ಡಾ. ಬಾಬು ಕೃಷ್ಣಮೂರ್ತಿ
ಘನವ್ಯಕ್ತಿತ್ವದ, ಆದರ್ಶಗಳಿಗಾಗಿ ಜೀವಿಸಿದ ಮತ್ತು ಭಾರತೀಯ ವೇದೋಕ್ತ ಜೀವನದ ಆರಾಧಕನಾಗಿದ್ದ ಅಮೀರ್ಚಂದ್, ತಾನು ಅನ್ನವಿಟ್ಟು ಸಲಹಿದ್ದ ಸಾಕುಮಗನ ದ್ರೋಹಕ್ಕೆ ಬಲಿಪಶುವಾಗಬೇಕಾಯಿತು. ಇಷ್ಟಾಗಿಯೂ, ಬ್ರಿಟಿಷರಿಗೆ ತಲೆಬಾಗದೆ, ನಿಶ್ಚಿಂತೆಯಿಂದ ಗಲ್ಲುಶಿಕ್ಷೆಗೆ ಕೊರಳೊಡ್ಡುವ ಮೂಲಕ ಅಪ್ರತಿಮ ದೇಶಭಕ್ತ ಎನಿಸಿಕೊಂಡ.
ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ 1912ರ ಡಿಸೆಂಬರ್ 12ರಂದು ಘಟಿಸಿದ ಘಟನೆ ಅತ್ಯಂತ ಮಹತ್ವದ್ದು; ಕಾರಣ ಅಂದು, ದೆಹಲಿಯ ಜನನಿಬಿಡ ಚಾಂದನಿ ಚೌಕ್ನ ಮೊಘಲ್ ಬಜಾರ್ನಲ್ಲಿ, ಬ್ರಿಟಿಷ್ ಆಡಳಿತದ ಸವೋಚ್ಚ ಪ್ರತಿನಿಧಿಯಾಗಿದ್ದ ವೈಸ್ರಾಯ್ ಲಾರ್ಡ್ ಹಾರ್ಡಿಂಜ್ ಮೇಲೆ ಬಾಂಬ್ ಸ್ಪೋಟಿಸಲಾಯಿತು. ದೆಹಲಿಯಿಂದ ಲಂಡನ್ವರೆಗೂ ಹೋಗಿ ಮುಟ್ಟಿದ ಆ ಸ್ಪೋಟದ ಶಬ್ದ ಬ್ರಿಟಿಷ್ ಆಡಳಿತದ ನಿದ್ದೆಯನ್ನು ಕೆಡಿಸಿತು.
ಹಾಡುಹಗಲೇ, ಹೆಚ್ಚಿನ ರಕ್ಷಣಾವ್ಯವಸ್ಥೆಯಲ್ಲಿ ಸಾಗಿದ್ದ ಆ ಮೆರವಣಿಗೆಯ ಮೇಲೆ ಬಾಂಬ್ ಹೇಗೆ ಬಿತ್ತು, ಎಲ್ಲಿಂದ ಬಿತ್ತು ಎಂದು ಸರ್ಕಾರದ ಗುಪ್ತಚರ ಇಲಾಖೆ ಎಷ್ಟು ತಲೆ ಕೆಡಿಸಿಕೊಂಡರೂ ಸ್ವಲ್ಪವೂ ಸುಳಿವು ದೊರೆತಿರಲಿಲ್ಲ. ಒಂದು ಕಡೆ ಅದು ಗುಪ್ತಚರ ವಿಭಾಗದ ವೈಫಲ್ಯಕ್ಕೆ ಸಾಕ್ಷಿಯಾದರೆ ಇನ್ನೊಂದು ಕಡೆ ಕ್ರಾಂತಿಕಾರಿ ಯುವಕರ ಚಾಕಚಕ್ಯತೆಗೆ ಉದಾಹರಣೆಯಾಗಿತ್ತು. ಇಡೀ ಚಾಂದನಿ ಚೌಕ ಪ್ರದೇಶವನ್ನು ಇಂಚಿಂಚೂ ಬಿಡದೆ ಜಾಲಾಡಿದರೂ ಚಿಕ್ಕ ಸುಳಿವೂ ದೊರೆಯಲಿಲ್ಲ. ವೈಸ್ರಾಯ್ ಕಚೇರಿಯಿಂದ ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳ ಮೇಲೆ ಒತ್ತಡ ಮಾತ್ರವಲ್ಲ ಅವರ ವೈಫಲ್ಯಕ್ಕೆ ದಿನನಿತ್ಯವೂ ಛೀಮಾರಿ!
