು ಮುಂತಾದವನ್ನು ಪರಿಗಣಿಸಿ ಹೀಗೆ ಮಾಡಲಾಗಿತ್ತು. ಇಂದು ಹೆಚ್ಚಾಗಿ ಇವೆಲ್ಲ ನಿಂತಿವೆ.
ಅಂದು ಸಮಾಜವು ಹೆಣ್ಣಿನ ವಿವಾಹೇತರ ಸಂಬಂಧಗಳನ್ನು ಸಹಿಸುತ್ತಿರಲಿಲ್ಲ, ಹೆಣ್ಣು ಗಂಡಿನ ಸ್ವತ್ತಾಗಿದ್ದಳು. ಅವಳಿಗೆ ನಾಲ್ಕು ಗೋಡೆಯ ಹೊರಗೆ ಹೋಗಲು ಸ್ವಾತಂತ್ರ್ಯ ಇರಲಿಲ್ಲ. ಮಾನವ ಸಹಜ ದೇಹದ ಬಯಕೆಗಳಿಗೆ ಓಗೊಟ್ಟು ಅನೈತಿಕ ಸಂಬಂಧ ಏರ್ಪಟ್ಟಾಗ ಹೆಣ್ಣಿಗೆ ಕಾನೂನಿನ ಮೂಲಕ ಶಿಕ್ಷೆ ಆಗುತ್ತಿರಲಿಲ್ಲ, ನಿಜ. ಆದರೆ ಸಮಾಜದಲ್ಲಿ ಅವಳ ಬಾಳು ನರಕಸದೃಶವಾಗುತ್ತಿತ್ತು. ಇವತ್ತಿನ ದಿನದಲ್ಲಿ ಗಂಡಿನಂತೆ ಹೆಣ್ಣು ಸಹ ಸ್ವತಂತ್ರಳಾಗಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಸೃಷ್ಟಿಯಾದ ಕಾನೂನುಗಳು ಇಂದು ಅಕಾಲಿಕ ಅನಿಸಿವೆ. ಸುಪ್ರೀಂ ಕೋರ್ಟ್ ತೀರ್ಪು ಅನೈತಿಕ ಸಂಬಂಧಗಳಿಗೆ ಒಪ್ಪಿಗೆ ನೀಡಿದೆಯೇ? ಇಲ್ಲ. ಅದನ್ನು ಮಾನವನ ಮೂಲಭೂತ ಹಕ್ಕುಗಳ ವಿಷಯವಾಗಿ ನೋಡಿದೆ.
ಒಬ್ಬ ಹೆಣ್ಣಿಗೆ ತನ್ನ ಜೊತೆಗಾರನಿಂದ ದೈಹಿಕವಾದ ಸುಖ ಸಿಗದೇ ಹೋದಾಗ ಆಕೆ ಇನ್ನೊಬ್ಬರ ಸಂಪರ್ಕದಲ್ಲಿ ಬರಬಹುದು. ಇಬ್ಬರಲ್ಲೂ ಅದು ಇಲ್ಲದೇ ಹೋದರೆ ವಿಚ್ಛೇದನ ಪಡೆಯಬಹುದು. ಆಗ ಇದು ಅಪರಾಧ ಆಗುವುದಿಲ್ಲ. ಜನರು ಇದನ್ನು ತಪ್ಪಾಗಿ, ಅನೈತಿಕ ಸಂಬಂಧವನ್ನು ಸಮಾಜ ಸಹಿಸುವ ಮಟ್ಟಕ್ಕೆ ಬಂದಿದೆ ಎನ್ನುತ್ತಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ಅದರ ಅಪಭ್ರಂಶ ಮಾಡುವುದೇ ಇಂದಿನ ಸಮಾಜದ ಇನ್ನೊಂದು ಮುಖ. ನಮ್ಮ-ನಿಮ್ಮೆಲ್ಲರ ಬೇಜವಾಬ್ದಾರಿ!