ಚಳ್ಳೆಹಣ್ಣು ತಿನ್ನಿಸಿದ ಕ್ರಾಂತಿಕಾರಿಗಳು: ಆದರೆ ಚಾಂದನಿ ಚೌಕದ ಘಟನೆಗೆ ಕೊಲ್ಕತ್ತಾದ ಅಪ್ಪರ್ ಸರ್ಕ್ಯುಲರ್ ರಸ್ತೆಯ ಒಂದು ಮನೆಯಲ್ಲಿ ಮೊದಲ ಚಿಕ್ಕ ಸುಳಿವು ದೊರೆಯಿತೆಂದರೆ ಆಶ್ಚರ್ಯವಾಗದಿರದು. ಎಲ್ಲಿಯ ಚಾಂದನಿ ಚೌಕ್? ಎಲ್ಲಿಯ ಅಪ್ಪರ್ ಸರ್ಕ್ಯುಲರ್ ರಸ್ತೆ! ರಾಸ್ಬಿಹಾರಿ ಬೋಸ್ನ ನೇತೃತ್ವದ ಕ್ರಾಂತಿಕಾರಿಗಳ ಕೈಚಳಕಕ್ಕೆ ಇದೊಂದು ಕನ್ನಡಿಯಾಗಿತ್ತು.
ಲಾಲಾ ಹರದಯಾಳ್ ಪಂಜಾಬ್ನಲ್ಲಿ ಕೆಲ ಧೀರಯೋಧರನ್ನು -ಅವರ ಜತೆ ಒಬ್ಬ ಸ್ವಜನದ್ರೋಹಿಯನ್ನೂ- ಒಟ್ಟುಗೂಡಿಸಿ ಕ್ಷಾತ್ರತೇಜದಿಂದ ಕೂಡಿರುವ ಕ್ರಾಂತಿಕಾರ್ಯದ ಕುರಿತು ಅವರಲ್ಲಿ ಆಸಕ್ತಿ ಮೂಡಿಸಿದ್ದ. ಆದರೆ ವಿದೇಶಗಳಲ್ಲಿ ಕ್ರಾಂತಿ ಸಂಘಟನೆ ಹಾಗೂ ಅಧ್ಯಯನದ ಸಲುವಾಗಿ ಹರದಯಾಳ್ ಅಮೆರಿಕಕ್ಕೆ ಹೋಗಬೇಕಾಗಿ ಬಂದಾಗ ರಂಗಪ್ರವೇಶ ಮಾಡಿದವರೇ ರಾಸ್ಬಿಹಾರಿ ಬೋಸ್ ಮತ್ತು ಶಚೀಂದ್ರನಾಥ ಸನ್ಯಾಲ್. ರಾಸ್ಬಿಹಾರಿಯ ಮೂಲ ಕೊಲ್ಕತಾ ಹಾಗೂ ಡೆಹ್ರಾಡೂನ್ಗಳಾದರೆ ಶಚೀಂದ್ರನಾಥ ಸನ್ಯಾಲ್ ಬಂಗಾಳ ಹಾಗೂ ಪಂಜಾಬ್ಗಳ ಮಧ್ಯಭಾಗದಲ್ಲಿದ್ದ ವಾರಾಣಸಿ ಮೂಲದವನು.
ಹರದಯಾಳ್ ಸಂಘಟಿಸಿದ್ದ ಚಿಕ್ಕಗುಂಪು ರಾಸ್ಬಿಹಾರಿಗೆ ದೊರೆತು ಅವನ ಕೆಲಸವನ್ನು ಸುಲಭಸಾಧ್ಯ ಮಾಡಿತ್ತು. ಮೊದಲೇ ದೇಶಪ್ರೇಮದಿಂದ ತುಂಬಿದ್ದ ಈ ಕಾರ್ಯಸಾಧಕರ ಗುಂಪು ರಾಸ್ಬಿಹಾರಿಯ ಪ್ರೇರಣಾತ್ಮಕ ಹಾಗೂ ಜಾಣತನದ ನಾಯಕತ್ವದಿಂದ ಮತ್ತಷ್ಟು ಉತ್ಸಾಹದಿಂದ ಮುನ್ನುಗ್ಗಿತು.
ಚಾಂದನಿ ಚೌಕ್ ಪ್ರಕರಣದ ನಂತರ ಸಾಲುಸಾಲಾಗಿ ಮತ್ತಷ್ಟು ಬಾಂಬ್ಸ್ಪೋಟ ಪ್ರಕರಣಗಳು ನಡೆದು ಪೊಲೀಸರಿಗೆ ಹುಚ್ಚುಹಿಡಿದಂತಾಯಿತು. 1913ರ ಮೇ ತಿಂಗಳಲ್ಲಿ ಲಾಹೋರ್ನ ಲಾರೆನ್ಸ್ ಗಾರ್ಡನ್ ಬಳಿ, ನಂತರ ಮೈಮೆನ್ಸಿಂಗ್, ಭದ್ರೇಶ್ವರ್, ಮೌಲ್ವಿ ಬಜಾರ್ ಎಂಬ ಸ್ಥಳಗಳಲ್ಲೂ ಸ್ಪೋಟಗಳಾಗಿ ಪೊಲೀಸರು ಛಲದಿಂದ ಕಾರ್ಯಪ್ರವೃತ್ತರಾದರು. ಹಲವು ಬಂಧನಗಳಾದರೂ ಒಂದು ವರ್ಷದ ನಂತರವೂ ವೈಸ್ರಾಯ್ ಬಾಂಬ್ ಪ್ರಕರಣದ ಯಾವ ಸುಳಿವೂ ಸಿಗಲಿಲ್ಲ. ಆದರೆ ಪೊಲೀಸರ ತಪಾಸಣೆ ಮುಂದುವರಿದೇ ಇತ್ತು. ಆಗ ಕೊಲ್ಕತಾದ ರಾಜ ಬಜಾರ್ ಎಂಬ ಪ್ರದೇಶದಲ್ಲಿದ್ದ ಮನೆಯೊಂದರ ಮೇಲೆ ದಾಳಿಯಾಯಿತು. ಆ ವೇಳೆಗೆ ಪೊಲೀಸ್ ಗುಪ್ತಚರ ಸೂತ್ರಗಳು, ರಾಸ್ಬಿಹಾರಿಯೇ ಈ ಎಲ್ಲ ಪ್ರಕರಣಗಳ ಹಿಂದಿನ ಸಂಯೋಜಕ ಎಂಬ ಮಾಹಿತಿ ಪಡೆದಿದ್ದವು. ಅವನಿಗಾಗಿಯೇ ರಾಜ ಬಜಾರ್ ಮನೆಯ ಮೇಲೆ ಅವರು ದಾಳಿ ನಡೆಸಿದ್ದು. ಪೊಲೀಸರು ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರುವಷ್ಟು ಚತುರನಾಗಿದ್ದ ರಾಸ್ಬಿಹಾರಿ, ಪೊಲೀಸರು ಬರುವ ಮೊದಲೇ ಅಲ್ಲಿಂದ ಪಲಾಯನ ಮಾಡಿದ್ದ. ಆದರೆ ಅಲ್ಲಿ ಅವರಿಗೆ ಕೆಲವು ಬಾಂಬ್ಗಳು, ಒಂದಷ್ಟು ಪತ್ರಗಳಿದ್ದ ಒಂದು ಕಟ್ಟು ದೊರೆತವು.
ಮನೆಮುರುಕ ‘ಎಂ.ಎಸ್.’: ಅದು ಮಾಸ್ಟರ್ ಅಮೀರ್ ಚಂದ್ ಎಂಬ ಕ್ರಾಂತಿಕಾರಿಯ ಪತ್ರವ್ಯವಹಾರದ ಕಟ್ಟು. ಅದರಲ್ಲಿ ಅವಧ್ ಬಿಹಾರಿ ಎಂಬ ಕ್ರಾಂತಿಕಾರಿ ‘ಎಂ.ಎಸ್.’ ಎಂಬಾತನಿಗೆ ಬರೆದ ಪತ್ರ ಒಂದಿತ್ತು.
ಆ ಅವಧ್ ಬಿಹಾರಿ, ಅಮೀರ್ಚಂದ್ನ ಮನೆಯಲ್ಲಿ ತಂಗುತ್ತಿದ್ದನೆಂಬ ಸುಳಿವು ಸಿಕ್ಕಿ ಪೊಲೀಸರು ಆ ಮನೆಯನ್ನು ಸುತ್ತುವರಿದು ಅವಧ್ ಬಿಹಾರಿಯನ್ನು ವಶಕ್ಕೆ ಪಡೆದರು. ಆಗ ಅಮೀರ್ಚಂದ್ ಮನೆಯಲ್ಲಿ ಕೆಲವು ಕ್ರಾಂತಿಕಾರಿ ಪತ್ರಗಳು, ಬಾಂಬ್ನ ಹೊರಕವಚಗಳೂ ದೊರೆತವು. ಅದೇ ವೇಳೆ ‘ಎಂ.ಎಸ್.’ ಎಂಬುವನು ದೀನಾನಾಥನೆಂಬ ಕ್ರಾಂತಿಕಾರಿ ಎಂಬ ಸಂಗತಿಯೂ ಹೊರಬಿತ್ತು. ದೀನಾನಾಥ ಕ್ರಾಂತಿಕಾರಿಗಳಲ್ಲೊಬ್ಬ ಎಂಬುದು ಗೊತ್ತಾಗುತ್ತಿದ್ದಂತೆ ಲಾಹೋರ್ನಲ್ಲಿ ಎಷ್ಟು ದೀನಾನಾಥರಿದ್ದರೋ ಅಷ್ಟೂ ಜನರ ಚಲನವಲನಗಳ ಮೇಲೆ ಪೊಲೀಸರು ಕಣ್ಣಿರಿಸಿದ್ದರು. ಅವರ ಪೈಕಿ ಬಲವಾದ ಅನುಮಾನದ ಮೇಲೆ ನಾಲ್ವರು ದೀನಾನಾಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರಿಗೆ ಬೇಕಾದ ದೀನಾನಾಥ ದೊರಕಿದ! ಅವನು ಹೆದರುತ್ತ ಅಳುತ್ತ ಇದ್ದಿದ್ದು ಪೊಲೀಸರಿಗೆ ಮುಂದಿನ ಕ್ರಮಗಳಿಗೆ ದಾರಿಮಾಡಿತು. ಅವನನ್ನು ಮೂರನೆ ಡಿಗ್ರಿ ಶಿಕ್ಷೆಗಳಿಗೆ ಒಳಪಡಿಸಿದಾಗ, ಹಾರ್ಡಿಂಜ್ ಬಾಂಬ್ ಪ್ರಕರಣ ಕುರಿತು ಅಲ್ಲಿಯವರೆಗೆ ರಹಸ್ಯವಾಗಿದ್ದ ಅನೇಕ ಮಾಹಿತಿಗಳೂ ಅದರಲ್ಲಿನ ಪಾತ್ರಧಾರಿಗಳ ಹೆಸರುಗಳೂ ಹೊರಬಿದ್ದವು. ರಾಸ್ಬಿಹಾರಿಯು ಅಮೀರ್ಚಂದ್ಗೆ ಎಲ್ಲ ಜವಾಬ್ದಾರಿಗಳನ್ನು ಒಪ್ಪಿಸಿದ್ದು ಮತ್ತು ವೈಸ್ರಾಯ್ ಬಾಂಬ್ ಸ್ಫೋಟ ಪ್ರಕರಣದ ಪಿತೂರಿಯ ಹಿನ್ನೆಲೆಯನ್ನೆಲ್ಲ ದೀನಾನಾಥ ಹೇಳಿದ. ಅಲ್ಲಿಂದ ಪೊಲೀಸರ ಕೆಲಸ ಸುಲಭವಾಯಿತು. ಅಮೀರ್ಚಂದ್, ಅವಧ್ ಬಿಹಾರಿ, ಲಾಲಾ ಹನುಮಂತ ಸಹಾಯ್, ಮಹಾತ್ಮ ಹಂಸರಾಜ್ ಎಂಬ ಆರ್ಯಸಮಾಜದ ಹಿರಿಯ ನಾಯಕರ ಮಗ ಬಲ್ರಾಜ್ ಭಲ್ಲಾ ಮುಂತಾದವರು ಬಂಧಿತರಾದರು.
ಅಮೀರ್ಚಂದ್ನದು ವಿಶಿಷ್ಟ ವ್ಯಕ್ತಿತ್ವ. ನೋಡಲಿಕ್ಕೆ ಕೋತಿಯಂತೆ ಕುರೂಪಿಯಾಗಿದ್ದೇನೆಂದು ಸ್ವತಃ ‘ಬಂದರ್ ಮಾಸ್ತರ್’ ಎಂದು ಪರಿಹಾಸ್ಯ ಮಾಡಿಕೊಳ್ಳುವಷ್ಟು ಹಾಸ್ಯಪ್ರಜ್ಞೆ ಹೊಂದಿದ್ದ. ಅವನು ದೆಹಲಿಯ ಕೇಂಬ್ರಿಜ್ ಮಿಷನ್ ಹೈಸ್ಕೂಲ್ನಲ್ಲಿ ಉಪಾಧ್ಯಾಯನಾಗಿದ್ದು ಜನಪ್ರಿಯನೂ ಆಗಿದ್ದ.
ಮಹರ್ಷಿ ದಯಾನಂದ ಸರಸ್ವತಿಗಳ ಆರ್ಯಸಮಾಜ ಪಂಜಾಬಿನಲ್ಲಿ ವಿಶಾಲವಾಗಿ ಪಸರಿಸಿತ್ತು. ಅನೇಕ ಬುದ್ಧಿವಂತರು ಅದರ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದರು. ಅಮೀರ್ಚಂದ್ ಕೂಡ ಆರ್ಯಸಮಾಜದ ವಿಚಾರಗಳನ್ನು ಪಸರಿಸುತ್ತಿದ್ದ; ಹಿಂದೂಗಳಲ್ಲಿನ ಮೂಢನಂಬಿಕೆಗಳನ್ನು ತೀವ್ರವಾಗಿ ಖಂಡಿಸಿ ವೇದೋಕ್ತ ಜೀವನವಿಧಾನವನ್ನು ಅನುಸರಿಸುವಂತೆ ಪ್ರಚಾರಮಾಡುತ್ತಿದ್ದ. 1905ರಲ್ಲಿ ಬಂಗಾಳ ವಿಭಜನೆಯ ಉತ್ಪಾತದಲ್ಲಿ ಆರ್ಯಸಮಾಜ ಚಟುವಟಿಕೆ ಗಳೊಂದಿಗೆ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಮಾರ್ಗಕ್ರಮಣ ಪ್ರಾರಂಭಿಸಿದ.