ಇದು ಸರಿಯೋ, ತಪ್ಪೋ ಎನ್ನುವ ಬದಲು ವಿವಾಹೇತರ ಸಂಬಂಧಗಳು ಯಾಕೆ ಹುಟ್ಟಿಕೊಳ್ಳುತ್ತವೆ ಎನ್ನುವುದರ ಕುರಿತು ಚರ್ಚಿಸುವುದು ಬಹಳ ಮುಖ್ಯ. ಯಾರಿಗೂ ಅನೈತಿಕ ಸಂಬಂಧ ಬೇಡ, ಆದರೆ ಅದು ಹುಟ್ಟುತ್ತದೆ. ಅದಕ್ಕೆ ಕಾರಣ ಕೂಡ ಇದೆ. ಇವತ್ತಿಗೂ ಹೆಚ್ಚಾಗಿ ‘ಅರೇಂಜ್ಡ್ ಮ್ಯಾರೇಜ್’ ನಮ್ಮಲ್ಲಿ ರೂಢಿಯಲ್ಲಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹನೆಯಿಲ್ಲ, ಎಲ್ಲವೂ ತನ್ನಂತೆ ಆಗಬೇಕು ಎಂದು ಪತಿ-ಪತ್ನಿ ಇಬ್ಬರೂ ಬಯಸುತ್ತಾರೆ. ಲವ್ ಮ್ಯಾರೇಜ್ ಕೂಡ ಹಳಿ ತಪ್ಪಿದಾಗ ಇನ್ನೊಂದು ವಿಚಿತ್ರ ತಿರುವು ಪಡೆಯುತ್ತದೆ.
ಇಂದಿನ ನಮ್ಮ ಬದುಕಿನಲ್ಲಿ ಸಂಬಂಧಗಳಿಗಿಂತ ಹಣ, ಅಂತಸ್ತು, ಪ್ರತಿಷ್ಠೆ, ಐಶಾರಾಮಿ ಜೀವನವೇ ಆದ್ಯತೆ ಪಡೆದಿದೆ. ವಿದೇಶ, ವ್ಯಾಪಾರ, ಓಡಾಟ, ಸಮಯದ ಇವೆಲ್ಲ ಸೇರಿ ದೇಹಕ್ಕೆ ಬೇಕಾದ ಮೂಲಭೂತ ಸುಖವನ್ನು ಒಬ್ಬರಿಗೊಬ್ಬರು ಕೊಡಲು ಗಂಡ ಅಥವಾ ಹೆಂಡತಿ ವಿಫಲರಾಗಿದ್ದಾರೆ. ತೀವ್ರವಾದ ಮಾನಸಿಕ ಒತ್ತಡಗಳು ದೇಹದ ಬಯಕೆಗಳನ್ನು ಮರೆಮಾಡಿವೆ. ಇದೇ ಗಂಡ-ಹೆಂಡಿರನ್ನು ದೂರ ಮಾಡಿದೆ. ಸಮಾಜಕ್ಕೆ ಹೆದರುವ ದಿನ ಇದಲ್ಲ. ಇಬ್ಬರೂ ಕೂಡ ಸಮಾಜವನ್ನು ಒಂಟಿಯಾಗಿಯೇ ಎದುರಿಸಿ ನಿಲ್ಲಬಲ್ಲವರಾಗಿದ್ದಾರೆ. ಆದರೂ ಈ ವೈಯಕ್ತಿಕ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ವಿವಾಹೇತರ ಸಂಬಂಧಗಳಲ್ಲಿ ಕೆಲವರು ಅದಕ್ಕೆ ಉತ್ತರ ಹುಡುಕುತ್ತಾರೆ.
ಹಾಗಿದ್ದರೆ ಇದನ್ನು ರದ್ದು ಮಾಡಿದ್ದು ಸರಿಯೇ? ಸೆಕ್ಷನ್ 497 ಹಾಗೂ ಸೆಕ್ಷನ್ 198 ರದ್ದುಪಡಿಸದೇ ಹೋದರೆ ಅದರಿಂದ ಉದ್ಭವಿಸುವ ಸನ್ನಿವೇಶ ಸಾಕಷ್ಟು ಸಂಕೀರ್ಣವಾಗಿದೆ. ಇಂದು ಒಂಟಿ ಪಾಲಕರ ಸಂಖ್ಯೆ ಎಷ್ಟು ಸಾಮಾನ್ಯ ಆಗಿದೆ ಎಂದರೆ ‘ಗಂಡ ಹೆಂಡತಿ ಮಕ್ಕಳೊಂದಿಗೆ ಒಟ್ಟಿಗೆ ಇದ್ದಾರಲ್ಲ, ಅದೇ ದೊಡ್ಡ ವಿಷಯ’ ಎನ್ನುವಷ್ಟಕ್ಕೆ ಬಂದಿದೆ. ಇದೆಲ್ಲದರ ಪ್ರತಿಬಂಬವೇ ಸುಪ್ರೀಂ ಕೋರ್ಟಿನ ತೀರ್ಪು. ಈ ಮೊದಲು ವಿವಾಹೇತರ ಸಂಬಂಧಗಳು ಇರಲಿಲ್ಲ ಅಂತಲ್ಲ, ಆದರೆ ಇಂದು ಇದು ಒಂದು ತರಹದ ‘ಲೈಫ್ ಸ್ಟೈಲ್ ಡಿಸೀಸ್’ ಸೆಕ್ಷನ್ 497ನ್ನು, ಸೆಕ್ಷನ್ 198ನ್ನು ರದ್ದು ಮಾಡಿದರೆ ಮದುವೆ ಎನ್ನುವ ಒಂದು ಪವಿತ್ರ ಪದ್ಧತಿಯನ್ನೇ ಅಳಿಸಿದಂತೆ ಅಲ್ಲವೇ ಎಂಬ ಪ್ರಶ್ನೆ ಮೂಡಿದರೆ, ಪಾವಿತ್ರ್ಯ ಹಾಗೂ ವ್ಯಭಿಚಾರ ಎರಡೂ ಒಟ್ಟಿಗೇ ಕೂತು ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಇದಕ್ಕೆ ಉತ್ತರ ನಮ್ಮಲ್ಲಿಯೇ ಹುಟ್ಟಬೇಕು. ಇದನ್ನು ನಾವೇ ಸರಿ ಮಾಡಬಲ್ಲೆವು, ಕೋರ್ಟ್ ಅಲ್ಲ!
ಶಬರಿಮಲೆಯ ವಿಷಯಕ್ಕೆ ಬಂದಾಗ ಅಲ್ಲಿ ಸಮಾಜದ ಹತ್ತಾರು ಮುಖಗಳಿವೆ. ಶಬರಿಮಲೆಗೆ ಹೆಣ್ಣುಮಕ್ಕಳು ಹೋಗುವ ಹಾಗಿರಲಿಲ್ಲ. ಹೋಗುವುದೇ ಆದರೆ ಅದಕ್ಕೆ ಮಿತಿ ಇತ್ತು. ಇದು ಎಂಟು ನೂರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಇಂದು ಅಸಮಾನತೆಯ, ಲಿಂಗ ತಾರತಮ್ಯ ಹೋಗಲಾಡಿಸುವ ಹೆಸರಿನಲ್ಲಿ ಆ ಪದ್ಧತಿಗೆ ತೆರೆ ಬಿದ್ದಿದೆ. ಈ ತೀರ್ಪು ಸ್ವಾಗತಾರ್ಹವೇ. ಆದರೆ ಇಲ್ಲಿ ಎರಡು ವಿಷಯವನ್ನು ಬಹಳ ಗಂಭೀರವಾಗಿ ನೋಡಬೇಕು. ಈ ತೀರ್ಪು ಕೇವಲ ಶಬರಿಮಲೆಯ ದೇವಸ್ಥಾನಕ್ಕೆ ಸೀಮಿತವಾಗಿರಬಾರದು. ದೇವಸ್ಥಾನ, ಮಸೀದಿ, ಚರ್ಚು, ಗುರುದ್ವಾರ, ಎಲ್ಲದಕ್ಕೂ ಅನ್ವಯ ಆಗಬೇಕು. ಇನ್ನೊಂದು ವಿಷಯ ಅಂದರೆ ಕೋರ್ಟ್ ತೀರ್ಪು ಜನರ ಬದಲಾಯಿಸಬಹುದೇ? ಎಂಟು ನೂರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯನ್ನು ರಾತ್ರಿ ಬೆಳಗಾಗುವುದರೊಳಗೆ ಜನರು ಬದಲಾಯಿಸಬಹುದೇ? ಅಥವಾ ಈ ಒಂದು ಧರ್ಮದ ಪದ್ಧತಿಯನ್ನು ಬದಲಾಯಿಸುವ ಕೋರ್ಟಿನ ತೀರ್ಪು,ಕೇವಲ ಬುದ್ಧಿಜೀವಿಗಳು, ವಿಚಾರವಾದಿಗಳು ತಮ್ಮ ಬೇರನ್ನು ಗಟ್ಟಿ ಮಾಡಿಕೊಳ್ಳಲು ಬಳಸುವ ಸಾಧನ ಆಗಿಬಿಡುತ್ತದೆಯೆ?
ಒಟ್ಟಾರೆಯಾಗಿ ಹೇಳಬೇಕೆಂದರೆ, ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೊಟ್ಟ ಮೂರು ಮಹತ್ವದ ತೀರ್ಪುಗಳು ನಮ್ಮ ಸಮಾಜದ ನೂರು ಮುಖಗಳನ್ನು ತೆರೆದಿಟ್ಟಿವೆ ಎನ್ನಲಡ್ಡಿಯಿಲ್ಲ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೊಟ್ಟ ಮೂರು ಮಹತ್ವದ ತೀರ್ಪುಗಳು ನಮ್ಮ ಸಮಾಜದ ನೂರು ಮುಖಗಳನ್ನು ತೆರೆದಿಟ್ಟಿವೆ ಎನ್ನಲಡ್ಡಿಯಿಲ್ಲ.
No comments:
Post a Comment