ಅಮೀರ್ಚಂದ್ ಹಿನ್ನೆಲೆ: ಈತ ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದ ಧೀಮಂತ. ಅಂದಿನ ಹೈದರಾಬಾದ್ ಸಂಸ್ಥಾನ (ಈಗ ಪಾಕಿಸ್ತಾನದಲ್ಲಿದೆ)ದ ವಿಧಾನ ಪರಿಷತ್ತಿನ ಕಾರ್ಯದರ್ಶಿಯಾಗಿದ್ದ ರಾಯ್ ಹುಕುಮ್ಂದ್ನ ಮಗ. ಹುಕುಮ್ಂದ್ ಒಮ್ಮೆ ಇಂಗ್ಲೆಂಡ್ಗೂ ಹೋಗಿಬಂದಿದ್ದ. ಅಲ್ಲಿ ಅವನ ಕಾನೂನುಜ್ಞಾನದ ಬಗ್ಗೆ ಸ್ವತಃ ವಿಕ್ಟೋರಿಯಾ ಮಹಾರಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಳಂತೆ. ಅವನು ಕಾನೂನು ಕಾಲೇಜಿನ ಪ್ರಿನ್ಸಿಪಾಲನೂ ಆಗಿದ್ದ. ‘ಛಿಠ ಒಛಜ್ಚಿಚಠಿಚ’ ಎಂಬ ಕಾನೂನುಸಂಬಂಧಿ ಪಠ್ಯಪುಸ್ತಕವನ್ನೂ ರಚಿಸಿ ವಿದ್ವತ್ವಲಯದಲ್ಲಿ ಹೆಸರುಮಾಡಿದ್ದ. ಬ್ರಿಟಿಷ್ ಸರ್ಕಾರದ ಆಶ್ರಿತನಾಗಿದ್ದ ಹುಕುಮ್ಂದ್ಗೆ ಮಗನ ದೇಶಭಕ್ತಿಭರಿತ ಕಾರ್ಯಚಟುವಟಿಕೆಗಳು ಒಪ್ಪಿಗೆಯಾಗದೆ ಅವರಿಬ್ಬರ ನಡುವೆ ಆಗಾಗ ವಾಗ್ಯುದ್ಧವಾಗುತ್ತಿದ್ದುದುಂಟು. ಆದರೆ ಅಮೀರ್ಚಂದ್ನ ದೃಢನಿರ್ಧಾರ ಬದಲಿಸಲು ತಂದೆಗೆ ಸಾಧ್ಯವಾಗಲಿಲ್ಲ.
ಅಮೀರ್ಚಂದ್ ಸಾಮಾಜಿಕ ಚಟುವಟಿಕೆಗಳಲ್ಲೂ ಮುಂದು. 1907ರಲ್ಲಿ ಲಾಹೋರ್ನಲ್ಲಿ ‘ಟ್ರಾಮ್ೇ’ ಮಾಡಲು ಸರ್ಕಾರ ಉದ್ಯುಕ್ತವಾದಾಗ ಅದೊಂದು ವಿದೇಶಿ ಕಂಪನಿ ಎಂದೂ, ಅದು ಭಾರತೀಯರ ಹಣ ಲೂಟಿಮಾಡಲು ಹೊರಟಿರುವ ಯೋಜನೆ ಎಂದೂ ಅದರ ವಿರುದ್ಧದ ಚಳವಳಿಯ ನೇತೃತ್ವ ವಹಿಸಿದ್ದ. ಲಾಹೋರ್ನಲ್ಲಿ ಸ್ವದೇಶಿ ಭಂಡಾರ ತೆರೆದು ಅಲ್ಲಿ ಸ್ವದೇಶಿ ವಸ್ತುಗಳನ್ನು ಮಾರುವಂತೆ ಪ್ರೇರೇಪಿಸಿದ ಮೊದಲಿಗರಲ್ಲಿ ಒಬ್ಬನಾಗಿದ್ದ. ಜನರ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಲಾಹೋರ್ನ ಕಿನರಿ ಬಜಾರ್ನಲ್ಲಿ ‘ನ್ಯಾಷನಲ್ ಲೈಬ್ರರಿ’ ತೆರೆದು ದೇಶಭಕ್ತಿ, ರಾಷ್ಟ್ರೀಯತೆ ಹಾಗೂ ಭಾರತೀಯ ಚರಿತ್ರೆಯನ್ನು ಹೇಳುವ ಪುಸ್ತಕಗಳು ಜನರ ಕೈಗೆ ಎಟುಕುವಂತೆ ಮಾಡಿದ. ‘ನ್ಯಾಷನಲ್ ಪ್ರೆಸ್’ ಸ್ಥಾಪಿಸಿ ದೇಶಭಕ್ತಿಭರಿತ ಸಾಹಿತ್ಯದ ಮುದ್ರಣಕಾರ್ಯ ನಡೆಸುತ್ತಿದ್ದ. ಹಿಂದೂಸ್ತಾನಿ ಭಾಷೆಯಲ್ಲಿ ‘ಆಕಾಶ್’ ಎಂಬ ಪತ್ರಿಕೆ ನಡೆಸಲು ಪೋ›ತ್ಸಾಹಿಸಿದ. ಅದರ ಬರವಣಿಗೆಗಳಿಂದಾಗಿ ಅವನೂ ಮತ್ತು ‘ಆಕಾಶ್’ ಸಂಪಾದಕ ಗಣೀಶಿಲಾಲ್ ಖಾಸ್ತಾ ಎಂಬಾತನೂ ಅನೇಕ ಸಲ ಜೈಲುಮುಖ ಕಾಣಬೇಕಾಗಿ ಬಂದಿತ್ತು.
ಸ್ವಾಮಿ ರಾಮತೀರ್ಥರ ನಿತಾಂತ ಭಕ್ತನಾಗಿದ್ದ ಅವನು ಅವರ ಭಾಷಣ-ಲೇಖನಗಳ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿರದಿದ್ದಿದ್ದರೆ ಆ ಕೃತಿಗಳು ಮುಂದಿನ ಪೀಳಿಗೆಗಳಿಗೆ ದೊರೆಯುತ್ತಲೇ ಇರಲಿಲ್ಲ.
ಹಾರ್ಡಿಂಜ್ ಬಾಂಬ್ ಪ್ರಕರಣದಲ್ಲಿ ಶಿಕ್ಷಿತನಾದ ಲಾಲಾ ಹನುಮಂತ್ ಸಹಾಯ್ ಎಂಬ ಶ್ರೀಮಂತ ದೇಶಭಕ್ತ 1909ರಲ್ಲಿ ಚೇಲ್ಪುರಿ ಎಂಬಲ್ಲಿದ್ದ ತನ್ನ ಬೃಹತ್ ಮನೆಯಲ್ಲಿ ರಾಷ್ಟ್ರೀಯ ಶಾಲೆಯನ್ನು ಸ್ಥಾಪಿಸಿದಾಗ ಅಮೀರ್ಚಂದ್, ಅವಧ್ಬಿಹಾರಿ ಅಲ್ಲಿ ಶಿಕ್ಷಕರಾದರು. ಇವರೆಲ್ಲರೂ ಕ್ರಾಂತಿಕಾರಿಗಳೇ ಆಗಿದ್ದು ಮೊದಲಿನಿಂದಲೂ ಬಂಗಾಳದ ಅನುಶೀಲನ ಸಮಿತಿ, ಯುಗಾಂತರಗಳೊಂದಿಗೆ ಸಂಪರ್ಕ ಹೊಂದಿದ್ದರು. ಲಾಲಾ ಹನುಮಂತ್ ಶಾಲೆ ಇದ್ದಿದ್ದು ದೆಹಲಿಯಲ್ಲಿ. ಪಂಜಾಬ್ನಲ್ಲಿ ಗದರ್ ಚಳವಳಿ ಆರಂಭಗೊಂಡಾಗ ಅಮೀರ್ಚಂದ್ದು ಮುಖ್ಯಪಾತ್ರ. ‘ಔಜಿಚಿಛ್ಟಿಠಿಢ’ ಎಂಬ ಉಗ್ರ ಬರವಣಿಗೆಯ ಕ್ರಾಂತಿಕಾರಿ ಪತ್ರಿಕೆಯ ಸಂಪಾದಕನಾಗಿ ಅದನ್ನು ಹೊರಡಿಸಿದ ಶ್ರೇಯ ಅವನದ್ದು.
ತಾನೇ ಸಾಕಿದ ಗಿಣಿ: ಅವನ ಮೇಲೆ ಕೋರ್ಟಿನಲ್ಲಿ ಮೊಕದ್ದಮೆ ಹೂಡಿದ ಪೊಲೀಸರು ಅವನ ಲೇಖನಗಳನ್ನು ಪ್ರಸ್ತುತಪಡಿಸಿ ಅವನು ಬ್ರಿಟಿಷ್ ಆಡಳಿತದ ವಿರುದ್ಧ ಯುದ್ಧ ಸಾರಿದ್ದನೆಂದು ಸಾಧಿಸಲು ಯತ್ನಿಸಿದಾಗ ಮುಂದಿರಿಸಿದ ಒಂದು ಲೇಖನದ ಸ್ಯಾಂಪಲ್ ಹೀಗಿದೆ- ‘ಇಂಡಿಯಾ ಸಂವೈಧಾನಿಕ ಮಾರ್ಗದಿಂದ ಸ್ವಾತಂತ್ರ್ಯ ಸಾಧಿಸಲು ಸಾಧ್ಯವಿಲ್ಲ. ಅದಕ್ಕಿರುವ ಒಂದೇ ಮಾರ್ಗ ಕ್ರಾಂತಿಯದು. ಆಕ್ರಮಕರು ತಮ್ಮಿಚ್ಛೆಯಿಂದ ಸ್ವಾತಂತ್ರ್ಯ ನೀಡಿರುವ ಉದಾಹರಣೆ ಚರಿತ್ರೆಯಲ್ಲಿ ಎಲ್ಲೂ ಇಲ್ಲ. ಶೋಷಣೆಗೊಳಗಾಗಿರುವ ಜನರಿಗೆ ಸ್ವಾತಂತ್ರ್ಯ ತಂದುಕೊಡುವುದು ಖಡ್ಗ ಮಾತ್ರ’. ಇನ್ನೊಂದು ಸ್ಯಾಂಪಲ್- ‘ಯಾವುದೇ ವರ್ಗ, ಜಾತಿ ಅಥವಾ ಮತಕ್ಕೆ ಸಂಬಂಧಿಸಿದ್ದರೂ ರಾಷ್ಟ್ರದ ಶತ್ರುಗಳನ್ನು ಸರ್ವನಾಶ ಮಾಡಬೇಕು. ಇದೇ ನಮ್ಮ ಧರ್ಮಗ್ರಂಥಗಳಾದ ಭಗವದ್ಗೀತೆ, ವೇದ ಮತ್ತು ಕುರಾನ್ಗಳ ಆದೇಶ’.
ಅವನು ಬರೆದು, ಮುದ್ರಿಸಿ, ವಿತರಿಸಿದ ಔಜಿಚಿಛ್ಟಿಠಿಢ ಪತ್ರಿಕೆ ವಿಶಾಲ ಪ್ರಚಾರ ಪಡೆಯಿತು. ಅದು ಡೆಹ್ರ್ರಾಡೂನ್, ಕಸೌಲಿ, ಅಂಬಾಲಾ ಮುಂತಾದ ಸೈನಿಕ ಠಾಣೆಗಳಲ್ಲಿ ಪಸರಿಸಿ ಗದರ್ ಕ್ರಾಂತಿಗೆ ನೆಲೆಯನ್ನು ಸೃಷ್ಟಿಸಿತು. ಸೈನಿಕರಲ್ಲಿ ದೇಶಪ್ರೇಮದ ತರಂಗಗಳನ್ನೆಬ್ಬಿಸಿತು.
ಪೊಲೀಸರಿಗೆ ದೀನಾನಾಥ ಶರಣಾದುದರ ಜತೆಗೆ ಇನ್ನೊಬ್ಬ ವ್ಯಕ್ತಿಯೂ ಅವನೊಂದಿಗೆ ಸೇರಿಕೊಂಡ. ಅವನೇ ಅಮೀರ್ಚಂದ್ ತನ್ನ ಮನೆಯಲ್ಲಿರಿಸಿಕೊಂಡು ಅನ್ನಹಾಕಿ ಬೆಳೆಸಿದ್ದ ಸಾಕುಮಗ ಸುಲ್ತಾನ್ಚಂದ್. ಅವನು ಕೋರ್ಟಿನ ಕಟಕಟೆಯಲ್ಲಿ ನಿಂತು ಅಮೀರ್ಚಂದ್ನ ಮನೆಯಲ್ಲಿಯೇ ಹಾರ್ಡಿಂಜ್ ಹತ್ಯೆಯ ಯೋಜನೆಯಾಯಿತೆಂದೂ ರಾಸ್ಬಿಹಾರಿ ಬೋಸ್ ಅಲ್ಲಿಂದಲೇ ಚಾಂದನಿ ಚೌಕ್ಗೆ ಅಂದು ಹೊರಟನೆಂದೂ, ಪ್ರಚೋದನಕಾರಿ ಬರವಣಿಗೆಗಳೆಲ್ಲದರ ಕರ್ತೃ ಅಮೀರ್ಚಂದನೇ ಎಂದೂ ನಿರ್ಲಜ್ಜನಾಗಿ ಹೇಳುತ್ತಹೋದಾಗ ಎದುರು ಕಟಕಟೆಯಲ್ಲಿ ನಿಂತಿದ್ದ ಅಮೀರ್ಚಂದ್ ದುಃಖತಪ್ತನಾಗಿ ಕಣ್ಣೀರು ಸುರಿಸಿ ತಾನೆಂಥ ಹಾವಿಗೆ ಹಾಲೆರೆದೆ ಎಂದು ನೊಂದುಕೊಂಡ. ಪಂಜಾಬಿನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಮೈಕೇಲ್ ಓಡ್ವೈಯರ್ಗೆ ವೈಸ್ರಾಯ್ ಕಚೇರಿಯಿಂದ ‘ಪಂಜಾಬ್ನಲ್ಲೊಂದು ಜೀವಂತ ಜ್ವಾಲಾಮುಖಿ ಇದೆ, ಅದು ಯಾವಾಗ ಬೇಕಾದರೂ ಸ್ಪೋಟಿಸಬಹುದು, ಆದ್ದರಿಂದ ಎಚ್ಚರಿಕೆ ಅಗತ್ಯ’ ಎಂಬ ಸಂದೇಶದ ಪತ್ರ ಬಂದಿದ್ದರಿಂದ ಬಂಧಿತ ಕ್ರಾಂತಿಕಾರಿಗಳಿಗೆ ಮರಣದಂಡನೆ ವಿಧಿಸಲು ಗವರ್ನರ್ ಆಸಕ್ತನಾಗಿದ್ದ.
ಈ ಮೊಕದ್ದಮೆಯಲ್ಲಿ 13 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. 7 ತಿಂಗಳ ಕಾಲ ವಿಚಾರಣೆ ನಡೆಯಿತು. ಕೊನೆಗೆ ಅಮೀರ್ಚಂದ್, ಅವಧ್ಬಿಹಾರಿ, ಭಾಯಿ ಬಾಲ್ವುುಕುಂದರಿಗೆ ಮರಣದಂಡನೆ ಘೊಷಿಸಲಾಯಿತು.
ಅಮೀರ್ಚಂದ್ ಘನವ್ಯಕ್ತಿತ್ವದವನು, ಆದರ್ಶಗಳಿಗಾಗಿ ಜೀವಿಸಿದವನು. ಭಾರತೀಯ ವೇದೋಕ್ತ ಜೀವನದ ಆರಾಧಕ. ಅಂಥ ಮಹಾನ್ ವ್ಯಕ್ತಿಯ ಕುರಿತು ಬ್ರಿಟಿಷ್ ನ್ಯಾಯಾಧೀಶ ತೀರ್ಪಿನಲ್ಲಿ ಹೀಗೆ ಟಿಪ್ಪಣಿ ಬರೆದ- ‘ಅಮೀರ್ಚಂದರಂಥ ದೇಶಭಕ್ತ, ಅವರ ಒಂದೇ ಒಂದು ಮನೋರೋಗವನ್ನು ಬದಿಗಿಟ್ಟರೆ, ನಿಷ್ಕಳಂಕ ಚಾರಿತ್ರ್ಯದ ಆದರಣೀಯ ವ್ಯಕ್ತಿಗಳೆಂಬುದನ್ನು ಧ್ಯಾನದಲ್ಲಿರಿಸಿಕೊಳ್ಳಬೇಕು’.
1915ರ ಮೇ 8ರಂದು ದೆಹಲಿಯ ಸೆರೆಮನೆಯಲ್ಲಿ ಅಮೀರ್ಚಂದ್, ಅವಧ್ ಬಿಹಾರಿ ಮತ್ತು ಬಾಲ್ವುುಕುಂದರನ್ನು ಗಲ್ಲಿಗೇರಿಸಲಾಯಿತು. ಮೂವರೂ ಧೈರ್ಯದಿಂದ ಹೆಮ್ಮೆಯಿಂದ ನಿಶ್ಚಿಂತೆಯಿಂದ ನೇಣುಶಿಕ್ಷೆಯನ್ನು ಸ್ವಾಗತಿಸಿದರು. ಅಮೀರ್ಚಂದ್ ವೇದಮಂತ್ರ ಪಠಿಸುತ್ತ ಗಲ್ಲುಗಂಬದವರೆಗೂ ನಡೆದುಹೋಗಿ ನಂತರ ನೇಣುಕುಣಿಕೆಯನ್ನು ಕುತ್ತಿಗೆಯಲ್ಲಿ ಧರಿಸಿ ತೂಗಾಡಲಾರಂಭಿಸಿದ….
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment